Advertisement

ಅಧಿಕಾರದಲ್ಲಿದ್ದವರಿಗೆ ತಪ್ಪುತಪ್ಪಾಗಿ ಕಾಣೋದೇ ಇಲ್ಲ

07:16 PM Aug 23, 2021 | Team Udayavani |

ಬಳ್ಳಾರಿ: ಪ್ರಸ್ತುತ ದಿನಗಳಲ್ಲಿ ಇಂದು ಅಧಿ ಕಾರದಲ್ಲಿರುವವರಿಗೆ ತಪ್ಪು ಮಾಡುವುದೇನೂ ತಪ್ಪಲ್ಲ ಎಂಬ ಭಾವನೆಯಿದೆ. ಅವರಲ್ಲಿನ ಸ್ವಾರ್ಥ ಮತ್ತು ದುರಾಸೆಗಳಿಂದಾಗಿ ಭ್ರಷ್ಟಾಚಾರ ಲಂಚಗುಳಿತನ ಇಂದು ಈ ಹಂತ ತಲುಪಲು ಕಾರಣವಾಗಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಾಧಿಧೀಶ ಎನ್‌. ಸಂತೋಷ್‌ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಎಐಡಿವೈಒ ಮತ್ತು ಅಖೀಲ ಭಾರತ ನಿರುದ್ಯೋಗಿ ಯುವಜನ ಹೋರಾಟ ಸಮಿತಿ ವತಿಯಿಂದ ಕೆಪಿಎಸ್‌ಸಿ ಸ್ವತ್ಛಗೊಳಿಸಿ- ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಒದಗಿಸಿ ಎಂಬ ವಿಷಯದ ಕುರಿತು ಭಾನುವಾರ ಹಮ್ಮಿಕೊಳ್ಳಲಾಗಿದ್ದ ವೆಬಿನಾರ್‌ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಗಿನ ಕೆಪಿಎಸ್‌ಸಿ ಅಧ್ಯಕ್ಷರ ನೇಮಕವು ಮೇಲ್ನೋಟಕ್ಕೆ ಕಾನೂನುಬಾಹಿರವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಇಂತಹ ಉಲ್ಲಂಘನೆಗಳು ಸಾಮಾನ್ಯವಾಗಿ ಬಿಟ್ಟಿವೆ. ಜೈಲಿಗೆ ಹೋಗಿ ಜಾಮೀನು ಕೊಟ್ಟು ಬಿಡುಗಡೆಗೊಂಡವರಿಗೆ ಜೈಕಾರ ಹಾಕುವ ಜನ ನಮ್ಮಲ್ಲಿದ್ದಾರೆ ಎಂದರು.

ಅಪರಾಧ ಮಾಡಿದವರಿಗೆ ಶಿಕ್ಷೆಯ ಅಂತಿಮ ತೀರ್ಪು ಹೊರಬೀಳಲು ಐವತ್ತು ವರ್ಷಗಳೇ ಆಗುತ್ತಿವೆ. ಶಿಕ್ಷೆಯ ಭಯವಿಲ್ಲದ ಭ್ರಷ್ಟರು ಅವ್ಯಾಹತವಾಗಿ ಹಗರಣಗಳನ್ನು ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಹಗರಣಗಳ ಮೊತ್ತ ಏರಿಕೆಯಾಗುತ್ತಿದೆ. 1954ರಲ್ಲಿ 52 ಲಕ್ಷ ರೂಪಾಯಿಗಳ ಜೀಪು ಹಗರಣ ನಡೆದರೆ, 1984ರ ಬೊಫೋರ್ಸ್‌ ಹಗರಣದಲ್ಲಿ ದೇಶಕ್ಕೆ 64 ಕೋಟಿ ರೂ.ಗಳ ನಷ್ಟವಾಗಿತ್ತು. 2010ರ ಕಲ್ಲಿದ್ದಲು ಹಗರಣದಲ್ಲಿ ಅದು 1,88,000 ಕೋಟಿ ರೂ. ಆಯಿತು. ಆಡಳಿತದಲ್ಲಿರುವವರ ಸ್ವಾರ್ಥ-ದುರಾಸೆಗಳು ಇವುಗಳಿಗೆಲ್ಲ ಕಾರಣ ಎಂದರು.

ಎಐಡಿವೈಒ ಅಖೀಲ ಭಾರತ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ಸಮಾಜದಲ್ಲಿನ ಭ್ರಷ್ಟಾಚಾರವನ್ನು ಸ್ವತ್ಛಗೊಳಿಸಲು ಇಂದಿನ ಯುವ ಸಮುದಾಯ ಮುಂದಾಗಬೇಕು. ಆಗ ಮಾತ್ರ ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಸಿಗಲು ಸಾಧ್ಯ ಎಂದರು. ದೇಶದಲ್ಲಿ ಸುಮಾರು 75 ಕೋಟಿ ಯುವ ಜನರಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 70ರಷ್ಟು ಜನ 15ರಿಂದ 59ರ ವಯೋಮಾನದಲ್ಲಿದ್ದಾರೆ. ದುಡಿಯಲು ಸಮರ್ಥವಾದ ಹೇರಳವಾದ ಮಾನವ ಸಂಪನ್ಮೂಲ ನಮ್ಮಲ್ಲಿದೆ. ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳುವ ಇರಾದೆ ನಮ್ಮ ಆಳ್ವಿಕರಿಗಿಲ್ಲ. ಅವರ ಪೊಳ್ಳು ಭರವಸೆಗಳನ್ನು ನಂಬಿ ಕೂತರೆ ಯುವಕರಿಗೆ ಉದ್ಯೋಗ ಸಿಗುವುದಿಲ್ಲ. ಅವರು ಉದ್ಯೋಗಕ್ಕಾಗಿ ಸಮರಶೀಲ ಹೋರಾಟ ಕಟ್ಟುವುದು ಇಂದಿನ ಅವಶ್ಯ ಎಂದರು.

ಅರ್ಹರನ್ನು ಉದ್ಯೋಗಕ್ಕೆ ಆಯ್ಕೆ ಮಾಡಬೇಕಾದ ಕೆಪಿಎಸ್‌ಸಿಯೇ ಇಂದು ಭ್ರಷ್ಟಾಚಾರದಲ್ಲಿ ಮುಳುಗಿರುವುದು ಜಗಜ್ಜಾಹೀರಾಗಿದೆ. ಸರ್ಕಾರದ ಮುಖ್ಯಸ್ಥರೇ ಇಂದು ತಮ್ಮ ದಲ್ಲಾಳಿಗಳನ್ನು ಕೆಪಿಎಸ್‌ಸಿಯ ಸದಸ್ಯರಾಗಿ ಮತ್ತು ಅಧ್ಯಕ್ಷರಾಗಿ ನೇಮಕ ಮಾಡುತ್ತಿದ್ದಾರೆ. ತನ್ಮೂಲಕ ಉದ್ಯೋಗಾಕಾಂಕ್ಷಿಗಳಿಂದ ಹಣ ದೋಚುವ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

Advertisement

ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಅಧ್ಯಯನದ ವರದಿಯ ಪ್ರಕಾರ ಕೇವಲ 54,000 ಕೋಟಿ ರೂ.ಗಳನ್ನು ಖರ್ಚು ಮಾಡಿದರೆ ದೇಶದ ಎಲ್ಲ ನಗರಗಳಲ್ಲಿರುವ ನಿರುದ್ಯೋಗಿಗಳಿಗೆ ಮಾಸಿಕ 15,000ರೂ. ವೇತನದೊಂದಿಗೆ 8 ತಿಂಗಳು ಉದ್ಯೋಗ ಕೊಡಬಹುದು. ಹಾಗೆಯೇ 1 ಲಕ್ಷ ಕೋಟಿ ರೂ. ಖರ್ಚು ಮಾಡಿದರೆ ಗ್ರಾಮೀಣ ಯುವಜನರಿಗೆ ವರ್ಷ ಪೂರ್ತಿ ಕೆಲಸ ಕೊಡಬಹುದು. ಆದರೆ, ಸರ್ಕಾರ ಇದನ್ನು ಮಾಡುತ್ತಿಲ್ಲ. ಕೇವಲ ಇಂಧನದ ಮೇಲಿನ ತೆರಿಗೆಯಿಂದಲೇ ವರ್ಷಕ್ಕೆ 3,36,000 ಕೋಟಿ ರೂ. ಆದಾಯ ಸರ್ಕಾರಕ್ಕೆ ಸಿಗುತ್ತಿದೆ.

ಅದರಲ್ಲಿ ಅರ್ಧದಷ್ಟು ಖರ್ಚು ಮಾಡಿದರೂ ಎಲ್ಲ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಬಹುದು. ಆದರೆ ಸರ್ಕಾರಗಳು ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿರುವ ಕೆಲವೇ ಬಂಡವಾಳಗಾರರ ಸೇವೆಗೆ ನಿಂತಿವೆ ಎಂದು ಆಪಾದಿಸಿದರು. ಅಧ್ಯಕ್ಷತೆ ವಹಿಸಿದ್ದ ಎಐಡಿವೈಒ ರಾಜ್ಯಾಧ್ಯಕ್ಷೆ ಎಂ.ಉಮಾದೇವಿ, ನಿರುದ್ಯೋಗಿ ಯುವಜನ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಶರಣಪ್ಪ ಉದ್ಭಾಳ್‌ ಮಾತನಾಡಿದರು. ಸಮಿತಿಯ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಕಾರ್ಯಕ್ರಮ ನಿರ್ವಹಿಸಿದರು. ವೆಬಿನಾರ್‌ನಲ್ಲಿ ನೂರಾರು ಯುವಜನರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next