Advertisement

ಮತ್ತೆ ಜಾಹೀರಾತು ಫ‌ಲಕಗಳ ಪರ್ವ

12:59 AM Aug 08, 2019 | Team Udayavani |

ಬೆಂಗಳೂರು: ನಗರಾಭಿವೃದ್ಧಿ ಇಲಾಖೆ ರೂಪಿಸಿರುವ “ಬಿಬಿಎಂಪಿ ಜಾಹೀರಾತು ಕರಡು-2019’ಕ್ಕೆ ಆಕ್ಷೇಪಣೆ ಸಲ್ಲಿಸಲು ಇದ್ದ ಕೊನೆಯ ಅವಕಾಶವನ್ನೂ ಬಿಬಿಎಂಪಿ ಕಳೆದುಕೊಂಡಿದೆ. ಇದರಿಂದ ಇನ್ನು ಮುಂದೆ ನಗರದಲ್ಲಿ ಮತ್ತೆ ಎಲ್ಲೆಂದರಲ್ಲಿ ಜಾಹೀರಾತು ಫ‌ಲಕಗಳು ತಲೆ ಎತ್ತುವ ಸಾಧ್ಯತೆ ಇದ್ದು, ನಗರಾಭಿವೃದ್ಧಿ ಇಲಾಖೆಯ ಹೊಸ ಕರಡಿನಲ್ಲಿ ರಾಜಭವನ, ವಿಧಾನಸೌಧ ಮತ್ತು ವಿಕಾಸಸೌಧ ಸೇರಿದಂತೆ ಪ್ರಮುಖ ನಿಷೇಧಿತ ಸ್ಥಳಗಳಲ್ಲೂ ಜಾಹೀರಾತು ಫ‌ಲಕ ಅಳವಡಿಸಲು ಅವಕಾಶ ಕಲ್ಪಿಸಲಾಗಿದೆ.

Advertisement

ಬಿಬಿಎಂಪಿ ರಚಿಸಿದ್ದ “ಹೊರಾಂಗಣ ಸೈನೇಜ್‌ ಮತ್ತು ಸಾರ್ವಜನಿಕ ಸಂದೇಶ ನೀತಿ ಹಾಗೂ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ-2018′ ಕಡೆಗಣಿಸಿ, ನಗರಾಭಿವೃದ್ಧಿ ಇಲಾಖೆ ಹೊಸ ಕರಡು ರಚಿಸಿದೆ. ನಗರಾಭಿವೃದ್ಧಿ ಇಲಾಖೆಯ ಈ ನಡೆ ಪಾಲಿಕೆ ಮತ್ತು ನಗರಾಭಿವೃದ್ಧಿ ಇಲಾಖೆಯ ನಡುವೆ ಸಂರ್ಘ‌ಷಕ್ಕೂ ಕಾರಣವಾಗಿದೆ.

ನಗರಾಭಿವೃದ್ಧಿ ಇಲಾಖೆಯು ಜು.24ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ “ಬಿಬಿಎಂಪಿ ಜಾಹೀರಾತು ಕರಡು-2019′ ನಿಯಮವನ್ನು ಪ್ರಕಟಿಸಿತ್ತು. ಇದಕ್ಕೆ 15 ದಿನಗಳ ಒಳಗಾಗಿ ಆಕ್ಷೇಪಣೆಗಳನ್ನು ಸಲ್ಲಿಸುವುದಕ್ಕೆ ಕಲಾವಕಾಶವನ್ನೂ ನೀಡಿತ್ತು. ಇದರ ಅನ್ವಯ ಆ.8ರ ಒಳಗಾಗಿ ಆಕ್ಷೇಪಣೆ ಸಲ್ಲಿಸಬೇಕಾಗಿತ್ತು. ಈ ಸಂಬಂಧ ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕಿತ್ತು.

ನಗರಾಭಿವೃದ್ಧಿ ಇಲಾಖೆಯ ತೀರ್ಮಾನವನ್ನು ವಿರೋಧಿಸಲು ಹಾಗೂ ಜಾಹೀರಾತು ನಿಯಮಾವಳಿ ಬಗ್ಗೆ ಚರ್ಚೆ ಮಾಡುವುದಕ್ಕಾಗಿಯೇ ಬಿಬಿಎಂಪಿ ಜು.29ರಂದು ವಿಶೇಷ ಕೌನ್ಸಿಲ್‌ ಸಭೆಯನ್ನೂ ಕರೆದಿತ್ತು. ಜತೆಗೆ ಜು.30ರಂದು ನಡೆದ ಕೌನ್ಸಿಲ್‌ ಸಭೆಯಲ್ಲೂ ಈ ಬಗ್ಗೆ ಸುದೀರ್ಘ ಚರ್ಚೆ ನಡೆದಿತ್ತು. ಸಭೆಯಲ್ಲಿ ಜಾಹೀರಾತು ಕರಡಿಗೆ ಎಲ್ಲ ಪಕ್ಷದ ಸದಸ್ಯರೂ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಯಾವುದೇ ನಿರ್ಣಯ ತೆಗೆದುಕೊಂಡಿರಲಿಲ್ಲ.

ಆದರೆ, ಮೈತ್ರಿ ಸರ್ಕಾರದ ಅವಧಿಯಲ್ಲಿ ರಚನೆಯಾಗಿದ್ದ “ಬಿಬಿಎಂಪಿ ಜಾಹೀರಾತು ಕರಡು -2019’ಕ್ಕೆ ಆಡಳಿತ ಪಕ್ಷದ ಕೆಲವು ನಾಯಕರು ಪರೋಕ್ಷವಾಗಿ ಬೆಂಬಲಿಸಿದ್ದರು. ಒಮ್ಮತದ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗದೆ ಇರುವುದರಿಂದ ಮತ್ತೆ ಸಭೆ ಕರೆಯಲಾಗುವುದು ಎಂದು ಪಾಲಿಕೆಯ ಆಡಳಿತ ಪಕ್ಷದ ನಾಯಕರು ಹೇಳಿದ್ದರು. ಆದರೆ, ಈಗ ಸಭೆಯನ್ನೂ ಕರೆಯದೆ, ಪಾಲಿಕೆಯಲ್ಲಿ ಯಾವ ನಿರ್ಣಯವನ್ನೂ ತೆಗೆದುಕೊಳ್ಳದೆ ಪರೋಕ್ಷವಾಗಿ ಹೊಸ ಬೈಲಾ ಜಾರಿಗೆ ಬರುವಂತಾಗಿದೆ.

Advertisement

ಆಡಳಿತ ಪಕ್ಷದ ವಾದವೇನು?: ಈಗಾಗಲೇ ಬಿಬಿಎಂಪಿ ಜಾಹೀರಾತು ಬೈಲಾ ಸಿದ್ಧಪಡಿಸಿ ಜಾರಿ ಮಾಡಿದೆ. ಅದರಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗುವ ಸ್ಕೈ ವಾಕ್‌, ಬಸ್‌ ನಿಲ್ದಾಣ ಹಾಗೂ ಶೌಚಾಲಯಗಳ ಬಳಿ ಖಾಸಗಿ ಜಾಹೀರಾತಿಗೆ ಅವಕಾಶ ನೀಡಿದೆ. ಈ ಕುರಿತು ಚರ್ಚೆಯಾಗಬೇಕಿದೆ.

ವಿರೋಧ ಪಕ್ಷದ ವಾದವೇನು?: ಜಾಹೀರಾತು ಮಾಫಿಯಾಗೆ ಸಹಾಯ ಮಾಡುವ ಉದ್ದೇಶದಿಂದಲೇ ನಿರ್ಣಯ ತೆಗೆದುಕೊಳ್ಳುವುದಕ್ಕೆ ಆಡಳಿತ ಪಕ್ಷ ನಗರಾಭಿವೃದ್ಧಿ ಇಲಾಖೆ ರಚಿಸಿದ್ದ ಜಾಹೀರಾತು ಕರಡು ಬಗ್ಗೆ ಆಕ್ಷೇಪಣೆ ಸಲ್ಲಿಸಲು ತಡಮಾಡಿದೆ. ಆ ಮೂಲಕ ನಗರಾಭಿವೃದ್ಧಿ ಇಲಾಖೆ ರೂಪಿಸಿರುವ ಕರಡು ಜಾರಿಗೆ ಪರೋಕ್ಷ ಬೆಂಬಲ ನೀಡಿದೆ.

ಜಾಹೀರಾತಿಗೆ ಸಂಬಂಧಿಸಿದಂತೆ ಪಾಲಿಕೆ ಸಭೆಯಲ್ಲಿ ಬಿಬಿಎಂಪಿ ಸದಸ್ಯರು ಚರ್ಚೆ ಮಾಡಿರುವ ಸಂಪೂರ್ಣ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ.
-ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

ಜಾಹೀರಾತು ಮಾಫಿಯಾದೊಂದಿಗೆ ಆಡಳಿತ ಪಕ್ಷದ ಸದಸ್ಯರು ನೇರವಾಗಿ ಶಾಮೀಲಾಗಿದ್ದಾರೆ. ಈ ಉದ್ದೇಶದಿಂದಲೇ ನಿರ್ಣಯ ತೆಗೆದುಕೊಂಡಿಲ್ಲ. ಇದನ್ನು ಸರ್ಕಾರದ ಗಮನಕ್ಕೆ ತರಲಾಗುವುದು.
-ಪದ್ಮನಾಭ ರೆಡ್ಡಿ, ವಿರೋಧ ಪಕ್ಷದ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next