ಬಣಕಲ್: ಬಣಕಲ್ ನಿಂದ ಶಬರಿಮಲೆಗೆ ಸುಭಾಷ್ ನಗರದ ಗೋಪಾಲಕೃಷ್ಣ ನಾಯರ್ ಎಂಬವವರು ಶನಿವಾರದಂದು ತಮ್ಮ ಸ್ವಗೃಹದಿಂದ ಪೂಜೆ ಮುಗಿಸಿ ಇರ್ಮುಡಿ ಕಟ್ಟಿ ಶಬರಿಮಲೆಗೆ ಪಾದಯಾತ್ರೆ ಮೂಲಕ ನಡಿಗೆ ಪಯಣಕ್ಕೆ ಚಾಲನೆ ನೀಡಿದರು.
ಸುಮಾರು 800ಕಿ.ಮೀ. ವ್ಯಾಪ್ತಿಯ ಶಬರಿಮಲೆ ಕ್ಷೇತ್ರಕ್ಕೆ 32 ವರ್ಷಗಳ ಕಾಲ ವಾಹನದಲ್ಲಿ ಹೋಗಿ ಬರುತ್ತಿದ್ದರು. ಈ ವರ್ಷ ಇವರು 33ನೇ ವರ್ಷಕ್ಕೆ ನಡೆದು ಬರುವುದಾಗಿ ಹರಕೆ ಹೊತ್ತು ಭಕ್ತಿಯಿಂದ ಅಯ್ಯಪ್ಪ ಸ್ವಾಮಿಯ ಭಕ್ತನಾಗಿ ಗುರು ಸ್ವಾಮಿಯಾಗಿ ಗೋಪಾಲಕೃಷ್ಣ ಅವರು ಒಬ್ಬಂಟಿಗನಾಗಿ ಪಾದಯಾತ್ರೆ ಬೆಳೆಸಿದ್ದಾರೆ. ಚಾರ್ಮಾಡಿ ಘಾಟ್ ಮೂಲಕ ಪಾದಯಾತ್ರೆ ಬೆಳೆಸುವ ಇವರು ಮುಂಡಾಜೆ, ಧರ್ಮಸ್ಥಳ, ಸುಬ್ರಹ್ಮಣ್ಯ ಮಾರ್ಗವಾಗಿ ಶ್ರೀಕ್ಷೇತ್ರಕ್ಕೆ ತೆರಳಲಿದ್ದಾರೆ.
ಶಬರಿಮಲೆ ಅಯ್ಯಪ್ಪ ಸ್ವಾಮಿಯ ಭಕ್ತ ಗೋಪಾಲಕೃಷ್ಣ ನಾಯರ್ ವೃತ್ತಿಯಲ್ಲಿ ವೆಲ್ಡರ್ ಆಗಿದ್ದು, ಜೀವನದಲ್ಲಿ ಸ್ವಾಮಿಯ ಕೃಫೆಯಿಂದ ಕುಟುಂಬಕ್ಕೆ ಒಳಿತಾಗಿದೆ. 32 ವರ್ಷ ಶಬರಿಮಲೆ ಮೆಟ್ಟಿಲೇರಿದ್ದೇನೆ. ಈ ವರ್ಷ ಸ್ವಲ್ಪ ಕಠಿಣ ನಿರ್ಧಾರ ತೆಗೆದುಕೊಂಡು ದಿನ 35 ಕಿ.ಮೀ ಕ್ರಮಿಸುತ್ತೇನೆ. ನಂತರ ಸಿಗುವ ದೇವಸ್ಥಾನಗಳಲ್ಲಿ ತಂಗುತ್ತೇನೆ. ಸುಮಾರು 22 ದಿನಗಳ ಕಾಲ ಈ ಪಾದಯಾತ್ರೆ ಆಗಲಿದೆ. ಡಿಸೆಂಬರ್ ತಿಂಗಳ ಕೊನೆಯ ವಾರದೊಳಗೆ ತಲುಪಬಹುದೆಂಬ ನಿರೀಕ್ಷೆಯಲ್ಲಿದ್ದೇನೆ. ತಲೆಯಲ್ಲಿ ಇರ್ಮುಡಿ ಹೊತ್ತು ತನ್ನ ಪಾದಯಾತ್ರೆ ಮಾಡುತ್ತಿದ್ದೇನೆ ಎಂದು ಗೋಪಾಲಕೃಷ್ಣ ತಿಳಿಸಿದರು.
ಪಾದಯಾತ್ರಿಕ ಗೋಪಾಲಕೃಷ್ಣ ಅವರಿಗೆ ಬಿ.ವಿ. ಸುರೇಶ್, ರವಿ ಪೂಜಾರಿ, ಸಂತೋಷ್, ಪ್ರಕಾಶ್, ಸಂದೀಪ್, ಜಗದೀಶ್, ರತನ್, ಗಣೇಶ್, ಕಾರ್ತಿಕ್, ಕಿರಣ್ ಮತ್ತಿತರರು ಬೀಳ್ಕೊಟ್ಟರು.