Advertisement

ನಿರಾಣಿ-ಚರಂತಿಮಠರಲ್ಲಿ ಯಾರಿಗೆ ಮಣೆ?

12:22 PM Aug 01, 2019 | Team Udayavani |

ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ:
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಯ ಮುಧೋಳ ಮೀಸಲು ಕ್ಷೇತ್ರದ ಶಾಸಕ ಗೋವಿಂದ ಕಾರಜೋಳರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಅಂತಿಮಗೊಂಡಿದ್ದು, ಜಿಲ್ಲೆಗೆ ಮತ್ತೂಂದು ಸ್ಥಾನ ಯಾರಿಗೆ ಸಿಗಲಿದೆ ಎಂಬ ಕುತೂಹಲ ಹೆಚ್ಚಿಸಿದೆ.

Advertisement

ನಿಜ, ಕಾರಜೋಳರ ಜತೆಗೆ ಜಿಲ್ಲೆಯ ಬಿಜೆಪಿ ಶಾಸಕರಲ್ಲಿ ಯಾರಿಗೆ ಸಚಿವ ಸ್ಥಾನ ದೊರೆಯಲಿದೆ ಎಂಬ ರಾಜಕೀಯ ಲೆಕ್ಕಾಚಾರದ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. ಯಡಿಯೂರಪ್ಪ ಅವರ ಮುತುವರ್ಜಿ ಜತೆಗೆ ಸಂಘ-ಪರಿವಾರದ ಬಲ ಇರುವವರಿಗೆ ಸ್ಥಾನ ದೊರೆಯಲಿದೆ ಎನ್ನಲಾಗಿದೆ.

ನಿರಾಣಿ-ಚರಂತಿಮಠರಲ್ಲಿ ಯಾರಿಗೆ ಮಣೆ?: ಕಳೆದ 2008ರಿಂದ 2013ರ ವರೆಗಿನ ಬಿಜೆಪಿ ಸರ್ಕಾರದಲ್ಲಿ ಬೃಹತ್‌ ಕೈಗಾರಿಕೆ ಸಚಿವರಾಗಿ ಕೆಲಸ ಮಾಡಿದ ಬೀಳಗಿಯ ಶಾಸಕ ಮುರಗೇಶ ನಿರಾಣಿ, ಬಾಗಲಕೋಟೆಯ ಶತಮಾನ ಕಂಡ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ, ಶಾಸಕ ಡಾ| ವೀರಣ್ಣ ಚರಂತಿಮಠ ಹೆಸರು ಸಚಿವ ಸ್ಥಾನಕ್ಕೆ ಮುಂಚೂಣಿಯಲ್ಲಿವೆ. ಆದರೆ, ಸದ್ಯಕ್ಕೆ ಗೋವಿಂದ ಕಾರಜೋಳ ಅವರೊಬ್ಬರಿಗೆ ಸಚಿವ ಸ್ಥಾನ ಕೊಟ್ಟು, ಮುಂದೆ ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಯ ವೇಳೆ ಜಿಲ್ಲೆಯ ಮತ್ತೂಬ್ಬ ಶಾಸಕರಿಗೆ ಸಚಿವ ಸ್ಥಾನ ನೀಡಲು ಪರಿಗಣಿಸೋಣ ಎಂಬ ಮಾತು ಬಿಜೆಪಿ ರಾಜ್ಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿವೆ ಎಂಬ ಮಾತೂ ಕೇಳಿ ಬಂದಿವೆ.

ಆದರೆ, ಶಾಸಕರ ಬೆಂಬಲಿಗರು, ಹಿರಿಯರು ಬಾಗಲಕೋಟೆ ಜಿಲ್ಲೆ, ಬಿಜೆಪಿಯ ಭದ್ರಕೋಟೆಯಾಗಿದ್ದು, ಇಲ್ಲಿನ ಇಬ್ಬರಿಗೆ ಸಚಿವ ಸ್ಥಾನ ಕೊಡಬೇಕು. ಅಲ್ಲದೇ ದಲಿತ ನಾಯಕರಾಗಿರುವ ಗೋವಿಂದ ಕಾರಜೋಳರಿಗೆ ಉಪ ಮುಖ್ಯಮಂತ್ರಿ ಅಥವಾ ಪ್ರಮುಖ ಖಾತೆಯ ಜವಾಬ್ದಾರಿ ನೀಡಬೇಕು ಎಂಬ ಒತ್ತಡವನ್ನು ಹಲವರು ರಾಜ್ಯ ನಾಯಕರಿಗೆ ಹಾಕಿದ್ದಾರೆ ಎನ್ನಲಾಗಿದೆ.

ನಿಯೋಗ ಮೂಲಕ ತೆರಳಿದ ಪ್ರಮುಖರು: ಜಾತಿ ಲೆಕ್ಕಾಚಾರದ ಜತೆಗೆ ಪಕ್ಷನಿಷ್ಠೆ, ಪಕ್ಷ ಸಂಘಟನೆಗೆ ಬಲ ಕೊಡಬಲ್ಲ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ಕೊಡಬೇಕು. ಅಲ್ಲದೇ ಜಿಲ್ಲೆಯ ಪ್ರಮುಖ ಕಾರ್ಯಕರ್ತರಿಗೆ ನಿಗಮ ಮಂಡಳಿಯ ನೇಮಕಾತಿಯಲ್ಲಿ ಆದ್ಯತೆ ನೀಡಬೇಕು ಎಂಬ ಮನವಿ ಹೊತ್ತ ಹಲವರು, ಬಿಜೆಪಿಯ ಹಿರಿಯ ನಾಯಕರನ್ನು ಭೇಟಿ ಮಾಡಲು ಬೆಂಗಳೂರಿಗೆ ಪ್ರತ್ಯೇಕ ನಿಯೋಗ ಮೂಲಕ ತೆರಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

Advertisement

ಅಲ್ಲದೇ ಮಾಜಿ ಶಾಸಕ ಪಿ.ಎಚ್. ಪೂಜಾರ, ಬಸವೇಶ್ವರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರಿಗೆ ಪ್ರಮುಖ ಜವಾಬ್ದಾರಿ ಕೊಡಬೇಕು ಎಂದು ಕೇಳಿಕೊಳ್ಳಲು ಅವರ ಬೆಂಬಲಿಗರು ಪಕ್ಷದ ಹಿರಿಯರಿಗೆ ಮನವಿ ಮಾಡಿ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಧ್ವಜಾರೋಹಣ ಭಾಗ್ಯ ಯಾರಿಗೆ?: ಹಿಂದೆ ಸದಾನಂದಗೌಡ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಇತ್ತು. ಆಗ ಜಿಲ್ಲೆಯಿಂದ ಗೋವಿಂದ ಕಾರಜೋಳ ಹಾಗೂ ಮುರಗೇಶ ನಿರಾಣಿ ಇಬ್ಬರೂ ಸಚಿವರಾಗಿದ್ದರು. ಆದರೆ, ಜಿಲ್ಲಾ ಉಸ್ತುವಾರಿ ಹೊಣೆ ಯಾರಿಗೂ ಕೊಟ್ಟಿರಲಿಲ್ಲ. ಆ. 15ರ ಧ್ವಜಾರೋಹಣದ ಜವಾಬ್ದಾರಿ ಮಾತ್ರ ತಾತ್ಕಾಲಿಕವಾಗಿ ಮುರಗೇಶ ನಿರಾಣಿ ಅವರಿಗೆ ನೀಡಲಾಗಿತ್ತು. ಆಗ ಜಿಲ್ಲೆಯಲ್ಲಿ ಕಾರಜೋಳ ಮತ್ತು ನಿರಾಣಿ ಬಣಗಳು ಸೃಷ್ಟಿಯಾಗಿದ್ದವು. ಈಗ ರಾಜಕೀಯ ವಿದ್ಯಮಾನ ಬದಲಾಗಿವೆ. ರಹಸ್ಯ ಅಸಮಾಧಾನಗಳೇನೇ ಇದ್ದರೂ, ಸದ್ಯ ಬಿಜೆಪಿಯ ಎಲ್ಲ ಶಾಸಕರೂ ಒಗ್ಗಟ್ಟಾಗಿರುವಂತಿದ್ದಾರೆ. ಆದರೆ, ಸಚಿವ ಸ್ಥಾನದ ವಿಷಯದಲ್ಲಿ ಪೈಪೋಟಿ ಮಾತ್ರ ನಡೆಯುತ್ತಲೇ ಇದೆ.

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ಜಿಲ್ಲಾಡಳಿತದಿಂದ ನಡೆಯುವ ಧ್ವಜಾರೋಹಣ ನಡೆಸುವ ಸೌಭಾಗ್ಯ ಜಿಲ್ಲೆಯ ಯಾವ ಜನಪ್ರತಿನಿಧಿಗೆ ದೊರೆಯಲಿದೆ ಎಂಬ ಕುತೂಹಲ ಮೂಡಿದೆ. ಜಿಲ್ಲೆಯಿಂದ ಕಾರಜೋಳರೊಬ್ಬರೇ ಸಚಿವರಾದರೆ, ಅವರೇ ಜಿಲ್ಲೆಯ ಉಸ್ತುವಾರಿಯೂ ಆಗುವ ಸಾಧ್ಯತೆಯೇ ಹೆಚ್ಚು. ಒಂದು ವೇಳೆ ಜಿಲ್ಲೆಯ ಇಬ್ಬರು ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ದೊರೆತಲ್ಲಿ, ಅದು ಯಾರಿಗೆ ದೊರೆಯಲಿದೆ ಹಾಗೂ ಆ. 15ಕ್ಕೆ ಯಾರು ಧ್ವಜಾರೋಹಣ ಮಾಡಲಿದ್ದಾರೆ ಎಂಬ ಚರ್ಚೆ ಜಿಲ್ಲೆಯಲ್ಲಿ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next