Advertisement

ಉಡುಪಿಯಲ್ಲಿ ಬಾಬಾ ರಾಮದೇವ್‌ ಯೋಗ ಮಂತ್ರ!

10:07 PM Nov 16, 2019 | Sriram |

ಉಡುಪಿ: ಮುಂಜಾನೆಯ ಬೆಳಕು ಮೂಡುವ ಮುನ್ಸೂಚನೆಯಾಗಿ ಗಾಢ ಕತ್ತಲು, ವಿಶ್ವ ವಿಖ್ಯಾತ ಯೋಗಗುರು ಬಾಬಾ ರಾಮದೇವರನ್ನು ನೋಡಬೇಕು ಎನ್ನುವ ಉತ್ಸಾಹದಲ್ಲಿ ಬೈಕ್‌, ಕಾರು, ಬಸ್‌, ಸೈಕಲ್‌, ಆಟೋಗಳಲ್ಲಿ ಜನರು ತಂಡೋಪತಂಡವಾಗಿ ರಾಜಾಂಗಣದ ವಾಹನ ಪಾರ್ಕಿಂಗ್‌ ಏರಿಯಾದತ್ತ ಹೆಜ್ಜೆ ಹಾಕಿದರು. ಎಲ್ಲರದ್ದೂ ಒಂದೇ ಗುರಿ ಬಾಬಾ ಹೇಳಿಕೊಡುವ ಯೋಗಾಸನವನ್ನು ಕಣ್ಣಾರೆ ಕಂಡು, ಕಿವಿಯಾರೆ ಕೇಳಿ ತಿಳಿದುಕೊಳ್ಳಬೇಕು ಎನ್ನುವ ಮಹದಾಸೆ.

Advertisement

ಶ್ರೀಕೃಷ್ಣಮಠ ಪರ್ಯಾಯ ಪಲಿಮಾರು ಮಠ ಹಾಗೂ ಹರಿದ್ವಾರದ ಪತಂಜಲಿ ಯೋಗ ಪೀಠದ ಸಹಯೋಗದಲ್ಲಿ ಉಡುಪಿಯ ರಾಜಾಂಗಣದಲ್ಲಿ ಶನಿವಾರ ಹಮ್ಮಿಕೊಂಡ ಬೃಹತ್‌ ಯೋಗಾಸನ ಶಿಬಿರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸಿದರು. 4 ವರ್ಷದವರಿಂದ 80ರ ಮಹಿಳೆಯರು, ಮಕ್ಕಳು, ಪುರುಷರು ಭಾಗವಹಿಸಿ ಮುಂಜಾನೆ 5ರಿಂದ 7.30ರ ವರೆಗೆ ದೇಹವನ್ನು ದಂಡನೆಗೆ ಒಳಪಡಿಸಿದರು.

ಉಡುಪಿಗೆ ಹತ್ತಿರವಾದ ಬಾಬಾ
ಸೂರ್ಯ ನಮಸ್ಕಾರ, ಕಪಾಲಭಾತಿ, ಅನಂತಾಸನ ಸೇರಿದಂತೆ ಒಟ್ಟು 50 ಆಸನಗಳನ್ನು ಪ್ರದರ್ಶಿಸಿದರು. ನೆರೆದ ಜನತೆ ಕೂಡ ಆಸಕ್ತಿಯಿಂದ ಬಾಬಾ ಹೇಳಿಕೊಟ್ಟ ಆಸನಗಳನ್ನು ಮಾಡಿದರು. ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡುತ್ತ, ಮಧ್ಯ-ಮಧ್ಯ ಕನ್ನಡದಲ್ಲಿ ಕೆಲವೊಂದು ನುಡಿಗಳನ್ನು ಹೇಳಿ ಜನಮಾನಸಕ್ಕೆ ಹತ್ತಿರವಾದರು. “ಸಮಸ್ತ ಸಹೋದರ ಸಹೊದರಿಯರಿಗೆ ನನ್ನ ಪ್ರೀತಿ ಪೂರ್ವಕ ನಮಸ್ಕಾರ.

ಕರ್ನಾಟಕದ ಜನತೆ ಸ್ವಭಾವದಿಂದ ಯೋಗಿಗಳು, ಆಧ್ಯಾತ್ಮಿಕರು ಮತ್ತು ದೇಶ ಭಕ್ತರಾಗಿದ್ದಾರೆ’ ಎಂದು ಕನ್ನಡದಲ್ಲಿ ಹೇಳಿದ ಬಾಬಾ ರಾಮದೇವ್‌ ಬೆಲ್ಲ, ಅಮೃತಬಳ್ಳಿ ಎಂಬಿತ್ಯಾದಿ ಶಬ್ದಗಳನ್ನು ಕನ್ನಡದಲ್ಲಿ ಕೇಳಿ ಉಚ್ಚರಿಸಿದರು. ಕ್ಲಿಷ್ಟ ಆಸನಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸುತ್ತಾ ಎರಡೂವರೆ ಗಂಟೆಗಳ ಕಾಲ ಇಡೀ ಜನಸ್ತೋಮವನ್ನು ತಮ್ಮ ಹಿಡಿತದಲ್ಲಿ ಹಿಡಿದುಕೊಂಡರು.

ಪೊಲೀಸ್‌ ಭದ್ರತೆ
ಶಿಬಿರಕ್ಕೆ ಜಿಲ್ಲಾ ಪೊಲೀಸ್‌ ಇಲಾಖೆ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಒಬ್ಬರು ಡಿವೈಎಸ್‌ಪಿ. , 1 ಜಿಲ್ಲಾ ಸಶಸ್ತ್ರ ಮೀಸಲು ಪಡೆ, 1 ರಾಜ್ಯ ಸಶಸ್ತ್ರ ಪೊಲೀಸ್‌ ಮೀಸಲು ಪಡೆ ತುಕಡಿ ಸೇರಿದಂತೆ 50ಕ್ಕೂ ಅಧಿಕ ಮಂದಿ ಸಿಬಂದಿ ನಿಯೋಜಿಸಲಾಗಿದೆ. ಬಾಬಾರಾಮ ದೇವ್‌ ಅವರಿಗೆ ಸಿಆರ್‌ಪಿಎಫ್ ಯೋಧರು ಭದ್ರತೆ ನೀಡಿದರು. ಶಿಬಿರಕ್ಕೆ ವಾಹನ ಮೂಲಕ ಬರುವ ಶಿಬಿರಾರ್ಥಿಗಳಿಗೆ ತೊಂದರೆಯಾಗದೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿತ್ತು.

Advertisement

ಹರಿದ್ವಾರದಿಂದ ಸಿದ್ಧತೆ
ಹರಿದ್ವಾರದ ಪತಂಜಲಿ ಸಮಿತಿಯ ಸದಸ್ಯರು ಪಾರ್ಕಿಂಗ್‌ ಏರಿಯಾದಲ್ಲಿ ಬೃಹತ್‌ ಯೋಗ ಶಿಬಿರದ ವೇದಿಕೆಯನ್ನು ನಿರ್ಮಿಸಿದ್ದಾರೆ. ದೀಪಾಲಂಕಾರ, ಧ್ವನಿವರ್ಧಕ, ಯೋಗ ಮ್ಯಾಟ್‌ಗಳನ್ನು ಅಚ್ಚುಕಟ್ಟಿನಿಂದ ಅಳವಡಿಸಿದ್ದಾರೆ. ಹರಿದ್ವಾರದಿಂದ 60 ಮಂದಿ ಕಾರ್ಯಕರ್ತರು ಹಾಗೂ ಉಡುಪಿಯಿಂದ ಸುಮಾರು 300 ಸ್ವಯಂ ಸೇವಕರು ಶಿಬಿರದಲ್ಲಿ ಭಾಗವಹಿಸಿದ್ದಾರೆ. ತುರ್ತು ಚಿಕಿತ್ಸೆಗೆ ವೈದ್ಯರ ತಂಡವೊಂದು ಶಿಬಿರದಲ್ಲಿ ಭಾಗವಹಿಸಿದೆ.

ಮೊಬೈಲ್‌ ಸೆಲ್ಫಿ ಲೈವ್‌
ಮುಂಜಾ ವ 3ರಿಂದ 6ರ ವರೆಗೆ ಜನರು ರಾಜಾಂಗಣ ದತ್ತ ಹೆಜ್ಜೆ ಹಾಕಿದರು. ಬೆಳಕು ಹರಿಯುತ್ತಿದ್ದಂತೆ ಯೋಗ ಶಿಬಿರಕ್ಕೆ ಆಗಮಿಸಿ ದವರು ಮೊಬೈಲ್‌ಗ‌ಳಲ್ಲಿ ವೀಡಿಯೋ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಫೇಸ್‌ಬುಕ್‌ ಲೈವ್‌ ನೀಡಿದ್ದಾರೆ. ಉಡುಪಿ ಯೋಗ ಶಿಬಿರವನ್ನು ಆಸ್ತಾ ಟಿವಿಯ ಮೂಲಕ ವಿಶ್ವದ 173 ರಾಷ್ಟ್ರ ನೇರ ಪ್ರಸಾರವಾಗಿದೆ. ಮಲ್ಪೆ, ಕಾರ್ಕಳ, ಸಂತೆಕಟ್ಟೆ ಭಾಗಗಳಲ್ಲಿ ಮುಂಜಾವ 4 ಗಂಟೆಗೆ ಸಿಟಿ ಬಸ್‌ ಸೇವೆ ಪ್ರಾರಂಭಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next