Advertisement

ಪುತ್ತೂರು ಸೀಮೆಯ ಒಡತಿ ಉಳ್ಳಾಲ್ತಿ ನೇಮಕ್ಕೆ ಎಣ್ಣೆಬೂಳ್ಯ

08:55 AM Apr 27, 2018 | Karthik A |

ನಗರ: ನಲ್ಕುರಿ ಸಂಪ್ರದಾಯದ ಪ್ರಕಾರ ನಡೆಯುವ ಬಲ್ನಾಡು ಶ್ರೀ ಉಳ್ಳಾಲ್ತಿ ದಂಡನಾಯಕ ದೈವಗಳ ನೇಮಕ್ಕೆ ಎ. 27ರಂದು ಸಂಜೆ ಭಂಡಾರ ತೆಗೆದು, ಶನಿವಾರ ನೇಮ ನಡೆಯಲಿದೆ. ವರ್ಷಂಪ್ರತಿ ಎ. 10ರಿಂದ 19ರವರೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ. ಎ. 19ರಂದು ಧ್ವಜಾವರೋಹಣಗೊಂಡರೆ, ಎ. 20ರಂದು ಬಲ್ನಾಡು ದೈವಸ್ಥಾನದ ನೇಮಕ್ಕೆ ಗೊನೆ ಮುಹೂರ್ತ. ಎ. 28ರಂದು ನೇಮ, ಇದು ಸಂಪ್ರದಾಯ.

Advertisement

ಶ್ರೀ ಉಳ್ಳಾಲ್ತಿ, ದಂಡನಾಯಕ, ಮಲರಾಯ ದೈವಗಳ ನೇಮಕ್ಕೆ ಎ. 26ರಂದು ಸಂಜೆ ಎಣ್ಣೆಬೂಳ್ಯ ನೀಡಲಾಯಿತು. ಇಲ್ಲಿಂದ ಬಳಿಕ ನೇಮ ಮುಕ್ತಾಯದವರೆಗೆ ದೈವ ನರ್ತಕ ಸ್ಥಳ ಬಿಟ್ಟು ಹೋಗುವಂತಿಲ್ಲ. ಬಲ್ನಾಡು ದೈವಸ್ಥಾನದ ಈ ಸಂಪ್ರದಾಯವನ್ನು ಮೂಜಿ ದಿನತ್ತ ಆಗಿನ (ಮೂರು ದಿನದ ಆಗಿನ) ಎಂದು ಹೇಳಲಾಗುತ್ತದೆ. ಆಗಿನ ಎಂದರೆ ಧಾರ್ಮಿಕ ಉತ್ಸವಗಳ ಪ್ರಾರಂಭದ ವಿಧಿ ಎಂದು ಅರ್ಥ. ಸಾಮಾನ್ಯವಾಗಿ ಉಳ್ಳಾಲ್ತಿ ನೇಮಗಳಲ್ಲಿ ಮೂರು, ಐದು ಹಾಗೂ ಏಳು ದಿನಗಳ ಆಗಿನ ಎಂಬ ಸಂಪ್ರದಾಯವಿದೆ. ಇಷ್ಟು ದಿನದ ಮೊದಲೇ ಬರುವ ದೈವ ನರ್ತಕ ಎಣ್ಣೆ ಬೂಳ್ಯ ಪಡೆದು, ಅಡಿಕೆ ಹಾಳೆಯನ್ನು ಒಣಗಿಸುವ ಕೆಲಸದಲ್ಲಿ ನಿರತನಾಗುತ್ತಾನೆ, ಮನೆಗೂ ಹೋಗುವಂತಿಲ್ಲ.

ಗುರುವಾರ ರಾತ್ರಿ ಉಳ್ಳಾಲ್ತಿ- ದಂಡನಾಯಕ ದೈವ ನರ್ತಕರಿಗೆ ಎಣ್ಣೆ ಬೂಳ್ಯ ನೀಡಲಾಯಿತು. ಶುಕ್ರವಾರ ದೈವ ಸ್ಥಾನಕ್ಕೆ ಸಂಬಂಧಪಟ್ಟ ಭಟ್ಟಿ ವಿನಾಯಕ ದೇವಸ್ಥಾನದಲ್ಲಿ ದೇವತಾ ಪ್ರಾರ್ಥನೆ, ಮಹಾಪೂಜೆ, ರಂಗಪೂಜೆ ನಡೆಯಲಿದೆ. ರಾತ್ರಿ 7ಕ್ಕೆ  ಕಟ್ಟೆಮನೆಯಿಂದ ದೈವಗಳ ಭಂಡಾರ ತೆಗೆಯಲಾಗುವುದು. ಬಳಿಕ ಅನ್ನಸಂತರ್ಪಣೆ, ತಂಬಿಲಾದಿಗಳು ನಡೆಯಲಿವೆ. ಶನಿವಾರ ಮುಂಜಾನೆ ಕಟ್ಟೆಮನೆಯ ಬಳಿಯಿರುವ ಗದ್ದೆಯಲ್ಲಿ ಶ್ರೀ ದಂಡನಾಯಕ ದೈವದ ನೇಮ ಕಟ್ಟಿ, ವಾಲಸರಿ ಆಗಮಿಸಲಿದೆ. ಬಳಿಕ ದೈವಸ್ಥಾನಕ್ಕೆ (ಮಾಡ) ಆಗಮಿಸಿ ನೇಮ ಜರಗಲಿದೆ. ಮಧ್ಯಾಹ್ನ ಶ್ರೀ ಉಳ್ಳಾಲ್ತಿ ದೈವದ ನೇಮ ನಡೆಯಲಿದೆ. ಅನಂತರ ಕಾಳರಾಹು, ಮಲರಾಯ ದೈವಗಳ ನೇಮ ಜರಗಲಿದೆ.

ಕಟ್ಟೆಮನೆ
ಕಟ್ಟೆಮನೆ ಹಾಗೂ ಇದರ ಮುಂದಿರುವ ಗುಡಿ ದೈವಗಳ ಮೂಲಸ್ಥಾನ. ಕಟ್ಟೆಮನೆ ಈಗ ಗೌಡ ಸಮುದಾಯದ ಸುಪರ್ದಿಯಲ್ಲಿದೆ. ಇದಕ್ಕೂ ಒಂದು ಹಿನ್ನೆಲೆಯಿದೆ. ಬಲ್ಲಾಳರ ವಂಶ ಅಳಿಯುವ ಹೊತ್ತು. ತೀರ್ಥಯಾತ್ರೆಗೆ ಹೊರಟು ನಿಂತ ಕೊನೆಯ ಅರಸ, ಕೀ ಗೊಂಚಲನ್ನು ಬುಟ್ಟಿಯೊಂದಕ್ಕೆ ಎಸೆದು ಹೋಗುತ್ತಾನೆ. ದನಗಳಿಗೆ ಹುಲ್ಲು ತಂದು ಹಾಕುವ ವ್ಯಕ್ತಿಗೆ ಈ ಕೀ ಸಿಗುತ್ತದೆ. ಅವರೇ ಮುಂದೇ ಕಟ್ಟೆಮನೆ ಹಾಗೂ ದೈವಗಳ ಜವಾಬ್ದಾರಿಗೆ ಹೆಗಲು ಕೊಟ್ಟರೆಂದು ನಂಬಿಕೆ ಇದೆ. ದಂಡನಾಯಕ ಹಾಗೂ ಉಳಿದ ದೈವಗಳ ಚಾಕರಿ ಕೆಲಸವನ್ನು ಕಟ್ಟೆಮನೆಯವರೇ ನಿರ್ವಹಿಸುತ್ತಿದ್ದಾರೆ. ಕಟ್ಟೆಮನೆಯ ಒಳಗಡೆ ಧರ್ಮ ಚಾವಡಿ ಇದೆ. ಇದರಲ್ಲಿ ಮಲರಾಯ ದೈವ ಪ್ರಧಾನ. ಇದರ ಜತೆಗೆ ಮನುಷ್ಯ ಆಕಾರದ ಮೊಗ ಇರುವ ಕಂಟ್ರಾಣಿ ಮಲರಾಯ ದೈವವಿದೆ. ಕಟ್ಟೆಮನೆಯ ಎದುರಿಗೆ ಇರುವ ಪ್ರತ್ಯೇಕ ಚಾವಡಿಯಲ್ಲಿ ದಂಡನಾಯಕ, ಉಳ್ಳಾಲ್ತಿ, ಕಾಳರಾಹು ದೈವಗಳು ನೆಲೆಸಿವೆ.

ವ್ಯಾಪಾರ ನಿಷಿದ್ಧ
ಬಲ್ನಾಡು ಆಸುಪಾಸು ಕೆಲ ವಿಶೇಷವಾದ ನಂಬಿಕೆಯನ್ನು ಶ್ರದ್ಧಾ – ಭಕ್ತಿಯಿಂದ ಆಚರಿಸುತ್ತಾರೆ. ದೈವಸ್ಥಾನದ ಆಸುಪಾಸು ಎಲ್ಲಿಯೂ ವ್ಯವಹಾರ ನಡೆಸುವಂತಿಲ್ಲ. ಕಲ್ಲಂಗಡಿ, ಆಹಾರ, ಪಾನೀಯಗಳನ್ನು ವಿತರಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಹಣ ತೆಗೆದುಕೊಳ್ಳುವುದಿಲ್ಲ. ಇಲ್ಲಿ ಅಂಗಡಿ ಹಾಕಬಹುದು. ಆದರೆ ವಸ್ತುವಿಗೆ ಪ್ರತಿಯಾಗಿ ಹಣ ತೆಗೆದುಕೊಳ್ಳಬಾರದು. ನೇಮದಂದು ಪುತ್ತೂರಿನಿಂದ ವಾಹನದ ವ್ಯವಸ್ಥೆ ಇರುತ್ತದೆ. ಅವರದೂ ಉಚಿತ ಸೇವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next