Advertisement

ಯುಕೆಪಿಗೆ ಈಗಲಾದರೂ ಸಿಗುತ್ತಾ ವೇಗ!

10:59 AM Jul 31, 2019 | Naveen |

ಶ್ರೀಶೈಲ ಬಿರಾದಾರ
ಬಾಗಲಕೋಟೆ: ಮೈತ್ರಿ ಸರ್ಕಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದ್ದ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತಕ್ಕೆ ಬಿಜೆಪಿ ಸರ್ಕಾರದಲ್ಲಾದರೂ ವೇಗ ಸಿಗುತ್ತದೆಯಾ ಎಂದು ಈ ಭಾಗದ ರೈತರು, ನೀರಾವರಿ ಹೋರಾಟಗಾರರು ಕಾತರರಾಗಿದ್ದಾರೆ.

Advertisement

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ನೀರಾವರಿ ಯೋಜನೆ ಕಾಲುವೆ ನಿರ್ಮಾಣದಲ್ಲಿ ಒಂದಷ್ಟು ವೇಗ ಕಂಡಿದ್ದ ಈ ಯೋಜನೆ, ಭೂ ಸ್ವಾಧೀನ ವಿಷಯದಲ್ಲಿ ಭಾರಿ ಹಿನ್ನಡೆ ಅನುಭವಿಸಿತ್ತು. ಅದಕ್ಕೆ ಹೊಸ ಭೂ ಸ್ವಾಧೀನ ಕಾಯ್ದೆ ಸಹಿತ ಹಲವು ಕಾರಣಗಳನ್ನು ನೀಡಲಾಗಿತ್ತು. ಸರ್ಕಾರದ ವಿಳಂಬ ನೀತಿಯಿಂದ 3ನೇ ಹಂತದಲ್ಲಿ ಸ್ವಾಧೀನಗೊಳ್ಳಲಿದ್ದ ಭೂಮಿ ವಶಪಡಿಸಿಕೊಳ್ಳಲು ನಡೆಸಿದ ಪ್ರಕ್ರಿಯೆಗಳ ಅಧಿಸೂಚನೆಗಳು ರದ್ದುಗೊಂಡವು. ಹೀಗಾಗಿ ರದ್ದುಗೊಂಡ ಅಧಿಸೂಚನೆಗಳನ್ನು ಪುನಃ ಆರಂಭಿಸಿ, ಸ್ವಾಧೀನ, ಕಾಲುವೆ ನಿರ್ಮಾಣ, ಪುನರ್‌ವಸತಿ, ಪುನರ್‌ ನಿರ್ಮಾಣ ಕಾರ್ಯಕ್ಕೆ ವೇಗ ನೀಡಬೇಕಿದೆ.

ನೀರು ಕೊಟ್ಟು 9 ವರ್ಷ: ಕೃಷ್ಣಾ ನ್ಯಾಯಾಧಿಕರಣ ಎ ಸ್ಕೀಂ ನಡಿ 173 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದ್ದು, 519.60 ಮೀಟರ್‌ವರೆಗೆ ಆಲಮಟ್ಟಿ ಜಲಾಶಯದಲ್ಲಿ ನೀರು ಸಂಗ್ರಹಿಸಿ, ಬಳಸಲು ಅನುಮತಿ ಕೊಟ್ಟಿತ್ತು. ಆ ನೀರಿನಲ್ಲೇ ಈವರೆಗೆ ಕರ್ನಾಟಕ ಕೇವಲ 119 ಟಿಎಂಸಿ ಮಾತ್ರ ಸದ್ಭಳಕೆ ಮಾಡಿಕೊಂಡಿದೆ ಎಂಬ ಮಾತಿದೆ. ಅಲ್ಲದೇ ಕಳೆದ 2010ರ ಡಿಸೆಂಬರ್‌ 30ರಂದು ನ್ಯಾಯಾಧಿಕರಣದ ಅಂತಿಮ ತೀರ್ಪು ಬಂದಿದ್ದು, ರಾಜ್ಯಕ್ಕೆ 177 ಟಿಎಂಸಿ ನೀರು ಹಂಚಿಕೆ ಮಾಡಿ, ಆಲಮಟ್ಟಿ ಜಲಾಶಯವನ್ನು 524.256 ಮೀಟರ್‌ಗೆ ಎತ್ತರಿಸಲು ಅನುಮತಿ ಕೊಟ್ಟಿದೆ. 177 ಟಿಎಂಸಿ ಅಡಿ ನೀರು ಕೊಟ್ಟು, 9 ವರ್ಷವಾದರೂ ಈ ವರೆಗೆ ನೀರು ಬಳಕೆ ಮಾಡಿಕೊಂಡಿಲ್ಲ. (2010ರಿಂದ 50 ವರ್ಷದೊಳಗೆ ಸಂಪೂರ್ಣ ನೀರು ಬಳಸಿಕೊಳ್ಳಲು ನ್ಯಾಯಾಧಿಕರಣ ಸೂಚನೆ ಕೂಡ ಕೊಟ್ಟಿದೆ) ಬೇಸಿಗೆಯಲ್ಲಿ ಕೊಯ್ನಾದಿಂದ ನೀರು ಬಿಡಿ ಎಂದು ಮಹಾರಾಷ್ಟ್ರದತ್ತ ಬೇಡಿಕೆ ಇಡುವುದು ತಪ್ಪಿಲ್ಲ.

ಯೋಜನಾ ವೆಚ್ಚ ಮೂರು ಪಟ್ಟು ಹೆಚ್ಚಳ: ಇಡೀ ರಾಜ್ಯದಲ್ಲೇ ಅತಿ ದೊಡ್ಡ ನೀರಾವರಿ ಯೋಜನೆ ಎಂಬ ಹೆಸರು ಯುಕೆಪಿಗಿದೆ. 3ನೇ ಹಂತದಲ್ಲಿ 1,23,640 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕು. 94,640 ಎಕರೆ ಹಿನ್ನೀರಿನಲ್ಲಿ ಮುಳುಗಡೆಯಾದರೆ, 4,315 ಎಕರೆ ಪುನರ್‌ ವಸತಿ ಕೇಂದ್ರಗಳ ನಿರ್ಮಾಣಕ್ಕಾಗಿ ಅಗತ್ಯವಿದೆ. ಕಾಲುವೆ ನಿರ್ಮಾಣಕ್ಕಾಗಿ 24,685 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕು. ಹೀಗೆ 12 ಗ್ರಾಮಗಳು ಪೂರ್ಣ, 10 ಗ್ರಾಮಗಳು ಭಾಗಶಃ ಮುಳುಗಡೆಯಾಗುವ ಜತೆಗೆ 1,23,640 ಎಕರೆ ಭೂಮಿ, ಆಲಮಟ್ಟಿ ಜಲಾಶಯ 524.256 ಮೀಟರ್‌ಗೆ ಎತ್ತರಿಸಿದಾಗ ಕಳೆದುಕೊಳ್ಳಬೇಕಾಗುತ್ತದೆ. ಈ 3ನೇ ಹಂತದ ಯೋಜನೆಗೆ 2012ರ ಜನವರಿ 24ರಂದು 17,206.39 ಕೋಟಿ ಮೊತ್ತದ ಸಮಗ್ರ ಯೋಜನಾ ವರದಿಗೆ ಅಂದಿನ ಬಿಜೆಪಿ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೀಗ ಈ ಯೋಜನಾ ವೆಚ್ಚದ ಮೂರು ಪಟ್ಟು ಹೆಚ್ಚಳವಾಗಿದೆ. ಭೂಸ್ವಾಧೀನಕ್ಕಾಗಿಯೇ 50 ಸಾವಿರ ಕೋಟಿ ಅನುದಾನ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next