Advertisement

ಹಿನ್ನೀರು ಪ್ರವಾಸೋದ್ಯಮ ಅಭಿವೃದ್ಧಿಗೆ ಸಕಾಲ

03:51 PM Mar 18, 2018 | |

ರಾಜ್ಯ ಸರಕಾರ ಕರಾವಳಿಯಲ್ಲಿ ಹಿನ್ನೀರು ಪ್ರದೇಶಗಳಲ್ಲಿ ಜಲ ಪ್ರವಾಸೋದ್ಯಮ ಅಭಿವೃದ್ಧಿಗೆ ಬಜೆಟ್‌ನಲ್ಲಿ ಒಂದಷ್ಟು ಪೂರಕ ಕ್ರಮಗಳನ್ನು ಪ್ರಕಟಿಸಿದೆ. ಕರಾವಳಿ ಭಾಗದಲ್ಲಿ ಜಲಸಾಗರ ಪ್ರವಾಸೋದ್ಯಮಕ್ಕೆ ಸರಕಾರದ ವತಿಯಿಂದ ಉತ್ತೇಜನ ಬಹಳಷ್ಟು ವರ್ಷಗಳ ಬೇಡಿಕೆಯೂ ಆಗಿತ್ತು. ಈಗ ಸರಕಾರ ಹಿನ್ನೀರುಗಳಲ್ಲಿ ಬೋಟ್‌ಹೌಸ್‌ಗಳ ಸ್ಥಾಪನೆಗೆ ಬಜೆಟ್‌ನಲ್ಲಿ ಪ್ರೋತ್ಸಾಹದಾಯಕ ಕ್ರಮಗಳನ್ನು ಘೋಷಿಸಿದ್ದು, ಹಿನ್ನೀರುಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲು ಇದು ಸಕಾಲವಾಗಿದೆ.

Advertisement

ಮಂಗಳೂರು ನಗರದ ಇಕ್ಕೆಲಗಳಲ್ಲಿ ನೇತ್ರಾವತಿ ಮತ್ತು ಫಲ್ಗುಣಿ ನದಿಗಳು ಹರಿಯುತ್ತಿವೆ. ಎರಡೂ ನದಿಗಳ ಬದಿಗಳಲ್ಲಿ ಹಿನ್ನೀರುಗಳಲ್ಲಿ ಒಂದಷ್ಟು ರಮಣೀಯ ತಾಣಗಳಿವೆ. ನದಿ ಮಧ್ಯಭಾಗದಲ್ಲಿ ದಟ್ಟ ಹಸಿರಿನಿಂದ ಕೂಡಿದ ಸುಂದರ ಕುದ್ರುಗಳು ಆಕರ್ಷಿಸುತ್ತಿವೆ. ಆದರೆ ಕೆಲವು ತಾಣಗಳನ್ನು ಹೊರತುಪಡಿಸಿದರೆ ಉಳಿದಂತೆ ಇರುವ ಅವಕಾಶಗಳನ್ನು ಬಳಸಿಕೊಂಡಿಲ್ಲ.

ಮಂಗಳೂರಿನಲ್ಲಿ ಅವಕಾಶಗಳು
ನೇತ್ರಾವತಿ ನದಿ ಹರಿಯುತ್ತಿರುವ ಅಡ್ಯಾರ್‌ನಿಂದ ಅಳಿವೆ ಬಾಗಿಲು ವರೆಗಿನ ಹಾಗೂ ಫಲ್ಗುಣಿ ನದಿ ಹರಿಯುತ್ತಿರುವ ಗುರುಪುರದಿಂದ ತಣ್ಣೀರು ಬಾವಿಯವರೆಗಿನ ಪ್ರದೇಶದಲ್ಲಿ ಹಲವಾರು ಕಡೆಗಳಲ್ಲಿ ನದಿ ಇಕ್ಕೆಲಗಳಲ್ಲಿ ಹಿನ್ನೀರಿನಲ್ಲಿ ಸುಂದರ ಪ್ರಕೃತಿ ತಾಣಗಳಿವೆ. ಬೋಟ್‌ ಹೌಸ್‌ ಗಳು, ಪ್ರವಾಸೋದ್ಯಮ ತಾಣಗಳ ಸ್ಥಾಪನೆಗೆ ಈ ಪ್ರದೇಶಗಳು ಅತ್ಯಂತ ಸೂಕ್ತವಾಗಿವೆ. ಕೇಂದ್ರ ಸರಕಾರ ಸಿಆರ್‌ಝಡ್‌ ನಿಯಮ ಪರಿಷ್ಕರಣೆಯಲ್ಲೂ ಸಾಗರ ಪ್ರವಾಸೋದ್ಯಮಕ್ಕೆ ಪೂರಕವಾಗಿ ಕೆಲವು ರಿಯಾಯಿತಿಗಳನ್ನು ನೀಡಲು ಮುಂದಾಗಿದೆ.

ಅಭಿವೃದ್ಧಿಗೆ ಚಿಂತನೆ
ಬೋಟು ಹೌಸ್‌ಗಳ ಜತೆಗೆ ನದಿಗಳ ಮಧ್ಯೆ ಇರುವ ಕಿರು ದ್ವೀಪಗಳು ಕೂಡ ಹಿನ್ನೀರು ಪ್ರದೇಶಗಳು ಪ್ರವಾಸೋದ್ಯಮಕ್ಕೆ ಪೂರಕವಾಗಿದೆ. ಕುದ್ರುಗಳೆಂದು ಕರೆಯಲ್ಪಡುವ ಈ ಕಿರು ದ್ವೀಪಗಳು ನದಿ ಮತ್ತು ಕರಾವಳಿ ಸನಿಹದಲ್ಲಿ ಸಮುದ್ರ ಮಧ್ಯದಲ್ಲಿ ಇವೆ. ಕೆಲವು ಕುದ್ರುಗಳನ್ನು ಪ್ರವಾಸೋದ್ಯಮ ತಾಣಗಳಾಗಿ ಅಭಿವೃದ್ಧಿಗೊಳಿಸುವ ಪ್ರಯತ್ನಗಳು ನಡೆದರೂ ಕೆಲವು ಕಾರಣಗಳಿಂದ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ. 

ಜಪ್ಪಿನಮೊಗರಿನ ನೇತ್ರಾವತಿ ನದಿಯಲ್ಲಿ ಹಾಗೂ ಮಂಗಳೂರಿನ ಹಳೇ ಬಂದರು ಪ್ರದೇಶದಲ್ಲಿ ಮೂರು ದ್ವೀಪಗಳಿವೆ. ಜಪ್ಪಿನಮೊಗರು ಕಡೆಕಾರಿನ ಬಳಿ ನೇತ್ರಾವತಿ ನದಿ ಮಧ್ಯದಲ್ಲಿರುವ ಸುಂದರ ಕುದ್ರು ಗಮನ ಸೆಳೆಯುತ್ತಿವೆ. ಇದನ್ನು ಪ್ರವಾಸಿ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ 2011ರಲ್ಲಿ ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆ ಆಸಕ್ತಿ ವಹಿಸಿ ಪರಿಶೀಲನೆ ಕೂಡ ಆಗಿದ್ದು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಸಿದ್ಧತೆಗಳಾಗಿತ್ತು. ದ್ವೀಪಕ್ಕೆ ಬೋಟು ಸೌಲಭ್ಯಕ್ಕೂ ಚಾಲನೆ ನೀಡಲಾಗಿತ್ತು. ಆದರೆ ಮುಂದಕ್ಕೆ ಯಾವುದೇ ಪ್ರಗತಿಯಾಗಲಿಲ್ಲ. ಮಂಗಳೂರಿನ ಹಳೇ ಬಂದರು ಪ್ರದೇಶದಲ್ಲಿ ನೇತ್ರಾವತಿ ಮತ್ತು ಫಲ್ಗುಣಿ ನದಿಯಲ್ಲಿನ ಮೂರು ದ್ವೀಪಗಳನ್ನು ಪ್ರವಾಸಿ ಆಕರ್ಷಣಿಯ ತಾಣಗಳಾಗಿ ಅಭಿವೃದ್ಧಿ ಪಡಿಸುವ ಬಗ್ಗೆಯೂ ಚಿಂತನೆಗಳು ನಡೆದಿತ್ತು.

Advertisement

ನೀಲ ನಕಾಶೆ
ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ಜಲ ಪ್ರವಾಸೋದ್ಯಮ ಅಭಿವೃದ್ಧಿ ನೀಲ ನಕಾಶೆಯೊಂದು ಸಿದ್ದಗೊಳ್ಳುವ ಅವಶ್ಯಕತೆ ಇದೆ. ಸಮಗ್ರ ಸರ್ವೇ ಕಾರ್ಯ ನಡೆದು ಹಿನ್ನೀರು ಹಾಗೂ ಬೀಚ್‌ಗಳನ್ನು ಗುರುತಿಸುವ ಕಾರ್ಯ ನಡೆಯಬೇಕಾಗಿದೆ. ಹಿನ್ನೀರುಗಳಲ್ಲಿ ಯಾವುದೆಲ್ಲಾ ಪ್ರದೇಶಗಳು ಬೋಟ್‌ಹೌಸ್‌ ಪರಿಕಲ್ಪನೆಗೆ ಪೂರಕವಾಗಿವೆ, ಸಾಗರತೀರದಲ್ಲಿ ಯಾವುದೆಲ್ಲಾ ತಾಣಗಳು ಬೀಚ್‌ ಆಗಿ ಅಭಿವೃದ್ಧಿ ಪಡಿಸಲು ಸಾಧ್ಯವಿದೆ, ಹೇಗೆ ವೈವಿಧ್ಯವಾಗಿ ಇವುಗಳನ್ನು ವಿನ್ಯಾಸಗೊಳಿಸಬಹುದಾಗಿದೆ ಮತ್ತು ದೇಶವಿದೇಶಗಳಿಂದ ಪ್ರವಾಸಿಗರನು ಆಕರ್ಷಿಸಲು ಅನುಸರಿಸಬೇಕಾದ ತಂತ್ರಗಳು ಸೇರಿದಂತೆ ಸಮಗ್ರ ಯೋಜನೆಯನ್ನು ನೀಲನಕಾಶೆಯಲ್ಲಿ ರೂಪಿಸಬಹುದಾಗಿದೆ. 

ಶಾಶ್ವತ ಬೋಟ್‌ ಹೌಸ್‌
ಸಮುದ್ರ ತೀರದಲ್ಲಿ ಶಾಶ್ವತ ಕಟ್ಟಡಗಳನ್ನು ನಿರ್ಮಿಸಲು ಸಿಆರ್‌ಝಡ್‌ ನಿಯಮದಲ್ಲಿ ಅವಕಾಶವಿಲ್ಲ. ಆದರೆ ಪರಿಸರ ಸಹ್ಯ ಪ್ರವಾಸೋದ್ಯಮವನ್ನು ಇಲ್ಲಿ ಬೆಳೆಸಲು ಕೆಲವು ರಿಯಾಯಿತಿಗಳನ್ನು ನೀಡಲಾಗಿದೆ. ಕೇರಳ ಈ ಅವಕಾಶಗಳನ್ನು ಬಳಸಿಕೊಂಡಿದೆ. ಹಿನ್ನೀರುಗಳಲ್ಲಿ ಇರುವ ಬೋಟ್‌ ಹೌಸ್‌ಗಳು, ರೆಸಾರ್ಟ್‌ಗಳು ಇದಕ್ಕೆ ಉದಾಹರಣೆಯಾಗಿದೆ. ಇದಲ್ಲದೆ ಈಗ ಹಿನ್ನೀರುಗಳಲ್ಲಿ ಶಾಶ್ವತ ಬೋಟ್‌ ಹೌಸ್‌ ಎಂಬ ಹೊಸ ಪರಿಕಲ್ಪನೆ ಪ್ರವರ್ಧಮಾನಕ್ಕೆ ಬರುತ್ತಿದೆ. 

ಕೇರಳ, ಗೋವಾ ಮಾದರಿ
ಸಣ್ಣ ದ್ವೀಪ ಹಾಗೂ ಸಾಗರ ಮತ್ತು ಹಿನ್ನೀರು ಪ್ರವಾಸೋದ್ಯಮದಲ್ಲಿ ನಮ್ಮ ನೆರೆಯ ರಾಜ್ಯಗಳಾದ ಕೇರಳ ಹಾಗೂ ಗೋವಾ ರಾಜ್ಯಗಳ ಸಾಧನೆಯ ನಿದರ್ಶನ ನಮ್ಮ ಮುಂದಿವೆ. ಸಾಗರ ತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಿಆರ್‌ಝಡ್‌ ನಿಯಮಗಳು ಅಡಚಣೆಯಾಗುತ್ತಿವೆ ಎಂಬ ಮಾತುಗಳಿವೆ. ಆದರೆ ಪ್ರಸ್ತುತ ಇರುವ ಸಿಆರ್‌ ಝಡ್‌ ನಿಯಮಗಳನ್ನೇ ಪೂರಕವಾಗಿ ಬಳಸಿಕೊಂಡು ಕೇರಳ ಸಾಗರ ಹಾಗೂ ಹಿನ್ನೀರು ಪ್ರವಾಸೋದ್ಯಮ ಅಭಿವೃದ್ದಿ ಪಡಿಸಿ ದೇಶ ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಇಲ್ಲಿ 8 ಸಣ್ಣ ದ್ವೀಪಗಳು ಪ್ರವಾಸೋದ್ಯಮ ಕೇಂದ್ರಗಳಾಗಿ ಅಭಿವೃದ್ಧಿ ಹೊಂದಿ ಪ್ರವಾಸಿ ತಾಣಗಳಾಗಿವೆ. ಕೊಚ್ಚಿ ಸಮೀಪ ವೈಪಿನ್‌ ದ್ವೀಪ, ಗುಂಡು ದ್ವೀಪ, ವಿಲಿಂಗ್ಟನ್‌ ದ್ವೀಪ, ಬೊಲ್ಗಟ್‌ ದ್ವೀಪ, ಕಣ್ಣೂರು ಸಮೀಪದ ಧರ್ಮಾದಂ ಐಲ್ಯಾಂಡ್‌, ಕವ್ವಯಿ ದ್ವೀಪ, ಅಲಪುಜಾದ ಕಕ್ಯತುರ್ತು ದ್ವೀಪ, ತಿರುವನಂತಪುರ ಸಮೀಪದ ಪೂವರ್‌ ದ್ವೀಪ, ವರ್ಕಲಂನ ಪೊನ್ನುಂತುರುತು ದ್ವೀಪ, ಕೊಲ್ಲಂ ಸಮೀಪದ ಮುನ್ರೋ  ದ್ವೀಪ ಪ್ರವಾಸಿ ಕೇಂದ್ರಗಳಾಗಿ ದೇಶದ ಪ್ರವಾಸೋದ್ಯಮ ನಕಾಶೆಯಲ್ಲಿ ಗುರುತಿಸಿಕೊಂಡಿವೆ .

ಕೇಶವ ಕುಂದರ್‌ 

Advertisement

Udayavani is now on Telegram. Click here to join our channel and stay updated with the latest news.

Next