Advertisement

ಕಸಗುಡಿಸುವವರ ಸಂಬಳಕ್ಕೂ ದುಡ್ಡಿಲ್ಲ

03:44 PM Feb 24, 2021 | Team Udayavani |

ಬಾಗಲಕೋಟೆ: ರೈತರು-ವ್ಯಾಪಾರಸ್ಥರ ಮಧ್ಯೆ ಸೇತುವೆಯಾಗಿ ಕೆಲಸ ಮಾಡುವ ಸರ್ಕಾರದ ಮಹತ್ವದಸಂಸ್ಥೆಗಳು ಈಗ ಭಾರೀ ಸಂಕಷ್ಟಕ್ಕೆ ಸಿಲುಕಿವೆ. ಎಪಿಸಿಎಂ ಕಾಯಿದೆ ತಿದ್ದುಪಡಿ ಹಾಗೂ ಸೆಸ್‌ ಮಿತಿ ಇಳಿಕೆಯಿಂದ ಈ ಸಂಕಷ್ಟ ಎದುರಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

Advertisement

ಹೌದು. ಬಾಂಗ್ಲಾದೇಶಕ್ಕೆ ಗುಣಮಟ್ಟದ ಮೆಕ್ಕೆಜೋಳ ರಫ್ತು ಮಾಡುವ ಮೂಲಕ ಗಮನ ಸೆಳೆಯುವ ಬಾಗಲಕೋಟೆಯ ಎಪಿಎಂಸಿಯವಾರ್ಷಿಕ ಆದಾಯದಲ್ಲಿ ಇದೀಗ ಭಾರೀ ಕಡಿತ ಅನುಭವಿಸುತ್ತಿದೆ. ಕಳೆದ ಆಗಸ್ಟ್‌ನಿಂದ ಸಮಿತಿಗೆಬರುವ ಆದಾಯದಲ್ಲಿ ಶೇ.25ಕ್ಕೆ ಇಳಿಕೆಯಾಗಿದೆ.

ಮಾರುಕಟ್ಟೆ ಶುಲ್ಕ ಇಳಿಕೆ: ಎಪಿಎಂಸಿಗಳ ಈ ಬಾರಿ ಆದಾಯ ಕುಸಿತಕ್ಕೆ ಸರ್ಕಾರದ ಆದೇಶವೇ ಕಾರಣಎನ್ನಲಾಗುತ್ತಿದೆ. ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ)ಅಧಿನಿಯಮಕ್ಕೆ ತಿದ್ದುಪಡಿ ತಂದು ಎಪಿಎಂಸಿಗಳು

ಆಕರಿಸುತ್ತಿದ್ದ ಮಾರುಕಟ್ಟೆ ಶುಲ್ಕ-ಬಳಕೆದಾರರ ಶುಲ್ಕ ಮಾರ್ಪಡಿಸಿದೆ. ಮೊದಲಿದ್ದ 1ರೂಪಾಯಿ 50 ಪೈಸೆಯನ್ನು ಕಡಿತ ಮಾಡಿ, ಕೇವಲ 60 ಪೈಸೆ ಆಕರಣೆ ಮಾಡಬೇಕು ಎಂದು (ಸರ್ಕಾರದ ಆದೇಶ 2021ರ ಜನವರಿ 1ರಂದು) ಆದೇಶಿಸಿದೆ. ಹೀಗಾಗಿ ಒಬ್ಬ ವರ್ತಕ 100 ರೂ. ವ್ಯವಹಾರ ಮಾಡಿದರೆ ಅವರಿಂದ ಮಾರುಕಟ್ಟೆ ಶುಲ್ಕವಾಗಿ 60 ಪೈಸೆ ಮಾತ್ರ ಸೆಸ್‌ ಪಡೆಯಬೇಕು. ಇದು ಮೊದಲು 1.50 ರೂ. ಆವೃತ್ತಿ ನಿಧಿಗೆ 5 ಪೈಸೆ ಕೃಷಿ ಮಾರಾಟ ಮಂಡಳಿಗೆ ನೀಡಬೇಕು. ಉಳಿದ 44 ಪೈಸೆಯನ್ನು ಆಯಾ ಎಪಿಎಂಸಿಗಳು ಮೂಲಭೂತ ಸೌಲಭ್ಯ ಅಭಿವೃದ್ಧಿ, ಪ್ರಾಂಗಣಕ್ಕಾಗಿ ಬಳಕೆ ಮಾಡಬೇಕೆಂದು ನಿರ್ದೇಶನ ನೀಡಿದೆ. ಹೀಗಾಗಿ ಮಾರುಕಟ್ಟೆ ಶುಲ್ಕ ವಸೂಲಿ ಕಡಿಮೆ ಮಾಡಿರುವುದು ಎಪಿಎಂಸಿಗಳ ಆದಾಯ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಪ್ರಾಂಗಣ ಮಾರಾಟಕ್ಕೆ ಮಾತ್ರ ಶುಲ್ಕ: ಎಪಿಎಂಸಿಗಳ ಆದಾಯ ಕುಸಿತಕ್ಕೆ ಇನ್ನೊಂದು ಪ್ರಮುಖ ಕಾರಣವೆಂದರೆ, ಎಪಿಎಂಸಿ ಕಾಯಿದೆಗೆ ಕಳೆದ ಆಗಸ್ಟ್ ನಲ್ಲಿ ತಿದ್ದುಪಡಿ ತರಲಾಗಿದೆ. ವರ್ತಕರು, ದಲ್ಲಾಳಿವರ್ತಕರು, ಎಪಿಸಿಎಂ ಪ್ರಾಂಗಣ(ಆವರಣ)ದಲ್ಲಿವಹಿವಾಟು ಮಾಡಿದರೆ ಮಾತ್ರ 100ಕ್ಕೆ 60 ಪೈಸೆ ಸೆಸ್‌ ವಸೂಲಿ ಮಾಡಬೇಕು. ಅದೇ ವರ್ತಕರು, ದಲ್ಲಾಳಿಗಳು, ಎಪಿಸಿಎಂ ಪ್ರಾಂಗಣದ ಹೊರಗೆ ಎಲ್ಲೇ ವಹಿವಾಟು ನಡೆಸಿದರೆ ಆ ಸೆಸ್‌ ಎಪಿಎಂಸಿಗಳಿಗೆ ಬರಲ್ಲ.

Advertisement

ವರ್ತಕರ ತಂತ್ರಗಾರಿಕೆ: ಎಪಿಎಂಸಿ ಪ್ರಾಂಗಣ ಹೊರಗೂ ರೈತರು ತಮ್ಮ ಬೆಳೆಗಳ ವಹಿವಾಟು ಮಾಡಲುಖರೀದಿಗೆ ವರ್ತಕರಿಗೆ ಅವಕಾಶದೊರೆಯಿತೋ ಆಗಿನಿಂದ ಎಪಿಸಿಎಂವರ್ತಕರೇ ಹೊಸ ತಂತ್ರಗಾರಿಕೆ ಶುರು ಮಾಡಿದ್ದಾರೆ. ತಮ್ಮ ಅಂಗಡಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನೇ ಹಳ್ಳಿ ಹಳ್ಳಿಗೆ ಕಳುಹಿಸುತ್ತಿದ್ದಾರೆ. ರೈತರ ಹೊಲಕ್ಕೆ ಕಳುಹಿಸಿ (ಈ ಹಿಂದೆ ಎಪಿಎಂಸಿಗೆ ತಂದು ಧಾನ್ಯ ಕೊಡುತ್ತಿದ್ದ ರೈತರ ಪಟ್ಟಿ ಅವರಲ್ಲಿವೆ) ನೀವು, ವಾಹನ ಬಾಡಿಗೆ ಮಾಡಿಕೊಂಡು ಎಪಿಎಂಸಿಗೆ ಬರುವುದು ಬೇಡ, ನಾವೇ ನಿಮ್ಮ ಹೊಲಕ್ಕೆ ಬಂದು ಖರೀದಿಮಾಡಿಕೊಂಡು ಹೋಗುತ್ತೇವೆಂಬ ಭರವಸೆ ಕೊಟ್ಟು,ರೈತರ ಹೊಲಗಳಲ್ಲೇ ವಹಿವಾಟು ನಡೆಸಲಾಗುತ್ತಿದೆ. ಅದೇ ವರ್ತಕರು, ಎಪಿಎಂಸಿಯಲ್ಲಿ ವಹಿವಾಟು ನಡೆಯುತ್ತಿಲ್ಲ ಎಂಬ ದಾಖಲೆ ತೋರಿಸುತ್ತಿದ್ದಾರೆ.

ಹೀಗಾಗಿ ಎಪಿಎಂಸಿಗೆ ಸೆಸ್‌ ಮೂಲಕ ಬರುತ್ತಿದ್ದ ಆದಾಯ ಕುಸಿತವಾಗಿದೆ ಎನ್ನಲಾಗಿದೆ. 59 ಲಕ್ಷ ರೂ. ಮಾತ್ರ ವಸೂಲಿ: ಕಳೆದ 2020ನೇ ಸಾಲಿನ ಜನವರಿವರೆಗೆ ಬಾಗಲಕೋಟೆ ಎಪಿಎಂಸಿಗೆ 1.60 ಕೋಟಿ ರೂ.(ಮಾರುಕಟ್ಟೆ ಶುಲ್ಕ 1.50 ರೂ. ಇದ್ದಾಗ) ಸೆಸ್‌ ಸಂಗ್ರಹವಾಗಿತ್ತು. ಅದೇ ಸೆಸ್‌ ಆಕರಣೆಯನ್ನು 60 ಪೈಸೆಗೆ ಇಳಿಸಿದಾಗ ಜನವರಿ 2021ರವರೆಗೆ ಒಟ್ಟು 59 ಲಕ್ಷ ರೂ.ಮಾತ್ರ

ವಸೂಲಿಯಾಗಿದೆ. ಈ ಕುಸಿತದ ಜತೆಗೆ ಕೋವಿಡ್ ಹಿನ್ನೆಲೆಯಲ್ಲಿ ಸಿಬ್ಬಂದಿ ಕಡಿತ, ಖರ್ಚು-ವೆಚ್ಚಗಳ ಕಡಿತ ಮಾಡಲೂ ಸರ್ಕಾರ ನೀಡಿದೆ. ಬಾಗಲಕೋಟೆ ಎಪಿಎಂಸಿಯಲ್ಲಿ ಮೊದಲು 32 ಜನಹೊರ ಗುತ್ತಿಗೆ ಸಿಬ್ಬಂದಿ ವಿವಿಧಕೆಲಸದಲ್ಲಿದ್ದರು. ಈಗ ಕೇವಲ 9ಜನ ಇದ್ದಾರೆ. ಅವರಿಗೂ ಸರಿಯಾಗಿ ಸಂಬಳ ಕೊಡಲು ಆಗುತ್ತಿಲ್ಲ.ಎಪಿಎಂಸಿ ಆಡಳಿತ ಕಚೇರಿ, ಸಿಬ್ಬಂದಿ ಕಚೇರಿಗೆ ಕಸಗೂಡಿಸಲು ಸಿಬ್ಬಂದಿ ಇದ್ದರು. ಅವರನ್ನು ನಾಲ್ಕು ತಿಂಗಳಿಂದ ಬಿಡಿಸಲಾಗಿದೆ. ಹೀಗಾಗಿ ಕಸಗುಡಿಸುವವರೂಎಪಿಎಂಸಿಗೆ ದಿಕ್ಕಿಲ್ಲ ಎಂಬಂತಾಗಿದೆ.

ಬಾಗಲಕೋಟೆ ಎಪಿಎಂಸಿ ಪ್ರತಿಷ್ಠಿತವಾಗಿದೆ. ಸರ್ಕಾರದಿಂದ ಯಾವುದೇ ಅನುದಾನ ಬರಲ್ಲ. ಸೆಸ್‌ ವಸೂಲಿಆಗುತ್ತಿಲ್ಲ. ಇಲ್ಲಿದ್ದ 32 ಜನ ಹೊರಗುತ್ತಿಗೆ ಸಿಬ್ಬಂದಿಯನ್ನೂ ಕಡಿತ ಮಾಡಿದ್ದು, ಕೇವಲ 9 ಜನರಿದ್ದಾರೆ. ಕಸಗುಡಿಸುವ ಸಿಬ್ಬಂದಿಯನ್ನೂ ತೆಗೆಯಲಾಗಿದೆ. ಅವರಿಗೆ ಕೊಡಲೂ ಹಣದಕೊರತೆ ಎದುರಿಸುತ್ತಿದೆ. ಸರ್ಕಾರ, ಎಪಿಎಂಸಿಗಳ ಬದವರ್ಧನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. –ಮಲ್ಲು ದ್ಯಾವಣ್ಣನವರ, ಜಟ್ಟೆಪ್ಪ ಮಾದಾಪುರ, ನಿರ್ದೇಶಕರು, ಎಪಿಎಂಸಿ

ಎಪಿಎಂಸಿಗಳಿಗೆ ಇದ್ದ ಆದಾಯ ಬಹಳಷ್ಟು ಕುಸಿತವಾಗಿದೆ. ಸೆಸ್‌ ಪ್ರಮಾಣ ಇಳಿಕೆ ಮಾಡಿದ್ದರಿಂದ ಅದು ಮೊದಲಿನಂತೆ ಹೆಚ್ಚು ವಸೂಲಿ ಯಾಗುತ್ತಿಲ್ಲ. ಆದಾಯ ವೃದ್ಧಿಗೆ ಮಾರುಕಟ್ಟೆ ಶುಲ್ಕವನ್ನು ಈಗಿರುವ 60 ಪೆಸೆಯಿಂದ ಕನಿಷ್ಠ  1 ರೂ.ಗೆ ಹೆಚ್ಚಿಸಬೇಕೆಂಬ ಪ್ರಸ್ತಾವನೆ ರಾಜ್ಯದ 142 ಎಪಿಎಂಸಿಗಳಿಗೆ ಹೋಗಿದೆ. ಅಲ್ಲದೇ ನಬಾರ್ಡ್  ನಿಂದ ವಿಶೇಷ ಅನುದಾನ ಒದಗಿಸುವ ಚಿಂತನೆ ಸರ್ಕಾರದ ಮಟ್ಟದಲ್ಲಿ ನಡೆದಿದೆ ಎಂದು ಕೇಳಿದ್ದೇವೆ.  –ಟಿ.ಬಿ. ಉಣ್ಣಿಭಾವಿ,  ಕಾರ್ಯದರ್ಶಿ, ಎಪಿಎಂಸಿ ಬಾಗಲಕೋಟೆ

 

ಶ್ರೀಶೈಲ ಕೆ.ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next