Advertisement

ರಾಬಕೊ ಹಾಲು ಒಕ್ಕೂಟದ ರೈತರಿಗೆ ಬೋನಸ್‌

06:38 PM Aug 05, 2021 | Team Udayavani |

ವೆಂಕೋಬಿ ಸಂಗನಕಲ್ಲು

Advertisement

ಬಳ್ಳಾರಿ: ರಾಯಚೂರು, ಬಳ್ಳಾರಿ, ಕೊಪ್ಪಳ ಹಾಲು ಒಕ್ಕೂಟದಿಂದ ಪ್ರತಿವರ್ಷ ನೀಡುವ ಬೋನಸ್‌ನ್ನು ಈ ಬಾರಿ 6 ರೂಗಳಿಗೆ ಹೆಚ್ಚಿಸಲಾಗಿದ್ದು, ಮೂರು ಜಿಲ್ಲೆಗಳ ಒಟ್ಟು 29 ಸಾವಿರ ರೈತರಿಗೆ 3.21 ಕೋಟಿ ರೂಗಳನ್ನು ವಿತರಿಸಲಾಗಿದೆ. ಅಧ್ಯಕ್ಷರ ವೇತನ, ಭತ್ಯೆ ಸಹ ರೈತರಿಗೆ ನೀಡಲಾಗಿದ್ದು, ಕೋವಿಡ್‌ ಸಂಕಷ್ಟದ ದಿನಗಳಲ್ಲಿ ಈ ಮೂಲಕ ರೈತರ ನೆರವಿಗೆ ಧಾವಿಸಿರುವುದು ಗಮನಾರ್ಹ.

ರಾಯಚೂರು, ಬಳ್ಳಾರಿ, ಕೊಪ್ಪಳ ಹಾಲು ಒಕ್ಕೂಟದಲ್ಲಿ ಪ್ರತಿವರ್ಷ ಉಳಿಯುವ ಲಾಭಾಂಶದಲ್ಲಿ ರೈತರು ಮಾರ್ಚ್‌ ತಿಂಗಳಲ್ಲಿ ನೀಡುವ ಪ್ರತಿ ಲೀಟರ್‌ ಹಾಲಿಗೆ ಇಂತಿಷ್ಟು ಹಣವನ್ನು ಬೋನಸ್‌ ರೂಪದಲ್ಲಿ ರೈತರಿಗೆ ನೀಡಲಾಗುತ್ತದೆ. ಅದೇ ರೀತಿ ಶಾಸಕ ಭೀಮಾನಾಯ್ಕ ಅವರು ಒಕ್ಕೂಟದ ಅಧ್ಯಕ್ಷತೆ ವಹಿಸಿಕೊಂಡ ಬಳಿಕ ಈ ಬೋನಸ್‌ ಹಣವನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಿಕೊಂಡು ಬರಲಾಗುತ್ತಿದ್ದು, ಪ್ರಸಕ್ತ ವರ್ಷ ಬೋನಸ್‌ ಹಣವನ್ನು ಪ್ರತಿ ಲೀಟರ್‌ 6 ರೂಗೆ ಹೆಚ್ಚಿಸುವ ಮೂಲಕ ಕೋವಿಡ್‌ ಸಂಕಷ್ಟದಲ್ಲಿರುವ ರೈತರಿಗೆ ನೆರವಾದಂತಾಗಿದೆ.

3.21 ಕೋಟಿ ರೂ. ವಿತರಣೆ: ಒಕ್ಕೂಟದ ಅಧ್ಯಕ್ಷ ಭೀಮಾನಾಯ್ಕ ಅವರು ಅಧಿ ಕಾರ ವಹಿಸಿಕೊಂಡ ಮೊದಲ ವರ್ಷ 2018-19ರಲ್ಲಿ ಪ್ರತಿ ಲೀಟರ್‌ಗೆ 2.25 ರೂ. ಬೋನಸ್‌ ನೀಡಿದ್ದ ರೈತರಿಗೆ, 2019-20ರಲ್ಲಿ 5 ರೂಗೆ ಹೆಚ್ಚಿಸಿ ವಿತರಿಸಲಾಯಿತು. ಇದೀಗ 2020-21ನೇ ಸಾಲಿನಲ್ಲಿ ಒಕ್ಕೂಟಕ್ಕೆ ಕೋಟ್ಯಾಂತರ ರೂ. ಲಾಭ ಬಂದಿದೆ. ಈ ಹಿನ್ನೆಲೆಯಲ್ಲಿ ಬೋನಸ್‌ ಹಣವನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಪ್ರತಿ ಲೀಟರ್‌ ಗೆ 6 ರೂ. ಬೋನಸ್‌ ನೀಡಲಾಗಿದೆ. ಕಳೆದ ಮಾರ್ಚ್‌ ತಿಂಗಳೊಂದರಲ್ಲೇ ಬಳ್ಳಾರಿ 398, ರಾಯಚೂರು 113, ಕೊಪ್ಪಳ 244 ಸೇರಿ ಮೂರು ಜಿಲ್ಲೆಗಳ ಒಟ್ಟು 755 ಹಾಲು ಉತ್ಪಾದಕ ಸಹಕಾರಿ ಸಂಘಗಳಿಂದ 53.60 ಲಕ್ಷ ಲೀಟರ್‌ ಹಾಲು ರೈತರಿಂದ ಸಂಗ್ರಹಿಸಲಾಗಿದ್ದು, ಪ್ರತಿ ಲೀಟರ್‌ಗೆ 6 ರೂ.ಗಳಂತೆ ಒಟ್ಟು 3.21 ಕೋಟಿ ರೂ. ಬೋನಸ್‌ನ್ನು ರೈತರಿಗೆ ವಿತರಿಸಲಾಗಿದೆ.

ಇದು ಒಟ್ಟು 28350 ರೈತರಿಗೆ ನೆರವಾಗಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ತಿರುಪತೆಪ್ಪ ಅಂಕಿ ಅಂಶಗಳನ್ನು ನೀಡಿದದರು. ಕಡಿತಗೊಳಿಸದ ಬೆಲೆ: ಹೆಚ್ಚಿದ ಆದಾಯ: ರಾಜ್ಯದಲ್ಲಿ ಬಳ್ಳಾರಿ ಸೇರಿ ಒಟ್ಟು 14 ಹಾಲು ಉತ್ಪಾದನಾ ಒಕ್ಕೂಟಗಳು ಇವೆ. ಕೋವಿಡ್‌ ಸೋಂಕು, ಲಾಕ್‌ ಡೌನ್‌ ಸಂದರ್ಭದಲ್ಲಿ ರಾಬಕೊ ಹೊರತುಪಡಿಸಿ ಎಲ್ಲ ಒಕ್ಕೂಟಗಳಲ್ಲೂ ರೈತರಿಗೆ ನೀಡುವ ಹಾಲಿನ ಬೆಲೆಯನ್ನು ಕಡಿತಗೊಳಿಸಲಾಗಿದೆ. ಆದರೆ, ಬಳ್ಳಾರಿ ಒಕ್ಕೂಟದಲ್ಲಿ ಮಾತ್ರ ಬೆಲೆ ಕಡಿತಗೊಳಿಸಿಲ್ಲ. ರೈತರಿಂದ ಖರೀದಿಸಿದ ಹಾಲಿಗೆ ಈ ಮೊದಲು ನೀಡುತ್ತಿದ್ದ ಬೆಲೆಯನ್ನೇ ಕೋವಿಡ್‌, ಲಾಕ್‌ಡೌನ್‌ ಸಂದರ್ಭದಲ್ಲೂ ನೀಡುವ ಮೂಲಕ ಸಂಕಷ್ಟದ ಸಮಯದಲ್ಲಿ ರೈತರ ನೆರವಿಗೆ ಬಂದಂತಾಗಿದೆ.

Advertisement

ಕೋವಿಡ್‌ ಸಂದರ್ಭದಲ್ಲೇ ಒಕ್ಕೂಟಕ್ಕೆ ಕೋಟ್ಯಾಂತರ ರೂ. ಆದಾಯ ಬಂದಿದ್ದು, 32 ವರ್ಷಗಳ ಒಕ್ಕೂಟದ ಇತಿಹಾಸದಲ್ಲೇ ಅತಿಹೆಚ್ಚು ಆದಾಯವಾಗಿದೆ. ಹಾಗಾಗಿ ಕೋವಿಡ್‌ ಸಂದರ್ಭದಲ್ಲೂ ಒಕ್ಕೂಟದ ಕೈಹಿಡಿದಿರುವ ರೈತರಿಗೆ ಮಾರ್ಚ್‌ ತಿಂಗಳ ಹಾಲಿಗೆ ಪ್ರತಿ ಲೀಟರ್‌ಗೆ 6 ರೂ. ಬೋನಸ್‌ ನೀಡಲಾಗಿದೆ ಎನ್ನುತ್ತಾರೆ ಒಕ್ಕೂಟದ ಅಧ್ಯಕ್ಷ ಭೀಮಾನಾಯ್ಕ.

ವೇತನ, ಭತ್ಯೆ ಪಡೆಯದ ಭೀಮಾನಾಯ್ಕ: ಹಲವರ ಅಡೆತಡೆಗಳ ನಡುವೆಯೂ ಬಳ್ಳಾರಿ, ರಾಯಚೂರು, ಕೊಪ್ಪಳ ಹಾಲು ಒಕ್ಕೂಟದ ಅಧ್ಯಕ್ಷರಾಗಿರುವ ಶಾಸಕ ಭೀಮಾನಾಯ್ಕ, ಒಕ್ಕೂಟದಿಂದ ನೀಡುವ ತಿಂಗಳ ವೇತನ, ಭತ್ಯೆಯನ್ನು ಈವರೆಗೆ ಒಮ್ಮೆಯೂ ಪಡೆದಿಲ್ಲ. ಇದನ್ನು ವಾಪಸ್‌ ನೀಡಿದ್ದು, ಒಕ್ಕೂಟದ ಲಾಭಾಂಶಕ್ಕೆ ಸೇರಿಸಿ ರೈತರಿಗೆ ಪ್ರತಿವರ್ಷದಂತೆ ಬೋನಸ್‌ ನೀಡುವ ಮೂಲಕ ರೈತರಿಗೆ ನೆರವಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ.

ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಅವರು ಅಡವಿ ಆನಂದದೇವನಹಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ನಿರ್ದೇಶಕರಾಗಿ ನೇಮಕವಾಗಿ ಎರಡು ವರ್ಷಗಳ ಹಿಂದೆ ಬಳ್ಳಾರಿ, ರಾಯಚೂರು, ಕೊಪ್ಪಳ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಒಕ್ಕೂಟಕ್ಕೆ ಬರುವ ಎಲ್ಲ ನಿರ್ದೇಶಕರಂತೆ ಅಧ್ಯಕ್ಷರಿಗೂ ಪ್ರತಿ ಕಿಮೀಗೆ 10 ರೂ. ಭತ್ಯೆ, 10 ಸಾವಿರ ರೂ. ತಿಂಗಳ ವೇತನ ನೀಡಲಾಗುತ್ತದೆ.

ಹೀಗೆ ಪ್ರತಿ ತಿಂಗಳ ವೇತನ, ಭತ್ಯೆ ಸೇರಿ ಸುಮಾರು 15 ಸಾವಿರ ರೂ. ಗಳಷ್ಟಾಗಲಿದ್ದು, ಒಂದು ವರ್ಷದ ಸುಮಾರು 1.50 ಲಕ್ಷಕ್ಕೂ ಹೆಚ್ಚು ಹಣವನ್ನು ಒಕ್ಕೂಟಕ್ಕೆ ವಾಪಸ್‌ ನೀಡಿದ್ದಾರೆ. ಒಕ್ಕೂಟದ ನಿರ್ದೇಶಕರ ಸಭೆಯಲ್ಲಿ ವಾಪಸ್‌ ನೀಡುತ್ತಿರುವ ಚೆಕ್‌ನ್ನು ಪ್ರದರ್ಶಿಸಿ ಎಲ್ಲರ ಗಮನಕ್ಕೆ ತಂದು ಒಕ್ಕೂಟಕ್ಕೆ ನೀಡಲಾಗುತ್ತದೆ. ಈ ಹಣವನ್ನು ಒಕ್ಕೂಟದ ಲಾಭಾಂಶಕ್ಕೆ ಸೇರಿಸಿ ರೈತರಿಗೆ ನೆರವಾಗುವಂತೆ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next