Advertisement

ಬಾಳು ಬೆಳಗಿದ ಬಾಳೆ ; ನಿರುದ್ಯೋಗಿಯ ಕೈ ಹಿಡಿದ ಭೂಮಿ ತಾಯಿ

07:05 PM Mar 01, 2020 | Sriram |

ಡಿಗ್ರಿ, ಡಬಲ್‌ ಡಿಗ್ರಿ ಪಡೆದ ಯುವಕರು ಬೆಂಗಳೂರಿನಂಥ ಮಹಾನಗರಗಳಿಗೆ ಉದ್ಯೋಗ ಅರಸಿ ಹೋಗುತ್ತಾರೆ. ಇಲ್ಲೊಬ್ಬ ಎಂ.ಎಸ್‌.ಡಬ್ಲ್ಯೂ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಯುವಕ ರೈತನಾಗಿ ಸ್ವಂತ ದುಡಿಮೆಯಿಂದ ಬದುಕು ಸಾಗಿಸುತ್ತಿದ್ದಾರೆ.

Advertisement

ಕೊಪ್ಪಳ ಜಿಲ್ಲೆಯ ಮೆಳ್ಳಿಕೇರಿ ಗ್ರಾಮದ ಹನಮೇಶ ಮ್ಯಾಗಳಮನಿ ಎನ್ನುವವರು ಡಬಲ್‌ ಡಿಗ್ರಿ ಪಡೆದ ನಂತರ ಉದ್ಯೋಗ ಅರಸಿ ನಗರಗಳಿಗೆ ತೆರಳಿದ್ದರು. ಕೆಲಸ ಸಿಗದೇ ಹೋದಾಗ, ತಾವೇ “ಪುನರ್ಜನ್ಮ’ ಎಂಬ ವಾರಪತ್ರಿಕೆಯನ್ನು ಆರಂಭಿಸಿ, ಪತ್ರಕರ್ತರಾಗಿ, ಸಾಮಾಜಿಕ ಕಾರ್ಯಕರ್ತರಾಗಿ, ಹೋರಾಟಗಾರರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅದರಿಂದ ಜೀವನ ಸಾಗುತ್ತಿಲ್ಲ ಎಂದರಿವಾದಾಗ ಅದಕ್ಕೂ ಗುಡ್‌ ಬೈ ಹೇಳಿದರು. ಮುಂದೆ ಜೀವನಕ್ಕೆ ದಾರಿ ಮಾಡಿಕೊಳ್ಳಲು ಕೃಷಿಯತ್ತ ಹೆಜ್ಜೆಯಿಟ್ಟರು. ತಮ್ಮ 2 ಎಕರೆ ಜಮೀನಿನಲ್ಲಿ 2,000 ಇಸ್ರೇಲ್‌ ಮಾದರಿಯ ವಿಲಿಯಮ್ಸ… ತಳಿಯ ಬಾಳೆ ಸಸಿಗಳನ್ನು 6×6 ಅಡಿಗೊಂದರಂತೆ ನೆಟ್ಟರು. ಪರಿಶ್ರಮ, ನಂಬಿಕೆ ಇವೆರಡನ್ನೂ ಭೂಮಿತಾಯಿ ಹುಸಿ ಮಾಡಲಿಲ್ಲ. 36 ಟನ್‌ ಬಾಳೆ ಇಳುವರಿ ಬಂದಿದ್ದು, ಅವುಗಳ ಮಾರಾಟದಿಂದ 5.50 ಲಕ್ಷ ರೂಪಾಯಿ ಲಾಭ ಸಿಕ್ಕಿದೆ. ಔದ್ಯೋಗಿಕ ಜೀವನ ಒಲಿಯದೇ ಹೋದರೂ ಕೃಷಿಯನ್ನು ನಂಬಿ ಅದಕ್ಕೂ ಮಿಗಿಲಾದ ಸಾಧನೆ, ಸಂಪಾದನೆ ಮಾಡಬಹುದು ಎಂದು ಹನಮೇಶ್‌ ತೋರಿಸಿಕೊಟ್ಟಿದ್ದಾರೆ.

ಬಿಂದಿಗೆಗಳಲ್ಲಿ ನೀರು ಪೂರೈಕೆ
ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಂತೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಹಾಗೂ ತೋಟಗಾರಿಕಾ ಇಲಾಖೆಯಿಂದ 1 ಲಕ್ಷ ರೂ. ಸಹಾಯಧನ ಪಡೆದರು. ಮೊದಲು ತಗ್ಗು ದಿಣ್ಣೆಯಂತಿದ್ದ ಹೊಲವನ್ನು ಸಮತಟ್ಟು ಮಾಡಿ, ಬಾಳೆ ಸಸಿಗಳನ್ನು ನಾಟಿ ಮಾಡಿದರು. ಬೇಸಗೆ ಸಮಯದಲ್ಲಿ ಹೊಲದಲ್ಲಿನ ಬೋರ್‌ವೆಲ್‌ನಲ್ಲಿ ನೀರು ಬತ್ತಿಹೋಗಿ ಸಮಸ್ಯೆಯಾಯಿತು. ಆಗ ಪಕ್ಕದ ಜಮೀನಿನ ರೈತರಿಂದ ನೀರಿನ ಸಹಾಯ ಪಡೆದಿದ್ದರು. ಬಿಂದಿಗೆಯಲ್ಲಿ ನೀರು ಹೊತ್ತು ತಂದು ಎರಡು ತಿಂಗಳುಗಳ ಕಾಲ ಸಸಿಗಳನ್ನು ಪೋಷಿಸಿದ್ದರು. ಬಿಸಿಲಿನ ಪ್ರಖರತೆಗೆ ಬಿಂದಿಗೆಯಿಂದ ಹಾಕುವ ನೀರು ಸಾಲದು ಎಂದರಿವಾದಾಗ ಮತ್ತೂಂದು ಬೋರ್‌ವೆಲ್‌ ಕೊರೆಸಿದರು. 500 ಅಡಿ ಆಳ ಕೊರೆದ ನಂತರ 2 ಇಂಚು ನೀರು ಸಿಕ್ಕಿತ್ತು. ಇದರಿಂದ ಖುಷಿಯಾದ ಹನಮೇಶ್‌, ಡ್ರಿಪ್‌ ನೀರಾವರಿ ವ್ಯವಸ್ಥೆ ಮಾಡಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಸಕಾಲಕ್ಕೆ ಮಾಡಬೇಕಾದ ಕೆಲಸಗಳನ್ನೆಲ್ಲ ಅಚ್ಚುಕಟ್ಟಾಗಿ ನಿರ್ವಹಿಸಿದರು. ಉತ್ತಮ ಇಳುವರಿ ಬಂದಿತು. ಬೆಂಗಳೂರು, ಕೊಪ್ಪಳ ಹಾಗೂ ಇತರೆಡೆಗಳ ವ್ಯಾಪಾರಸ್ಥರು ನೇರವಾಗಿ ಇವರ ತೋಟಕ್ಕೇ ಬಂದು ಬಾಳೆಗೊನೆಗಳನ್ನು ಖರೀದಿಸಿರುವುದರಿಂದ ಹನಮೇಶ್‌ ಅವರಿಗೆ ಮಾರುಕಟ್ಟೆ ಹಾಗೂ ಸಾಗಣೆಯ ಖರ್ಚು, ತಾಪತ್ರಯ ಎರಡೂ ಇಲ್ಲವಾಯಿತು.

ಗುಣಮಟ್ಟ ಕಾಯ್ದುಕೊಳ್ಳಬೇಕು
ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದ ಗುಟ್ಟೇನು? ಎಂದು ಕೇಳಿದರೆ, “ಕಠಿಣ ಶ್ರಮ, ರೈತರು ಕಾಟಾಚಾರಕ್ಕೆ ಕೃಷಿ ಮಾಡದೇ ತಾವು ಬೆಳೆಯುವ ಬೆಳೆಯ ಕಾಲ ಕಾಲದ ಅಗತ್ಯಗಳನ್ನು ಅರಿತು ಸಕಾಲಕ್ಕೆ ಪೂರೈಸುವುದರಿಂದ ಖರ್ಚು ಕಡಿಮೆ ಮಾಡಬಹುದು ಹಾಗೂ ಗುಣಮಟ್ಟ ಸಹ ಕಾಯ್ದುಕೊಳ್ಳಬಹುದು’ ಎನ್ನುವುದು ಅವರ ಅನುಭವದ ಮಾತು.

ಹೆಚ್ಚಿನ ಮಾಹಿತಿಗೆ: 9480564244 (ಹನಮೇಶ್‌)

Advertisement
Advertisement

Udayavani is now on Telegram. Click here to join our channel and stay updated with the latest news.

Next