Advertisement
ಮುಖ್ಯಮಂತ್ರಿಯಾಗಿ, ವಿದೇಶಾಂಗ ಸಚಿವರಾಗಿ, ರಾಜ್ಯಪಾಲರಾಗಿ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತನ್ನದೇ ಆದ ವರ್ಚಸ್ಸು ಬೆಳೆಸಿಕೊಂಡಿದ್ದ ಹಿರಿಯ ನಾಯಕ ಎಸ್. ಎಂ. ಕೃಷ್ಣ ದಿಢೀರ್ ಆಗಿ ಕಾಂಗ್ರೆಸ್ ಪಕ್ಷದಿಂದ ಹೊರಬಂದಿರುವುದು ಅನೇಕರಿಗೆ ಆಘಾತಕಾರಿಯಾದ ನಿರ್ಧಾರದಂತೆ ಕಾಣಿಸಿರಬಹುದು. ಆದರೆ ಕೃಷ್ಣ ಅವರನ್ನು ಹತ್ತಿರದಿಂದ ಬಲ್ಲವರಿಗೆ ಇದು ನಿರೀಕ್ಷಿತವೇ ಆಗಿತ್ತು. ಸುಮಾರು ಐದು ದಶಕಗಳ ಕಾಲ ಕಾಂಗ್ರೆಸ್ನಲ್ಲಿ ಬಹುತೇಕ ಎಲ್ಲ ಹುದ್ದೆಗಳನ್ನು ಅನುಭವಿಸಿದ್ದ ಕೃಷ್ಣ ಕಳೆದ ಐದು ವರ್ಷಗಳಲ್ಲಿ ಮೂಲೆಗುಂಪಾಗಿದ್ದರು. ಕಾಂಗ್ರೆಸ್ ಹೈಕಮಾಂಡ್ ಅಂದು ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವ ನೆಪವೊಡ್ಡಿ ಅವರನ್ನು ವಿದೇಶಾಂಗ ಸಚಿವ ಹುದ್ದೆಯಿಂದ ಕೆಳಗಿಸಿ ರಾಜ್ಯಕ್ಕೆ ಸಾಗಹಾಕಿತು. ಬಳಿಕ ರಾಜ್ಯದ ಹೊಣೆಯನ್ನೂ ನೀಡಲಿಲ್ಲ ಹಾಗೂ ರಾಷ್ಟ್ರ ಮಟ್ಟದಲ್ಲೂ ಸಮರ್ಪಕವಾದ ಮನ್ನಣೆ ನೀಡಲಿಲ್ಲ. ಬೇರೆ ಯಾರೇ ಆಗಿದ್ದರೂ ಆಗಲೇ ರಾಜೀನಾಮೆ ಬಿಸಾಕುತ್ತಿದ್ದರು. ಆದರೆ ಪರಿಪಕ್ವ ಮತ್ತು ಅನುಭವಿ ರಾಜಕಾರಣಿಯಾಗಿರುವ ಕೃಷ್ಣ ಅಂತಹ ದುಡುಕಿನ ನಿರ್ಧಾರ ಕೈಗೊಳ್ಳಲಿಲ್ಲ. ತನ್ನ ಅನುಭವಕ್ಕೆ , ಹಿರಿತನಕ್ಕೆ ಮತ್ತು ವರ್ಚಸ್ಸಿಗೆ ತಕ್ಕ ಗೌರವ ಸಿಗಬಹುದು ಎಂದು ಕಾದಿದ್ದರು. ಕೊನೆಗೂ ಅದು ಸಾಧ್ಯವಿಲ್ಲ ಎಂದು ಅರಿವಾದಾಗ ರಾಜೀನಾಮೆ ನೀಡಿದ್ದಾರೆ. ಇದರಿಂದ ಕೃಷ್ಣರಿಗಿಂತ ಹೆಚ್ಚು ನಷ್ಟವಾಗಿರುವುದು ಕಾಂಗ್ರೆಸ್ಗೆ .
Related Articles
Advertisement
ಇಳಿಗಾಲದಲ್ಲಿ ಪಕ್ಷದಿಂದ ಕೃಷ್ಣ ಬಹಳ ಅವಮಾನ ಅನುಭವಿಸಿದ್ದಾರೆ ಎನ್ನುವುದು ಅವರ ಮಾತಿನಿಂದಲೇ ತಿಳಿಯುತ್ತದೆ. ಸ್ವಾಭಿಮಾನ ಮತ್ತು ಆತ್ಮಗೌರವಕ್ಕೆ ಧಕ್ಕೆಯಾದ ಕಾರಣ ಬಹಳಷ್ಟು ಆಲೋಚಿಸಿದ ಬಳಿಕ ಐದು ದಶಕಗಳ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಕಾಂಗ್ರೆಸಿಗೆ ಜನಸಮೂಹದ ನಾಯಕರ ಅಗತ್ಯವಿಲ್ಲ, ಪಕ್ಷವನ್ನು ನಡೆಸಿಕೊಂಡು ಹೋಗುವ ಮೆನೇಜರ್ಗಳಿದ್ದರೆ ಸಾಕು ಎನ್ನುವ ಕೃಷ್ಣ ಮಾತನ್ನು ಕಾಂಗ್ರೆಸ್ ನಾಯಕರು ಗಂಭೀರವಾಗಿ ಪರಿಗಣಿಸಬೇಕು. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಕಾಲಗಳಲ್ಲಿ ಕಾಂಗ್ರೆಸ್ನ ಅವಿಭಾಜ್ಯ ಅಂಗವಾಗಿದ್ದ ಕೃಷ್ಣ ಪಕ್ಷದ ಚುಕ್ಕಾಣಿ ರಾಹುಲ್ ಗಾಂಧಿ ಕೈಗೆ ಸಿಕ್ಕಿದ ಬಳಿಕ ಬೇಡವಾಗಿದ್ದಾರೆ.
ವಯಸ್ಸೊಂದನ್ನೇ ಮಾನದಂಡ ಮಾಡುವುದಿದ್ದರೆ ಕಾಂಗ್ರೆಸ್ ಮುಂಬರುವ ದಿನಗಳಲ್ಲಿ ಇನ್ನೂ ಅನೇಕ ಹಿರಿಯ ನಾಯಕರನ್ನು ಮನೆಗೆ ಕಳುಹಿಸಬೇಕು. ಅದಕ್ಕೆ ಪಕ್ಷ ತಯಾರಿದೆಯೇ ಅಥವ ಹಾಗೇ ಹೋದವರು ಕೃಷ್ಣ ಅವರಂತೆ ಎಲ್ಲ ಅವಮಾನಗಳನ್ನು ನುಂಗಿ ಸುಮ್ಮನಿರುತ್ತಾರೆಯೇ?