ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ವಂಚಿಸಿದ ಉದ್ಯಮಿ ನೀರವ್ ಮೋದಿ ಜಾಮೀನು ಅರ್ಜಿಯನ್ನು ಇಂಗ್ಲೆಂಡ್ ಮತ್ತು ವೇಲ್ಸ್ನ ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ. ಜಾಮೀನು ನೀಡಿದರೆ ಮತ್ತೆ ವಿಚಾರಣೆಗೆ ಹಾಜರಾಗಲಾರ ಮತ್ತು ಸಾಕ್ಷ್ಯಗಳ ಮೇಲೆ ಹಿಂದಿನ ಸಂದರ್ಭದಲ್ಲಿ ನೀರವ್ ಮೋದಿ ಪ್ರಭಾವ ಬೀರಿದ್ದು ಖಚಿತ ಎಂದು ನ್ಯಾಯಮೂರ್ತಿ ಇಂಗ್ರಿಡ್ ಸಿಮೆಲರ್ ಅಭಿಪ್ರಾಯ ಪಟ್ಟಿದ್ದಾರೆ. ಮುಂದಿನ ಸಾಮಾನ್ಯ ವಿಚಾರಣೆ ಲಂಡನ್ನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ನಡೆಯಲಿದೆ.
ಜಾಮೀನು ಕೋರಿ ಕೋರ್ಟ್ಗೆ ನೀರವ್ ಮೋದಿ ಮೊರೆ ಇಡುತ್ತಿರುವುದು ನಾಲ್ಕನೇ ಬಾರಿಯಾಗಿದೆ. ಮಂಗಳವಾರವಷ್ಟೇ ಆತನ ಪರ ವಕೀಲರು ಜಾಮೀನು ನೀಡಲೇಬೇಕು ಎಂದು ವಾದಿಸಿದ್ದರು.
ತೀರ್ಪು ಪ್ರಕಟಿಸಿದ ನ್ಯಾ| ಇಂಗ್ರಿಡ್ ಸಿಮೆಲರ್ ನೀರವ್ ಮೋದಿ ವಿರುದ್ಧ, ವಂಚನೆ ನಡೆಸಲು ಮತ್ತು ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದ ಬಗ್ಗೆ ಪುರಾವೆಗಳು ಇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಂಚನೆ ಪ್ರಮಾಣ ತಡೆಯಲು ಭಾರತ ಸರಕಾರ ಪ್ರಾಮಾಣಿಕ ಯತ್ನ ನಡೆಸಿದೆ. ಹಿಂದಿನ ಸಂದರ್ಭಗಳಲ್ಲಿ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದ ವೇಳೆ ದೊಡ್ಡ ಪ್ರಮಾಣದ ಬಾಂಡ್ ಮೊತ್ತ ನೀಡುವ ಬಗ್ಗೆ ಅರ್ಜಿದಾರ ಅರಿಕೆ ಮಾಡಿಕೊಂಡಿದ್ದರು’ ಎಂದಿದ್ದಾರೆ. ಭಾರತದ ತನಿಖಾಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಇನ್ನೂ ಹಲವು ಸ್ಥಳಗಳು ಇವೆ ಎಂದೂ ನ್ಯಾಯಮೂರ್ತಿ ಆದೇಶದಲ್ಲಿ ಹೇಳಿದ್ದಾರೆ.