Advertisement

Ba Ma Harish: ಶಕ್ತಿ ಮೀರಿ ಕೆಲಸ ಮಾಡಿದ ತೃಪ್ತಿ ಇದೆ

10:14 AM Sep 23, 2023 | Team Udayavani |

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಯ 2023-24ನೇ ಸಾಲಿನ ಚುನಾವಣೆ ಸೆ.23ರಂದು ನಡೆಯುತ್ತಿದ್ದು, ನೂತನ ಸಾರಥಿಯ ಆಗಮನಕ್ಕೆ ಸಿದ್ಧತೆ ನಡೆದಿದೆ. ಇದೇ ವೇಳೆ ವಾಣಿಜ್ಯ ಮಂಡಳಿಯ ನಿರ್ಗ ಮಿತ ಅಧ್ಯಕ್ಷ ಭಾ. ಮ. ಹರೀಶ್‌ “ಉದಯವಾಣಿ’ ಜೊತೆ ಒಂದಷ್ಟು ಮಾತನಾಡಿದ್ದಾರೆ. ತಮ್ಮ ಅವಧಿಯಲ್ಲಿ ಸೇವೆ ಸಲ್ಲಿಸಿರುವ ಕುರಿತು ಹಾಗೂ ಚಿತ್ರೋದ್ರಮಕ್ಕೆ ಆಗಬೇಕಿರುವ ಯೋಜನೆಗಳನ್ನು ಹಂಚಿಕೊಂಡಿದ್ದಾರೆ.

Advertisement

ತಮ್ಮ ಅಧಿಕಾರಾವಧಿಯಲ್ಲಿ ಎದುರಾದ ಸವಾಲುಗಳೇನು?

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷನಾಗಿ ಆಯ್ಕೆಯಾದ ಮೊದಲ ದಿನದಿಂದಲೇ ಅನೇಕ ಸವಾಲುಗಳು ಎದುರಾದವು. ಚುನಾವಣೆಯಲ್ಲಿ ಪರಾಭವಗೊಂಡ ವಿರೋಧಿ ಬಣ ಕೋರ್ಟ್‌ ಮೆಟ್ಟಿಲೇರಿದ್ದರಿಂದ, ಕೆಲ ತಿಂಗಳು ಕಾನೂನು ಹೋರಾಟದಲ್ಲೇ ಸಮಯ ಕಳೆಯಿತು. ಅಂತಿಮ ವಾಗಿ ಕೋರ್ಟ್‌ ನಮ್ಮ ಪರ ತೀರ್ಪು ನೀಡಿತು. ಆದರೆ ಅಷ್ಟರಲ್ಲಿ ಸಾಕಷ್ಟು ಸಮಯ ಕಳೆದು ಹೋಗಿತ್ತು.

ನಿಮ್ಮ ಅವಧಿಯಲ್ಲಾದ ಪ್ರಮುಖ ಕಾರ್ಯಗಳ ಬಗ್ಗೆ ಏನು ಹೇಳುವಿರಿ?

ಕೆಲ ಕಾಲ ಕೋರ್ಟ್‌ ತಡೆಯಾಜ್ಞೆ ನೀಡಿದ್ದರಿಂದ, ದೊಡ್ಡ ಮಟ್ಟದ ನೀತಿ-ನಿರ್ಧಾರಗಳನ್ನು ನಮ್ಮ ತಂಡ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ನಮ್ಮ ಸೀಮಿತ ವ್ಯಾಪ್ತಿಯಲ್ಲೇ ಶಕ್ತಿ ಮೀರಿ ಕೆಲಸ ಮಾಡಿದ್ದೇವೆ. ತುಂಬ ವರ್ಷಗಳ ನಂತರ ವಾಣಿಜ್ಯ ಮಂಡಳಿ ಸಹಕಾರದಲ್ಲಿ “ಸೈಮಾ’ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ಚಲನಚಿತ್ರ ಕಾರ್ಮಿಕರ ವೇತನ ಪರಿಷ್ಕರಣೆ ನಡೆಸಲಾಗಿದೆ. ಆ್ಯನಿಮಲ್‌ ವೆಲ್‌ಫೇರ್‌ ಬೋರ್ಡ್‌ ಜತೆಗೆ ಮಾತುಕತೆ ನಡೆಸಲಾಗಿದ್ದು ಚಿತ್ರೀಕರಣಕ್ಕೆ ಆಗುತ್ತಿರುವ ತೊಂದರೆಗಳ ಬಗ್ಗೆ ಗಮನ ಸೆಳೆಯಲಾಗಿದೆ. ಇನ್ನು ಎಫ್ಕೆಸಿಸಿಐ ಮತ್ತು ಎಫ್ ಎಫ್ಐಗಳ ಜತೆಗೆ ವಾಣಿಜ್ಯ ಮಂಡಳಿ ಸಂಬಂಧವನ್ನು ವೃದ್ಧಿಸುವ ಕೆಲಸ ಮಾಡಿದ್ದೇವೆ. ಚಿತ್ರರಂಗದ ಅನೇಕ ವ್ಯಾಜ್ಯಗಳನ್ನು ಮಾತುಕತೆಯ ಮೂಲಕವೇ ಬಗೆಹರಿಸಲು ಒತ್ತು ಕೊಟ್ಟಿದ್ದೇವೆ.

Advertisement

ನಿಮ್ಮ ಅವಧಿಯಲ್ಲಿ ಮಂಡಳಿ ಪದಾಧಿ ಕಾರಿಗಳ ಸಲಹೆ-ಸಹಕಾರ ಹೇಗಿತ್ತು?

ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿದ ಅನುಭವಿಗಳೇ ಪದಾಧಿಕಾರಿಗಳಾಗಿ ಆಯ್ಕೆಯಾಗಿ ಬಂದಿದ್ದರು. ಹೀಗಾಗಿ ನಮ್ಮ ಅವಧಿಯಲ್ಲಿದ್ದ ವಾಣಿಜ್ಯ ಮಂಡಳಿ ಪದಾಧಿಕಾರಿಗಳಿಗೆ ಚಿತ್ರರಂಗದ ಸಮಸ್ಯೆಗಳ ಆಳ-ಅಗಲದ ಅರಿವಿತ್ತು. ಹೀಗಾಗಿ ವಾಣಿಜ್ಯ ಮಂಡಳಿಯ ಎಲ್ಲ ಕೆಲಸ ಕಾರ್ಯಗಳಲ್ಲಿ ಎಲ್ಲರೂ ಸಲಹೆ-ಸಹಕಾರ ಕೊಟ್ಟು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.  ಮಂಡಳಿಗೆ ಕಾಯಕಲ್ಪ ನೀಡುವುದರಲ್ಲಿ ನಿಮ್ಮ ಅಭಿಪ್ರಾಯವೇನು? ವಾಣಿಜ್ಯ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಅಧಿಕಾರವಧಿ ಕೇವಲ ಒಂದು ವರ್ಷವಿದೆ. ಅದು ಕನಿಷ್ಠ 2 ವರ್ಷಕ್ಕಾದರೂ ವಿಸ್ತಾರವಾಗಬೇಕು. ಒಂದು ವರ್ಷದ ಅಧಿಕಾರವಧಿಯಲ್ಲಿ ಯಾವುದೇ ದೊಡ್ಡ ನಿರ್ಧಾರಗಳನ್ನು ಕೈಗೊಂಡು ಕಾರ್ಯಗತಗೊಳಿಸುವುದು ಕಷ್ಟಸಾಧ್ಯ.

ಸರ್ಕಾರದಿಂದ ಚಿತ್ರರಂಗಕ್ಕೆ ತುರ್ತು ಆಗಬೇಕಾಗಿರುವ ಕೆಲಸಗಳೇನು?

ಚಿತ್ರನಗರಿ ಕೆಲಸ ಮೊದಲು ಆರಂಭಿಸಬೇಕು. ರಾಜ್ಯ ಸರ್ಕಾರ ಕಳೆದ ಐದಾರು ವರ್ಷಗಳಿಂದ ಬಾಕಿಯಿರುವ ಸಿನಿಮಾಗಳ ಸಬ್ಸಿಡಿ ಶೀಘ್ರ ಬಿಡುಗಡೆಯಾಗಬೇಕು. ಚಲನಚಿತ್ರ ಪ್ರಶಸ್ತಿಗಳನ್ನು ಬೇಗ ಪ್ರಕಟಿಸಬೇಕು. ಸರ್ಕಾರ ತನ್ನ ಬಜೆಟ್‌ನಲ್ಲಿ ಘೋಷಿಸಿರುವ ಅನುದಾನ ಮತ್ತು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದರೆ ಬಹುತೇಕ ಸಮಸ್ಯೆಗಳು ಬಗೆಹರಿಯುತ್ತವೆ.

ಮಂಡಳಿಯಿಂದ ತುರ್ತಾಗಿ ಆಗಬೇಕಾಗಿರುವ ಕೆಲಸಗಳೇನು?

ಯುಎಫ್ಓ/ಕ್ಯೂಬ್‌ ಸಂಸ್ಥೆಗಳಿಂದ ನಿರ್ಮಾಪಕರು ಮತ್ತು ಪ್ರದರ್ಶಕರಿಗೆ ಸಾಕಷ್ಟು ಹೊರೆಯಾಗುತ್ತಿದೆ. ಈ ಸಮಸ್ಯೆಗೆ ಬೇಗ ಪರಿಹಾರ ಕಂಡುಕೊಳ್ಳಬೇಕಾಗಿದೆ. ಈಗಾಗಲೇ ವಾಣಿಜ್ಯ ಮಂಡಳಿ ಅದರ ಬಗ್ಗೆ ಒಂದಷ್ಟು ಕ್ರಮ ಕೈಗೊಳ್ಳುತ್ತಿದ್ದು, ಮುಂದಿನ ಆಡಳಿತ ಮಂಡಳಿ ಕೂಡ ಅದನ್ನು ಮುಂದುವರಿಸಿ ಕೊಂಡು ಹೋಗುತ್ತದೆ ಎಂಬ ವಿಶ್ವಾಸವಿದೆ.

Advertisement

Udayavani is now on Telegram. Click here to join our channel and stay updated with the latest news.

Next