Advertisement

ಬಿ. ಎಚ್‌. ಶ್ರೀಧರ ಶತಮಾನ ಸಂಭ್ರಮ

06:05 AM Apr 22, 2018 | |

ಬಹುಮುಖೀ ಸಾಹಿತ್ಯದ ಸೇವೆ ಸಲ್ಲಿಸಿದ  ಬಿ. ಎಚ್‌.ಶ್ರೀಧರ ಅವರ ಸ್ಮರಣಾರ್ಥ ಸಾಹಿತ್ಯ ಪ್ರಶಸ್ತಿಯನ್ನು ಕುಟುಂಬದ ಸದಸ್ಯರು ಹಾಗೂ ಅಭಿಮಾನಿಗಳು ಉತ್ತಮ ಬರಹಗಾರರಿಗೆ 28 ವರ್ಷಗಳಿಂದ ನೀಡುತ್ತಿದ್ದಾರೆ. ಈ ವರ್ಷ ಬಿಎಚ್‌ಶ್ರೀ ನೂರನೆಯ ಹುಟ್ಟು ಹಬ್ಬದ ಸಂಭ್ರಮ ನಾಡಿದ್ದು ಮಂಗಳವಾರ ಬೆಳಗ್ಗೆ ಶಿರಸಿ ಟಿಎಂಎಸ್‌ ಸಭಾಂಗಣದಲ್ಲಿ ನಡೆಯಲಿದೆ. ಅಂದು ಡಾ|ಎಚ್‌.ಎಸ್‌.ವೆಂಕಟೇಶಮೂರ್ತಿ ಅವರು ವಿಮರ್ಶಕ ಎಸ್‌. ಆರ್‌. ವಿಜಯಶಂಕರ ಅವರಿಗೆ “ಬಿಎಚ್‌ಶ್ರೀಧರ ಪ್ರಶಸ್ತಿ’ಯನ್ನು ನೀಡಲಿದ್ದಾರೆ. ಶತಮಾನೋತ್ಸವದ ನಿಮಿತ್ತ ರಾಜ್ಯಾದ್ಯಂತ ಬಿ. ಎಚ್‌. ಶ್ರೀ ಕುರಿತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Advertisement

ನಂದಳಿಕೆ ಲಕ್ಷ್ಮೀನಾರಾಯಣಪ್ಪನವರ (ಕವಿ ಮುದ್ದಣ) ಗುರುಗಳು ಎಂಬ ಗೌರವಕ್ಕೆ ಪಾತ್ರರಾದ  ಬವಳಾಡಿ ವೆಂಕಟರಮಣ ಹೆಬ್ಟಾರರ ಹೆಸರನ್ನು ಕೆಲವರಾದರೂ ಕೇಳಿದ್ದಾರೆ. ಅವರ ಸಹೋದರನ ಪುತ್ರ ಬಿ. ಎಚ್‌. ಶ್ರೀಧರ್‌ ಅವರು. ಸಾಹಿತ್ಯಕ್ಷೇತ್ರದ ಮೇರು ಸಾಧಕರು. 

ಕುಂದಾಪುರದ ಬೋರ್ಡ್‌ ಹೈಸ್ಕೂಲ್‌ನಲ್ಲಿ ಮುದ್ದಣ ಅವರು ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದಾಗ ವೆಂಕಟರಮಣ ಹೆಬ್ಟಾರರ ಸಂಪರ್ಕಕ್ಕೆ ಬಂದಿದ್ದರಂತೆ. ಆಗ ಹೆಬ್ಟಾರರು ಮುದ್ದಣರಿಗೆ ಮಾರ್ಗದರ್ಶನ ಮಾಡಿದ್ದರೆಂದು ಸ್ವತಃ ಹೇಳಿದ್ದನ್ನು ಶ್ರೀಧರ್‌ ತಮ್ಮ ಜೀವಯಾನ ಕೃತಿಯಲ್ಲಿ ಉಲ್ಲೇಖೀಸಿದ್ದಾರೆ. ಶಿವರಾಮ ಕಾರಂತರೂ ಈ ಬಗ್ಗೆ ಉಲ್ಲೇಖ ಮಾಡಿದ್ದಾರೆ.  

ಬಿಎಚ್‌ಶ್ರೀ ಅವರು ಒಂದೇ ಸಂಸ್ಥೆಯಲ್ಲಿ ನಿಲ್ಲದೆ ಹಲವೆಡೆ ಸೇವೆ ಸಲ್ಲಿಸಿದವವರು. ಭಟ್ಕಳದ ಇಸ್ಲಾಮಿಯ ಹೈಸ್ಕೂಲ್‌ನಲ್ಲಿ ಸಹಶಿಕ್ಷಕ- ಮುಖ್ಯಶಿಕ್ಷಕ, ಕುಮಟಾದ ಕೆನರಾ ಕಾಲೇಜಿನಲ್ಲಿ ಪ್ರಾಧ್ಯಾಪಕ, ಶಿರಸಿಯ ಎಂಎಂ ಕಲಾ ವಿಜ್ಞಾನ ಕಾಲೇಜಿನಲ್ಲಿ ಉಪಪ್ರಾಂಶುಪಾಲ, ಸಿದ್ದಾಪುರದ ಎಂಜೆಸಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ವೃತ್ತಿಜೀವನ ನಡೆಸಿದವರು. 

19ನೆಯ ವಯಸ್ಸಿನಲ್ಲಿ ಬೆಂಗಳೂರಿನ ಸುಬೋಧ ರಾಮರಾಯರ ಕರೆಯ ಮೇರೆಗೆ ಚಂಪಕಮಾಲಾ ವೃತ್ತದಲ್ಲಿ ಕವನ ಸಂಕಲನವನ್ನು ರಚಿಸಿದ್ದರು. ಇವರು ಪ್ರಕಟಿಸಿದ 50 ಪುಸ್ತಕಗಳಲ್ಲಿ ಮೇರುಕೃತಿ ಕಾವ್ಯಸೂತ್ರ. ಇದು ಪಾಶ್ಚಾತ್ಯ ಮತ್ತು ಪೌರಾತ್ಯ ವಿಮಶಾì ಕೃತಿ. ಬಿಎಂಶ್ರೀ, ತೀನಂಶ್ರೀ ಬಳಿಕ ಬಂದ ಪ್ರಮುಖ ವಿಮಶಾì ಕೃತಿ ಎಂಬ ಹೆಗ್ಗಳಿಕೆ ಇದಕ್ಕಿದೆ. ಇದಕ್ಕೆ ಬೇಂದ್ರೆ, ಮರಿಯಪ್ಪ ಭಟ್‌, ವೆಂಕಟಸುಬ್ಬಯ್ಯ ಮೊದಲಾದವರ ಮೆಚ್ಚುಗೆ ಬಂದಿತ್ತು. 

Advertisement

ಇದೇ ಸಂದರ್ಭದಲ್ಲಿ ಬಿಎಚ್‌ಶ್ರೀ ಅವರ ಸಮಗ್ರ ಸಾಹಿತ್ಯ ಹೊರಬರುತ್ತಿದೆ. ನಾಟಕ, ಅನುವಾದ, ಕಾವ್ಯ, ವಿಮರ್ಶೆ, ವಿಚಾರ, ಸಂಕೀರ್ಣ ಹೀಗೆ 6,000 ಪುಟಗಳ ಐದು ಸಂಪುಟಗಳು ಹೊರಬರುತ್ತಿವೆ. ಮಹರ್ಷಿ ಅರವಿಂದರ ಗ್ರಂಥ ಆಧರಿಸಿದ ಅನುವಾದಕೃತಿ ವೇದರಹಸ್ಯ ಈಗಷ್ಟೇ ಮುದ್ರಣಗೊಳ್ಳುತ್ತಿದೆ. ರಮಣ ಮಹರ್ಷಿಯವರ ಪಾತ್‌ ವೇ ಆಫ್ ರಮಣ ಎರಡು ಸಂಪುಟಗಳಲ್ಲಿ ಕನ್ನಡಕ್ಕೆ ಅನುವಾದ ಮಾಡಿದ ಶ್ರೀಧರ್‌, ತಣ್ತೀಜ್ಞಾನದಲ್ಲಿಯೂ ಅನುಭವಿ.

ವೃತ್ತಿಜೀವನದ ಆರಂಭದಲ್ಲಿ “ಕರ್ಮವೀರ’ ಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದ ವೇಳೆ ಬರೆದ ಲೇಖನಗಳ ಪಾಲು ಬಲು ದೊಡ್ಡದು. ಆಗ ಪತ್ರಿಕೆಯ ಒಟ್ಟು 12 ಪುಟಗಳಲ್ಲಿ ಆರು ಪುಟಗಳನ್ನು ಶ್ರೀಧರರೇ ಬರೆಯುತ್ತಿದ್ದರು. “ಸುಭದ್ರಮ್ಮ’ ಹೆಸರಿನ ಮಹಿಳಾ ಕಾಲಮ್‌ ಬರೆಯುತ್ತಿದ್ದ ಶ್ರೀಧರರಲ್ಲಿ ಬೇಂದ್ರೆಯವರು “ಸುಭದ್ರಮ್ಮ ಎಲ್ಲಿದ್ದಾರೆಂದು ಕೇಳಿದರೆ ಏನು ಹೇಳುತ್ತೀರಿ? ಎಂದು ಕೇಳಿದರಂತೆ. “ಕುರ್ಚಿ ಮೇಲೆ ಒಂದು ಸೀರೆ ಇಟ್ಟು , ಈಗ ಬರ್ತಾರೆ ಎಂದು ಹೇಳುತ್ತೇನೆ’ ಎಂದು ಶ್ರೀಧರ್‌ ಉತ್ತರಿಸಿದ್ದರು. 

“ಬೆಂದರೆ ಬೇಂದ್ರೆಯಾದಾನು!’, “ಮಾಸ್ತಿ ಕನ್ನಡದ ಆಸ್ತಿ’ ಬಿಎಚ್‌ಶ್ರೀ ಅವರ ಛಾಪು ಮೂಡಿಸಿದ ನುಡಿಗಟ್ಟುಗಳು.

– ಮಟಪಾಡಿ ಕುಮಾರಸ್ವಾಮಿ

ನಿಂತವರು: ಬಿ.ಎಚ್‌.ಶ್ರೀಧರ, ವೈ.ಎನ್‌.ಕೆ.
ಕುಳಿತವರು : ದ. ಬಾ. ಕುಲಕರ್ಣಿ, ಗೋಪಾಲಕೃಷ್ಣ ಅಡಿಗ, ತ. ರಾ. ಸುಬ್ಬರಾವ್‌, ರಾಮಚಂದ್ರ ಶರ್ಮ, ಸು. ರಂ. ಎಕ್ಕುಂಡಿ

Advertisement

Udayavani is now on Telegram. Click here to join our channel and stay updated with the latest news.

Next