Advertisement

ಸಿಂಗಾಪುರ ವಿರುದ್ಧ  ಸೋತ ಭಾರತ

12:30 AM Mar 21, 2019 | Team Udayavani |

ಹಾಂಕಾಂಗ್‌: ಏಶ್ಯನ್‌ ಮಿಕ್ಸೆಡ್‌ ಟೀಮ್‌ ಬ್ಯಾಡ್ಮಿಂಟನ್‌ ಕೂಟದಲ್ಲಿ ಎಚ್‌.ಎಸ್‌. ಪ್ರಣಯ್‌ ಮತ್ತು ಪುರುಷರ ಡಬಲ್ಸ್‌ ಜೋಡಿ ಎಂ.ಆರ್‌. ಅರ್ಜುನ್‌-ಶ್ಲೋಕ್‌ ರಾಮಚಂದ್ರನ್‌ ಅವರ ಅತ್ಯುತ್ತಮ ಪ್ರದರ್ಶನದ ನಡುವೆಯೂ ಭಾರತ “ಬಿ’ ಗುಂಪಿನಲ್ಲಿ ಸಿಂಗಾಪುರ ವಿರುದ್ಧದ ಪಂದ್ಯವನ್ನು 2-3 ಅಂತರದಲ್ಲಿ ಕಳೆದುಕೊಂಡಿದೆ.

Advertisement

ಭಾರತ 5 ಪಂದ್ಯಗಳ ಈ ಸ್ಪರ್ಧೆಯನ್ನು ಉತ್ತಮ ರೀತಿಯಲ್ಲಿ ಆರಂಭಿಸುವಲ್ಲಿ ಎಡವಿತು. ಮೊದಲ ಪಂದ್ಯದಲ್ಲಿ ಮಿಕ್ಸೆಡ್‌ ಡಬಲ್ಸ್‌ ಜೋಡಿ ಎಂ.ಆರ್‌. ಅರ್ಜುನ್‌-ಋತುಪರ್ಣ ಪಾಂಡ 16-21, 13-21 ಗೇಮ್‌ಗಳಿಂದ ಸಿಂಗಾಪುರದ ಡೆನ್ನು ಬಾವಾ ಕ್ರಿಸ್‌ನಂಟಾ-ಟಾನ್‌ ವಿಯೀ ಹುನ್‌ ಜೋಡಿ ವಿರುದ್ಧ ಸೋತಿತು. ಅನಂತರ ನಡೆದ ಪುರುಷರ ಸಿಂಗಲ್ಸ್‌ ಸ್ಪರ್ಧೆಯಲ್ಲಿ ಎಚ್‌.ಎಸ್‌. ಪ್ರಣಯ್‌ ಭಾರತಕ್ಕೆ ಸಂಭ್ರಮ ಮೂಡಿಸಿದರು. ಅವರು 21-18, 12-21, 21-17 ಗೇಮ್‌ಗಳಿಂದ ಥಾಯ್ಲೆಂಡ್‌ ಮಾಸ್ಟರ್ ಚಾಂಪಿಯನ್‌ ಕೀನ್‌ ಯೂವ್‌ ಲೊಹ್‌ಗೆ ಸೋಲುಣಿಸಿದರು.

ಬಳಿಕ ಅರ್ಜುನ್‌-ಶ್ಲೋಕ್‌ ಪುರುಷರ ಡಬಲ್ಸ್‌ ಸ್ಪರ್ಧೆಯಲ್ಲಿ ಲೊಹ್‌ ಕೀನ್‌ ಹಿನ್‌-ಕ್ರಿಸ್‌ನಂಟಾ ಅವರನ್ನು 21-16, 21-18 ನೇರ ಗೇಮ್‌ಗಳಿಂದ ಸೋಲಿಸಿ ಭಾರತಕ್ಕೆ 2-1 ಮುನ್ನಡೆ ತಂದುಕೊಟ್ಟರು.

ವನಿತಾ ಸ್ಪರ್ಧೆಯಲ್ಲಿ ವಿಫ‌ಲ
ವನಿತಾ ಸಿಂಗಲ್ಸ್‌ ಮತ್ತು ಡಬಲ್ಸ್‌ ಸ್ಪರ್ಧೆಯಲ್ಲಿ ಭಾರತ ಗೆಲುವು ಸಾಧಿಸಲು ವಿಫ‌ಲವಾಯಿತು. ಸಿಂಗಲ್ಸ್‌ ಸ್ಪರ್ಧೆಯಲ್ಲಿ ಯುವ ಆಟಗಾರ್ತಿ ಅಶ್ಮಿತಾ ಚಾಲಿಹಾ ಭಾರೀ ಹೋರಾಟದ ಬಳಿಕ 21-17, 12-21, 16-21 ಗೇಮ್‌ಗಳಿಂದ ಯೋ ಜಿಯಾ ಮಿನ್‌ ವಿರುದ್ಧ ಸೋತರು. ವನಿತಾ ಡಬಲ್ಸ್‌ ಸ್ಪರ್ಧೆಯಲ್ಲಿ ಆರತಿ ಸಾರಾ ಸುನೀಲ್‌-ಋತುಪರ್ಣ ಪಾಂಡ ಜೋಡಿ ಪುಟ್ರಿ ಸಾರಿ ಡೆವಿ ಸಿಟ್ರಾ-ಲಿಮ್‌ ಮಿಂಗ್‌ ಹುಯಿ ಎದುರು 24-22, 15-21, 16-21 ಗೇಮ್‌ಗಳಿಂದ ಮುಗ್ಗರಿಸಿದರು.

ಈ ಸೋಲಿನಿಂದ ಭಾರತ “ಬಿ’ ಗುಂಪಿನಲ್ಲಿ ಕೆಳ ಸ್ಥಾನದಲ್ಲಿದೆ. ಚೈನೀಸ್‌ ತೈಪೆ ಮತ್ತು ಸಿಂಗಾಪುರ ಅಗ್ರ ಎರಡು ಸ್ಥಾನದಲ್ಲಿದೆ. ಗುರುವಾರ ಭಾರತ ತಂಡ ಚೈನೀಸ್‌ ತೈಪೆಯನ್ನು ಎದುರಿಸಲಿದೆ. ಇಲ್ಲಿ ಜಯ ಸಾಧಿಸುವುದು ಭಾರತಕ್ಕೆ ಅನಿವಾರ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next