Advertisement

ಬಾಗಲಕೋಟೆ: ಭಾರತ್ ಮಾಲಾದಿಂದ ಪ್ರವಾಸೋದ್ಯಮಕ್ಕೆ ಮೆರಗು

06:47 PM Aug 02, 2023 | Team Udayavani |

ಬಾಗಲಕೋಟೆ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಭಾರತ ಮಾಲಾ ಯೋಜನೆಯಡಿ ಚತುಷ್ಪಥ ಹೆದ್ದಾರಿಗಳು ಜಿಲ್ಲೆಯಲ್ಲಿ ಹಾಯ್ದು ಹೋಗಲಿದ್ದು, ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತಷ್ಟು ಮೆರಗು ಬರಲಿದೆ ಎಂಬ ಮಾತು ಕೇಳಿ ಬಂದಿದೆ. ಹೌದು. ಜಿಲ್ಲೆಯಲ್ಲಿ ಭಾರತ ಮಾಲಾ ಯೋಜನೆಯಡಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾಯ್ದು ಹೋಗುತ್ತಿದ್ದು, ಇದರಿಂದ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿವೆ. ಜತೆಗೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಕರ್ನಾಟಕ-ಹೈದ್ರಾಬಾದ್‌ ಸಂಪರ್ಕ ಸನಿಹ ಕೂಡ ಆಗಲಿದೆ.

Advertisement

102 ಕಿ.ಮೀ ಪಣಜಿ ಹೆದ್ದಾರಿ: ಭಾರತ ಮಾಲಾ ಫೇಸ್‌-1 ಅಡಿಯಲ್ಲಿ ಗೋವಾ-ಆಂಧ್ರಪ್ರದೇಶದ ಹೈದ್ರಾಬಾದ್‌ ಸಂಪರ್ಕಿಸುವ ಬರೋಬ್ಬರಿ 4470 ಕೋಟಿ ರೂ. ವೆಚ್ಚದ ಹೆದ್ದಾರಿ ನಿರ್ಮಾಣಗೊಳ್ಳುತ್ತಿದೆ. ಈಗಾಗಲೇ ಇರುವ ರಾಷ್ಟ್ರೀಯ ಹೆದ್ದಾರಿ ನಂ.367
ಅನ್ನೇ ಮೇಲ್ದರ್ಜೆಗೇರಿಸಲಾಗುತ್ತಿದೆ. ಇದು ಬೆಳಗಾವಿ- ಬಾಗಲಕೋಟೆ-ರಾಯಚೂರು ಮಾರ್ಗವಾಗಿ ಹೈದ್ರಾಬಾದ್‌ ಸಂಪರ್ಕಿಸಲಿದೆ. ಜಿಲ್ಲೆಯಲ್ಲಿ ಸುಮಾರು 102 ಕಿ.ಮೀ ಉದ್ದ ಹೆದ್ದಾರಿ ಸಾಗಲಿದ್ದು, ಇದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ.

ಇದೇ ಹೆದ್ದಾರಿಯಲ್ಲಿ ಗದ್ದನಕೇರಿ-ಶಿರೂರ ಮಾರ್ಗದ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾರ್ಯ ಈಗಾಗಲೇ ಭರದಿಂದ ಸಾಗಿದೆ. ಇದು ಗದ್ದನಕೇರಿ-ಶಿರೂರ ಮಧ್ಯೆ 25 ಕಿ.ಮೀ. ರಸ್ತೆಯನ್ನು ಸದ್ಯ ಚತುಷ್ಪಥ ಹೆದ್ದಾರಿಯನ್ನಾಗಿ ನಿರ್ಮಿಸಲಾಗುತ್ತಿದೆ.

ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಬರೋಬ್ಬರಿ 298.10 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಈಗಾಗಲೇ ಶಿರೂರ ಭಾಗದಿಂದ ಬಾಗಲಕೋಟೆವರೆಗೆ ಕಾಮಗಾರಿ ಸಾಗಿದೆ. ಶಿರೂರ ಕ್ರಾಸ್‌ದಿಂದ ಬಾನಾಪುರವರೆಗೆ ಹೆದ್ದಾರಿ ಸಂಖ್ಯೆ 367, ದ್ವಿಪಥವಾಗಿ ನಿರ್ಮಾಣಗೊಳ್ಳಲಿದೆ.

ಇದಕ್ಕಾಗಿ ಸರ್ಜಾಪುರದಿಂದ ಪಟ್ಟಣದಕಲ್ಲವರೆಗೆ 33 ಕಿ.ಮೀ ಹೆದ್ದಾರಿಗೆ 445.62 ಕೋಟಿ, ಪಟ್ಟದಕಲ್ಲದಿಂದ ಶಿರೂರ ವರೆಗೆ 29 ಕಿ.ಮೀ ಹೆದ್ದಾರಿ ದ್ವಿಪಥವನ್ನಾಗಿಸಲು 225.41 ಕೋಟಿ ಮಂಜೂರಾಗಿದ್ದು, ಮೂರು ಹಂತದಲ್ಲಿ ಕಾಮಗಾರಿ ನಡೆಯುತ್ತಿದೆ.

Advertisement

ಜಿಲ್ಲೆಗೆ ಹಸಿರು ಹೆದ್ದಾರಿ: ಭಾರತ ಮಾಲಾ ಫೇಸ್‌-2 ಅಡಿಯಲ್ಲಿ ಬೆಂಗಳೂರು-ಪುಣೆ ಹೊಸ ಹೆದ್ದಾರಿ ಮಂಜೂರಾಗಿದ್ದು, ಈಗಾಗಲೇ ಧಾರವಾಡ ಮೂಲಕ ಇರುವ ಹೆದ್ದಾರಿ 775 ಕಿ.ಮೀ. ದೂರವಿದೆ. ಈ ಹೊಸ ಬಾಗಲಕೋಟೆ ಮೂಲಕ ಹಾಯ್ದು ಹೋಗಲಿದ್ದು, ಇದು 699 ಕಿ.ಮೀ ದೂರವಿದೆ. ಬೆಂಗಳೂರು-ಪುಣೆ ಮಧ್ಯೆ ಸಂಪರ್ಕ ಸನಿಹಗೊಳಿಸುವ, ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶ ಈ ಹೆದ್ದಾರಿ ಹೊಂದಿದೆ.

40 ಸಾವಿರ ಕೋಟಿ ರೂ. ವೆಚ್ಚದಲ್ಲಿ ಈ ಹೆದ್ದಾರಿಯನ್ನು ಕೇಂದ್ರ ಸರ್ಕಾರ ನಿರ್ಮಿಸುತ್ತಿದೆ. ಬೆಂಗಳೂರು-ಪುಣೆ ಹೊಸ ಹೆದ್ದಾರಿ ಜಿಲ್ಲೆಯ ರಬಕವಿ-ಬನಹಟ್ಟಿ, ಕುಳಲಿ ತಾಂಡಾ, ಶಿರೋಳ, ಮುಧೋಳ ಗ್ರಾಮೀಣ ಭಾಗ, ಯಡಹಳ್ಳಿ, ಮಾಚಕನೂರ, ಲೋಕಾಪುರ ಹೊರವಲಯ, ಹನಮನೇರಿ ಇನಾಂ, ಸೀಪರಮಟ್ಟಿ, ಸಾಗನೂರ, ನರೇನೂರ, ಕೆರೂರ ಹೊರವಲಯ, ಕರಡಿಗುಡ್ಡ,
ಹೆಬ್ಬಳ್ಳಿ ಸೇರಿದಂತೆ ಒಟ್ಟು ಸುಮಾರು 91 ಕಿ.ಮೀ ದೂರದಷ್ಟು ಜಿಲ್ಲೆಯಲ್ಲಿ ಕ್ರಮಿಸಲಿದೆ.

ಈ ಹೆದ್ದಾರಿಯ ಇನ್ನೊಂದು ವಿಶೇಷವೆಂದರೆ ಜಿಲ್ಲೆಯ ಮೂರು ಪ್ರಮುಖ ನದಿಗಳು, ಪ್ರವಾಸಿ ತಾಣಗಳ ಸಂಪರ್ಕ ಕಲ್ಪಿಸಲಿದ್ದು, ಹೆದ್ದಾರಿಯ ಎರಡೂ ಪಕ್ಕದಲ್ಲಿ ಮರ ನೆಡಲಿದ್ದು, ಹಸಿರು ಹೆದ್ದಾರಿಯಾಗಿ ನಿರ್ಮಿಸುವ ಯೋಜನೆ ಇದೆ. ಇದು ಯಾವುದೇ ಪಟ್ಟಣ ಅಥವಾ ನಗರದೊಳಗೆ ಹಾದು ಹೋಗದಿರುವುದು ಈ ಹೆದ್ದಾರಿಯ ವಿಶೇಷ.

ಒಟ್ಟಾರೆ ಭಾರತ ಮಾಲಾ ಯೋಜನೆಯ ಎರಡು ಹೊಸ ಹೆದ್ದಾರಿಗಳ ನಿರ್ಮಾಣದಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಅನುಕೂಲವಾಗುವ ಜತೆಗೆ ಜಿಲ್ಲೆಯ ಸಕ್ಕರೆ, ಸಿಮೆಂಟ್‌, ಬೆಲ್ಲ, ತೋಟಗಾರಿಕೆ ಕೃಷಿ ಉತ್ಪಾದನೆ ಸಾಗಾಟಕ್ಕೂ ಅನುಕೂಲವಾಗಲಿದೆ. ಇವುಗಳಿಂದ ಬೆಂಗಳೂರು ಸಹಿತ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಿಗೆ ವಾಣಿಜ್ಯ ವಹಿವಾಟು ನಡೆಸಲು ಮತ್ತಷ್ಟು ಸಹಕಾರಿಯಾಗಲಿದೆ ಎಂಬುದು ಜಿಲ್ಲೆಯ ಜನರ ಆಶಯ.

ಮುಗಿಯದ ಗೊಂದಲ
ಸಧ್ಯ ಗದ್ದನಕೇರಿ-ಶಿರೂರ ಮಧ್ಯೆ 25 ಕಿ.ಮೀ ಹೆದ್ದಾರಿ ಚತುಷ್ಪಥ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಬಾಗಲಕೋಟೆ ನಗರದ ಯಾವ ಭಾಗದಲ್ಲಿ ಹಾಯ್ದು ಹೋಗಲಿದೆ ಎಂಬ ಗೊಂದಲ ವ್ಯಾಪಾರಸ್ಥರಲ್ಲಿದೆ. ಇದೇ ಹೆದ್ದಾರಿ ಮುಂದೆ ಭಾರತ ಮಾಲಾ ಫೇಸ್‌-1ದ ಪಣಜಿ-ಹೈದ್ರಾಬಾದ್‌ ಹೆದ್ದಾರಿಯಾಗಿ ಪರಿವರ್ತನೆಗೊಳ್ಳಲಿದೆ.

ಬಾಗಲಕೋಟೆ ನಗರದ ಶಿರೂರ ರೈಲ್ವೆ ಗೇಟ್‌ನಿಂದ ಸದ್ಯ ಇರುವ ಹೆದ್ದಾರಿ ಮೂಲಕವೇ ಹೋಗುತ್ತದೆಯೋ ಅಥವಾ
ಹೆದ್ದಾರಿಗೆ ತಿರುವು ನೀಡದೇ ಶಿರೂರ ಅಗಸಿ, ವಲ್ಲಭಬಾಯಿ ವೃತ್ತದ ಮೂಲಕ ಹಾಯ್ದು ಹಳೆಯ ಎಸಿ ಕಚೇರಿ ಹತ್ತಿರ ಪುನಃ ಹೆದ್ದಾರಿಗೆ ಕೂಡಲಿದೆಯೋ ಸ್ಪಷ್ಟತೆ ಇಲ್ಲ. ಶಿರೂರ ಅಗಸಿ ಮೂಲಕ ಈಗಾಗಲೇ ಮುಳುಗಡೆ ಕಟ್ಟಡಗಳಿದ್ದು, ಅಲ್ಲಿಂದ ಹಾಯ್ದು ಹೋದರೆ ಸರ್ಕಾರಕ್ಕೆ ಹಣಕಾಸು ಹೊರೆಯಾಗಲ್ಲ ಎಂಬ ಯೋಚನೆ ಒಂದೆಡೆ ಇದೆ. ಆದರೆ ಮುಖ್ಯವಾಗಿ ನಗರದಲ್ಲಿ ಸದ್ಯ ವ್ಯಾಪಾರ-ವಹಿವಾಟು ಇರುವುದು ವಲ್ಲಭಬಾಯಿ ಚೌಕ್‌ದಲ್ಲಿ ಮಾತ್ರ. ಅಲ್ಲಿ ಹೆದ್ದಾರಿ ಹಾಯ್ದು ಹೋದರೆ, ಇಡೀ ಬಾಗಲಕೋಟೆಯ ವ್ಯಾಪಾರದ ಶಕ್ತಿಯೇ ಕುಂದಲಿದೆ ಎಂಬ ಆತಂಕ ಇನ್ನೊಂದೆಡೆ ಇದೆ.

ಬಾಗಲಕೋಟೆ ನಗರದ ಯಾವ ಭಾಗದಲ್ಲಿ ಹೆದ್ದಾರಿ ಹಾಯ್ದು ಹೋಗಲಿದೆ ಎಂಬುದನ್ನು ಅಧಿಕಾರಿಗಳು ನೀಲನಕ್ಷೆ ಮೂಲಕವೇ ಸ್ಪಷ್ಟಪಡಿಸಲಿದ್ದಾರೆ.
∙ಸಂಸದ ಪಿ.ಸಿ.ಗದ್ದಿಗೌಡರ, ಸಂಸದರು

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next