Advertisement

ಬಾಳೆಕಜೆ: ಕಾಂಕ್ರೀಟ್ ರಸ್ತೆಗೆ ಅನುದಾನ ಕೊರತೆ

10:26 AM Jan 09, 2019 | Team Udayavani |

ಅರಂತೋಡು: ತೊಡಿಕಾನ- ಚಿಟ್ಟನ್ನೂರು – ಬಾಳೆಕಜೆ-ಹರ‌್ಲಡ್ಕ – ದರ್ಬೆಮಜಲು ಬಂಗಾರಕೋಡಿ ರಸ್ತೆ ತೀರಾ ಹದಗೆಟ್ಟಿದ್ದು, ಈ ಭಾಗದ ಕೆಲವು ಮನೆಯವರು ಹಣವನ್ನು ತಾವೇ ಸಂಗ್ರಹಿಸಿ ರಸ್ತೆ ಕಾಂಕ್ರೀಟ್ ಕಾಮಗಾರಿ ನಡೆಸುತ್ತಿದ್ದಾರೆ.

Advertisement

ತೊಡಿಕಾನದಿಂದ ದರ್ಬೆಮಜಲು ಬಂಗಾರಕೋಡಿಗೆ 3.5 ಕಿ.ಮೀ. ದೂರವಿದೆ. ಇದರಲ್ಲಿ ಹಾಸ್ಪಾರೆ ಸಮೀಪ ಶಾಸಕರು, ಜಿ.ಪಂ. ಹಾಗೂ ತಾ.ಪಂ. ಅನುದಾನದಲ್ಲಿ ಸುಮಾರು 90 ಮೀ. ಕಾಂಕ್ರೀಟ್ ಕಾಮಗಾರಿ, ಹಾಸ್ಪಾರೆ ತೋಡಿಗೆ ಕಿರು ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ ರಸ್ತೆ ಅಭಿವೃದ್ಧಿಗೆ ಸರಕಾರದಿಂದ ಇನ್ನಷ್ಟು ಅನುದಾನವನ್ನು ಕೇಳಿಕೊಂಡರೂ ಅನುದಾನ ದೊರೆಯಲಿಲ್ಲ. ರಸ್ತೆ ಅಭಿವೃದ್ಧಿಯಾಗದ ಪರಿಣಾಮ ಸುಗಮ ವಾಹನ ಸಂಚಾರವಿಲ್ಲದೆ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. ಇದರಿಂದ ಹೇಗಾದರೂ ಮಾಡಿ ರಸ್ತೆ ಅಭಿವೃದ್ಧಿ ಮಾಡಬೇಕೆಂದು ಗ್ರಾಮದ ಜನರು ಪಣ ತೊಟ್ಟರು.

ಒಂದುಗೂಡಿದ ಮನೆಮಂದಿ
ಕಾಂಕ್ರೀಟ್ ಕಾಮಗಾರಿ ನಡೆಸಲು 18ರಿಂದ 20 ಮನೆಯವರು ಒಂದುಗೂಡಿ ಹಣ ಸಂಗ್ರಹಕ್ಕೆ ಮುಂದಾದರು. ಹಿರಿಯರಾದ ಶೇಷಪ್ಪ ಗೌಡ ಬಾಳೆಕಜೆ ಅವರ ನೇತೃತ್ವದಲ್ಲಿ ಜಲ್ಲಿ, ಕಬ್ಬಿಣ, ಮರಳು, ಸಿಮೆಂಟ್ ತಂದು 17 ಮೀ. ರಸ್ತೆಗೆ ಕಾಂಕ್ರೀಟ್ ಹಾಕಿ ಸ್ವತಃ ಅವರೇ ಕೆಲಸ ಮಾಡಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಇನ್ನು ಸುಮಾರು 55 ಮೀ. ರಸ್ತೆಗೆ ಕಾಂಕ್ರೀಟ್ ಕಾಮಗಾರಿ ನಡೆಸುತ್ತಿದ್ದಾರೆ. ಕೆಲ ಗುತ್ತಿಗೆದಾರರು ಜಲ್ಲಿಯನ್ನು ದಾನವಾಗಿ ನೀಡಿದ್ದಾರೆ.

ಈ ಭಾಗದಲ್ಲಿ ಇನ್ನೂ 3.3 ಕಿ.ಮೀ. ರಸ್ತೆ ಅಭಿವೃದ್ಧಿಯಾಗಬೇಕಾಗಿದೆ. ಕಚ್ಚಾ ರಸ್ತೆಯಾಗಿದ್ದು, ತುಂಬಾ ಏರು-ಪೇರುಗಳಿಂದ ಕೂಡಿದೆ. ಬಂಗಾರ ಕೋಡಿ ಭಾಗದವರು ಈ ರಸ್ತೆಯ ಮೂಲಕ ತೊಡಿಕಾನ ದೇವಸ್ಥಾನಕ್ಕೆ ಬರುತ್ತಿದ್ದಾರೆ. ಜತೆಗೆ ರಸ್ತೆಯಲ್ಲಿ ಕಲ್ಲಿನ ಭಾಗ ಜಾಸ್ತಿ ಇರುವುದರಿಂದ ರಸ್ತೆ ದುರಸ್ತಿಗೆ ಸಮರ್ಪಕವಾಗಿ ಚರಂಡಿ ನೀಡಲೂ ಸಮಸ್ಯೆಯಾಗುತ್ತಿದೆ.

ಹಾಸ್ಪಾರೆ ಬಳಿ ರಸ್ತೆಯಲ್ಲಿದ್ದ ದೊಡ್ಡ ಕಲ್ಲೊಂದನ್ನು ಈ ಭಾಗದ ಜನರು ಸ್ಫೋಟಿಸಿ ತೆಗೆದಿದ್ದಾರೆ. ಮುಂದಿನ ದಿನದಲ್ಲಿ ಈ ರಸ್ತೆಗೆ ಇನ್ನಷ್ಟು ಅನುದಾನದ ಅಗತ್ಯವಿದೆ. ಜನರು ಮತ್ತೆ ಸರಕಾರದ ಅನುದಾನದ ನಿರೀಕ್ಷೆಯಲ್ಲಿದ್ದಾರೆ.

Advertisement

ರಸ್ತೆ ತೀರಾ ಹದಗೆಟ್ಟಿದೆ
ಶಾಸಕರು, ಜಿ.ಪಂ., ತಾ.ಪಂ. ವತಿಯಿಂದ ಸ್ವಲ್ಪ ಅನುದಾನ ದೊರೆತು, ಕಿರು ಸೇತುವೆ ಹಾಗೂ ಸ್ವಲ್ಪ ಭಾಗಕ್ಕೆ ಕಾಂಕ್ರೀಟ್ ಮಾಡಲಾಗಿದೆ. ನಮ್ಮ ರಸ್ತೆ ತೀರಾ ಹದಗೆಟ್ಟಿದ್ದು, ಇದಕ್ಕೆ ಇನ್ನಷ್ಟು ಅನುದಾನದ ಅಗತ್ಯವಿದೆ. ನಾವು ಸುಮಾರು 18 ಮನೆಯವರು ಹಣ ಸಂಗ್ರಹಿಸಿಕೊಂಡು ಕಾಂಕ್ರೀಟ್ ಹಾಕಿದ್ದೇವೆ. ಕೆಲ ಗುತ್ತಿಗೆದಾರರು ಜಲ್ಲಿ ಕೊಟ್ಟಿದ್ದಾರೆ. ಇದನ್ನು ನಾವು ರಸ್ತೆಗೆ ಬಳಸಿಕೊಂಡಿದ್ದೇವೆ. ಮುಂದಿನ ರಸ್ತೆ ಅಭಿವೃದ್ಧಿಗೆ ಸರಕಾರ ಅನುದಾನ ಒದಗಿಸಿಕೊಡಬೇಕು. 
– ಶೇಷಪ್ಪಗೌಡ ಬಾಳೆಕಜೆ, 
  ರಸ್ತೆ ಫ‌ಲಾನುಭವಿ

ಟೆಂಡರ್‌ ಶೀಘ್ರ
ತೊಡಿಕಾನ-ಚಿಟ್ಟನ್ನೂರು-ಬಾಳೆಕಜೆ-ಹರ‌್ಲಡ್ಕ ರಸ್ತೆ ಅಭಿವೃದ್ಧಿಗೆ ಉದ್ಯೋಗ ಖಾತರಿ ಯೋಜನೆಯಲ್ಲಿ 2.95 ಸಾವಿರ ರೂ. ಅನುದಾನ ಇರಿಸಲಾಗಿದೆ. ಅದರ ಸಾಮಗ್ರಿ ಸರಬರಾಜಿಗೆ ಸದ್ಯದಲ್ಲಿ ಟೆಂಡರ್‌ ಕರೆಯಲಾಗುವುದು. 
– ಜಯಪ್ರಕಾಶ್‌, 
  ಅರಂತೋಡು ಪಿಡಿಒ

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next