Advertisement

BAMUL: ಬಮೂಲ್‌ ಹಾಲು ಉತ್ಪಾದನೆ ಮತ್ತಷ್ಟು ಕುಸಿತ

03:25 PM Sep 02, 2023 | Team Udayavani |

ಬೆಂಗಳೂರು: ಬಿರುಬಿಸಿಲು, ಮಳೆ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ರಾಜ್ಯದ ನಂಬರ್‌ 1 ಹಾಲು ಒಕ್ಕೂಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್‌) ವ್ಯಾಪ್ತಿಯಲ್ಲಿ ಹಾಲು ಉತ್ಪಾದನೆಯಲ್ಲಿ ಮತ್ತಷ್ಟು ಕುಸಿತ ಕಂಡು ಬಂದಿದೆ.

Advertisement

ಒಂದು ತಿಂಗಳ ಹಿಂದಷ್ಟೇ 15.5 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿತ್ತು. ಆದರೆ ಈಗ ಅದು 15 ಲಕ್ಷ ಲೀಟರ್‌ಗೆ ಬಂದು ತಲುಪಿದೆ. ಮುಂದಿನ ದಿನಗಳಲ್ಲಿ ಬಿರುಬಿಸಿಲ ಪರಿಸ್ಥಿತಿ ಹೀಗೆ ಮುಂದುವರಿದರೆ ಹಾಲು ಉತ್ಪಾದನೆಯಲ್ಲಿ ಮತ್ತಷ್ಟು ಇಳಿಕೆಯಾಗುವ ಆತಂಕ ಎದುರಾಗಿದೆ.

ಪ್ರತಿ ವರ್ಷ ಆಗಸ್ಟ್‌ ತಿಂಗಳ ವೇಳೆ ಬೆಂಗಳೂರು ಸಹಕಾರ ಹಾಲು ಒಕ್ಕೂಟ ಸುಮಾರು 17 ಲಕ್ಷ ಲೀಟರ್‌ ಹಾಲು ಉತ್ವಾದಿಸುತ್ತಿತ್ತು. ಆದರೆ ಈ ವರ್ಷ ಆ ಪರಿಸ್ಥಿತಿಯಿಲ್ಲ. ಮಳೆಯಿಲ್ಲದ ಹಿನ್ನೆಲೆಯಲ್ಲಿ ರಾಸು ಹಸುಗಳಿಗೆ ಹಸಿಮೇವು ಸಿಗುತ್ತಿಲ್ಲ. ಕಳೆದ ವರ್ಷ ಈ ತಿಂಗಳ ವೇಳೆ ಉತ್ತಮವಾದ ಮಳೆ ಸುರಿದಿತ್ತು. ಎಲ್ಲ ಕಡೆ ಹಸಿ ಮೇವು ಸಿಗುತ್ತಿತ್ತು. ಆದರೆ ಈ ವರ್ಷ ಆ ಸ್ಥಿತಿ ಕಾಣುತ್ತಿಲ್ಲ.

“ಈ ಹಿಂದೆ ನಾನು, ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಬಮೂಲ್‌ ವ್ಯಾಪ್ತಿಯಲ್ಲಿ 15.5 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿತ್ತು. ಆದರೆ ಈಗ ಅದು 15 ಲಕ್ಷ ಲೀಟರ್‌ಗೆ ಬಂದು ತಲುಪಿದೆ. ಬಿರುಬಿಸಿಲಿನ ಹಿನ್ನೆಲೆಯಲ್ಲಿ ಹಸಿ ಮೇವಿನ ಕೊರತೆ ಉಂಟಾಗಿದ್ದು, ಹಸುಗಳು ಕೊಡುವ ಹಾಲು ಕೂಡ ಕಡಿಮೆಯಾಗಿದೆ. ಹೀಗಾಗಿ ನಮ್ಮ ಒಕ್ಕೂಟ ವ್ಯಾಪ್ತಿಯಲ್ಲಿ ಹಾಲು ಉತ್ಪಾದನೆಯಲ್ಲಿ ಕೂಡ ಕುಸಿತ ಕಂಡಬಂದಿದೆ’ ಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಎಚ್‌.ಪಿ. ರಾಜಕುಮಾರ್‌ ಹೇಳುತ್ತಾರೆ.

ಮಾರುಕಟ್ಟೆಯಲ್ಲಿ ಮುಸುಕಿನ ಜೋಳ, ಹಿಂಡಿ, ಬೂಸಾ ಇನ್ನಿತರ ಹಸುಗಳ ಆಹಾರ ಪದಾರ್ಥಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಇವುಗಳಿಗೆ ಹೆಚ್ಚಿನ ಬೆಲೆ ಕೊಟ್ಟು ತಂದು ರೈತರು ರಾಸು ಹಸುಗಳನ್ನು ಸಾಕುವ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಸಬ್ಸಿಡಿ ದರಗಳಲ್ಲಿ ಹಸು ಆಹಾರವನ್ನು ನೀಡಿ ಹಾಲು ಉತ್ಪಾದಕರನ್ನು ರಕ್ಷಿಸಬೇಕಾದ ಅಗತ್ಯವಿದೆ ಎನ್ನುತ್ತಾರೆ.

Advertisement

20 ಸಾವಿರ ರೈತರು ಹೈನೋದ್ಯಮದಿಂದ ವಿಮುಖ: ಹೊರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಹಾಲು ಉತ್ಪಾದಕರಿಗೆ ನೀಡಲಾಗುತ್ತಿರುವ ಹಣ ಪ್ರತಿ ಲೀಟರ್‌ಗೆ 10 ರಿಂದ 15 ರೂ. ಕಡಿಮೆ ಇದೆ. ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಹಾಲಿನ ದರ 3 ರೂ.ಏರಿಸಿದೆ. ಆದರೆ ಅದು ಸಾಲದು. ಹೈನುಗಾರಿಕೆಯಲ್ಲಿ ಖರ್ಚು ಅಧಿಕ ಆದರೆ ಲಾಭ ಕಡಿಮೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ರೈತರು ಹೈನೋದ್ಯಮದಿಂದ ವಿಮುಖರಾಗುತ್ತಿದ್ದಾರೆ ಎಂದು ರಾಮೋಹಳ್ಳಿಯಲ್ಲಿ ರೈತ ಬೋರೇಗೌಡ ಹೇಳುತ್ತಾರೆ. ಬಮೂಲ್‌ ವ್ಯಾಪ್ತಿಯಲ್ಲಿ ಈಗಾಗಲೇ ಹಲವು ಸಂಖ್ಯೆ ಯಲ್ಲಿ ರೈತರು ಹಸುಗಳನ್ನು ಹೊರ ರಾಜ್ಯಗಳಿಗೆ ಮಾರಾಟ ಮಾಡಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ. ಒಕ್ಕೂಟ ವ್ಯಾಪ್ತಿಯಲ್ಲಿ 20 ಸಾವಿರಕ್ಕೂ ಅಧಿಕ ರೈತರು ಕೋವಿಡ್‌ ಬಂದು ಹೋದ ಬಳಿಕ ಹೈನೋದ್ಯಮದಿಂದ ವಿಮುಖರಾ ಗಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬಂದಿದೆ.

2 ಲಕ್ಷ ಲೀಟರ್‌ ಮೊಸರಿಗೆ ಬಳಕೆ: ಬೆಂಗಳೂರು ಸಹಕಾರ ಹಾಲು ಒಕ್ಕೂಟ ಈಗ ನಿತ್ಯ 15 ಲಕ್ಷ ಲೀಟರ್‌ ಹಾಲು ಉತ್ಪಾದಿಸುತ್ತದೆ. ಇದರಲ್ಲಿ 11 ಲಕ್ಷ ಲೀಟರ್‌ ಹಾಲು ನಿತ್ಯದ ಗ್ರಾಹಕರ ಬಳಕೆಗೆ ಮಾರಾಟ ಮಾಡಲಾಗುತ್ತಿದೆ. ಉಳಿದ 2 ಲಕ್ಷ ಲೀಟರ್‌ ಹಾಲನ್ನು ಮೊಸರು ಉತ್ಪಾದನೆಗೆ ಬಳಸಲಾಗುತ್ತಿದೆ ಎಂದು ಬಮೂಲ್‌ನ ಹಿರಿಯ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಸುಮಾರು 50 ಸಾವಿರ ಲೀಟರ್‌ ಹಾಲನ್ನು ಆಂಧ್ರಪ್ರದೇಶಕ್ಕೆ ರಫ್ತು ಮಾಡಲಾಗುತ್ತಿದೆ. ಉಳಿದ ಹಾಲನ್ನು ಸಿಹಿ ತಿನಿಸು, ಪೌಡರ್‌ ಮತ್ತಿತರರ ಆಹಾರ ಪದಾರ್ಥಗಳ ತಯಾರಿಕೆಗೆ ಬಳಸಲಾಗುತ್ತಿದೆ. ಹಸುಗಳಿಗೆ ಹಸಿ ಮೇವು ದೊರೆತರೆ ಅಧಿಕ ಪ್ರಮಾಣದಲ್ಲಿ ಹಾಲು ನೀಡುತ್ತವೆ. ಆದರೆ ಇದೀಗ ಹೇರಳವಾಗಿ ಹಸಿ ಮೇವು ರಾಸುಗಳಿಗೆ ದೊರಕದೇ ಇರುವುದು ಹಾಲಿನ ಪೂರೈಕೆಯಲ್ಲಿ ಕಡಿಮೆ ಆಗಿದೆ ಎನ್ನುತ್ತಾರೆ.

ರಾಸುಗಳಿಗೆ ಹಸಿಮೇವು ದೊರೆಯದೇ ಇರುವ ಹಿನ್ನೆಲೆಯಲ್ಲಿ ನಿರೀಕ್ಷಿತ ಪ್ರಮಾಣದ ಹಾಲು ಉತ್ಪಾದನೆ ಆಗುತ್ತಿಲ್ಲ. ಪ್ರತಿ ವರ್ಷ ಈ ಅವಧಿಯಲ್ಲಿ 17 ಲಕ್ಷ ಲೀಟರ್‌ ಹಾಲು ಪೂರೈಕೆ ಆಗುತಿತ್ತು. ಆದರೆ ಬಿರುಬಿಸಿಲಿನ ಹಿನ್ನೆಲೆಯಲ್ಲಿ ರಾಸು ಹಸುಗಳಿಗೆ ಮೇವು ಸಿಗುತ್ತಿಲ್ಲ. ಕೋಲಾರ ಮತ್ತಿತರ ಕಡೆ ಕೂಡ ಇದೇ ಪರಿಸ್ಥಿತಿಯಿದೆ. – ಎಚ್‌.ಪಿ.ರಾಜಕುಮಾರ್‌, ಬಮೂಲ್‌ ಅಧ್ಯಕ್ಷ

– ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next