ಹೊಸದಿಲ್ಲಿ : ಆಳುವ ಬಿಜೆಪಿಗೆ ಭಾರೀ ದೊಡ್ಡ ಹಿನ್ನಡೆ ಎಂಬಂತೆ ಹಿರಿಯ ಬಿಜೆಪಿ ನಾಯಕರಾದ ಲಾಲಕೃಷ್ಣ ಆಡ್ವಾಣಿ, ಮುರಳೀ ಮನೋಹರ ಜೋಷಿ, ಉಮಾ ಭಾರತಿ ಮತ್ತು ಇತರ ಅನೇಕರು ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಂಚಿನ ಆರೋಪಕ್ಕಾಗಿ ವಿಚಾರಣೆಯನ್ನು ಎದುರಿಸಬೇಕು ಎಂದು ಇಂದು ಬುಧವಾರ ಸುಪ್ರೀಂ ಕೋರ್ಟ್ ಹೇಳಿದೆ.
ಆದರೆ ಇದೇ ವೇಳೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ರಾಜಸ್ಥಾನದ ಹಾಲಿ ರಾಜ್ಯಪಾಲರಾಗಿರುವ ಕಲ್ಯಾಣ್ ಸಿಂಗ್ ಅವರಿಗೆ ಸಾಂವಿಧಾನಿಕ ರಕ್ಷಣೆ ಇರುವುದರಿಂದ ಅವರನ್ನು ಬಾಬರಿ ಮಸೀದಿ ಧ್ವಂಸ ಪ್ರಕರಣದ ಸಂಚಿನ ಆರೋಪದ ವಿಚಾರಣೆಯಿಂದ ವಿನಾಯಿತಿ ನೀಡಿದೆ. ರಾಜ್ಯಪಾಲರಾಗಿ ಅವರ ಅಧಿಕಾರಾವಧಿಯು ಮುಗಿದ ಬಳಿಕ ಅವರು ಕೂಡ ಸಂಚಿನ ಆರೋಪದ ವಿಚಾರಣೆಯನ್ನು ಎದುರಿಸಬೇಕಾಗುವುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಸಂಚಿನ ವಿಚಾರಣೆಯ ವೇಳೆ ಪ್ರಕರಣದ ಮುಂದೂಡಿಕೆಯನ್ನು (adjournment) ಸಾಮಾನ್ಯ ಸಂದರ್ಭಗಳಲ್ಲಿ ನೀಡಲಾಗುವುದು; ಆದರೆ ವಿಚಾರಣೆಯನ್ನು ನಡೆಸುವ ನ್ಯಾಯಾಧೀಶರನ್ನು ವರ್ಗಾಯಿಸಲಾಗದು ಎಂದು ಸುಪ್ರೀಂ ಕೋರ್ಟ್ಹೇಳಿದೆ.
ಕಳೆದ ಬಾರಿಯ ವಿಚಾರಣೆಯ ವೇಳೆ ಸಿಬಿಐ, ಬಿಜೆಪಿ ನಾಯಕರಾದ ಆಡ್ವಾಣಿ, ಜೋಷಿ, ಮತ್ತು ಇತರ ಕೆಲವು ನಾಯಕರ ವಿರುದ್ಧ ಬಾಬರಿ ಮಸೀದಿ ಧ್ವಂಸ ಪ್ರಕರಣದ ಸಂಚಿನ ಆರೋಪಗಳನ್ನು ಪುನರುಜ್ಜೀವನಗೊಳಿಸುವಂತೆ ಸುಪ್ರೀಂ ಕೋರ್ಟನ್ನು ಕೇಳಿಕೊಂಡಿತ್ತು.
ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯು ಕಳೆದ 25 ವರ್ಷಗಳಿಂದ ಬಾಕಿ ಇರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್ ಪೀಠದ ಜಸ್ಟಿಸ್ ಪಿನಾಕಿ ಚಂದ್ರ ಘೋಷ್ ಮತ್ತು ಜಸ್ಟಿಸ್ ರೋಹಿನ್ಟನ್ ಫಾಲಿ ನಾರೀಮನ್ ಅವರು ಸಂವಿಧಾನದ 142ನೇ ವಿಧಿಯಡಿ ತಾವು ಉಪಲಬ್ಧವಿರುವ ಅಸಾಮಾನ್ಯ ಅಧಿಕಾರವನ್ನು ಬಳಸಿಕೊಂಡು ಪ್ರಕರಣದ ವಿಚಾರಣೆಯನ್ನು ಲಕ್ನೊಗೆ ವರ್ಗಾಯಿಸಿ ಅಲ್ಲಿ ಜೋಷಿ ಸಹಿತ ಎಂಟು ಮಂದಿ ನಾಯಕರು ಇತರ 13 ಮಂದಿಯೊಂದಿಗೆ ವಿಚಾರಣೆಯನ್ನು ಎದುರಿಸುವಂತೆ ಮಾಡುವೆವು ಎಂದು ಹೇಳಿದರು.
ಬಿಜೆಪಿಯ ಎಂಟು ಹಿರಿಯ ನಾಯಕರು ಮತ್ತು ವಿಶ್ವ ಹಿಂದೂ ಪರಿಷತ್ನ ನಾಯಕರ ವಿರುದ್ಧ ಸಂಚಿನ ಆರೋಪವನ್ನು ಕೈಬಿಟ್ಟ ಅಲಹಾಬಾದ್ ಹೈಕೋರ್ಟಿನ 2010ರ ಮೇ ತೀರ್ಪನ್ನು ಪ್ರಶ್ನಿಸಿ ಸಿಬಿಐ, ಸುಪ್ರೀಂ ಕೋರ್ಟ್ ಮೆಟ್ಟಲೇರಿತ್ತು.