ಪುತ್ತೂರು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ಜ. 22ರಂದು ಶ್ರೀ ರಾಮನ ಪ್ರತಿಷ್ಠಾ ಮಹೋತ್ಸವ ನಡೆಯಲಿದ್ದು ಆ ಪ್ರಯುಕ್ತ ನ. 27ರಂದು ಅಯೋಧ್ಯೆಯಿಂದ ಬರಲಿರುವ ಅಕ್ಷತೆಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ಸ್ವಾಗತಿಸಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜಿಲ್ಲಾ ಸಮಿತಿ ಸಂಚಾಲಕ ಡಾ| ಕೃಷ್ಣ ಪ್ರಸನ್ನ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ದೇಶಾದ್ಯಂತ ನಡೆಯುವ ಅಕ್ಷತೆ ವಿತರಣೆ ಕಾರ್ಯಕ್ರಮದ ಕುರಿತು ಮನೆ ಮನೆ ಸಂಪರ್ಕ ಅಭಿಯಾನ ಜ. 1ರಿಂದ 15ರ ತನಕ ನಡೆಯಲಿದೆ. ಅಭಿಯಾನದ ಯಶಸ್ಸಿಗೆ ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ರಚಿಸಲಾಗುವುದು ಎಂದರು.
ಅಯೋಧ್ಯೆಯಿಂದ ನ. 27ರಂದು ಜಿಲ್ಲೆಗೆ ಆಗಮಿಸುವ ಅಕ್ಷತೆಯನ್ನು ಪುತ್ತೂರು ದೇವಸ್ಥಾನದಲ್ಲಿ ಮಧ್ಯಾಹ್ನ 12 ಗಂಟೆಗೆ ಸ್ವಾಗತಿಸಿ ಬಳಿಕ ದೇವಸ್ಥಾನಕ್ಕೆ ಕೊಂಡೊಯ್ಯಲಾಗುವುದು. ಬಳಿಕ ಅಕ್ಷತೆಯನ್ನು ಶ್ರೀ ರಾಮನ ಪ್ರತಿಷ್ಠಾ ಮಾಹಿತಿ ಪತ್ರದ ಜತೆಗೆ ಜಿಲ್ಲೆಯ ಪ್ರತೀ ಹಿಂದೂಗಳ ಮನೆಗೂ ವಿತರಿಸಲಾಗುವುದು. ಈ ನಿಟ್ಟಿನಲ್ಲಿ ಜ. 7ರಂದು ಮಹಾಸಂಪರ್ಕ ಅಭಿಯಾನ ನಡೆಯಲಿದೆ ಎಂದರು.
ಶ್ರೀರಾಮನ ಪ್ರಾಣಪ್ರತಿಷ್ಠೆ ಸಂದರ್ಭ ಪ್ರತೀ ಹಿಂದೂ ಮನೆಯಲ್ಲಿ ಐದು ದೀಪಗಳನ್ನು ಹಚ್ಚುವ ಜತೆಗೆ ಪ್ರತೀ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಶ್ರೀ ರಾಮ ತಾರಕ ಮಂತ್ರ ಜಪ ಹಮ್ಮಿಕೊಳ್ಳುವಂತೆ ವಿನಂತಿಸಿದರು.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮೋಹನ್ದಾಸ್ ಕಾಣಿಯೂರು, ಬೆಟ್ಟ ಜನಾರ್ದನ, ಯುವರಾಜ್ ಪೆರಿಯತ್ತೋಡಿ ಪತ್ರಿಕಾ ಗೋಷ್ಠಿಯಲ್ಲಿದ್ದರು.