Advertisement

ಬಾಂಗಡಿಕೋಟಾ ಹೋಳಿಗೆ ಸಿಗುತ್ತಾ ಮಾನ್ಯತೆ?

03:39 PM Mar 16, 2021 | Team Udayavani |

ಬಾಗಲಕೋಟೆ: ದೇಶದ ಕೊಲ್ಕತ್ತಾ ಹೊರತುಪಡಿಸಿದರೆ ಅತ್ಯಂತ ವಿಶಿಷ್ಟ-ವಿಶೇಷತೆಯಿಂದ ನಡೆಯುವ ಬಾಗಲಕೋಟೆ ಹೋಳಿ ಹಬ್ಬಕ್ಕೆ ಈ ಬಾರಿಯಾದರೂ ಸರ್ಕಾರದಿಂದ ಸಾಂಸ್ಕೃತಿಕ ಮಾನ್ಯತೆ ದೊರೆಯುತ್ತದೆಯಾ ಎಂಬ ಚರ್ಚೆ ಬಲಗೊಂಡಿದೆ.

Advertisement

ಹೌದು. ಬಾಂಗಡಿಕೋಟಾ ಎಂದೇ ಕರೆಯಲ್ಪಡುತ್ತಿದ್ದ ಈ ನಗರಕ್ಕೆ ದೊಡ್ಡ ಇತಿಹಾಸವಿದೆ. ವಿಜಯಪುರದ ಇಬ್ರಾಹಿಂ ಆದಿಲ್‌ ಷಾ (1580-1626) ಕಾಲದಲ್ಲಿ ಆಸಫ್‌ಖಾನ್‌ ಎಂಬ ಸೇನಾಧಿಪತಿ ದಕ್ಷಿಣದ ಸಾಮ್ರಾಜ್ಯದ ಆಡಳಿತ ನೋಡಿಕೊಳ್ಳುತ್ತ, ಬಾಗಲಕೋಟೆಯಲ್ಲೇ ನೆಲೆಸಿದ್ದ. ಆನಂತರ ಬಾಗಲಕೋಟೆಗೆ ವಿಜಯಪುರದ ಮಂತ್ರಿಯಾಗಿದ್ದ ಸವಣೂರಿನ ನವಾಬ್‌ ಬಹಿಲಾಲ್‌ ಖಾನ್‌ ಆಡಳಿತ ನೋಡಿಕೊಳ್ಳಲು ನೇಮಕಗೊಂಡಿದ್ದ. ಇದೇ ಸಮಯದಲ್ಲಿ ವಿಜಯಪುರದ ಸುಲ್ತಾನನು ಬಾಗಲಕೋಟೆ ನಗರವನ್ನು ತನ್ನ ಮಗಳಾದ ಬಲೀಮ್‌ ಷಾ ಬೀಬಿಗೆ ಉಡುಗೊರೆಯಾಗಿ ನೀಡಿದನೆಂದು ಇತಿಹಾಸದ ಪುಟಗಳಲ್ಲಿ ಉಲ್ಲೇಖವಿದೆ. ಈ ಉಡುಗೊರೆ ತನ್ನ ಮಗಳಿಗೆ ಬಳೆಯ ವೆಚ್ಚಕ್ಕಾಗಿ ಕೊಟ್ಟನೆಂಬ ಕಾರಣದಿಂದ ಬಾಂಗಡಿಕೋಟಾ ಎಂದು ಕರೆದನೆಂಬ ಪ್ರತೀತಿ ಇದೆ.  ಈ ಬಾಂಗಡಿಕೋಟಾ ಕ್ರಮೇಣ ಬಾಗಲಕೋಟೆಯಾಗಿ ಬಳಕೆಗೆ ಬಂದಿತೆಂದು ಹೇಳಲಾಗುತ್ತದೆ.

ಹೋಳಿ ಹಬ್ಬಕ್ಕಿದೆ ದೊಡ್ಡ ಪರಂಪರೆ: ದೇಶದ ಕೊಲ್ಕತ್ತ ಮಹಾನಗರ ಹೋಳಿ ಹಬ್ಬಕ್ಕೆ ಹೆಸರುವಾಸಿ. ಅಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಎಲ್ಲರೂ ಕೂಡಿಯೇ ಬಣ್ಣದಾಟವಾಡುತ್ತಾರೆ. ಹಾಗೆಯೇ ಬಾಗಲಕೋಟೆಯ ಹೋಳಿ ಹಬ್ಬಕ್ಕೂ ದೊಡ್ಡ ಇತಿಹಾಸ, ಪರಂಪರೆ ಹಾಗೂ ಸಾಂಸ್ಕೃತಿಕ ಮೆರಗಿದೆ. ಹೋಳಿಹುಣ್ಣಿಮೆ ಆರಂಭಗೊಳ್ಳುವ ಮೊದಲು, ಮಹಾಶಿವರಾತ್ರಿ ಅಮಾವಾಸ್ಯೆ ಮುಗಿದ ಮರುದಿನದಿಂದ ಹಲಗೆಯ ನಾದ ಇಡೀ ನಗರದಲ್ಲಿ ಕೇಳುತ್ತದೆ. ಇಲ್ಲಿನ “ಹಲಗೆ ಮೇಳ’ ಹಲವು ವರ್ಷಗಳಿಂದಲೂ ಗಮನ ಸೆಳೆಯುತ್ತಲೇ ಬಂದಿದೆ. ಹಲವಾರು ಸಂಘ-ಸಂಸ್ಥೆಗಳು ಪ್ರತಿವರ್ಷ ಹಲಗೆ ಮೇಳ ಸ್ಪರ್ಧೆ ಏರ್ಪಡಿಸಿ, ಹಳೆಯ ಪರಂಪರೆ ಮುಂದುವರಿಸಿಕೊಂಡು ಬಂದಿದ್ದಾರೆ. ಜತೆಗೆ ಇಲ್ಲಿನ ಸಂಸ್ಕೃತಿ, ಉಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ.

ಕಡಿತಗೊಂಡ ಬಣ್ಣದಾಟ: ನಗರದಲ್ಲಿ ಮೊದಲು ಏಳು ದಿನಗಳ ಕಾಲ ಹೋಳಿಹಬ್ಬದ ಪ್ರಯುಕ್ತ ಬಣ್ಣದಾಟ ನಡೆಯುತ್ತಿತ್ತು. ಇಲ್ಲಿನ ಕೌಲಪೇಟ, ಹೊಸಪೇಟ, ವೆಂಕಟಪೇಟ ಸೇರಿದಂತೆ ಹಲವು ಏರಿಯಾಗಳ ಜನರು ಒಂದೊಂದು ದಿನ ಬಂಡಿಯಲ್ಲಿ ಬಣ್ಣ ಸಾಗಿಸುತ್ತ, ಇಡೀ ನಗರವನ್ನು ಕಲರ್‌ಫುಲ್‌ಗೊಳಿಸುತ್ತಿದ್ದರು. ಆಗ ವೈಯಕ್ತಿಕ ಜಗಳಗಳು ವಿಕೋಪಕ್ಕೆ ಹೋಗುತ್ತಿದ್ದವು. ಹೀಗಾಗಿ ಏಳು ದಿನ ಇದ್ದ ಬಣ್ಣದಾಟ ಐದು ದಿನಕ್ಕಿಳಿಯಿತು. ಕೆಲ ವರ್ಷ ಐದು ದಿನ ನಡೆದಾಗಲೂ ಹಲವು ಗಲಾಟೆ, ಕಪ್ಯೂìಗಳಂತಹ ಸಂದರ್ಭಗಳು ನಡೆದಿದ್ದರಿಂದ ಬಣ್ಣದಾಟ ಸದ್ಯ ಮೂರು ದಿನಕ್ಕೆ ಉಳಿದುಕೊಂಡಿದೆ.

ನವನಗರ-ವಿದ್ಯಾಗಿರಿಗೂ ವಿಸ್ತರಣೆ ಯಾವಾಗ?: ಹಳೆಯ ಬಾಗಲಕೋಟೆ ನಗರ, ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾಗಿದ್ದು, ಬಹುಭಾಗ ನವನಗರ ಯೂನಿಟ್‌-1ಕ್ಕೆ ಹಾಗೂ ಕೆಲವರು ವಿದ್ಯಾಗಿರಿಗೆ ಸ್ಥಳಾಂತರಗೊಂಡಿದ್ದಾರೆ. ನಗರ ಬೆಳೆದಂತೆ ವಿದ್ಯಾಗಿರಿ ಕೂಡ ಈಗ ನವನಗರ-ಬಾಗಲಕೋಟೆ ನಡುವಿನ ಹೃದಯಭಾಗವಾಗಿ ಬೆಳೆಯುತ್ತಿದೆ. ಹೀಗಾಗಿ ಬಣ್ಣದಾಟವನ್ನು ವಿದ್ಯಾಗಿರಿ-ನವನಗರಕ್ಕೂ ಒಂದು ದಿನ ವಿಸ್ತರಿಸಬೇಕೆಂಬ ಒತ್ತಾಯ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಇದಕ್ಕೆ ಪ್ರತಿವರ್ಷವೂ ಆಡಳಿತ ವರ್ಗ ಈ ವರ್ಷ ಮೂರೇ ದಿನ ಸಾಕು. ಮುಂದಿನ ವರ್ಷ ನಾಲ್ಕು ದಿನ ಮಾಡೋಣ ಎಂಬ ಭರವಸೆ ಕೊಡುತ್ತ ಬಂದಿದೆ. ಕಳೆದ ವರ್ಷ ವಿದ್ಯಾಗಿರಿಯಲ್ಲಿ ಬಣ್ಣದಾಟ ನಡೆಸುತ್ತೇವೆಂಬ ಒತ್ತಾಯ ವಿದ್ಯಾಗಿರಿ ಗೆಳೆಯರ ಬಳಗ ನಿರ್ಧರಿಸಿತ್ತು. ಮುಂದಿನ ವರ್ಷಕ್ಕೆ ಮುಂದೂಡುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿತ್ತು. ಹೀಗಾಗಿ ಈ ವರ್ಷವಾದರೂ ವಿದ್ಯಾಗಿರಿಗೆ ಈ ಅವಕಾಶ ದೊರೆಯುತ್ತದೆಯಾ ಎಂಬ ನಿರೀಕ್ಷೆಯನ್ನು ಜನತೆ ಹೊಂದಿದ್ದಾರೆ.

Advertisement

ಬಣ್ಣದಾಟಕ್ಕೆ ಸಾಂಸ್ಕೃತಿಕ ಗರಿ: ದೇಶದಲ್ಲೇ ವಿಶೇಷ- ವಿಶಿಷ್ಟವಾಗಿರುವ ಬಣ್ಣದಾಟ, ಹಲಗೆ ಮೇಳಕ್ಕೆ ಸರ್ಕಾರದ ಸಾಂಸ್ಕೃತಿಕ ಮಾನ್ಯತೆ ದೊರೆಯಬೇಕೆಂಬ ಒತ್ತಾಯ ಅತ್ಯಂತ ಹಳೆಯದ್ದು. ಆದರೆ, ಈ ಆಶೆ ಈಗ ಮತ್ತಷ್ಟು ಬಲಗೊಂಡಿದ್ದು, ಇದಕ್ಕೆ ಕಾರಣ ಇದೇ ಊರಲ್ಲಿ ಆಡಿ-ಬೆಳೆದ ಅರವಿಂದ ಲಿಂಬಾವಳಿ ಅವರೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದಾರೆ. ಇಲ್ಲಿನ ಬಣ್ಣದಾಟ, ಹೋಳಿ ಆಚರಣೆಯ ಪ್ರತಿಯೊಂದು ಮಜಲು ಅವರಿಗೆ ಗೊತ್ತು. ಸ್ವತಃ ಲಿಂಬಾವಳಿ ಕೂಡ ಬಾಲ್ಯದ ದಿನಗಳನ್ನು ಇಲ್ಲಿನ ಬಣ್ಣದಾಟದಲ್ಲಿ ಕಳೆದವರು. ಹೀಗಾಗಿ ಅವರೇ ಸಚಿವರಾಗಿದ್ದರಿಂದ ಆ ಇಲಾಖೆಯಿಂದ ಮಾನ್ಯತೆ ಕೊಡಿಸುತ್ತಾರೆಂಬ ವಿಶ್ವಾಸ ನಗರದ ಜನತೆ ಹೊಂದಿದ್ದಾರೆ.

5 ಲಕ್ಷ ರೂ.ಅನುದಾನ: ಹಲಗೆ ಮೇಳ, ಬಣ್ಣದಾಟ ಸಂಸ್ಕೃತಿ ಉಳಿಸಲು ಜಿಲ್ಲಾಡಳಿತದ ನೆರವೂ ಅಗತ್ಯ. ಹೀಗಾಗಿ ಕನಿಷ್ಠ 5 ಲಕ್ಷ ರೂ.ಅನುದಾನ ಪ್ರತಿವರ್ಷ ನೀಡಬೇಕೆಂಬ ಮನವಿಯನ್ನು ಹೋಳಿ ಆಚರಣೆ ಸಮಿತಿ ಮಾಡುತ್ತಲೇ ಬಂದಿದೆ. ಎರಡು ದಿನಗಳ ಹಿಂದೆ ನಗರಕ್ಕೆ ಬಂದಿದ್ದ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಸಮಿತಿಯ ಮಹಾಬಲೇಶ್ವರ ಗುಡಗುಂಟಿ, ಸದಾನಂದ ನಾರಾ ಮನವಿ ಸಲ್ಲಿಸಿದ್ದಾರೆ.

ಜತೆಗೆ ಶಾಸಕ ಡಾ|ಚರಂತಿಮಠ, ಮಾಜಿ ಶಾಸಕ ಭಾಂಡಗೆ ಸಹಿತ ಹಲವರು, ಇಲ್ಲಿನ ಪಾರಂಪರಿಕ ಸಂಸ್ಕೃತಿ ಉಳಿಸಲು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಸಚಿವ ಲಿಂಬಾವಳಿ, ಸೂಕ್ತ ಪ್ರಸ್ತಾವನೆ ಸಲ್ಲಿಸಲು ತಮ್ಮ ಇಲಾಖೆಯ ಅಧಿಕಾರಿಗೆ ನಿರ್ದೇಶನ ನೀಡಿದ್ದಾರೆ. ಕೋವಿಡ್ 2ನೇ ಅಲೆಯ ಆತಂಕದಲ್ಲೂ ಹೋಳಿ ಆಚರಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ.  ಈ ವರ್ಷವೇ ಸರ್ಕಾರದ ಸಹಯೋಗ ಹೋಳಿ ಹಬ್ಬದಾಚರಣೆಗೆ ದೊರೆಯುತ್ತದೆಯಾ ಎಂಬ ಕುತೂಹಲವಿದೆ.

ಬಾಗಲಕೋಟೆಯ ಹೋಳಿ ಆಚರಣೆ ಒಂದು ವಿಶಿಷ್ಟ ಹಬ್ಬ. ಇದಕ್ಕೆ ಇಲಾಖೆಯಿಂದ ಅನುದಾನ ನೀಡುವ ಜತೆಗೆ ಈ ಸಂಸ್ಕೃತಿ ಉಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಒತ್ತಾಯ ಕೇಳಿ ಬಂದಿತ್ತು. ಈ ಕುರಿತು ನಮ್ಮ ಇಲಾಖೆಯ ಸಚಿವರೂ ಸೂಕ್ತ ನಿರ್ದೇಶನ ನೀಡಿದ್ದಾರೆ. ಹೀಗಾಗಿ ಹೋಳಿ ಆಚರಣೆ ಕುರಿತ ಪ್ರಸ್ತಾವನೆ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಲಾಗುವುದು.- ಹೇಮಾವತಿ, ಸಹಾಯಕ ನಿರ್ದೇಶಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

 

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next