Advertisement

ರಂಜಿಸಿದ ಬಲಿಪ ಗಾನ ಯಾನ-ಯಕ್ಷಗಾನ

06:03 PM Sep 26, 2019 | mahesh |

ಮೂರೂ ಭಾಗವತರ ಪ್ರತಿಭೆಗೆ ಸವಾಲೊಡ್ಡುವ ಹಾಡುಗಳನ್ನೇ ಆಯ್ಕೆ ಮಾಡಿ ಕೊಟ್ಟದ್ದರಿಂದ ಹಾಗೂ ಪದ್ಯಗಳ ಆಯ್ಕೆಯಲ್ಲೂ ಹೊಸತನವಿದ್ದದರಿಂದ ಕಲಾಭಿಮಾನಿಗಳಿಗೆ ಅಂದು ಕಲಾ ರಸದೌತಣವೇ ದೊರೆಯಿತು.

Advertisement

ಯಕ್ಷತರಂಗಿಣಿ ಕೈಕಂಬ ಆಶ್ರಯದಲ್ಲಿ ಗಣೇಶೊತ್ಸವದ ಪ್ರಯುಕ್ತ ಕೈಕಂಬದ ಬೆನಕ ವೇದಿಕೆಯಲ್ಲಿ ಯಕ್ಷ ವೈಭವ ಜರಗಿತು. ಆರಂಭದಲ್ಲಿ ಬಲಿಪ ಶೈಲಿಯ ಗವತತ್ರಯರಿಂದ ಗಾನ ಯಾನ, ನಂತರ ಶ್ರೀ ಸುಬ್ರಹ್ಮಣೇಶ್ವರ ಯಕ್ಷನಾಟ್ಯ ಕಲಾಕೇಂದ್ರ ತಕಧಿಮಿ ತಂಡದ ವಿದ್ಯಾರ್ಥಿಗಳಿಂದ “ಲೀಲಾಮಾನುಷ ವಿಗ್ರಹ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.

ಯಕ್ಷಗಾನದಲ್ಲಿ ಬಲಿಪ ಶೈಲಿಯ ಬಲಿಪ ಪ್ರಸಾದ್‌ ಭಟ್‌, ಬಲಿಪ ಶಿವಶಂಕರ ಭಟ್‌ ಮತ್ತು ಪುಂಡಿಕಾಯಿ ಗೋಪಾಲಕೃಷ್ಣ ಭಟ್‌ ಈ ಮೂವರು ಭಾಗವತರು ಗಣಪತಿ ಸ್ತುತಿಯಿಂದ ಹಿಡಿದು ರಂಗನಾಯಕನ ಮಂಗಳದ ಹಾಡಿನವರೆಗೆ ಸುಮಾರು ಎರಡು ಗಂಟೆಗಳ ಕಾಲ ಹರಿಸಿದ ಅಮೋಘ ಗಾನ ಸುಧೆಯನ್ನು ಯಕ್ಷಪ್ರಿಯರು ಮಂತ್ರಮುಗ್ಧರಾಗಿ ಆಲಿಸಿದರು. ಮೂರೂ ಭಾಗವತರ ಪ್ರತಿಭೆಗೆ ಸವಾಲೊಡ್ಡುವ ಹಾಡುಗಳನ್ನೇ ಆಯ್ಕೆ ಮಾಡಿ ಕೊಟ್ಟದ್ದರಿಂದ ಹಾಗೂ ಪದ್ಯಗಳ ಆಯ್ಕೆಯಲ್ಲೂ ಹೊಸತನವಿದ್ದದರಿಂದ ಕಲಾಭಿಮಾನಿಗಳಿಗೆ ಅಂದು ಕಲಾ ರಸದೌತಣವೇ ದೊರೆಯಿತು. ಭರತಾಗಮನದ “ಬಂದೆಯಾ ಇನವಂಶ ವಾರಿಧಿ’, ಶರಸೇತು ಬಂಧನದ “ಅಕಟಕಟ ಏತಕೆ ಇವನಲಿ’, ಕುಮಾರ ವಿಜಯದ “ಕನ್ನೆ ಸುಗುಣ ಸಂಪನ್ನೆ’ ಹಾಗೂ ಹಿರಣ್ಯಾಕ್ಷದ “ಸುಂದರಾಂಗಿ ಸುಮಗಂಧಿ ಚಂದ್ರವದನೆ’ ಹಾಡುಗಳು ಬಲಿಪ ಪ್ರಸಾದರ ಕಂಠಸಿರಿಯಲ್ಲಿ ಅದ್ಭುತವಾಗಿ ಹೊರಹೊಮ್ಮಿತ್ತು. ಗೋಪಾಲಕೃಷ್ಣ ಭಟ್ಟರು ಜಾಂಬವತಿ ಕಲ್ಯಾಣದ “ಕಿರು ಬೆಟ್ಟಿನೊಳಗೆ ನಾನು ಗೋವರ್ಧನ ಗಿರಿಯ” ಹಾಗೂ ಸತ್ಯಹರಿಶ್ಚಂದ್ರದ “ಆಡಿದರಾಡಿದರು’ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. ಬಲಿಪ ಶಿವಶಂಕರ್‌ ಭಟ್‌ ಇಂಪಾದ ಸ್ವರದಲ್ಲಿ ಮಾಗಧ ವಧೆಯ “ತಿಳಿಯದಾದಿರೆ ನಮ್ಮ ಕಂಸಗೆ’, ಇಂದ್ರಜಿತುವಿನ “ಈತಗಳು ನರರಲ್ಲ’ ಹಾಗೂ ಕರ್ಣಾವಸಾನದ “ಮನಸಿಜ ಪಿತ ನೀನು ಮಾತಿನಲಿ’ ಹಾಡಿದ ಹಾಡುಗಳು ಮೆಚ್ಚುಗೆ ಗಳಿಸಿತು. ಮೂರೂ ಭಾಗವತರು ಜತೆಯಾಗಿ ಹಾಡಿದ ಭೀಷ್ಮವಿಜಯದ ಭಾಮಿನಿ “ಪರಮ ಋಷಿ ಮಂಡಲದಿ’, ದೇವಿ ಮಹಾತ್ಮೆಯ “ವೀಣೆಯ ಪಿಡಿದಿರ್ಪ ವಾಣಿಯ ಪರಿಯ’ ಮತ್ತು “ಕಂಡೆಯಾ ಸುರಪಾಲ ದೈತ್ಯರ ರುಂಡಗಳ’, ರಾವಣ ವಧೆಯ “ಕಂಡು ದಶವದನ ಕೋದಂಡರಾಮನ’ ಹಾಗೂ ವಾಲಿಮೋಕ್ಷದ “ಜಾಣನಹುದಹುದು’ ಪದ್ಯಗಳು ಮನಗೆದ್ದಿತು. ಏರು ಪದ್ಯಗಳ ಬಳಿಕ ಮೂರು ಭಾಗವತರು ಸೇರಿ “ರಂಗನಾಯಕ ರಾಜೀವಲೋಚನ’ ಹಾಡಿನೊಂದಿಗೆ ಗಾನಯಾನಕ್ಕೆ ಮಂಗಳ ಹಾಡಿದರು.

ಕೊಂಕಣಾಜೆ ಚಂದ್ರಶೇಖರ ಭಟ್ಟರ ಚೆಂಡೆವಾದನ, ಚೈತನ್ಯ ಕೃಷ್ಣ ಪದ್ಯಾಣ ಹಾಗೂ ಸುಮಿತ್‌ ಆಚಾರ್ಯ ಅವರ ಮದ್ದಲೆಯ ನಾದ, ಪೂರ್ಣೇಶ ಆಚಾರ್ಯರ ಚಕ್ರತಾಳದ ಝೇಂಕಾರ ಹಾಗೂ ವಾದಿರಾಜ ಕಲ್ಲೂರಾಯರ ನಿರೂಪಣೆ ಇವೆಲ್ಲ ಗಾನ ಯಾನದ ಸೊಬಗನ್ನು ಮತ್ತಷ್ಟೂ ಹೆಚ್ಚಿಸಿತು.

ರಕ್ಷಿತ್‌ ಶೆಟ್ಟಿ ಪಡ್ರೆಯವರಿಂದ ಯಕ್ಷಾಭ್ಯಾಸ ಮಾಡುತ್ತಿರುವ ತಕಧಿಮಿ ತಂಡದ ವಿದ್ಯಾರ್ಥಿಗಳು ಪ್ರದರ್ಶಿಸಿದ ಲೀಲಾಮಾನುಷ ವಿಗ್ರಹ (ಕಂಸ ವಧೆ ಮತ್ತು ನರಕಾಸುರ ವಧೆ) ಪ್ರಸಂಗ ಕಾಲಮಿತಿಯಲ್ಲಿ ಸುಂದರವಾಗಿ ಪ್ರಸ್ತುತಗೊಂಡಿತು. ಕಂಸನ ಸೆರೆಯಲ್ಲಿರುವ ವಸುದೇವ ದೇವಕಿಯರು ಬಿಡುಗಡೆಗಾಗಿ ಕೃಷ್ಣನಿಗೆ ಮೊರೆಯಿಡುವ ದೃಶ್ಯದೊಂದಿಗೆ ಆರಂಭಗೊಂಡ ಈ ಪ್ರದರ್ಶನದಲ್ಲಿ ಕೃಷ್ಣ, ವಿಜಯರ ನಡುವಿನ ನವಿರು ಹಾಸ್ಯದ ಸಂಭಾಷಣೆ, ಅಭಿನಯ ಸೊಗಸಾಗಿತ್ತು. ಶಕಟ, ಧೇನುಕ, ಹಾಗೂ ಇತರ ರಕ್ಕಸ ಬಲಗಳ ವೇಷಭೂಷಣ, ಅಬ್ಬರದ ಪ್ರವೇಶ, ದಿಗಿಣ ಹಾಗೂ ಉತ್ತಮ ಕುಣಿತ ಕಲಾಪ್ರಿಯರಿಗೆ ಮುದ ನೀಡಿತು. ನಿದ್ರೆಯಲ್ಲಿ ಕೆಟ್ಟ ಕನಸುಗಳನ್ನು ಕಂಡು ಭಯಭೀತನಾಗಿ ಬೆಚ್ಚಿ ಬೀಳುವ ಕಂಸನ ಪಾತ್ರಧಾರಿಯ ಅಭಿನಯ ಮನಮೋಹಕವಾಗಿತ್ತು. ವಸುದೇವ – ದೇವಕಿ, ಬಲರಾಮ, ಚಾನೂರ – ಮುಷ್ಟಿಕ ಮಲ್ಲರ ಹಾಗೂ ಇತರ ಪೋಷಕ ಪಾತ್ರಗಳ ನಿರ್ವಹಣೆಯೂ ತೃಪ್ತಿಕರವಾಗಿತ್ತು. ನರಕಾಸುರ ವಧೆಯಲ್ಲಿ ನರಕಾಸುರ ಪಾತ್ರಧಾರಿಯ ಪಾತ್ರ ಪೋಷಣೆ ಅಚ್ಚುಕಟ್ಟಾಗಿತ್ತು. ಕೃಷ್ಣ ಸತ್ಯಭಾಮೆಯರ ನಾಟ್ಯ ವೈವಿಧ್ಯ, ಸೊಗಸಾದ ಭಾವಾಭಿನಯ, ಮಾತಿನ ಸೊಬಗು ಕಲಾರಸಿಕರ ಮನಗೆದ್ದಿತು. ಇನ್ನು ದೇವೇಂದ್ರ ಹಾಗೂ ನರಕಾಸುರನ ಸಹಚರನ ವೇಷಧಾರಿಗಳು ಸಿಕ್ಕಿದ ಚಿಕ್ಕ ಅವಕಾಶದಲ್ಲಿ ಚೊಕ್ಕವಾದ ನಿರ್ವಹಣೆ ನೀಡಿದರು. ಸಮರ್ಥ ಚೆಂಡೆ-ಮದ್ದಳೆ ವಾದಕರ ಸಾಂಗತ್ಯದೊಂದಿಗೆ ಸತೀಶ್‌ ಶೆಟ್ಟಿ ಬೊಂದೇಲ್‌ ತಮ್ಮ ಕಂಚಿನ ಕಂಠದ ಸುಶ್ರಾವ್ಯವಾದ ಭಾಗವತಿಕೆಯಿಂದ ಪ್ರದರ್ಶನದ ಒಟ್ಟಂದವನ್ನು ಹೆಚ್ಚಿಸಿದರು.

Advertisement

ನರಹರಿ ರಾವ್‌ ಕೈಕಂಬ

Advertisement

Udayavani is now on Telegram. Click here to join our channel and stay updated with the latest news.

Next