Advertisement

ವಿಷ್ಣು ಸ್ಮರಣೆಯೊಂದಿಗೆ ‘ಬಂಧನ 2’ಆರಂಭ: ಲವ್‌-ಆ್ಯಕ್ಷನ್‌ನಲ್ಲಿ ಆದಿತ್ಯ

10:52 AM Dec 13, 2021 | Team Udayavani |

ಕನ್ನಡ ಚಿತ್ರರಂಗದ ಎವರ್‌ಗ್ರೀನ್‌ ಸಿನಿಮಾಗಳ ಪೈಕಿ ಒಂದಾಗಿರುವ “ಬಂಧನ’ ಸಿನಿಮಾ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ಹಿರಿಯ ನಿರ್ದೇಶಕ ಎಸ್‌.ವಿ ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನದಲ್ಲಿ ಮೂಡಿಬಂದ, ಸಾಹಸಸಿಂಹ ವಿಷ್ಣುವರ್ಧನ್‌, ಸುಹಾಸಿನಿ, ಜೈಜಗದೀಶ್‌, ಅಶ್ವಥ್‌ ಮೊದಲಾದ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ “ಬಂಧನ’ 1984ರಲ್ಲಿ ತೆರೆಕಂಡು ಕನ್ನಡ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ಬರೆದಿತ್ತು.

Advertisement

“ಬಂಧನ’ ಚಿತ್ರದ ಹಾಡುಗಳು, ಡೈಲಾಗ್ಸ್‌ಗಳನ್ನು ಇಂದಿಗೂ ಸಿನಿಪ್ರಿಯರು ಆಗಾಗ್ಗೆ ಮೆಲುಕು ಹಾಕುತ್ತಲೇ ಇರುತ್ತಾರೆ. ಇಂಥದ್ದೊಂದು ಜನಪ್ರಿಯ ಸಿನಿಮಾವನ್ನು ಕೊಟ್ಟ ಹಿರಿಯ ನಿರ್ದೇಶಕ ಎಸ್‌. ವಿ ರಾಜೇಂದ್ರ ಸಿಂಗ್‌ ಬಾಬು, ಈಗ “ಬಂಧನ-2′ ಮಾಡಲು ಹೊರಟಿದ್ದಾರೆ. ಈ ಮೂಲಕ ಸಿನಿಪ್ರೇಮಿಗಳ ನಿರೀಕ್ಷೆಗೆ ಕಾರಣರಾಗಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ನಗರದ ಅಶೋಕ ಹೋಟೆಲ್‌ನಲ್ಲಿ ನಡೆಯಿತು.

“ಬಂಧನ’ ಚಿತ್ರದ ಮುಹೂರ್ತವನ್ನು ಯಾವ ಜಾಗದಲ್ಲಿ ಮಾಡಲಾಗಿತ್ತೋ, ಅದೇ ಜಾಗದಲ್ಲಿ ಈಗ “ಬಂಧನ-2′ ಚಿತ್ರದ ಮುಹೂರ್ತವನ್ನು ಚಿತ್ರತಂಡ ಮಾಡಿದೆ. ಈ ಚಿತ್ರವನ್ನು ಅಣಜಿ ನಾಗರಾಜ್‌ ನಿರ್ಮಿಸುತ್ತಿದ್ದಾರೆ. ಈ ಮೂಲಕ ದೊಡ್ಡ ಗ್ಯಾಪ್‌ನ ನಂತರ ಅಣಜಿ ನಿರ್ಮಾಣಕ್ಕೆ ಮರಳಿದಂತಾಗಿದೆ. ನಿರ್ಮಾಣದ ಜೊತೆಗೆ ಛಾಯಾಗ್ರಹಣದ ಜವಾಬ್ದಾರಿಈ ಚಿತ್ರದಲ್ಲಿ ಅದಿತ್ಯ ನಾಯಕರಾಗಿ ನಟಿಸುತ್ತಿದ್ದು, “ಬಂಧನ’ ಚಿತ್ರದ ನಂದಿನಿಯ ಮಗನಾಗಿ ನಟ ಆದಿತ್ಯ ಕಾಣಿಸಿಕೊಳ್ಳಲಿದ್ದಾರೆ. ಸುಹಾಸಿನಿ, ಜೈ ಜಗದೀಶ್‌ ಪಾತ್ರಗಳು ಕೂಡಾ ಮುಂದುವರೆಯಲಿವೆ.

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು, “ಬಂಧನ ಕೇವಲ 22 ಲಕ್ಷ ರೂಪಾಯಿಯಲ್ಲಿ ಚಿತ್ರದ ಫ‌ಸ್ಟ್‌ಕಾಪಿ ಬಂದಿತ್ತು. ಇದು ಆ ಚಿತ್ರದ ಮುಂದುವರಿದ ಭಾಗ, ನಂದಿನಿಯ ಮಗ ದೊಡ್ಡವನಾಗಿರುತ್ತಾನೆ, ಇಡೀ ಚಿತ್ರದಲ್ಲಿ ವಿಷ್ಣು ಅವರ ಛಾಯೆ ಇರುತ್ತದೆ, ಅವರನ್ನು ಅಲ್ಲಲ್ಲಿ ನೆನಪಿಸಿ ಕೊಳ್ಳುತ್ತೇವೆ. ಈ ಕಥೆಯಲ್ಲಿ ಲವ್‌ ಜೊತೆಗೆ ಆ್ಯಕ್ಷನ್‌ ಕೂಡ ಇರುತ್ತದೆ. ಎಲ್ಲಾ ಥರದ ಪ್ರೀತಿಯೂ ಚಿತ್ರ ದಲ್ಲಿದೆ. ವಿಷ್ಣು ಅಭಿಮಾನಿಗಳು ತಮ್ಮ ಸಲಹೆ, ಅಭಿಪ್ರಾಯ ನೀಡಬಹುದು. ಸೂಕ್ತವಾದ ಸಲಹೆಯನ್ನು ಪರಿಗಣಿ, ಅದನ್ನು ಸಿನಿಮಾದಲ್ಲಿ ಅಳವಡಿಸಲು ಪ್ರಯತ್ನಿಸುತ್ತೇವೆ’ ಎನ್ನುವುದು ಅವರ ಮಾತು.

ನಟಿ ಸುಹಾಸಿನಿ ಅವರಿಗೆ “ಬಂಧನ’ ಚಿತ್ರದ ಬಗ್ಗೆ ಸಾಕಷ್ಟು ನೆನಪುಗಳಿವೆಯಂತೆ. “ಅದೊಂದು ಡ್ರೀಮ್‌ ಪ್ರಾಜೆಕ್ಟ್. ವಿಷ್ಣು ಒಬ್ಬ ಲೆಜೆಂಡ್‌. ಈ ಚಿತ್ರದಲ್ಲಿ ಈಗಿನ ಜನರೇಶನ್‌ಗೆ ತಕ್ಕಂತಹ ಅಂಶಗಳಿರುತ್ತವೆ’ ಎಂದರು.

Advertisement

ನಾಯಕ ಆದಿತ್ಯ ಸಹಜವಾಗಿಯೇ ಎಕ್ಸೈಟ್‌ ಆಗಿದ್ದರು. ಅದಕ್ಕೆ ಕಾರಣ ಒಂದು ಹಿಟ್‌ ಸಿನಿಮಾದ ಮುಂದುವರೆದ ಭಾಗದಲ್ಲಿ ನಟಿಸುತ್ತಿರೋದು.”ಬಂಧನ ಮುಹೂರ್ತವಾದಾಗ ನಾನಿನ್ನೂ 6 ವರ್ಷದ ಹುಡುಗ. ಇದೇ ಜಾಗದಲ್ಲಿ ನಿಂತು ಮುಹೂರ್ತ ನೋಡುತ್ತಿದ್ದೆ. ಮೈಸೂರಿನಲ್ಲಿ ಚಿತ್ರದ ಶೂಟಿಂಗ್‌ ನಡೆಯುವಾಗ ಪ್ರತಿದಿನ ನಾನು ಹೋಗುತ್ತಿದ್ದೆ. ಈ ಚಿತ್ರದಲ್ಲಿ ನಾನು ಆ್ಯಕ್ಟ್ ಮಾಡುತ್ತೇನೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ಅಣಜಿ ನಾಗರಾಜ್‌ ಅವರು ಬಹಳ ದಿನಗಳ ನಂತರ ಇಂಡಸ್ಟ್ರಿಗೆ ಬಂದಿದ್ದಾರೆ. ಬಂಧನ ಚಿತ್ರದಂತೆಯೇ ಈ ಚಿತ್ರವೂ ಸೂಪರ್‌ ಹಿಟ್‌ ಆಗುತ್ತೆ ಎನ್ನುವ ನಂಬಿಕೆಯಿದೆ ‘ ಎನ್ನುವುದು ಆದಿತ್ಯ ಮಾತು.

ಇದನ್ನೂ ಓದಿ:21 ವರ್ಷದ ಬಳಿಕ ಮಿಸ್ ಯುನಿವರ್ಸ್ ಗೆದ್ದ ಭಾರತದ ಚೆಲುವೆ; ಕಿರೀಟ ಗೆದ್ದ ಹರ್ನಾಜ್ ಸಂಧು

ತುಂಬಾ ದಿನಗಳ ನಂತರ ನಿರ್ಮಾಣಕ್ಕೆ ಬಂದಿರುವ ಅಣಜಿ ನಾಗರಾಜ್‌ ಅವರಿಗೆ ಈ ಬಾರಿ ಒಂದು ಹಿಟ್‌ ಸಿನಿಮಾ ಕೊಡುವ ಆಸೆ ಇದೆ. ಅದಕ್ಕಾಗಿ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. “ಬಂಧನ ಚಿತ್ರವನ್ನು ದಾವಣಗೆರೆಯಲ್ಲಿ ನೋಡಿದ್ದೆ. ಈಗ “ಬಂಧನ-2′ ಮಾಡುವ ಅವಕಾಶ ಸಿಕ್ಕಿದೆ. ಸಿಂಗ್‌ ಬಾಬು ಅವರು ಯುವಕರ ರೀತಿ ಉತ್ಸಾಹದಿಂದ ಕೆಲಸ ಮಾಡುತ್ತಾರೆ’ ಎಂದರು.

“ಬಂಧನ ಚಿತ್ರ ಮಾಡುವಾಗ ವಿಷ್ಣು ಎಲ್ಲರನ್ನೂ ನಗಿಸುತ್ತ ಬಹಳ ತುಂಟಾಟ ಮಾಡುತ್ತಿದ್ದರು, ಆ ಸಿನಿಮಾ ಬಹಳಷ್ಟು ಕೇಂದ್ರಗಳಲ್ಲಿ 25 ವಾರ ಪ್ರದರ್ಶನವಾಗಿತ್ತು. ಇದು ಲವ್‌, ಆ್ಯಕ್ಷನ್‌ ಸಿನಿಮಾ’ ಎನ್ನುವುದು ಜೈ ಜಗದೀಶ್‌ ಮಾತು. ಚಿತ್ರಕ್ಕೆ ಚಿಂತನ್‌ ಅವರ ಸಂಭಾಷಣೆ ಇದೆ. ಅವರ ಪ್ರಕಾರ, ನಂದಿನಿ, ಹರೀಶ್‌, ಬಾಲು, ಬಾಬು ಈ ಚಿತ್ರದ 4 ಪಿಲ್ಲರ್‌ಗಳು. ಜನ ನಂದಿನಿ, ಹರೀಶ್‌ ಪಾತ್ರಗಳು ಇಂದಿಗೂ ಮರೆತಿಲ್ಲ. ವಿಷ್ಣುವರ್ಧನ್‌ ಅವರ ಅಭಿಮಾನಿಗಳು ಈ ಚಿತ್ರ ನೋಡಿ ತೃಪ್ತಿಯಾಗಿ ಹೊರ ಬರುತ್ತಾರಂತೆ.

Advertisement

Udayavani is now on Telegram. Click here to join our channel and stay updated with the latest news.

Next