ಹೊಸದಿಲ್ಲಿ: “ಕ್ಷಮಿಸಿ. ಮಧ್ಯಾಂತರ ಜಾಮೀನು ಕೋರಿ ನೀವು ಸಲ್ಲಿಸಿದ ಅರ್ಜಿ ಪರಿಶೀಲಿಸಲು ಸಾಧ್ಯವಿಲ್ಲ. ಆರು ತಿಂಗಳು ಶಿಕ್ಷೆ ಅನುಭವಿಸಿ ಬನ್ನಿ’ ಹೀಗೆಂದು ಹೇಳಿದ್ದು ಸುಪ್ರೀಂಕೋರ್ಟ್ನ ರಜಾ ಕಾಲದ ನ್ಯಾಯಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಎಸ್.ಕೆ. ಕೌಲ್ ನೇತೃತ್ವದ ಪೀಠ. ನ್ಯಾ| ಕರ್ಣನ್ ಪರವಾಗಿ ವಾದಿಸಿದ ನ್ಯಾಯವಾದಿ ಮ್ಯಾಥ್ಯೂ ಜೆ. ನೆಡುಂಪಾರ ಕೋರ್ಟ್ ಪುನರಾರಂಭದ ವರೆಗೆ ಜಾಮೀನು ಕೊಡಬೇಕು. ಅದಕ್ಕೆ ಸಂಬಂಧಿಸಿದಂತೆ ಖಾತರಿ ನೀಡುವುದಾಗಿ ಹೇಳಿದರು. ಅದಕ್ಕೆ ಒಪ್ಪದ ನ್ಯಾಯಪೀಠ “ಏಳು ಮಂದಿ ನ್ಯಾಯಾಧೀಶರನ್ನು ಒಳಗೊಂಡ ನ್ಯಾಯಪೀಠದ ತೀರ್ಮಾನ ಇದಾಗಿದ್ದು, ಆದೇಶ ಕೂಡ ಮಾಡಲಾಗಿದೆ.
ಹೀಗಾಗಿ ಇದರಲ್ಲಿ ನಮ್ಮ ಮಧ್ಯಪ್ರವೇಶ ಸೂಕ್ತವಾದುದಲ್ಲ. ಆದೇಶ ಮೀರಿ ನಡೆಯಲು ಸಾಧ್ಯವೂ ಇಲ್ಲ’ ಎಂದು ಹೇಳಿದೆ.
ಅದಕ್ಕೆ ಪ್ರತಿ ಅರಿಕೆ ಮಾಡಿಕೊಂಡ ನೆಡುಂಪಾರ ನ್ಯಾಯಪೀಠಕ್ಕೆ ಆರು ತಿಂಗಳ ಅವಧಿಯ ಶಿಕ್ಷೆಯನ್ನು ರದ್ದು ಮಾಡಿ ಜಾಮೀನು ನೀಡಲು ಅವಕಾಶ ಉಂಟು ಎಂದರು. ಆದರೆ ಅವರ ಮನವಿಗೆ ನ್ಯಾಯಪೀಠದಿಂದ ಯಾವುದೇ ಪುರಸ್ಕಾರ ಸಿಗಲಿಲ್ಲ. ನ್ಯಾ| ಕರ್ಣನ್ರನ್ನು ಮಂಗಳವಾರ ಬಂಧಿಸಲಾಗಿತ್ತು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅವರನ್ನು ಕೋಲ್ಕತಾದ ಪ್ರಸಿಡೆನ್ಸಿ ಜೈಲಲ್ಲಿ ಇರಿಸಲಾಗಿದೆ.