Advertisement

ರಂಗು-ರಂಗಿನ ಬಣ್ಣದಾಟಕ್ಕೆ ಬಾಗಲಕೋಟೆ ಸಜ್ಜು

12:59 PM Mar 09, 2020 | Suhan S |

ಬಾಗಲಕೋಟೆ: ವಸಂತ ಮಾಸದ ಸಂಭ್ರಮದ ಹಬ್ಬ ಹೋಳಿ. ಇದು ಫಲವಂತಿಕೆಯನ್ನು ವೃದ್ದಿಸುವ ಹಾಗೂ ವರ್ಷವನ್ನು ಪುನಶ್ಚೇತನಗೊಳಿಸುವ ಹಬ್ಬ.

Advertisement

ಬಾಗಲಕೋಟೆಯ ಈ ಹೋಳಿ ಹಬ್ಬಕ್ಕೆ ಗತ ವೈಭವದ ಇತಿಹಾಸವಿದೆ. ನೀರಾವರಿಗಾಗಿ ತ್ಯಾಗ ಮಾಡಿ, ಇಡೀ ನಗರ ಹರಿದು ಹಂಚಿ ಹೋದರೂ ತ್ಯಾಗಿಗಳ ಊರಿನಲ್ಲಿ ಸಂಸ್ಕೃತಿ-ಪರಂಪರೆ ಇಂದಿಗೂ ಉಳಿದಿದೆ ಎಂದರೆ ಈ ಊರಿನ ಪ್ರತಿಯೊಬ್ಬರ ಕೊಡುಗೆಯೇ ಸರಿ.

ಹೋಳಿಯ ಕಥೆಗಳು: ಶಿವಾ ತನ್ನ ತಪಸ್ಸನ್ನು ಭಂಗಗೊಳಿಸಿದ ಎಂಬ ಉದ್ದೇಶದಿಂದ ಕಾಮನನ್ನು ಶಿವ ತನ್ನ ಮೂರನೇಯ ಕಣ್ಣಿನ ಜ್ವಾಲೆಯಿಂದ ಸುಟ್ಟು ಬೂದಿ ಮಾಡಿದರ ದ್ಯೋತಕವಾಗಿ ಹೋಳಿ ಆಚರಿಸುತ್ತಾರೆ. ಎಲ್ಲ ಹಬ್ಬಗಳು ಹೆಣ್ಣು ಮಕ್ಕಳಿಗೆ ಮೀಸಲಾಗಿದ್ದು, ನಮಗೆ ಒಂದಾದರೂ ಹಬ್ಬವನ್ನು ಕರುಣಿಸು ಎಂದು ಪುರುಷರು, ಶಿವನ ಮುಂದೆ ಹೋದಾಗ ಶಿವನು ಹೋಳಿ ಹಬ್ಬವನ್ನು ದಯಪಾಲಿಸಿದನಂತೆ. ಹೋಳಿ ಹಬ್ಬದ ಸಮಯದಲ್ಲಿ ಎಲ್ಲವನ್ನೂ ಮರೆತು ಸಂತೋಷದಿಂದ ಕುಣಿದು ಕುಪ್ಪಳಿಸಿ, ಸಂಭ್ರಮಿಸಿ ಎಂದು ಶಿವ ಆಶೀರ್ವದಿಸಿದನಂತೆ !

ಬಾಗಲಕೋಟೆಯಲ್ಲಿ ಹೋಳಿ ವೈಭವ: ಪಾಲ್ಗುಣ ಮಾಸ ಬಂತೆಂದರೆ ಸಾಕು ಬಾಗಲಕೋಟೆಯಲ್ಲಿ ಹೋಳಿ ಹುಣ್ಣಿಮೆಯ ಸಂಭ್ರಮ ವಿಶೇಷವಾಗಿ ನಡೆಯುತ್ತದೆ. ಹೋಳಿ, ಭಾರತೀಯ ಸಂಸ್ಕೃತಿ ಹಾಗೂ ಹಬ್ಬಗಳಲ್ಲಿ ಅತ್ಯಂತ ಮಹತ್ವದ ರಾಷ್ಟ್ರೀಯ ಹಬ್ಬವಾಗಿದೆ. ಜಗತ್ತನ್ನೇ ಆಕರ್ಷಿಸಿರುವ ಭಾರತೀಯ ಹೋಳಿ ಹಬ್ಬದ ಸಂಭ್ರಮ, ಇಂದು ಗಡಿದಾಟಿ ಅಮೆರಿಕಾ, ಇಂಗ್ಲೆಂಡ್‌ ದೇಶಗಳಲ್ಲಿ ತನ್ನ ರಂಗು ಬೀರಿದೆ. ರಾಮಾಯಣ ಮಹಾ ಭಾರತದಲ್ಲಯೂ ಹೋಳಿ ಹಬ್ಬದ ಉಲ್ಲೇಖವಿದೆ. ಮಥುರಾದಲ್ಲಿ ಕೃಷ್ಣ ಪರಮಾತ್ಮನು ಗೋಪಿಕಾ ಸ್ತ್ರೀಯರ ಜೊತೆ ಬಣ್ಣ ಆಡಿದ್ದುಂಟು.

ನೂರಾರು ಜನಪದ ಕಲೆ-ಸಂಸ್ಕೃತಿಗಳ ತವರೂರಾದ ಬಾಗಲಕೋಟೆಯಲ್ಲಿ ಹೋಳಿ ಹಬ್ಬವನ್ನು 5 ದಿನಗಳ ಕಾಲ ವಿಶೇಷವಾಗಿ ಆಚರಿಸುವ ಪರಂಪರೆ ಕಳೆದ ಅನೇಕ ವರ್ಷಗಳಿಂದ ಸಾಗಿಬಂದಿದೆ. ಮಾ. 9ರಿಂದ 13ರವರೆಗೆ ಹೋಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ನೂರಾರು ವರ್ಷಗಳ ಹಿಂದಿನಿಂದಲೂ ನಗರದಲ್ಲಿ ಹೋಳಿ ಹಬ್ಬವನ್ನು ಎಲ್ಲ ಸಮಾಜದವರು ಕೂಡಿಕೊಂಡು ಭಾವೈಕ್ಯತೆಯ ಸಂಕೇತವಾಗಿ ಆಚರಿಸುತ್ತಾ ಬಂದಿದ್ದಾರೆ. ಜಾತಿ, ಮತ, ಕುಲ ಹಾಗೂ ಸಮಾಜದ ಅಂತಸ್ತುಗಳು ಈ ಹೋಳಿ ಹಬ್ಬದಲ್ಲಿ ಇಲ್ಲವಾಗಿ ಎಲ್ಲರೂ ಹಲವು ಬಣ್ಣಗಳಲ್ಲಿ ಲೀನವಾಗಿ ನಿಜವಾದ ಮನುಷ್ಯ ಸಂಬಂಧದ ಹಲವು ಪ್ರೀತಿಯ ಸೆಳೆತ ಇಲ್ಲಿ ಕಾಣಬಹುದು.

Advertisement

ಪ್ರಸಿದ್ಧ ಮನೆತನಗಳ ಕೊಡುಗೆ: ನಗರದ ಕಿಲ್ಲಾ, ಹೊಸಪೇಟ, ಹಳಪೇಟ, ಜೈನಪೇಟ ಹಾಗೂ ವೆಂಕಟಪೇಟ ಎಂಬ ಪ್ರಸಿದ್ಧ ಐದು ಮನೆತನದ ಬಡಾವಣೆಗಳಿವೆ. ಈ ಐದು ಬಡಾವಣೆಗಳಲ್ಲಿ ಪ್ರತಿವರ್ಷ ಹೋಳಿ ಹಬ್ಬದ ಬಣ್ಣದಾಟ ಮೂರು ದಿನಗಳವರೆಗೆ ಆಚರಿಸುವ ವಾಡಿಕೆ ಇದೆ. ಮುಖ್ಯವಾಗಿ ಹಲಗೆ ಬಾರಿಸುವ ವಾಡಿಕೆ ಇದೆ. ಈ ಹಲಗೆ ಬಾರಿಸುವ ಗತ್ತು ನಗರದಲ್ಲಿಯ ನಿವಾಸಿಗಳಿಗೆ ಮಾತ್ರ ಬರುತ್ತದೆ. ಇನ್ನುಳಿದವರಿಗೆ ಹಲಗೆ ಬಾರಿಸುವ ಗತ್ತು ಬರಲು ಸಾಧ್ಯವಿಲ್ಲ ಎನ್ನಬಹುದು. ಪ್ರತಿ ಬಡಾವಣೆಗಳಲ್ಲಿಯೂ ಕೆಲವು ಆಯ್ದ ಹಿರಿಯರ ಮನೆಗಳಲ್ಲಿ ಈ ನಿಶಾನೆ ಹಾಗೂ ತುರಾಯಿ ಹಲಗೆಗಳಿರುತ್ತವೆ. ಅವುಗಳನ್ನು ಹೋಳಿ ಹಬ್ಬದಲ್ಲಿ ಮಾತ್ರ ಹೊರಗೆ ತೆಗೆಯುತ್ತಾರೆ. ಪ್ರತಿ ವರ್ಷ ಹುಬ್ಟಾ ನಕ್ಷತ್ರದಂದು ಕಿಲ್ಲಾ ಬಡಾವಣೆಯಲ್ಲಿ ಸುಪ್ರಸಿದ್ಧ ಶ್ರೀಮಂತ ಬಸವಪ್ರಭು ಸರನಾಡಗೌಡ ಅವರ ಮನೆಯಿಂದ ಹಲಿಗೆ ಹಾಗೂ ನಿಶಾನೆ ತೆಗೆದುಕೊಂಡು, ಕುಲಕರ್ಣಿ ಮನೆತನದವರನ್ನು (ಗುರುರಾಜ, ಮದ್ವರಾವ್‌, ನಾರಾಯಣರಾವ್‌) ಕರೆದುಕೊಂಡು ಅಂಬೇಡ್ಕರ್‌ ಗಲ್ಲಿಯ ಪ್ರವೀಣ ಖಾತೇದಾರ ಮನೆಯಿಂದ ಬೆಂಕಿಯನ್ನು ತಂದು ತಮ್ಮ ಬಡಾವಣೆಯಲ್ಲಿ ಮೊದಲು ಕಾಮನದಹನ ಮಾಡುವ ವಾಡಿಕೆ ಇದೆ. ನಂತರ ವಿವಿಧ ಬಡಾವಣೆಯಲ್ಲಿ ಕಾಮದಹನ ಮಾಡಲಾಗುತ್ತದೆ.

ಐತಿಹಾಸಿಕ ನಿಶಾನೆ ಹಾಗೂ ಹಲಗೆಗಳಿರುವ ಮನೆಗಳು: ಕಿಲ್ಲಾ ಓಣಿಗೆ ಸರನಾಡಗೌಡ, ಸರದೇಸಾಯಿ (ಮನ್ನಿಕೇರಿ) ಹಾಗೂ ಮೇಟಿ ಮನೆತನಗಳು, ಹಳಪೇಟ ಓಣಿಗೆ ನಾರಾ, ಹಿರೇಮಠ ಹಾಗೂ ಪೂಜಾರಿ ಮನೆತನಗಳು, ಹೊಸಪೇಟ ಓಣಿಗೆ ಪ್ಯಾಟಿಶೆಟ್ಟರ ಮನೆತನ, ತಪಶೆಟ್ಟಿ, ಅಂಗಡಿ, ಕಲ್ಯಾಣಿ ಮನೆತನಗಳು, ಜೈನಪೇಟ ಓಣಿಯಲ್ಲಿ ಬಾದೋಡಗಿ, ಲೋಕಂಡೆ ಮನೆತನಗಳು, ವೆಂಕಪೇಟ ಓಣಿಗೆ ಹೆರಕಲ್ಲಮಠ ಹಾಗು ಮೋಹರೆ ಮನೆತನಗಳಿವೆ. ಈ ಮೊದಲು ಐದು ಬಡಾವಣೆಯವರು ಐದು ದಿವಸಗಳ ಹೋಳಿ ಹಬ್ಬ ಆಚರಿಸುವ ವಾಡಿಕೆ ಇತ್ತು. ಆದರೆ ಸಾರ್ವಜನಿಕರಿಗೆ, ನಗರದ ವ್ಯಾಪಾರಸ್ಥರಿಗೆ ತೊಂದರೆ ಉಂಟಾಗುವುದನ್ನು ಗಮನಿಸಿ ಹಿರಿಯರು ಈಗ ಮೂರು ದಿನಗಳವರೆಗೆ ಆಚರಿಸುವ ರೂಢಿ ಬಂದಿದೆ.

ಸೋಗುಗಳ (ಸ್ತಬ್ಧಚಿತ್ರ) ಪ್ರದರ್ಶನ- ಬಣ್ಣದ ಆಟ: ಹೋಳಿ ಹಬ್ಬದಲ್ಲಿ ಸುಮಾರು ರೂ ಎರಡು ಲಕ್ಷಕ್ಕಿಂತಲೂ ಹೆಚ್ಚು ಹಣ ಬಣ್ಣಕ್ಕೆ ವೆಚ್ಚವಾಗುತ್ತದೆ ಎಂಬ ಅಂದಾಜಿದೆ. ಕಾಮನ ದಹನವಾದ ನಂತರ ರಾತ್ರಿ ಒಂದು ಬಡಾವಣೆಯವರು ಮೊದಲು ಸೋಗಿನ ಗಾಡಿಯನ್ನು ಎಲ್ಲ ಪ್ರಮುಖ ಬೀದಿಗಳಲ್ಲಿ ಪ್ರದರ್ಶಿಸುತ್ತಾರೆ. ಸುಮಾರು 10ರಿಂದ 20 ಚಕ್ಕಡಿಗಳಲ್ಲಿ ವಿವಿಧ ವೇಷ-ಭೂಷಣ ಪ್ರದರ್ಶನ ನಡೆಯುತ್ತದೆ. ಆದರೆ ಒಂದೊಂದು ಸೋಗಿನ ಗಾಡಿಗೆ ಸುಮಾರು 15-20 ಸಾವಿರ ರೂ.ವೆಚ್ಚ ತಗಲುತ್ತದೆ. ಈಚೆಗೆ ಕಡಿಮೆ ಪ್ರಮಾಣದಲ್ಲಿ ಸೋಗಿನ ಗಾಡಿಗಳನ್ನು ಪ್ರದರ್ಶಿಸುತ್ತಾರೆ. ರಾತ್ರಿ ಸೋಗಿನ ಗಾಡಿಗಳ ಪ್ರದರ್ಶನ ನಡೆದ ನಂತರ ಬೆಳಗ್ಗೆ ಅದೇ ಬಡಾವಣೆಯವರು ಚಕ್ಕಡಿ (ಬಂಡಿ), ಟ್ರಾಕ್ಟರ, ಲಾರಿಗಳಲ್ಲಿ ಬಣ್ಣ ತುಂಬಿದ ಬ್ಯಾರಲ್‌ ಗಳನ್ನು ಇಟ್ಟು ವಿವಿಧ ಬಡಾವಣೆಗಳಲ್ಲಿ ಬಣ್ಣದ ಆಟ ಆಡುತ್ತಾರೆ.

ಬಣ್ಣದಾಟ ನೋಡಲೆಂದೇ ಬರ್ತಾರೆ ಬೀಗರು: ಬಣ್ಣದ ಗಾಡಿಗಳು ಬಡಾವಣೆಗಳಲ್ಲಿ ಬರುತ್ತಿರುವ ಬಗ್ಗೆ ಅಲ್ಲಿಯ ನಾಗರಿಕರು ತಮ್ಮ ಮನೆಯ ಮಾಳಿಗೆಯ ಮೊದಲೇ ಸಂಗ್ರಹಿಸಿದ ಬಣ್ಣವನ್ನು ಗಾಡಿಯವರ ಮೇಲೆ ಮುಖಾಮುಖೀ ಬಣ್ಣ ಎರಚುವ ದೃಶ್ಯ ಮನೋಹರವಾಗಿ ಕಾಣಿಸುತ್ತದೆ. ಮಾ.11ರಂದು ಬಣ್ಣದಾಟ, ಒಂದು ಕಡೆಯಿಂದ ಹಳೇಪೇಟ ಓಣಿ ಕಡೆಯಿಂದ ಬಂದರೆ, ವಿರುದ್ದ ದಿಕ್ಕಿನಿಂದ ಜೈನಪೇಟ, ವೆಂಕಟಪೇಟ ಓಣಿಯವರ ಮಧ್ಯೆ ಬಣ್ಣದ ಯುದ್ದದ ಅನುಭವದಂತೆ ಬಣ್ಣದಾಟ ನಡೆಯುತ್ತದೆ. ಈ ದೃಶ್ಯ ನೋಡಲೆಂದೇ ಬೇರೆ ಬೇರೆ ಊರುಗಳಿಂದ ಸಾವಿರಾರು ಜನರು ಬಂದು ತಮ ಕಣ್ತುಂಬಿಕೊಳ್ಳುತ್ತಾರೆ. ಮಾರವಾಡಿ ಸಮಾಜದವರು ವಿಶೇಷವಾಗಿ ಮಹಿಳೆಯರು ಹೋಳಿ ಒಂದು ದಿವಸ ಮಾತ್ರ ಆಚರಿಸುವ ವಾಡಿಕೆಯಿದೆ. ಹೋಳಿ ನೋಡಲು ಪರ ಊರುಗಳಿಂದ ನಾಗರಿಕರು ಬರುತ್ತಾರೆ.

 

-ಎಸ್‌.ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next