Advertisement

ಉದ್ಯಾನಗಳಲ್ಲಿ ಸಾಧಕರ ಪುತ್ಥಳಿ ನಿರ್ಮಾಣ

05:14 PM Feb 25, 2021 | |

ಬಳ್ಳಾರಿ: ಇಲ್ಲಿನ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿ ಕಾರದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ಅಭಿವೃದ್ಧಿಪಡಿಸಿರುವ ಉದ್ಯಾನವನಗಳಲ್ಲಿ ಸ್ವಾಮಿ ವಿವೇಕಾನಂದ, ಪೈಲ್ವಾನ್‌ ರಂಜಾನ್‌ಸಾಬ್‌, ಹರಿಗಿನಡೋಣಿ ಚೆನ್ನಬಸವನಗೌಡರು, ಸಾವಿತ್ರಿಬಾಯಿ ಫುಲೆ ಹಾಗೂ ಬಹದ್ದೂರ್‌ ಶೇಷಗಿರಿರಾವ್‌ ಹಾಗೂ ಡಾ| ಜೋಳದರಾಶಿ ದೊಡ್ಡನಗೌಡರ ಪುತ್ಥಳಿಗಳನ್ನು ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಗೆ ಶಿಫಾರಸ್ಸು ಮಾಡಲು ನಿರ್ಣಯ ಕೈಗೊಳ್ಳಲಾಯಿತು.

Advertisement

ಬುಡಾ ಅಧ್ಯಕ್ಷ ದಮ್ಮೂರು ಶೇಖರ್‌ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಳ್ಳಾರಿ ನಗರದದಲ್ಲಿರುವ ಐತಿಹಾಸಿಕ ಬಳ್ಳಾರಿ ಗುಡ್ಡ/ಫೋರ್ಟ್‌ ಹಿಲ್‌ನ್ನು ಅಭಿವೃದ್ಧಿ ಪಡಿಸಲು, ಗುಡ್ಡದಲ್ಲಿ ಮೂಲಭೂತ ಸೌಕರ್ಯಗಳು ಹಾಗೂ ರೋಪ್‌ ವೇ (ಕೇಬಲ್‌ ಕಾರ್‌)ನ್ನು, ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ರೂ. 5 ಕೋಟಿಗಳನ್ನು ಪ್ರಾಧಿಕಾರಕ್ಕೆ ನೀಡಲು ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಹಾಗೂ ಅನುಮತಿಗಾಗಿ ಕೇಂದ್ರ ಪುರಾತತ್ವ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಸಂಗನಕಲ್ಲು ಗುಡ್ಡದಲ್ಲಿನ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲು ಪ್ರವಾಸೋದ್ಯಮ ಇಲಾಖೆಯಿಂದ ರಾಜ್ಯ ಪುರಾತತ್ವ ಇಲಾಖೆಗೆ ರೂ. 5 ಕೋಟಿ ಅನುದಾನ ಬಿಡುಗಡೆ ಮಾಡಿರುತ್ತಾರೆ. ಆದರೆ, ಇಲಾಖೆಯವರು ಸದರಿ ಅನುದಾನದಲ್ಲಿ ಕೇವಲ 3 ಕೋಟಿ ಮೊತ್ತದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾತ್ರ ಕೈಗೊಂಡಿರುತ್ತಾರೆ. ರಾಜ್ಯ ಪುರಾತತ್ವ ಇಲಾಖೆಯವರು ಬಾಕಿ ಉಳಿದ ಮೊತ್ತ ರೂ. 2 ಕೋಟಿಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಹಾಗೂ ಇದರ ನಿರ್ವಹಣೆಯು ನಮ್ಮಿಂದ ಆಗುವುದಿಲ್ಲ ಎಂದು ಕೇಂದ್ರ ಪುರಾತತ್ವ ಇಲಾಖೆಗೆ ಹಸ್ತಾಂತರಿಸಿಕೊಳ್ಳಲು ಪತ್ರ ಬರೆದಿರುತ್ತಾರೆ.

ಇದು ಬಹಳ ತಪ್ಪು ನಿರ್ಣಯವಾಗಿದ್ದು ಈ ರೂ. 2 ಕೋಟಿ ಅನುದಾನವನ್ನು ಬುಡಾಗೆ ನೀಡಿದ್ದಲ್ಲಿ ಅಭಿವೃದ್ಧಿಪಡಿಸುವ ಸಂಬಂಧ ಪ್ರವಾಸೋದ್ಯಮ
ಹಾಗೂ ಕೇಂದ್ರ ಪುರಾತತ್ವ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಬುಡಾ ಅಧ್ಯಕ್ಷ ದಮ್ಮೂರು ಶೇಖರ್‌ ಅವರು ತಿಳಿಸಿದರು.
ಬುಡಾ ವ್ಯಾಪ್ತಿಯಲ್ಲಿ ಬರುವ ಮಿಂಚೇರಿ ಗುಡ್ಡದಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಶೌಚಾಲಯ, ವಿದ್ಯುತ್‌ ದೀಪಗಳು, ವಿಶ್ರಾಂತಿ ಕೊಠಡಿ, 5 ಪರಗೋಲು (ವೀವ್‌ ಪಾಯಿಂಟ್‌) ಗಳನ್ನು ನೀಡುವಂತೆ ಕೋರಿ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು.

ರೈಲ್ವೆ ಕಾಮಗಾರಿಗಳ ಅಭಿವೃದ್ಧಿ: ಬಳ್ಳಾರಿ ನಗರದಲ್ಲಿನ ರೈಲ್ವೇ ಇಲಾಖೆಗೆ ಸಂಬಂ ಧಿಸಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ಮೋತಿ ರೈಲ್ವೇ ಬ್ರಿಡ್ಜ್ ಅಗಲೀಕರಣ, ಸುಧಾ ಕ್ರಾಸ್‌ನಲ್ಲಿ ಬರುವ ರೈಲ್ವೇ ಫ್ಲೆ ಓವರ್‌ ನಿರ್ಮಿಸುವುದು, ರಂಗಮಂದಿರ ಹತ್ತಿರವಿರುವ ಹಾಲಿ ರೈಲ್ವೇ ವೆಂಟ್‌ನ್ನು ಎತ್ತರಿಸುವುದು, ಅನಂತಪುರ ರಸ್ತೆಯಿಂದ ಸಂಗನಕಲ್ಲು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಮದ್ಯಭಾಗದಲ್ಲಿನ ರೈಲ್ವೇ ಹಳಿಗೆ ಅಂಡರ್‌ ಬ್ರಿಡ್ಜ್ನ್ನು ನಿರ್ಮಿಸುವುದು. ಬಳ್ಳಾರಿ ನಗರದ ಶ್ರೀ ಕನಕದುರ್ಗಮ್ಮ ದೇವಸ್ಥಾನದ ದಕ್ಷಿಣ ದಿಶೆಯಿಂದ ಹೂಸದಾಗಿ ರೈಲ್ವೇ ಅಂಡರ್‌ ಬ್ರಿಡ್ಜ್ ಮುಖಾಂತರವಾಗಿ ಕಾಸ್ಮೋಪೊಲಿಟನ್‌ ಕ್ಲಬ್‌ನ ಹಿಂಭಾಗದಿಂದ ರೇಣುಕಾ ಹೋಟೆಲ್‌ ಮುಂಭಾಗಲ್ಲಿರುವ ಹೊಸಪೇಟೆ ರಸ್ತೆಯವರೆಗೆ ಸಂಪರ್ಕ ಕಲ್ಪಿಸುವ ಕಾಮಗಾರಿಗಳನ್ನು ಕೈಗೊಳ್ಳಲು ರೈಲ್ವೇ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ.

Advertisement

ವಿವಿಧ ಉದ್ಯಾನವನಗಳಿಗೆ ಸಾಧಕರ ಹೆಸರು ನಾಮಕರಣ: ಬಳ್ಳಾರಿ ನಗರದ ವಿವಿಧ ಉದ್ಯಾನವನಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರ ಹೆಸರುಗಳನ್ನು ನಾಮಕರಣ ಮಾಡಲು ಹಾಗೂ ಮಹಾನಗರ ಪಾಲಿಕೆಗೆ ಶಿಫಾರಸ್ಸು ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ನಾಡೋಜ ಡಾ| ಸುಭದ್ರಮ್ಮ ಮನ್ಸೂರ್‌, ಪಂಪಾಪತಿ ಸಾರಥಿ, ಕೋಗಳಿ ಪಂಪಣ್ಣ, ಸುಜಾತಮ್ಮ, ನಾಡೋಜ ಡಾ|ಬೆಳಗಲ್ಲು ವೀರಣ್ಣ, ಕಪ್ಪಗಲ್‌ ಪದ್ಮಮ್ಮ, ನಾಡೋಜ ದರೋಜಿ ಈರಮ್ಮ, ಕೂಡ್ಲಿಗಿ ಪದ್ಮಮ್ಮ, ಡಾ| ನಾಗರತ್ನಮ್ಮ, ಜಿಲಾನಿ ಬಾಷ, ಶಿಡಗಿನ ಮೊಳೆ ಚಂದ್ರಯ್ಯ, ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರೀಗಳು, ಸರ್ವದರ್ಶನತೀರ್ಥ ವೈ. ನಾಗೇಶ ಶಾಸ್ತ್ರಿಗಳು, ನಾಡೋಜ ಕೋ. ಚೆನ್ನಬಸಪ್ಪ, ಪ್ರೊ| ಇಟ್ಟಗಿ ಈರಣ್ಣ, ಪೈಲ್ವಾನ್‌. ಪಿ. ರಂಜಾನ್‌ ಸಾಬ್‌, ರೆವರೆಂಡ್‌ ಉತ್ತಂಗಿ ಚನ್ನಪ್ಪ, ಭೀಮಸೇನರಾವ್‌ ಚಿರಂಜೀವಿ ರಾಯಸಂ (ಬೀಚಿ), ಮುದೇನೂರು
ಸಂಗಣ್ಣ, ಏಲಿವಾಳ ಸಿದ್ದಯ್ಯ ಸ್ವಾಮಿ, ಜಾಲಿಬೆಂಚಿ ದೊಡ್ಡಬಸವ ಗವಾಯಿಗಳ ಹೆಸರುಗಳನ್ನು ನಾಮಕರಣ ಮಾಡಲು ಹಾಗೂ ಪಾಲಿಕೆಗೆ ಶಿಫಾರಸ್ಸು ಮಾಡುವ ನಿರ್ಣಯಕ್ಕೆ ಸಭೆ ಅನುಮೋದಿಸಿದೆ. ಕೈಗಾರಿಕೆ ಬಹುನಿವೇಶನ ವಿನ್ಯಾಸ ನಕ್ಷೆ ಅನುಮೋದನೆ, ಖಾಸಗಿ ವಸತಿ ವಿನ್ಯಾಸ ನಕ್ಷೆ ಅನುಮೋದನೆ ನೀಡಲು, ಜಮೀನುಗಳಿಗೆ ಭೂ-ಉಪಯೋಗ ಬದಲಾವಣೆಗೆ ಅನುಮೋದನೆ ನೀಡುವ ಬಗ್ಗೆ, ವಸತಿ ವಿನ್ಯಾಸ ನಕ್ಷೆ ಮಂಜೂರಾತಿ ಕೋರಿರುವ ಅರ್ಜಿಗಳು, ಏಕ ನಿವೇಶನ ವಸತಿ ವಿನ್ಯಾಸ ಕೋರಿ ಮನವಿ, ಏಕ ನಿವೇಶನ ವಾಣಿಜ್ಯ ವಿನ್ಯಾಸ ನಕ್ಷೆ
ಮಂಜೂರು ಕೋರಿರುವ ಅರ್ಜಿಗಳಿಗೆ ಅನುಮೋದನೆ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್‌ ಅವರು ಟಿಎಸ್‌ ಮತ್ತು ಆರ್‌ಎಸ್‌ ಕುರಿತು ಸೂಕ್ತವಾದ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.

ಈ ಸಭೆಯಲ್ಲಿ ಶಾಸಕ ಜಿ.ಸೋಮಶೇಖರ್‌ ರೆಡ್ಡಿ, ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್‌, ಬುಡಾ ಆಯುಕ್ತ ವೀರೇಂದ್ರ ಕುಂದುಗೋಳ, ಪ್ರಾಧಿ ಕಾರದ ಕಾರ್ಯಪಾಲಕ ಅಭಿಯಂತರ ರವಿಶಂಕರ್‌, ಎಸ್‌ಪಿ ಸೈದುಲು ಅಡಾವತ್‌, ಜಿಲ್ಲಾ ಆರೋಗ್ಯಾಧಿಕಾರಿ
ಡಾ| ಎಚ್‌.ಎಲ್‌. ಜನಾರ್ಧನ್‌, ಪಿಡಬ್ಲ್ಯ, ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು, ಕೆ.ಯು.ಡಬ್ಲೂಎಸ್‌ ಮತ್ತು ಡಿ.ಬಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು, ಪ್ರಾಧಿಕಾರದ ಸಿಬ್ಬಂದಿ ಇದ್ದರು.

ಓದಿ : ಡಿಜೆ ಹಳ್ಳಿ ಗಲಭೆಯ ಎನ್‌ಐಎ ವರದಿ ಆಧಾರದಡಿ ಜಮೀರ್ ಮೇಲೆ ಕೇಸ್ ಹಾಕಿ: ಅಶ್ವತ್ಥ್ ನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next