Advertisement

Ayodhya Ram Mandir: ಶ್ರೀರಾಮ ವಿಗ್ರಹದ ಶಿಲ್ಪಿ ಮೈಸೂರಿನ ಅರುಣ್‌!

01:08 AM Apr 20, 2023 | Team Udayavani |

ಅಯೋಧ್ಯೆ: ಅಯೋಧ್ಯಾ ಶ್ರೀರಾಮ ಮಂದಿರಕ್ಕೆ ಕರ್ನಾಟಕದಿಂದ ಎರಡು ಅಮೂಲ್ಯ ಕೊಡುಗೆಗಳು ಸಿಗಲಿವೆ. ಅಲ್ಲಿ ನಿರ್ಮಾಣಗೊಳ್ಳಲಿರುವ ಐದು ವರ್ಷ ವಯಸ್ಸಿನ ಧನುರ್ಧಾರಿ ಶ್ರೀರಾಮನ ವಿಗ್ರಹ ವನ್ನು ಕೆತ್ತಲಿರುವುದು ಮೈಸೂರಿನ ಅರುಣ್‌ ಯೋಗಿರಾಜ್‌. ಕೇದಾರ ನಾಥ ದಲ್ಲಿ ನಿರ್ಮಾಣ ಗೊಂಡಿರುವ ಶ್ರೀ ಶಂಕರಾಚಾರ್ಯರ ಅತ್ಯಾಕರ್ಷಕ ವಿಗ್ರಹವನ್ನು ಕೆತ್ತಿದ ಹಿರಿಮೆ ಅವರದು. ವಿಗ್ರಹದ ನಿರ್ಮಾಣಕ್ಕೆ ಬೇಕಾಗುವ ಕಪ್ಪು ವರ್ಣದ ಶಿಲೆಯನ್ನು ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ಮತ್ತು ಉಡುಪಿ ಜಿಲ್ಲೆಯ ಕಾರ್ಕಳದಿಂದ ಈಗಾಗಲೇ ಅಯೋಧ್ಯೆಗೆ ತಲುಪಿಸಲಾಗಿದೆ.

Advertisement

ಉದ್ದೇಶಿತ ವಿಗ್ರಹ ಒಟ್ಟು ಐದು ಅಡಿ ಇರಲಿದೆ. ಮಂಗಳವಾರ ತಡರಾತ್ರಿಯ ವರೆಗೆ ಅಯೋಧ್ಯೆಯಲ್ಲಿ ನಡೆದಿದ್ದ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪದಾಧಿ ಕಾರಿ ಗಳ ಸಭೆಯಲ್ಲಿ ವಿಗ್ರಹದ ವಿಶೇಷಗಳು ಮತ್ತು ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿ ತೀರ್ಮಾನಿಸಲಾಗಿತ್ತು.

ಈ ಬಗ್ಗೆ ಮಾಹಿತಿ ನೀಡಿದ ಟ್ರಸ್ಟ್‌ನ ಸದಸ್ಯ ಸ್ವಾಮಿ ತೀರ್ಥ ಪ್ರಸನ್ನಾಚಾರ್ಯ, ಭಗವಾನ್‌ ಶ್ರೀರಾಮನ ಐದು ವರ್ಷ ವಯಸ್ಸಿನ ಬಾಲ್ಯ ಸ್ವರೂಪದಂತೆ ವಿಗ್ರಹ ಇರಲಿದೆ. ಧನುಸ್ಸು ಮತ್ತು ಬಾಣಗಳನ್ನು ಹಿಡಿದಿರುವ ಐದು ಅಡಿ ಎತ್ತರದ ವಿಗ್ರಹ ಇದು. ಅದಕ್ಕಾಗಿ ಕಾರ್ಕಳ ಮತ್ತು ಹೆಗ್ಗಡದೇವನಕೋಟೆಯಿಂದ ಕೃಷ್ಣ ವರ್ಣದ ಶಿಲೆಯನ್ನು ಈಗಾಗಲೇ ತರಲಾಗಿದೆ. ಈ ಪೈಕಿ ಕಾರ್ಕಳದ ಶಿಲೆಯೇ ಅಂತಿಮವಾಗಿದೆ ಎಂದು ತಿಳಿದುಬಂದಿದೆ.

ಇವುಗಳಲ್ಲಿ ಒಂದನ್ನು ಆಯ್ದುಕೊಂಡು ಮೈಸೂರಿನ ಅರುಣ್‌ ಯೋಗಿರಾಜ್‌ ವಿಗ್ರಹ ಕಟೆಯ ಲಿದ್ದಾರೆ. ಎಲ್ಲಿಂದ ತಂದಿರುವ ಶಿಲೆ ಯಿಂದ ವಿಗ್ರಹ ನಿರ್ಮಿಸಬೇಕು ಎಂಬ ಬಗ್ಗೆ ಅವರೇ ತೀರ್ಮಾನಿಸಲಿದ್ದಾರೆ ಎಂದಿದ್ದಾರೆ.

ಹಿರಿಯರ ಸಲಹೆ
ಸ್ವಾಮೀಜಿಗಳು, ಶಿಲ್ಪಿಗಳು, ಹಿಂದೂ ಸಮುದಾಯದ ಗ್ರಂಥಗಳು ಮತ್ತು ಟ್ರಸ್ಟ್‌ನ ಸದಸ್ಯರ ಜತೆಗೆ ಮಾತುಕತೆ ನಡೆಸಿ ಉದ್ದೇಶಿತ ವಿಗ್ರಹ ಕೃಷ್ಣ ವರ್ಣದಲ್ಲಿಯೇ ಇರಬೇಕು ಎಂದು ತೀರ್ಮಾನಿಸಿ, ಅಂತಿಮ ನಿರ್ಧಾರಕ್ಕೆ ಬರಲಾಯಿತು ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯ ದರ್ಶಿ ಚಂಪತ್‌ ರಾಯ್‌ ಸ್ಪಷ್ಟನೆ ನೀಡಿ ದ್ದಾರೆ. ಅಯೋಧ್ಯೆಯಲ್ಲಿ ಶೀಘ್ರವೇ ಮಂದಿರ ನಿರ್ಮಾಣವಾಗಿ ರಾಮ ಲಲ್ಲಾನ ಪ್ರತಿ ಷ್ಠಾಪನೆ ಆಗಬೇಕು ಎನ್ನುವುದು ಕೋಟ್ಯಂತರ ಹಿಂದೂಗಳ ಬಯಕೆ. ಅದು ಶೀಘ್ರವೇ ಈಡೇರಲಿದೆ ಎಂದು ರಾಯ್‌ ವಿವರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು 2020ರ ಆ. 2ರಂದು ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. 2019ರ ನ. 9ರಂದು ಸುಪ್ರೀಂ ಕೋರ್ಟ್‌ ಅಯೋಧ್ಯೆಯಲ್ಲಿ 2.77 ಎಕರೆ ಜಮೀನು ಹಿಂದೂಗಳಿಗೆ ಸೇರಿದ್ದು, ಮಸೀದಿ ನಿರ್ಮಾಣಕ್ಕಾಗಿ ಐದು ಎಕರೆ ಜಮೀನು ನೀಡಬೇಕು ಎಂದು ತೀರ್ಪು ನೀಡಿತ್ತು.

Advertisement

ಕಾರ್ಕಳದ್ದೇ ಶಿಲೆ?
ಕಾರ್ಕಳ: ರಾಮ ಲಲ್ಲಾ ಪ್ರತಿಮೆ ಕೆತ್ತೆನೆಗಾಗಿ ಕಾರ್ಕಳದ ನೆಲ್ಲಿಕಾರಿನ ಶಿಲೆಯನ್ನು ಬಳಕೆ ಮಾಡುವ ಸಾಧ್ಯತೆ ಇದೆ. ಈ ಸಂಬಂಧ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.

ಮೈಸೂರಿನ ಹೆಗ್ಗಡೆ ದೇವನ ಕೋಟೆ ಮತ್ತು ಕಾರ್ಕಳದ ಈದು ಗ್ರಾಮ ಸಹಿತ ವಿವಿಧ ಕಡೆಗಳಿಂದ ಐದು ಶಿಲೆಗಳನ್ನು ಈಗಾಗಲೇ ಅಯೋಧ್ಯೆಗೆ ಕೊಂಡೊಯ್ಯಲಾಗಿದ್ದು, ಹೆಗ್ಗಡ ದೇವನ ಕೋಟೆ ಮತ್ತು ಕಾರ್ಕಳದ ಕೃಷ್ಣ ಶಿಲೆಗಳು ಅಂತಿಮ ಹಂತದ ಪರಿಶೀಲನೆಯಲ್ಲಿ ಆಯ್ಕೆಯಾಗಿತ್ತು.

ಕಾರ್ಕಳದ ಕೃಷ್ಣ ಶಿಲೆ ಈದು ಗ್ರಾಮದ ತುಂಗಾ ಪೂಜಾರಿಯವರ ಜಮೀನಿನಿಂದ ಆರಿಸಿದ್ದು. ಇದೇ ಶಿಲೆ ಆಯ್ಕೆಯಾದರೆ ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯರನ್ನು ಆರಾಧಿಸುವ ಮನೆತನದ ನೆಲದಲ್ಲಿ ಶಬರಿಯಂತೆ ಮಲಗಿದ್ದ ಶಿಲೆ ಶ್ರೀರಾಮನ ವಿಗ್ರಹವಾಗಲಿದೆ ಎನ್ನುವುದು ವಿಶೇಷ.

ನೇಪಾಲದ ಸಾಲಿಗ್ರಾಮ ಶಿಲೆ ಸಹಿತ ಹಲವು ಕಡೆಗಳಿಂದ ಶ್ರೀ ರಾಮ ವಿಗ್ರಹ ನಿರ್ಮಾಣಕ್ಕಾಗಿ ಶಿಲೆಗಳನ್ನು ಅಯೋಧ್ಯೆಗೆ ತರಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next