Advertisement

ಮೋದಿಯಿಂದ ಮಾತ್ರ ದೇಶದ ಅಖಂಡತೆ ಉಳಿವು

10:38 AM Apr 11, 2019 | Team Udayavani |

ಅರಸೀಕೆರೆ: ದೇಶದ ಏಕತೆ ಅಖಂಡತೆಯ ಉಳಿವು ನರೇಂದ್ರ ಮೋದಿ ನೇತೃತ್ವದ ಸರಕಾರದಿಂದ ಮಾತ್ರ ಸಾಧ್ಯ ಎನ್ನುವುದನ್ನು ಸಾಕ್ಷೀಕರಿಸಿರುವ ಕಾರಣ ದೇಶದ ಜನತೆ ಮೋದಿ ಮೋದಿ ಎನ್ನುತ್ತಿದ್ದಾರೆ ಎಂದು ಮಾಜಿ
ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ನಗರದ ಬಸವರಾಜೇಂದ್ರ ಪ್ರೌಢ ಶಾಲೆ ಆವರಣದಲ್ಲಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಆಯೋಜಿಸಿದ್ದ ಬೃಹತ್‌ ಬಹಿರಂಗ ಸಭೆಯನ್ನು
ಉದ್ಘಾಟಿಸಿ ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಪರ ಮತಯಾಚಿಸಿದರು.

ಕಾಂಗ್ರೆಸ್‌ ಮುಖಂಡರ ಅಭಿವೃದ್ಧಿ: ಕಳೆದ 70 ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್‌ ನಾಯಕರು ತಾವು ಅಭಿವೃದ್ಧಿಹೊಂದಿದರೇ ವಿನಃ ದೇಶದ ಅಭಿವೃದ್ಧಿ ಆಗಲಿಲ್ಲ ಎಂದರು.

ಮೋದಿ ಸಾಧನೆ ಸಹಿಸುತ್ತಿಲ್ಲ: 10 ವರ್ಷಗಳ ಕಾಲ ಕಾಂಗ್ರೆಸ್‌ ನೇತೃತ್ವದಲ್ಲಿ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ಅವರ ಹೆಸರನ್ನು ದೇಶದ
ಜನತೆ ಹೇಳಲು ಸಾಧ್ಯವಾಗಲಿಲ್ಲ. ಆದರೆ ಕೇವಲ 5 ವರ್ಷ ದೇಶವನ್ನಾಳಿದ ನರೇಂದ್ರ ಮೋದಿ ಅವರ ಹೆಸರನ್ನು ದೇಶದ ಜನತೆ ಕೂಗುತ್ತಿದ್ದರೆ ಬಿಜೆಪಿ ಪಕ್ಷದ ವಿರೋಧಿಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರಿಗೆ ಸಹಿಸಲು ಆಗುತ್ತಿಲ್ಲ ಎಂದು ಬಿ.ಎಸ್‌. ಯಡಿಯೂರಪ್ಪ ಕಿಡಿ ಕಾರಿದರು.

ಭ್ರಷ್ಟಾಚಾರ ರಹಿತ ಆಡಳಿತ: ಪ್ರಧಾನಿ ನರೇಂದ್ರ ಮೋದಿ ಅವರು ನುಡಿದಂತೆ ನಡೆಯುವ ಜೊತೆಗೆ ಭ್ರಷ್ಟಾಚಾರ ಮುಕ್ತ ಆಡಳಿತ, ದೇಶದ ರಕ್ಷಣೆ ಬಗ್ಗೆ ತೆಗೆದುಕೊಂಡ ನಿಲುವು ದೇಶದ ಜನತೆಯ ಮೆಚ್ಚುಗೆಗೆ ಕಾರಣವಾಗಿದೆ. ಹಾಗಾಗಿ ನರೇಂದ್ರ ಮೋದಿಯವರು ಮತ್ತೂಮ್ಮೆ ಪ್ರಧಾನಿಯಾಗಬೇಕೆಂಬ ಹಂಬಲ ದೇಶ ವಾಸಿಗಳದ್ದಾಗಿದೆ. ಇದರಿಂದ ಹತಾಶರಾಗಿರುವ ಕಾಂಗ್ರೆಸ್‌ ಸೇರಿದಂತೆ ಪ್ರತಿ ಪಕ್ಷದ ನಾಯಕರು ಕಂಗಾಲಾಗಿದ್ದಾರೆ ಈ ಭಯ ಅಪ್ಪ,ಮಕ್ಕಳ ಪಕ್ಷವಾದ ಜೆಡಿಎಸ್‌ ನಾಯಕರನ್ನು ಕಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.

Advertisement

ದೇಶದ ಅಭಿವೃದ್ಧಿಗೆ ಬಿಜೆಪಿ ಗೆಲ್ಲಿಸಿ: ಮುಂದಿನ ಐದು ವರ್ಷಗಳಲ್ಲಿ ಕಾಶ್ಮೀರಕ್ಕೆ ವಿಶೇಷವಾಗಿ ನೀಡಿರುವ 370,ಕಾಯ್ದೆ ನಿಷೇಧ ಸೇರಿದಂತೆ ರೈತರ ಆದಾಯವನ್ನು ಎರಡು ಪಟ್ಟು ಹೆಚ್ಚಿಸುವುದು ಲೋಕಸಭೆ ಚುನಾವಣೆ
ಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ, ಗಂಗಾ ಕಾವೇರಿ, ಕೃಷ್ಣಾ, ಗೋದಾವರಿ ಇತ್ಯಾದಿ ನದಿಗಳ ಜೋಡಣೆ ಮೂಲಕ ದೇಶದ ರೈತರ ಕೃಷಿ ಭೂಮಿಗೆ ನೀರು ಪೂರೈಸುವಂತಹ ಐತಿಹಾಸಿಕ ನಿರ್ಣಯಗಳನ್ನು ಭಾರತೀಯ ಜನತಾ ಪಾರ್ಟಿ ತನ್ನ ಪ್ರಣಾಳಿಕೆಯಲ್ಲಿ ಘೋಷಿದ್ದು, ಈ ಎಲ್ಲವೂ ಅನುಷ್ಠಾನಗೊಳ್ಳಬೇಕಾದರೆ ನಿಮ್ಮ ಮತ ಬಿಜೆಪಿ ಅಭ್ಯರ್ಥಿಗೆ ನೀಡುವ ಮೂಲಕ ನರೇಂದ್ರ ಮೋದಿಯವರ ಕೈ ಬಲ ಪಡಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.

ಚುನಾವಣೆ ನಂತರ ನಾಟಕ ಬಂದ್‌: ನಾನು ಮುಖ್ಯ ಮಂತ್ರಿಯಾದರೆ ರೈತರು ಮಾಡಿರುವ 46 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಕೈಗೆ ಅಧಿಕಾರ ಬಂದು ಹತ್ತು ತಿಂಗಳು ಕಳೆದಿದೆ ಈ ಅವಧಿಯಲ್ಲಿ ಕೇವಲ ನಾಲ್ಕೂವರೆ ಸಾವಿರ ಕೋಟಿ ಮಾತ್ರ ಸಾಲ ಮನ್ನಾ ಮಾಡಿದ್ದಾರೆ. ಉಳಿದ ರೈತರ ಗತಿ ಏನು ಎಂದು ವಾಗ್ಧಾಳಿ ಮಾಡಿದರು. ದೇವೇ ಗೌಡ ಮತ್ತು ಕಂಪನಿಯ ನಾಟಕ ಈ ಲೋಕಸಭೆ ಚುನಾವಣೆ ಮೂಲಕ ಕೊನೆಗಳ್ಳಲಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

22 ಸ್ಥಾನಗಳಲ್ಲಿ ಗೆಲುವು: ಹಾಸನ ಲೋಕಸಭೆ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ 22 ದೇಶದಲ್ಲಿ 300ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವುದರಲ್ಲಿ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೌಡರ ಕುಟುಂಬ ರಾಜಕಾರಣ: ಶಾಸಕ ಮಾಧು ಸ್ವಾಮಿ ಮಾತನಾಡಿ, ನೆಹರು ಮನೆತನದ ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಲೇ ರಾಜಕೀಯ ಕ್ಷೇತ್ರದಲ್ಲಿ ಸ್ವಂತ ನೆಲೆ ಕಂಡು ಕೊಂಡ ದೇವೇಗೌಡರು ತಮ್ಮ ಸ್ವಾರ್ಥ ಸಾಧನೆಗೆ ಕುಟುಂಬ ವ್ಯಾಮೋಹಕ್ಕಾಗಿ ಮಕ್ಕಳು, ಸೊಸೆಯಂದಿರು ಅಷ್ಟೇ ಅಲ್ಲದೇ ಮೊಮ್ಮಕ್ಕಳನ್ನು ಸಹ ರಾಜಕೀಯಕ್ಕೆ ತರುವ ಮೂಲಕ ತಮ್ಮ ಮೂಲ ಸಿದ್ಧಾಂತವನ್ನೇ ಮರೆತಿದ್ದಾರೆ ಎಂದು ಆಪಾದಿಸಿದರು.

ಒಡೆದಾಳುವ ನೀತಿ: ಜಾತಿ ಹಾಗೂ ಧರ್ಮಗಳನ್ನು ಒಡೆದು ರಾಜಕಾರಣ ಮಾಡುವುದರಲ್ಲಿ ದೇವೇಗೌಡರು ಮೊದಲಿಗಾರಾಗಿ ದ್ದಾರೆ ಎಂದು ಯಡಿಯೂರಪ್ಪ ವಾಗ್ಧಾಳಿ ಮಾಡಿದರು.

ಗೆಲುವು ಖಚಿತ: ಅಭ್ಯರ್ಥಿ ಎ.ಮಂಜು ಮಾತನಾಡಿ, ದೇವೇಗೌಡರ ಸ್ವಾರ್ಥ ರಾಜಕಾರಣ ಹಾಗೂ ಕುಟುಂಬ ರಾಜಕಾರಣದಿಂದ ಬೇಸತ್ತಿರುವ ಜಿಲ್ಲೆಯ ಶೇ.70 ರಷ್ಟು ಮತದಾರರು ಪಕ್ಷಾತೀತವಾಗಿ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಹಾಗಾಗಿ ಎರಡರಿಂದ ಮೂರು ಲಕ್ಷ ಮತಗಳ ಅಂತರದಲ್ಲಿ ನಾನು ಗೆಲ್ಲುವುದರಲ್ಲಿ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ದೇಶ ಹಾಗೂ ಕುಟುಂಬ ಈ ಎರಡು ವಿಷಯಗಳ ಆಧಾರದಲ್ಲಿ ಹಾಸನ ಲೋಕಸಭೆ ಕ್ಷೇತ್ರದ ಚುನಾವಣೆ ನಡೆಯುತ್ತಿದೆ ಎಂದು ಹೇಳಿದರು.

ಮುಖಂಡರಿಂದ ಬಿಜೆಪಿಗೆ ಸೇರ್ಪಡೆ: ವಕೀಲ ಹಾಗೂ ಕಾಂಗ್ರೆಸ್‌ ಮುಖಂಡ ಬಿ.ಎನ್‌.ರವಿ ಸೇರಿದಂತೆ ರಾಜ್ಯ ಕನ್ನಡ ಪಡೆ ಅಧ್ಯಕ್ಷ ಬೋರೆಹಳ್ಳಿ ವೆಂಕಟೇಶ್‌, ಮಾಡಾಳು ನಟರಾಜ್‌, ಹೊಸಹಳ್ಳಿ ವೀರಭದ್ರಪ್ಪ ಸೇರಿದಂತೆ ಮತ್ತಿತರ ಮುಖಂಡರು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ತೊರೆದು ಬಿ.ಎಸ್‌ .ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ಸಮಾರಂಭದಲ್ಲಿ ಹಾಸನ ಶಾಸಕ ಪ್ರೀತಂಗೌಡ, ಕಡೂರು ಶಾಸಕ ಬೆಳ್ಳಿ ಪ್ರಕಾಶ್‌ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಶಾಸಕರಾದ ಕೆ.ಪಿ. ಪ್ರಭುಕುಮಾರ್‌, ಎ.ಎಸ್‌.ಬಸವರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ನವಿಲೆ ಅಣ್ಣಪ್ಪ ತಾಲೂಕು ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಜಿ.ವಿ.ಟಿ. ಬಸವ ರಾಜು, ನಗರಾಧ್ಯಕ್ಷ ಜಿ.ಎನ್‌. ಮನೋಜ್‌ಕುಮಾರ್‌, ಬಿಜೆಪಿ ಮುಖಂಡರಾದ ಎನ್‌.ಡಿ. ಪ್ರಸಾದ್‌, ಪ್ರಸನ್ನಕುಮಾರ್‌, ಗಂಗಾಧರ್‌, ವಿಜಯ್‌ ಕುಮಾರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು,

Advertisement

Udayavani is now on Telegram. Click here to join our channel and stay updated with the latest news.

Next