Advertisement

ರಾಜಕೀಯದ ಯಶಸ್ಸಿನ ಒತ್ತಡದಲ್ಲಿಯೂ ಭಟ್ಟರ ‘ಗರಡಿ’ಪ್ರವೇಶಿಸಿದ ಕೌರವ

03:50 PM Nov 20, 2021 | Team Udayavani |

ಬೆಂಗಳೂರು : ಕೃಷಿ ಸಚಿವ, ಕೌರವ ಖ್ಯಾತಿಯ ನಟ ಬಿ.ಸಿ. ಪಾಟೀಲ್ ಬಹುದಿನಗಳ ಬಳಿಕ ರಾಜಕೀಯ ಒತ್ತಡದ ನಡುವೆಯೂ ಭರ್ಜರಿ ಚಿತ್ರವೊಂದನ್ನು ನಿರ್ಮಾಣ ಮಾಡುತ್ತಿದ್ದು, ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ನಿರ್ದೇಶಿಸಲಿದ್ದಾರೆ.

Advertisement

‘ಗರಡಿ’ ಎಂಬ ಹೆಸರಿನ ಚಿತ್ರದಲ್ಲಿ ಯಶಸ್ ಸೂರ್ಯ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಚಿತ್ರದ ಪೋಸ್ಟರ್ ಬಿಡುಗಡೆಯಾಗಿ ಗಮನ ಸೆಳೆದಿದೆ.

ಬಿ.ಸಿ. ಪಾಟೀಲ್ ಅವರ ಹುಟ್ಟುಹಬ್ಬದ ದಿನದಂದು, ಸ್ವಕ್ಷೇತ್ರ ಹಿರೇಕೆರೂರಿನಲ್ಲಿ, ‘ಗರಡಿ’ ಸಿನಿಮಾದ ಮುಹೂರ್ತ ಕಾರ್ಯಕ್ರಮವನ್ನು ನೆರವೇರಿಸಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಚಿತ್ರದ ಟೈಟಲ್ ಬಿಡುಗಡೆ ಮಾಡಲಾಗಿತ್ತು.

ವಿ.ಹರಿಕೃಷ್ಣ ಅವರು ಸಂಗೀತ ನೀಡುತ್ತಿದ್ದು, ಕೆಲ ಚಿತ್ರಗಳಲ್ಲಿ ಈಗಾಗಲೇ ನಾಯಕನಾಗಿ ಕಾಣಿಸಿಕೊಂಡಿರುವ ಯಶಸ್ ಸೂರ್ಯ ಈ ಚಿತ್ರದ ಮೂಲಕ ಬ್ರೇಕ್ ನೀರಿಕ್ಷೆಯಲ್ಲಿದ್ದಾರೆ.

Advertisement

ಹೊಸ ಪ್ರಯೋಗಕ್ಕೆ ಮುಂದಾಗಿರುವ ಭಟ್ಟರು, ಈ ಬಾರಿ ಉತ್ತರ ಕನ್ನಡ ಸೊಗಡಿನ ಆ್ಯಕ್ಷನ್ ಚಿತ್ರ ನಿರ್ದೇಶಿಸುತ್ತಿದ್ದು, ಕಥೆಯಲ್ಲಿ ಮುಖ್ಯವಾಗಿ ಸಾಂಪ್ರದಾಯಿಕ ವ್ಯಾಯಾಮ ಶಾಲೆಗಳು ಮತ್ತು ಪೈಲ್ವಾನ್‌ಗಳ ಕಥಾ ಹಂದರ ಒಳಗೊಂಡಿದೆ ಎನ್ನುವ ವಿಚಾರ ತಿಳಿದು ಬಂದಿದೆ.

ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು,ಅವರ ಪಾತ್ರದ ಕುರಿತು ಕುತೂಹಲ ಮೂಡಿದೆ.

ದರ್ಶನ್ ಗಾಗಿ ವಿಭಿನ್ನ ಪಾತ್ರ ಸೃಷ್ಟಿಸಿದ್ದೇವೆ ಎಂದು ಭಟ್ಟರು ಈಗಾಗಲೇ ಹೇಳಿದ್ದಾರೆ.

ಉತ್ತರ ಕರ್ನಾಟಕದ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಯಲಿದೆ.

‘ಗರಡಿ’ ಚಿತ್ರಕ್ಕೆ ‘ಬಿ ರೆಡಿ’ ಎನ್ನುವ ಟ್ಯಾಗ್‌ಲೈನ್ ಇಡಲಾಗಿದ್ದು,ಕುತೂಹಲ ಮೂಡಿಸಿದೆ.

2016 ರಲ್ಲಿ ‘ಹ್ಯಾಪಿ ನ್ಯೂ ಇಯರ್’ ಚಿತ್ರ ನಿರ್ಮಾಣ ಮಾಡಿದ ಬಳಿಕ ಸಚಿವ ಬಿ.ಸಿ. ಪಾಟೀಲ್ ಅವರು ಸೌಮ್ಯ ಫಿಲಂಸ್ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಿಸುತ್ತಿದ್ದಾರೆ.

ಯಶಸ್ ಸೂರ್ಯ 2007ರಲ್ಲಿ ‘ಯುಗ ಯುಗಗಳೇ ಸಾಗಲಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

‘ಗಾಳಿಪಟ 2’ ಚಿತ್ರದ ಬಿಡುಗಡೆಯ ಸಿದ್ಧತೆಯಲ್ಲಿರುವ ಭಟ್ಟರು ‘ಗರಡಿ’ ಯಲ್ಲಿ  ಚಿತ್ರತಂಡವನ್ನು ಪಳಗಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next