Advertisement

ಬೆಂಗಳೂರು ಈಗ ಸ್ಲಮ್‌ ಸಿಟಿ

12:38 PM Aug 27, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸ್ಲಂ ನಿವಾಸಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಲೇ ಇದೆ. ಸದ್ಯ ಕರ್ನಾಟಕದಲ್ಲಿ ಸ್ಲಂ ಜನಸಂಖ್ಯೆ 40.50 ಲಕ್ಷ ಇದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ವಾಸ್ತವದಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಿದೆ. ಹೀಗಂತ ಸ್ವತಃ ಅಧಿಕಾರಿಗಳೇ ಹೇಳುತ್ತಾರೆ.

Advertisement

2011ರ ಸಮೀಕ್ಷೆ ಪ್ರಕಾರ ಸ್ಲಂ ನಿವಾಸಿಗಳ ಸಂಖ್ಯೆ 33 ಲಕ್ಷ ಇತ್ತು. ಕಳೆದ 6 ವರ್ಷಗಳಲ್ಲಿ 8 ಲಕ್ಷ ಹೆಚ್ಚಾಗಿದ್ದು, ಸದ್ಯ 40.50 ಲಕ್ಷ ಸ್ಲಂ ನಿವಾಸಿಗಳು ಇದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ, ನಿಖರ ಸಮೀಕ್ಷೆ ನಡೆದರೆ ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಸ್ಲಂ ಜನಸಂಖ್ಯೆ ಬೆಳೆಯುತ್ತಿರುವ ಈಗಿನ ಗತಿ ಗಮನಿಸಿದರೆ ಒಂದೆರಡು ವರ್ಷಗಳಲ್ಲಿ ಸ್ಲಂ ನಿವಾಸಿಗಳ ಸಂಖ್ಯೆ ಅರ್ಧ ಕೋಟಿ ದಾಟಲಿದೆ.

2001ರಲ್ಲಿ 14.02 ಲಕ್ಷ ಇದ್ದ ಕೊಳೆಗೇರಿ ನಿವಾಸಿಗಳ ಸಂಖ್ಯೆ 2011ಕ್ಕೆ 32.92 ಲಕ್ಷ ಆಗಿತ್ತು. ಈಗ ಅದು 40.50 ಲಕ್ಷಕ್ಕೆ ಏರಿದೆ. ಈ ರೀತಿ ಕಳೆದ 15 ವರ್ಷಗಳಲ್ಲಿ ರಾಜ್ಯದ ಕೊಳೆಗೇರಿ ನಿವಾಸಿಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ರಾಜ್ಯದ ಒಟ್ಟು ನಗರ ಜನಸಂಖ್ಯೆ 1.79 ಕೋಟಿ ಇದ್ದು, ಇದರಲ್ಲಿ ಶೇ.22.56 ರಷ್ಟು ಕೊಳೆಗೇರಿ ನಿವಾಸಿಗಳಿದ್ದಾರೆ. 

ಬೆಂಗಳೂರಲ್ಲೇ ಹೆಚ್ಚು: ಬೆಂಗಳೂರು ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಶೇ.21.5ರಷ್ಟು ಕೊಳೆಗೇರಿ ನಿವಾಸಿಗಳಿದ್ದು, ಇದರಲ್ಲಿ ಪ್ರತಿ 5 ಜನರಲ್ಲಿ ಒಬ್ಬರು ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ. ಉಳಿದಂತೆ ಧಾರವಾಡದಲ್ಲಿ ಶೇ.6.21,  ಬಳ್ಳಾರಿಯಲ್ಲಿ ಶೇ.6.09, ಶಿವಮೊಗ್ಗದಲ್ಲಿ ಶೇ.5.19, ತುಮಕೂರು ಶೇ.4.99ರಂತೆ ಆಯಾ ಜಿಲ್ಲೆಗಳ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಅತಿ ಹೆಚ್ಚು ಕೊಳಚೆ ನಿವಾಸಿಗಳು ವಾಸ ಮಾಡುತ್ತಿದ್ದಾರೆ.

ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಅಲ್ಲಿನ ಜನಸಂಖ್ಯೆ ಪೈಕಿ ಶೇ.1ರಷ್ಟು ಕೊಳಚೆ ನಿವಾಸಿಗಳಿದ್ದಾರೆ. ನಗರೀಕರಣಕ್ಕೆ ಆಕರ್ಷಿತರಾಗಿ ಗ್ರಾಮೀಣ ಜನರು ನಗರಗಳಿಗೆ ವಲಸೆ ಬರುತ್ತಾರೆ. ಈ ವಲಸೆ ಬೆಂಗಳೂರಿಗೆ ಮಾತ್ರ ಸಿಮೀತಗೊಂಡಿಲ್ಲ. ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿ ಇನ್ನಿತರ ದೊಡ್ಡ ನಗರಗಳಿಗೂ ವ್ಯಾಪಿಸಿದೆ. ವಲಸೆ ಬರುವ ಜನ ಒಂದೆಡೆ ನೆಲೆಸಿದರೆ ಅಲ್ಲಿ ಒಂದು ಸ್ಲಂ ತಲೆ ಎತ್ತುತ್ತದೆ.

Advertisement

ಅದೇ ರೀತಿ ಗುತ್ತಿಗೆದಾರರು ನಿರ್ಮಾಣ ಕಾಮಗಾರಿಗಳಿಗೆಂದು ಜನರನ್ನು ಕರೆತಂದು ತಾತ್ಕಾಲಿಕವಾಗಿ ಶೆಡ್‌ಗಳನ್ನು ನಿರ್ಮಿಸಿಕೊಡುತ್ತಾರೆ. ಅದೂ ಸಹ ಒಂದು ರೀತಿಯ ಅಘೋಷಿತ ಸ್ಲಂ ಆಗಿ ಬಿಡುತ್ತದೆ. ಹೀಗೆ ಸರ್ಕಾರ ಒಂದು ಕಡೆ ಸ್ಲಂಗಳ ತೆರವು, ಅಭಿವೃದ್ಧಿ ಮಾಡುತ್ತಿದ್ದರೆ, ಇನ್ನೊಂದು ಕಡೆ ಸ್ಲಂಗಳು ಹುಟ್ಟಿಕೊಳ್ಳುತ್ತಲ್ಲೇ ಇರುತ್ತವೆ ಎಂದು ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಹೇಳುತ್ತಾರೆ.

ಯೋಜನೆಗಳು ಆಮೆಗತಿ: 2022ಕ್ಕೆ ಕರ್ನಾಟಕವನ್ನು ಸ್ಲಂ ಮುಕ್ತ ರಾಜ್ಯವನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಅದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿವೆ. ಆದರೆ, ಅವುಗಳ ಅನುಷ್ಠಾನ ಆಮೆಗತಿಯಲ್ಲಿ ಸಾಗಿದೆ. ರಾಜೀವ್‌ ಆವಾಸ್‌ ಯೋಜನೆಯಡಿ 36 ಸಾವಿರ ಮನೆಗಳ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಆದರೆ, ಇಲ್ಲಿವರೆಗೆ 15 ಸಾವಿರ ಮನೆಗಳಷ್ಟೇ ನಿರ್ಮಾಣಗೊಂಡಿವೆ.

“ತಲೆಗೊಂದು ಸೂರು’ ಪರಿಕಲ್ಪನೆಯ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ 85 ಸಾವಿರ ಮನೆಗಳ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದ್ದು, ಇನ್ನೂ ಕಾಮಗಾರಿ ಆರಂಭಗೊಂಡಿಲ್ಲ. ಈ ಯೋಜನೆಯಡಿ ವರ್ಷಕ್ಕೆ ಒಂದು ಲಕ್ಷ ಮನೆ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. 

ನಗರದಲ್ಲೇ ಹೆಚ್ಚು ಕೊಳೆಗೇರಿ: ರಾಜ್ಯದಲ್ಲಿ 2,397 ಘೋಷಿತ ಹಾಗೂ  407 ಅನಧೀಕೃತ ಸೇರಿ ಒಟ್ಟು 2,804 ಕೊಳೆಗೇರಿಗಳಿವೆ. ಘೋಷಿತ ಸ್ಲಂಗಳ ಈ ಪೈಕಿ ಅತಿಹೆಚ್ಚು 597 ಕೊಳೆಗೇರಿಗಳು ಬೆಂಗಳೂರಿನಲ್ಲಿವೆ. ಉಳಿದಂತೆ ಬಳ್ಳಾರಿ 202, ಶಿವಮೊಗ್ಗ 181, ಮೈಸೂರು 134, ಬೆಳಗಾವಿ 127 ಅತಿಹೆಚ್ಚು ಕೊಳೆಗೇರಿಗಳು ಹೊಂದಿದ ಜಿಲ್ಲೆಗಳು.

ಅದೇ ರೀತಿ ಕೊಡಗು 11, ದಕ್ಷಿಣ ಕನ್ನಡ 18, ಉಡುಪಿ 26, ಉತ್ತರ ಕನ್ನಡ 33, ಯಾದಗಿರಿ-ರಾಮನಗರ ತಲಾ 39 ಅತಿಕಡಿಮೆ ಕೊಳೆಗೇರಿಗಳು ಹೊಂದಿದ ಜಿಲ್ಲೆಗಳು. ಜತೆಗೆ ಬೆಂಗಳೂರು ನಗರ ಜಿಲ್ಲೆ 210, ಬಳ್ಳಾರಿ 50, ಮೈಸೂರು 30, ಧಾರವಾಡ-ಬೆಳಗಾವಿ ಜಿಲ್ಲೆಯಲ್ಲಿ ತಲಾ 28 ಅತಿ ಹೆಚ್ಚು ಅನಧಿಕೃತ ಕೊಳೆಗೇರಿಗಳಿವೆ.

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next