Advertisement

ಕೋವಿಡ್ ಸೋಂಕಿಗೆ ಒಂದೇ ಕುಟುಂಬದ ನಾಲ್ವರು ಬಲಿ : ಅನಾಥವಾದ 9 ವರ್ಷದ ಪುತ್ರ

07:30 PM May 16, 2021 | Team Udayavani |

ಬಾಗಲಕೋಟೆ : ಕೊರೊನಾ 2ನೇ ಅಲೆ ಎಂಬ ಮಹಾ ಮಹಾರಿ ಒಂದೇ ಕುಟುಂಬದ ನಾಲ್ವರನ್ನು ಬಲಿ ಪಡೆದಿದ್ದು, ಅನಾಥನಾದ ಪುತ್ರ ವರ್ಷದ ಬಾಲಕನೀಗ ಅನಾಥವಾಗಿದ್ದಾನೆ.

Advertisement

ಕೊರೊನಾ 2ನೇ ಅಲೆ ಬಹಳಷ್ಟು ಜನರಿಗೆ ಇನ್ನಿಲ್ಲದ ತೊಂದರೆ ಕೊಡುತ್ತಿದೆ. ಮದುವೆ, ಮಕ್ಕಳೊಂದಿಗೆ ಸುಂದರ ಬದುಕು ನಡೆಸುತ್ತಿದ್ದವರ ಬಾಳಿಗೆ ಕೊಳ್ಳಿ ಇಡುತ್ತಿದೆ. ವಾರದ ಹಿಂದೆ ನೆಮ್ಮದಿಯ ಬದುಕು ನಡೆಸುತ್ತಿದ್ದವರ ಕುಟುಂಬಗಳೀಗ ಸಂಕಷ್ಟಕ್ಕೆ ಒಳಗಾಗುತ್ತಿದೆ. ತಂದೆ-ತಾಯಿ ಕಳೆದುಕೊಂಡು ಮಕ್ಕಳು ಅನಾಥವಾಗುತ್ತಿವೆ.

ಎರಡು ದಿನಗಳ ಹಿಂದೆ ನಗರದಲ್ಲೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ಒಂದೇ ಕುಟುಂಬದ ನಾಲ್ವರು ಕೊರೊನಾ ಎಂಬ ಮಾರಿಗೆ ಬಲಿಯಾಗಿದ್ದು, ಶಿಕ್ಷಕಿ ಹಾಗೂ ಸರ್ಕಾರಿ ಉದ್ಯೋಗಿ ದಂಪತಿಯ 9ನೇ ತರಗತಿಯ ಮಗ ಅನಾಥವಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಸಾಲಹಳ್ಳಿಯಲ್ಲಿ ವಾಸವಾಗಿದ್ದ ಜಿಲ್ಲೆಯ ದೇವನಾಳದ ಈ ಕುಟುಂಬದ ಆಧಾರಸ್ತಂಬಗಳೇ ಈಗ ಮಾಯವಾಗಿವೆ.

ಇದನ್ನೂ ಓದಿ :‘ಬ್ಲ್ಯಾಕ್ ಫಂಗಸ್’ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ : ಅರವಿಂದ ಕೇಜ್ರಿವಾಲ್

ನಾಲ್ವರು ದುರ್ಮರಣ :

Advertisement

ನಾಲ್ಕು ದಿನಗಳ ಅಂತರದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ತಂದೆ-ತಾಯಿ, ಮಗಳು ಹಾಗೂ ಪತಿ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಇವರೆಲ್ಲ ನಗರದ ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರಾದರೂ, ಚಿಕಿತ್ಸೆ ಫಲಿಸದೇ ಅಸುನೀಗಿದ್ದಾರೆ.

ಬಾಗಲಕೋಟೆ ತಾಲೂಕಿನ ದೇವನಾಳ ಗ್ರಾಮದ ವೆಂಕಟೇಶ ಒಂಟಗೋಡಿ ಮತ್ತು ರಾಜೇಶ್ವರಿ ಒಂಟಗೋಡಿ ಅವರದು ಚಿಕ್ಕ ಮತ್ತು ಚೊಕ್ಕದಾದ ಕುಟುಂಬ. ರಾಜೇಶ್ವರಿ ಸಾಲಹಳ್ಳಿಯಲ್ಲಿ ಶಿಕ್ಷಕಿಯಾಗಿದ್ದರೆ, ಪತಿ ವೆಂಕಟೇಶ ಅಲ್ಲಿಯೇ ಹಾಸ್ಟೇಲ್‌ಗಳ ಸೂಪರಿಡೆಂಟ್ (ಸರ್ಕಾರಿ ಉದ್ಯೋಗಿ) ಆಗಿ ಸೇವೆ ಸಲ್ಲಿಸುತ್ತಿದ್ದರು. ಮೂಲತಃ ದೇವನಾಳ ಗ್ರಾಮದ ಇವರು, ಹಲವು ವರ್ಷಗಳಿಂದ ಸಾಲಹಳ್ಳಿಯಲ್ಲೇ ವಾಸವಾಗಿದ್ದರು. ಕಳೆದ ಮೇ ೩ರಂದು ರಾಜೇಶ್ವರಿ (40) ಹಾಗೂ ಮೇ ೧೫ರಂದು ಪತಿ ವೆಂಕಟೇಶ ಒಂಟಗೋಡಿ(45) ಕೊರೊನಾ ಸೋಂಕಿಗೆ ಸುತ್ತಾಗಿ, ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

ಇನ್ನು ಶಿಕ್ಷಕಿಯಾಗಿದ್ದ ರಾಜೇಶ್ವರಿ ಅವರ ತಂದೆ ನಿವೃತ್ತ ಶಿಕ್ಷಕ, ಚಿಪ್ಪಲಕಟ್ಟಿ ಗ್ರಾಮದ ರಾಮನಗೌಡ ಉದಪುಡಿ (74) ಮತ್ತು ಪತ್ನಿ ಲಕ್ಷ್ಮಿಬಾಯಿ ರಾಮನಗೌಡ ಉದಪುಡಿ (68) ಅವರು ಸಾಲಹಳ್ಳಿಯಲ್ಲಿ ವಾಸವಾಗಿದ್ದರು. ಇವರಿಗೂ ಕೊರೊನಾ ಎಂಬ ಮಾರಿ ಮೈ ಸೇರಿಕೊಂಡಿತ್ತು. ಈ ನಾಲ್ವರೂ ನಗರದ ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಹೆತ್ತವರ ಅಂತ್ಯಕ್ರಿಯೆಗೂ ಭಾಗವಹಿಸಲಾಗದ ಸ್ಥಿತಿ :

ನಿವೃತ್ತ ಶಿಕ್ಷಕ ರಾಮನಗೌಡ ಉದಪುಡಿ ಮತ್ತು ಲಕ್ಷ್ಮಿಬಾಯಿ ಉದಪುಡಿ ಅವರಿಗೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಅದರಲ್ಲಿ ಓರ್ವ ಪುತ್ರ ಬೆಂಗಳೂರಿನಲ್ಲಿದ್ದರೆ, ಮತ್ತೊಬ್ಬ ಪುತ್ರ ಅಮೆರಿಕದಲ್ಲಿದ್ದಾರೆ. ಬೆಂಗಳೂರಿನಲ್ಲಿದ್ದ ಪುತ್ರ ಮಾತ್ರ ಬಾಗಲಕೋಟೆಗೆ ಬಂದಿದ್ದ. ಅಮೆರಿಕದಲ್ಲಿದ್ದ ಪುತ್ರ ನಿತ್ಯ ವಿಡಿಯೋ ಕಾಲ್ ಮೂಲಕ ತಂದೆ-ತಾಯಿ ಜತೆಗೆ ಆರಂಭದಲ್ಲಿ ಮಾತನಾಡಿದ್ದ. ಹೆತ್ತವರು ಅಸುನೀಗಿದಾಗ, ಕೊನೆ ಘಳಿಗೆಯಲ್ಲಿ ಅವರನ್ನು ನೋಡಬೇಕೆಂಬ ಪುತ್ರನ ಆಸೆಗೆ ಕೊರೊನಾ ಎಂಬ ಸೋಂಕು ಅಡ್ಡಿಯಾಯಿತು. ಹೀಗಾಗಿ ಅಮೆರಿಕದಲ್ಲಿರುವ ಪುತ್ರ, ಅಲ್ಲಿಯೇ ಕಣ್ಣೀರು ಹಾಕಿ, ತಂದೆ-ತಾಯಿಗೆ ಶ್ರದ್ಧಾಂಜಲಿ ಸಲ್ಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು.

ಅನಾಥವಾದ ಪುತ್ರ :

ಸಾಲಹಳ್ಳಿಯಲ್ಲಿ ನೆಲೆಸಿದ್ದ ದೇವನಾಳದ ವೆಂಟಕೇಶ ಮತ್ತು ರಾಜೇಶ್ವರಿ ಅವರಿಗೆ ಓರ್ವ ಪುತ್ರ ಮಾತ್ರವಿದ್ದು, ಆತ 9ನೇ ತರಗತಿಯಲ್ಲಿ ಓದುತ್ತಿದ್ದಾನೆ. ಒಂದೇ ವಾರದಲ್ಲಿ ತಾಯಿ ಮತ್ತು ತಂದೆಯನ್ನು ಕಳೆದುಕೊಂಡ ಆ ಬಾಲಕ, ಈಗ ಅನಾಥವಾಗಿದ್ದಾನೆ. ಈ ಪ್ರಸಂಗವನ್ನು ನೆನಸಿಕೊಂಡರೆ, ಕರಳು ಹಿಂಡುತ್ತಿದೆ ಎನ್ನುತ್ತಾರೆ ಇವರ ಸಂಬಂಽಯೂ ಆಗಿರುವ ಜಿಲ್ಲಾ ಗ್ರಾಹಕರ ಆಯೋಗದ ಸದಸ್ಯ ರಂಗನಗೌಡ ದಂಡನ್ನವರ.

Advertisement

Udayavani is now on Telegram. Click here to join our channel and stay updated with the latest news.

Next