ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿ ( ಕೆಎಂಎಫ್) ನ ಅಧ್ಯಕ್ಷರಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶನಿವಾರ ಕೆಎಂಎಫ್ ನ ಮುಖ್ಯ ಕಚೇರಿಯಲ್ಲಿ ಚುನಾವಣಾ ಪ್ರಕ್ರಿಯೆ ನಡೆದಿದ್ದು, ಅರಭಾವಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆಯ್ಕೆಯಾಗಿದ್ದಾರೆ.
“ಕೆಎಂಎಫ್ ಪಕ್ಷಾತೀತವಾಗಿ ಮುನ್ನಡೆಸುತ್ತೇನೆ. ರೈತರಿಗೆ ದೊರೆಯಬೇಕಾದ ಎಲ್ಲ ಸವಲತ್ತುಗಳನ್ನು ಕಾಲಮಿತಿಯಲ್ಲಿ ದೊರೆಯುವಂತೆ ಮಾಡುವುದು ನನ್ನ ಮೊದಲ ಆದ್ಯತೆ. ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ಕಾಂಗ್ರೆಸ್, ಜೆಡಿಎಸ್ ನಾಯಕರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ವಿಜಯದ ಬಳಿಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಕೆಎಂಎಫ್ ನ ಒಟ್ಟು 18 ನಿರ್ದೇಶಕರ ಪೈಕಿ 11 ನಿರ್ದೇಶಕರು ಬಾಲಚಂದ್ರ ಜಾರಕಿಹೊಳಿ ಪರ ಇದ್ದರು. ಇದರಿಂದಾಗಿ ಹೆಚ್ ಡಿ ರೇವಣ್ಣ ನಾಮಪತ್ರ ವಾಪಸ್ ಪಡೆದಿದ್ದಾರೆ. ಹೀಗಾಗಿ ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮಾಜಿ ಸಚಿವ ಹೆಚ್ ಡಿ ರೇವಣ್ಣ ಇದುವರೆಗೆ ಕೆಎಂಎಫ್ ನ ಅಧ್ಯಕ್ಷರಾಗಿದ್ದರು.