Advertisement

ಎಪಿಎಂಸಿ ಸಂತೆ ಮಾರುಕಟ್ಟೆ ಕಾರ್ಯಾರಂಭ

03:05 PM Jan 20, 2020 | Naveen |

ಬಾಳೆಹೊನ್ನೂರು: 2018ರಲ್ಲಿ ಸಂತೆ ಮಾರುಕಟ್ಟೆ ಕಟ್ಟಡ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಂಡಿದ್ದ ಸಂತೆ ವ್ಯಾಪಾರವನ್ನು ಭಾನುವಾರದಿಂದ ಆರಂಭಿಸಲಾಗಿದ್ದು, ವ್ಯಾಪಾರ, ವಹಿವಾಟು ಜೋರಾಗಿದೆ. ಗ್ರಾ.ಪಂ ಅಧ್ಯಕ್ಷ ಮಹಮ್ಮದ್‌ ಹನೀಫ್‌ ಮಾತನಾಡಿ, ಪಟ್ಟಣದಲ್ಲಿ ರಸ್ತೆ ಬದಿಯಲ್ಲಿಯೇ ಸಂತೆ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ಸಮಸ್ಯೆಯುಂಟಾದ ಹಿನ್ನೆಲೆಯಲ್ಲಿ ಸಂತೆ ವ್ಯಾಪಾರಿಗಳ ಸ್ಥಳಾಂತರಕ್ಕಾಗಿ ಕಳೆದ ಎರಡು ವರ್ಷಗಳಿಂದ ಸತತ ಪ್ರಯತ್ನ ಪಡಲಾಗಿದ್ದು, ಕಳೆದ ಎರಡು ವಾರದಿಂದ ಎಲ್ಲಾ ಸಂತೆ ವ್ಯಾಪಾರಿಗಳಿಗೆ ಗ್ರಾ.ಪಂ ಸೂಚನೆ ಪಾಲಿಸುವಂತೆ ಮನವರಿಕೆ ಮಾಡಲಾಗಿತ್ತು. ಅದರಂತೆ ಭಾನುವಾರ ಪಿಡಿಒ ಸೋಮಶೇಖರ್‌, ಸಿಬ್ಬಂದಿ, ಪೊಲೀಸರು ಮುಂಜಾನೆಯಿಂದಲೇ ಕರ್ತವ್ಯದಲ್ಲಿ ತೊಡಗಿಸಿಕೊಂಡು, ಸ್ಥಳಾಂತರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಸುಮಾರು 250ಕ್ಕೂ ಹೆಚ್ಚು ಸಂತೆ ವ್ಯಾಪಾರಿಗಳು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಅವರಿಗೂ ಸಹ ಪ್ಲಾಟ್‌ ಫಾರಂ ನಿರ್ಮಿಸಿ ಕೊಡಲಾಗುವುದು. ಶೌಚಾಲಯದ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭಿಸಲಿದ್ದು, ಕುಡಿಯುವ ನೀರು ರಸ್ತೆ ಸೇರಿದಂತೆ ಅಭಿವೃದ್ಧಿ ಕಾಮಗಾರಿ ಮಾಡಿಸಲಾಗುವುದು. ಪಟ್ಟಣದಲ್ಲಿ ನರಸಿಂಹರಾಜಪುರಕ್ಕೆ ಸಂಪರ್ಕಿಸುವ ರಸ್ತೆಯ ಪಕ್ಕದ ಪಾದಚಾರಿ ರಸ್ತೆಗಳಲ್ಲಿ ಅಂಗಡಿಗಳನ್ನು ಇಡುತ್ತಿದ್ದ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಬಹಳಷ್ಟು ಸಮಸ್ಯೆಯುಂಟಾದ ಹಿನ್ನೆಲೆಯಲ್ಲಿ ಅವರನ್ನೂ ಸಹ ಸ್ಥಳಾಂತರ ಮಾಡಲಾಗಿದೆ. ರಸ್ತೆಯ ಇನ್ನೊಂದು ಪಕ್ಕದಲ್ಲಿ ಪಾದಚಾರಿ ರಸ್ತೆಗೆ ಲಗತ್ತಿಸಿ ವಾಹನ ನಿಲ್ಲಿಸುತ್ತಿದ್ದು ಈ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು.

ಮುಂದಿನ ವಾರದಿಂದ ರಸ್ತೆ ಬದಿಯಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳನ್ನೂ ಸಹ ನೂತನ ಮೀನು ಮಾರ್ಕೆಟ್‌ಗೆ ಸ್ಥಳಾಂತರ ಮಾಡಿ ಶುಚಿತ್ವ ಕಾಪಾಡಿಕೊಳ್ಳುವಲ್ಲಿ ಮುಂದಾಗಲಿದ್ಧೇವೆ ಎಂದು ತಿಳಿಸಿದರು.

ವ್ಯಾಪಾರಿಗಳ ಅಳಲು: ದೋಬಿ ಹಳ್ಳದ ದಂಡೆಯ ಪಕ್ಕದಲ್ಲಿ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿರುವುದು ಸಮಸ್ಯೆಗೆ ಕಾರಣವಾಗಿದೆ. ದೋಬಿ ಹಳ್ಳಕ್ಕೆ ಹೋಟೆಲ್‌ ಲಾಡ್ಜ್ ಹಾಗೂ ಬಸ್‌ ನಿಲ್ದಾಣದ ಶೌಚಾಯಲದ ಕೊಳಚೆ ನೀರು ಹಾಗೂ ಕೋಳಿ ತ್ಯಾಜ್ಯ ಹಳ್ಳಕ್ಕೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಹಳ್ಳದ ನೀರು ಗಬ್ಬು ನಾರುತ್ತಿದೆ. ಸೊಳ್ಳೆಗಳ ಕಾಟ ಮಿತಿ ಮೀರಿದೆ. ಪಂಚಾಯಿತಿ, ಆರೋಗ್ಯ ಇಲಾಖೆ ಇತ್ತ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next