Advertisement

ಬಾ ನಲ್ಲೆ, ಬಾ ನಲ್ಲೆ ಮಧುಚಂದ್ರಕೆ…

05:05 PM Jan 22, 2020 | mahesh |

ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವಂತೆ. ಆದರೆ, ಹನಿಮೂನ್‌/ ಮಧುಚಂದ್ರ ಮಾತ್ರ ಇಂಥದ್ದೇ ಸ್ಥಳ, ದೇಶದಲ್ಲಿ ನಡೆಯಬೇಕು ಅಂತ ಇಂದಿನ ಜೋಡಿಗಳು ಬಯಸುತ್ತವೆ. ಮಧುಚಂದ್ರದ ನೆಪದಲ್ಲಿ ವಿದೇಶ ಸುತ್ತುವ ಕನಸು ಹಲವರದ್ದು. ಆದರೆ, ಮದುವೆಯಾದ ಒಂದು ವಾರದಲ್ಲೇ ಎಲ್ಲಾ ಜೋಡಿಗೂ ಹನಿಮೂನ್‌ ಹೊರಡಲು ಸಾಧ್ಯವಾಗುವುದಿಲ್ಲ. ಕೆಲವರು ಮಾತ್ರ ಅದನ್ನು ಮೊದಲೇ ಪ್ಲ್ರಾನ್‌ ಮಾಡಿಕೊಂಡಿರಬಹುದು. ರಜೆಯ ಕಾರಣದಿಂದಲೋ, ಆರ್ಥಿಕ ಕಾರಣದಿಂದಲೋ ಕೆಲವರಿಗೆ ಪ್ರವಾಸ ಹೋಗಲು ಸಾಧ್ಯವಾಗದೇ ಇರಬಹುದು. ಅದೇನೇ ಇದ್ದರೂ, ಅದೇ ತಾನೇ ಮದುವೆಯಾಗಿರು ಹುಡುಗ-ಹುಡುಗಿಗೆ ಅದೊಂದು ಮರೆಯಲಾರದ ಪ್ರವಾಸ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು, ಖಾಸಗಿ ಕ್ಷಣಗಳನ್ನು ಕಳೆಯಲು ಸಿಗುವ ಸುಮಧುರ ಘಳಿಗೆ. ಆ ಮಧುರ ಕ್ಷಣಗಳ ಬಗ್ಗೆ ಮೊದಲೇ ಸ್ವಲ್ಪ ತಯಾರಿ ನಡೆಸಿಕೊಂಡರೆ ಒಳಿತಲ್ಲವೇ?

Advertisement

– ಅವಸರ ಮಾಡಬೇಡಿ
ಮದುವೆಯಾದ ಮರುದಿನವೇ ಮಧುಮಂಚಕ್ಕೆ ಹಾರುವುದು ಸಿನಿಮಾಗಳಲ್ಲಿ ಮಾತ್ರ ಸಾಧ್ಯ. ವಾಸ್ತವದಲ್ಲಿ, ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ಮದುವೆ ಸಮಾರಂಭ ಮುಗಿದು, ನೆಂಟರ ಮನೆ, ಅಲ್ಲಿ ಇಲ್ಲಿ ಹೋಗಿ ಬಂದು, ಸಹಜ ಬದುಕಿಗೆ ಮರಳಲು ವಾರವಾದರೂ ಬೇಕು. ದೈಹಿಕ, ಮಾನಸಿಕವಾಗಿ ಬದಲಾವಣೆಗೆ ಹೊಂದಿಕೊಳ್ಳಲು ಇನ್ನೂ ಸ್ವಲ್ಪ ಸಮಯ ಬೇಕು. ಆದ್ದರಿಂದ, ಬದುಕಿಡೀ ನೆನಪಿನಲ್ಲಿ ಉಳಿವ ರಸಮಯ ಕ್ಷಣಗಳನ್ನು ಕಳೆಯಲು ತರಾತುರಿಯಲ್ಲಿ ಹೋಗಿ ಅಭಾಸ ಆಗುವುದಕ್ಕಿಂತ, ಸ್ವಲ್ಪ ದಿನ ವಿಶ್ರಾಂತಿ ಪಡೆದು, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ನಂತರ ಹೊರಡುವುದು ಒಳ್ಳೆಯದು.

-ಮೊದಲೇ ಪ್ಲ್ಯಾನ್ ಮಾಡಿಕೊಳ್ಳಿ
ಮದುವೆಯ ಸಂಭ್ರಮದ ಜೊತೆಗೇ, ಮಧುಚಂದ್ರದ ಕನವರಿಕೆಯೂ ಶುರುವಾಗುತ್ತದೆ. ಮದುವೆಯ ದಿನ ನಿರ್ಧಾರವಾದೊಡನೆಯೇ ಮಧುಚಂದ್ರದ ಬಗ್ಗೆಯೂ ಯೋಚಿಸುವುದು ಜಾಣತನ. ವಿಮಾನ ಪ್ರಯಾಣ ದರ, ಹೋಟೆಲ್‌ ಕೊಠಡಿಯನ್ನು ಮೊದಲೇ ಬುಕ್‌ ಮಾಡಿದ್ದರೆ, ಖರ್ಚು ಕಡಿಮೆಯಾಗುತ್ತದೆ. ಹನಿಮೂನ್‌ಗೆ ಹೋಗುವ ಏಳೆಂಟು ತಿಂಗಳು ಮೊದಲೇ ಎಲ್ಲಿಗೆ ಪ್ರಯಾಣ ಮಾಡಬೇಕು, ಆ ಸ್ಥಳದಲ್ಲಿ ಏನೆಲ್ಲಾ ನೋಡಬೇಕು ಎಂಬ ಬಗ್ಗೆ ಯೋಜನೆ ರೂಪಿಸಿಕೊಳ್ಳಿ.

-ಒಟ್ಟಿಗೇ ನಿರ್ಧರಿಸಿ
ಸಮುದ್ರ ತೀರದಲ್ಲಿ ಚೆಲ್ಲಾಟವಾಡಬೇಕು ಎಂದು ನಿಮ್ಮ ಸಂಗಾತಿಗೆ ಅನಿಸಿದರೆ, ಪರ್ವತದ ಮಡಿಲೊಳಗೆ ನಿಸರ್ಗದ ಸೊಬಗು ಸವಿಯಬೇಕು ಎಂದು ನಿಮಗೆ ಆಸೆಯಿರಬಹುದು. ಒಬ್ಬರಿಗೆ ಇಷ್ಟವಾಗುವ ಸ್ಥಳ ಮತ್ತೂಬ್ಬರಿಗೆ ಇಷ್ಟವಾಗದೇ ಇರಬಹುದು. ಹಾಗಾಗಿ, ನಿಮ್ಮ ಆಸಕ್ತಿಗಳ ಬಗ್ಗೆ ಒಟ್ಟಿಗೇ ಚರ್ಚಿಸಿ, ಎಲ್ಲಿಗೆ ಹೋಗಬೇಕು ಎಂದು ನಿರ್ಧರಿಸಿ. ನಾನು ಹೇಳಿದ್ದೇ ನಡೆಯಬೇಕು ಎಂದು ಹಠ ಮಾಡಬೇಡಿ.

-ಪರರ ಚಿಂತೆ ನಿಮಗ್ಯಾಕೆ?
ಅತ್ತೆಯ ಮಗಳು ಮನಾಲಿಗೆ ಹೋಗಿದ್ದರು, ಕಾಲೇಜು ಗೆಳತಿ ರಷ್ಯಾ ನೈಟ್‌ಲೈಟ್‌ ನೋಡಿ ಬಂದಳು, ಚಿಕ್ಕಮ್ಮನ ಮಗ ಅವನ ಹೆಂಡತಿ ಜೊತೆ ಬಾಲಿಗೆ ಹೋಗಿದ್ದ, ಅಂತ ಇನ್ನೊಬ್ಬರ ಜೊತೆ ಹೋಲಿಸಿಕೊಳ್ಳಬೇಡಿ. ಅವರು ಫಾರಿನ್‌ಗೆ ಹೋಗಿದ್ದರು, ನಾವೂ ಹೋಗಬೇಕು ಅಂತ ಜಿದ್ದಿಗೆ ಬೀಳಬೇಡಿ. ನಿಮ್ಮ ಆರ್ಥಿಕ ಸ್ಥಿತಿ, ಆಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಎಲ್ಲಿಗೆ ಹೋಗಬೇಕೆಂದು ನಿರ್ಧರಿಸಿ.

Advertisement

-ಮೋಸ ಹೋಗಬೇಡಿ
ಇಂಟರ್‌ನೆಟ್‌ನಲ್ಲಿ ಹುಡುಕಿದರೆ, ಹನಿಮೂನ್‌ ಪ್ಯಾಕೇಜ್‌ಗಳ ವಿವರ ದಂಡಿಯಾಗಿ ಸಿಗುತ್ತದೆ. ಎಲ್ಲಿಗೆ ಹೋಗಬಹುದು, ಎಲ್ಲಿ ಉಳಿದುಕೊಳ್ಳಬಹುದು, ಏನೇನು ನೋಡಬಹುದು, ಎಂಬ ಸಕಲ ಮಾಹಿತಿಯೂ ಇಂಟರ್‌ನೆಟ್‌ನಲ್ಲಿದೆ. ಆದರೆ, ಅಲ್ಲಿ ಇರುವುದೆಲ್ಲವೂ ಸತ್ಯವಲ್ಲ. ಕೆಲವೊಮ್ಮೆ ನಕಲಿ ಫೋಟೋಗಳನ್ನು ಹಾಕಿ ಮೋಸ ಮಾಡುವವರೂ ಇದ್ದಾರೆ. ಅದಕ್ಕಾಗಿ, ನಂಬಲರ್ಹ ವೆಬ್‌ಸೈಟ್‌, ಟ್ರಾವೆಲ್‌ ಏಜೆಂಟ್‌ ಅಥವಾ ಅಧಿಕೃತ ಕಂಪನಿಗಳಿಂದ ಹೋಟೆಲ್‌ ಕೊಠಡಿಗಳನ್ನು ಬುಕ್‌ ಮಾಡಿಕೊಳ್ಳಿ.

-ಆರ್ಥಿಕ ತಜ್ಞರಾಗಿ
ಪ್ರವಾಸಕ್ಕೆ ಹೋದಾಗ ಹಣ ನಿರ್ವಹಣೆ ಮಾಡುವುದು ಸವಾಲಿನ ವಿಷಯ. ಹಾಗಂತ, ಕಳಪೆ ಹೋಟೆಲ್‌ನಲ್ಲಿ ಉಳಿದು ಸಂತಸದ ಕ್ಷಣಗಳನ್ನು ಹಾಳು ಮಾಡಿಕೊಳ್ಳಿ ಅಂತಲ್ಲ. ಓಡಾಟಕ್ಕೆ ಎಷ್ಟು ಹಣ ಬೇಕು, ಹೋಟೆಲ್‌, ಶಾಪಿಂಗ್‌ಗೆ ಎಷ್ಟಾಗುತ್ತದೆ ಅಂತ ಮೊದಲೇ ಬಜೆಟ್‌ ರೂಪಿಸಿ. ಅಗತ್ಯ ಇರುವಲ್ಲಿ ಜಿಪುಣತನ ಮಾಡಬೇಡಿ.

-ಪ್ರತಿ ಕ್ಷಣವನ್ನೂ ಅನುಭವಿಸಿ
ವೆನ್‌ ಯು ಆರ್‌ ಇನ ರೋಮ್‌, ಬಿ ಲೈಕ್‌ ರೋಮನ್‌ ಎಂಬ ಮಾತಿದೆ. ವಿದೇಶಕ್ಕೆ ಹೋದಾಗಲೂ ಕೆಲವರು ಇಂಡಿಯನ್‌ ಹೋಟೆಲ್‌ ಹುಡುಕುತ್ತಿರುತ್ತಾರೆ. ಹಾಗೆ ಮಾಡಬೇಡಿ. ಅಲ್ಲಿನ ಸಂಸ್ಕೃತಿ, ಆಹಾರ ಶೈಲಿ, ಜನ ಜೀವನದೊಳಗೆ ಬೆರೆತು, ಪ್ರವಾಸದ ಕ್ಷಣಗಳನ್ನು ಅನುಭವಿಸಿ. ಸುತ್ತಮುತ್ತಲಿನ ಅಪರೂಪದ, ಅತಿಮುಖ್ಯ ಪ್ರವಾಸಿತಾಣಗಳಿಗೆ ಭೇಟಿ ಕೊಡಿ.

-ಸಲಹೆ ಪಡೆಯಿರಿ
ಇದು ಒಳ್ಳೆಯ ಉಪಾಯ ಅಂತ ಕೆಲವರಿಗೆ ಅನ್ನಿಸದಿದ್ದರೂ, ಕೆಲವೊಮ್ಮೆ ಉಪಯೋಗಕ್ಕೆ ಬರುತ್ತದೆ. “ಮಧುಚಂದ್ರಕ್ಕೆ ಎಲ್ಲಿಗೆ ಹೋಗಬಹುದು?’ ಎಂದು ಗೆಳೆಯರಲ್ಲಿ ಕೇಳಿದಾಗ ಅವರು ಒಳ್ಳೆಯ ಸ್ಥಳ, ಹೋಟೆಲ್‌, ಎಲ್ಲಿಗೆ ಯಾವ ಕಾಲದಲ್ಲಿ ಹೋದರೆ ಚೆನ್ನ ಅಂತೆಲ್ಲಾ ಉತ್ತಮ ಸಲಹೆಗಳನ್ನು ನೀಡಬಹುದು.

– ಸರ್‌ಪ್ರೈಸ್‌ ನೀಡಿ
ಮಧುಚಂದ್ರದ ನಡುವೆ ಒಂದಿಷ್ಟು ಕೌತುಕದ ಕ್ಷಣಗಳನ್ನು ಸೃಷ್ಟಿಸಿ. ಸರ್‌ಪ್ರೈಸ್‌ ಆಗಿ ಸಂಗಾತಿಗೆ ಉಡುಗೊರೆ ನೀಡಿ ಅಥವಾ ವಿಶೇಷ ಊಟ ತಯಾರಿಸಿ ಕೊಡಿ. ಜೀವಮಾನವಿಡೀ ನೆನಪಿನಲ್ಲಿ ಉಳಿಯುವಂಥ ಒಂದಿಷ್ಟು ವಿಶೇಷ ಕ್ಷಣಗಳಿಗೆ ಸಾಕ್ಷಿಯಾಗಿ.

-ವಿದ್ಯಾಶ್ರೀ ಗಾಣಿಗೇರ

Advertisement

Udayavani is now on Telegram. Click here to join our channel and stay updated with the latest news.

Next