Advertisement

Ayodhya Ram Mandir: ಕಂಡು, ಅನುಭವಿಸಿ ಧನ್ಯರಾದೆವು…

12:18 AM Jan 23, 2024 | Team Udayavani |

ಮಂದಿರ ಸುಂದರವಾಗಿ ಮೂಡಿಬಂದಿದೆ
ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರವುಸುಂದರವಾಗಿ ಮೂಡಿಬಂದಿದೆ. ಶ್ರೀರಾಮನ ಬಿಂಬದ ಪ್ರಾಣಪ್ರತಿಷ್ಠೆ ಸೂಕ್ತ ರೀತಿಯಲ್ಲಿ ಜರಗಿತು. ಪ್ರತಿಷ್ಠಿತ‌ ಮಠಾಧಿಪತಿಗಳು ಮತ್ತು ಎಲ್ಲ ರಂಗದ ಪ್ರಮುಖರು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮ ಅತ್ಯಂತ ಶಿಸ್ತಿನಿಂದ ನಡೆದಿದೆ. ಅಯೋಧ್ಯೆಯ ನಗರವನ್ನು ಹೂಗಳಿಂದ ಸಿಂಗರಿಸಿದ್ದರು. ಅಲ್ಲಲ್ಲಿ ಸ್ವಾಗತ ನೃತ್ಯ ನಡೆಯುತ್ತಿತ್ತು. ಎಲ್ಲ ರೀತಿಯಿಂದಲೂ ಕಾರ್ಯಕ್ರಮವು ವ್ಯವಸ್ಥಿತ ವಾಗಿಯೇ ನಡೆಯಿತು. ಪ್ರಾಣ ಪ್ರತಿಷ್ಠೆ ಕಂಡು ಮಹಾತ್ಮರೆಲ್ಲರೂ ಪ್ರಸನ್ನರಾದರು. ನಾಳೆಯಿಂದ ಮಂದಿರಕ್ಕೆ ಮುಕ್ತ ದರ್ಶನ ಎಂದು ಘೋಷಿಸಲಾಗಿದೆ. ಪ್ರಧಾನಿ ಮೋದಿ ಎಲ್ಲರನ್ನೂ ಉದ್ದೇಶಿಸಿ ಮಾತನಾಡಿ, ಎಲ್ಲ ಸಂತರ ಬಳಿ ಬಂದು ಎಲ್ಲರನ್ನೂ ಗೌರವದಿಂದ ಮಾತನಾಡಿಸಿದ್ದು ಸಂತೋಷ ತಂದಿದೆ. ಇದೊಂದು ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗುವ ಭಾಗ್ಯ ಸಿಕ್ಕಿತು. ಅದೇ ನನ್ನ ಭಾಗ್ಯ.
-ಡಾ| ಡಿ. ವೀರೇಂದ್ರ ಹೆಗ್ಗಡೆ,
ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ

Advertisement

ಅಚ್ಚರಿಯ ಭಾಗ್ಯ
ಇದೊಂದು ಐತಿಹಾಸಿಕ ಕಾರ್ಯಕ್ರಮ.ಇದರಲ್ಲಿ ಭಾಗಿಯಾಗಿರುವುದೇ ನಮ್ಮ ಭಾಗ್ಯ. ನಮ್ಮ ಕಾಲದಲ್ಲಿ ಭವ್ಯರಾಮ ಮಂದಿರ ನಿಮಾಣ, ರಾಮನ ಮೂರ್ತಿಯ ಪ್ರತಿಷ್ಠೆಯ ಕಾರ್ಯದಲ್ಲಿ ಭಾಗವಹಿಸುವುದೇ ಭಾಗ್ಯ. ರಾಮನ ದರ್ಶನವನ್ನು ಮಾಡಿ ಪುಳಕಿತರಾಗಿದ್ದೇವೆ. ಭಗವಂತನ ಮಂದಹಾಸದ ಮುಖ ದರ್ಶನ, ಆನಂದ ಅನುಭವಿಸಿದ್ದೇವೆ. ಅದನ್ನು ಬರೀ ಮಾತಿನಲ್ಲಿ ಹೇಳಲಾಗದು. ನಮ್ಮ ಬಾಳಿಗೆ ಇದೊಂದು ಅಚ್ಚರಿ. ಟ್ರಸ್ಟ್‌ನಿಂದ ಆಹ್ವಾನ ಪತ್ರ ಬಂದ ತತ್‌ಕ್ಷಣವೇ ಸಂಬಂಧಪಟ್ಟವರಿಗೆ ಬರುವುದಾಗಿ ಖಚಿತಪಡಿಸಿ, ಹೊರಟೇ ಬಿಟ್ಟೆವು. ವ್ಯವಸ್ಥೆ ಎಲ್ಲವೂ ಚೆನ್ನಾಗಿತ್ತು.ಭಗವಂತ ಶ್ರೀ ರಾಮನ ದರ್ಶನವೂ ಅಷ್ಟೇ ಚೆನ್ನಾಗಿ ಆಯಿತು. ಬದುಕು ಧನ್ಯವಾಯಿತು.
 -ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಉಡುಪಿ ಕಾಣಿಯೂರು ಮಠಾಧೀಶರು

ಈಗಿನ ಅಯೋಧ್ಯೆಗೆ ಹೋಲಿಕೆ ಬೇಡ
ಮೊದಲಿದ್ದ ಅಯೋಧ್ಯೆಗೆ ಈಗಿನದ್ದನ್ನು ಹೋಲಿಸುವುದೇ ಅಸಾಧ್ಯ. ಅಭೂತಪೂರ್ವ ರೀತಿಯಲ್ಲಿ ಅಭಿವೃದ್ಧಿಯಾಗಿದೆ. ಹಿಂದೆ ಅಯೋಧ್ಯೆಗೆ ಬಂದಾಗ ಅಲ್ಲಲ್ಲಿ ಚಿಕ್ಕ ಚಿಕ್ಕ ದೇವಸ್ಥಾನಗಳಿದ್ದವು, ಕೆಲವು ಆಶ್ರಮಗಳಿದ್ದವು. ಆದರೆ ಸ್ವತ್ಛತೆಯ ಕೊರತೆ ಇತ್ತು. ಈಗ ಪೂರ್ತಿ ಬದಲಾಗಿದೆ. ಮುಂದಿನ ಒಂದು ವರ್ಷದಲ್ಲಿ ಗಣನೀಯವಾಗಿ ಧಾರಣ ಸಾಮರ್ಥ್ಯ ಸುಧಾರಣೆಯಾಗಲಿದೆ. ರಾಮ ಮಂದಿರವಂತೂ ಅದ್ಭುತ. ಊಟೋಪ ಚಾರ, ವಸತಿ ಎಲ್ಲವೂ ಇವೆ.ಆದರೆ ಅಲ್ಲಿ ಕಾಣಿಕೆ ಡಬ್ಬ, ಪೂಜಾ ಸೇವೆ ಇಲ್ಲ. ದುರ್ಬಳಕೆ ಯಾಗಬಾರದು ಎಂಬ ಕಾರಣಕ್ಕೆ ಈ ಕ್ರಮ. ಹಣ ನೀಡುವುದಾದರೆ ಪೂರ್ಣ ವಿಳಾಸ ದೊಂದಿಗೆ ನೀಡಬಹುದು. ನಾನು ನನ್ನ ಶ್ರೀಮತಿಯೊಂದಿಗೆ ಬಂದಿದ್ದೇನೆ. ನಾವಿಬ್ಬರೂ ಕಾರ್ಯಕ್ರಮವನ್ನು ಆನಂದದಿಂದ ಹಾಗೂ ಪೂಜನೀಯ ಭಾವದೊಂದಿಗೆ ಕಣ್ತುಂಬಿಕೊಂಡೆವು.
 – ಪ್ರೊ| ಎಂ.ಬಿ. ಪುರಾಣಿಕ್‌
ವಿಶ್ವ ಹಿಂದೂ ಪರಿಷತ್‌ ಪ್ರಮುಖರು, ಮಂಗಳೂರು

ಅಯೋಧ್ಯೆಯಲ್ಲಿ ರಾಮರಾಜ್ಯ ವಾತಾವರಣ
ಅದ್ಭುತ, ಅತ್ಯದ್ಭುತ ಎನ್ನುವ ರೀತಿಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾ ಕಾರ್ಯ ನಡೆಯಿತು. ಪದಗಳಲ್ಲಿ ವರ್ಣಿಸಲಾಗದ ಉತ್ಸವದ ಜತೆಗೆ ಹೃದಯ ತುಂಬಿ ಬಂದ ಅನುಭವ. ರಾಮರಾಜ್ಯ ಏನು ಎಂಬುದಕ್ಕೆ ಅಯೋಧ್ಯೆಯ ವಾತಾವರಣ ಉತ್ತರ ನೀಡಿದೆ. ಶ್ರೀರಾಮನಿಗೂ ಕರ್ನಾಟಕಕ್ಕೂ ವಿಶೇಷ ಸಂಬಂಧ ಇದೆ ಎನ್ನುವ ರೀತಿಯಲ್ಲಿ ಇಲ್ಲಿನ ಕಲ್ಲುಗಳು, ಹೂವುಗಳನ್ನು ಬಳಸಲಾಗಿತ್ತು. ಮೂರ್ತಿಯನ್ನು ಕೆತ್ತಿದ ಯೋಗಿರಾಜ್‌ ಅವರನ್ನೂ ಭೇಟಿಯಾದೆ. ಶ್ರೀರಾಮ ವಿಗ್ರಹವನ್ನು ಬಹಳ ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತು.
-ಡಾ| ಪ್ರಭಾಕರ ಭಟ್‌ ಕಲ್ಲಡ್ಕ, ಹಿರಿಯ ಆರ್‌ಎಸ್‌ಎಸ್‌ ಮುಂದಾಳು

ನನ್ನ ಬದುಕಿನ ದೊಡ್ಡ ಪುಣ್ಯ: ರಿಷಬ್‌ ಶೆಟ್ಟಿ
ಅಯೋಧ್ಯೆಗೆ ಈ ಸುದಿನದಂದು ಬರಲು ಅವಕಾಶ ಸಿಕ್ಕಿರುವುದು ರಾಮನ ಭಕ್ತನಾಗಿ ನನ್ನ ಪುಣ್ಯ. ಅದ್ಭುತ ಅನುಭವ. ಇಂಥದ್ದೊಂದು ಅವಕಾಶ ಸಿಗುತ್ತದೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ಚಿಕ್ಕ ವಯಸ್ಸಿನಲ್ಲಿ ನಮ್ಮ ಮನೆಗಳಲ್ಲಿ ರಾಮನ ಭಜನೆ ಮಾಡುತ್ತಿದ್ದೆವು. ನಮ್ಮ ಊರಿನ ಪ್ರದೇಶ ರಾಮ ಭಜನೆ, ಕುಣಿತ ಭಜನೆಗೆ ಹೆಸರುವಾಸಿ. ಅದಕ್ಕೋ ಏನೋ ರಾಮನೆಂದರೆ ವಿಶೇಷ ಭಕ್ತಿ. ಅಖಂಡ ಭಜನೆ ಕೂಡ ನಡೆಯುತ್ತಿತ್ತು. ಆಗಿನಿಂದಲೇ ಭಜನೆಗಳಲ್ಲಿ ತೊಡಗಿಕೊಂಡು ಬಂದಂಥವನು. ಹಾಗಾಗಿ ನನ್ನ ಜೀವನದಲ್ಲಿ, “ಕಾಂತಾರ’ ಆದ ಮೇಲೆ ಇಂಥ ದ್ದೊಂದು ಅವಕಾಶ ಸಿಗುತ್ತದೆ ಅಯೋಧ್ಯೆಗೆ ಬರುವುದಕ್ಕೆ, ಅದೂ ಇಂಥ ಸಂದರ್ಭ ದಲ್ಲಿ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಎಲ್ಲರಿಗೂ ತುಂಬಾ ಋಣಿ.
– ರಿಷಬ್‌ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ

Advertisement

ಪೂರ್ವಜನ್ಮದ ಪುಣ್ಯ  
ಅಯೋಧ್ಯೆಯಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪನೆ ಯನ್ನು ಕಾಣಲು ಸಿಕ್ಕಿದ ಅವಕಾಶವೇ ನಮ್ಮ ಪೂರ್ವಜನ್ಮದ ಪುಣ್ಯ ಎಂದು ಭಾವಿಸುತ್ತೇವೆ. ಈ ಪವಿತ್ರ ಕಾರ್ಯದಲ್ಲಿ ಭಾಗವಹಿಸಿ ಅದರ ಸಾಕ್ಷಿಯಾದುದಕ್ಕೆ ಅತೀವ ತೃಪ್ತಿಯನ್ನು ತಂದು ಕೊಟ್ಟಿದೆ. ರಾಮಚಂದ್ರ ತ್ರೇತಾಯುಗಕ್ಕೆ ಸಂಬಂಧಿಸಿದವನಾದರೂ ಈಗಲೂ ಆತನ ಪ್ರಭಾವಲಯ ವಿಗ್ರಹದಲ್ಲಿ ಕಂಡಿತು. ಜನರು ರಾಮದೇವರ ಆದರ್ಶಗಳನ್ನು ಮೈಗೂಡಿಸಿಕೊಂಡು ರಾಮರಾಜ್ಯದ ಸ್ಥಾಪನೆಗೆ ಕಾರಣರಾಗುವಂತಾಗಲಿ. ಜಗಕೆ ಸನ್ಮಂಗಲವಾಗಲಿ.
– ಶ್ರೀ ವೇದವೇರ್ಧನತೀರ್ಥ ಶ್ರೀಪಾದರು,
ಉಡುಪಿ ಶೀರೂರು ಮಠಾಧೀಶರು

ಶ್ರೇಷ್ಠ ಅಧ್ಯಾತ್ಮ ಆನಂದದ ಅನುಭವ
ಜೀವನದ ಶ್ರೇಷ್ಠ ಆಧ್ಯಾತ್ಮದ ಆನಂದದ ಅನುಭವ ಇಂದು ನಮಗೆಲ್ಲ ಆಯಿತು. ಐವರು ತೀರ್ಥಂಕರರು, ಭರತ, ಬಾಹುಬಲಿ ಹಾಗೂ ಶ್ರೀರಾಮನ ಜನ್ಮಭೂಮಿಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮಂದಿರದಲ್ಲಿ ರಾಮ ಲಲ್ಲಾನ ಪ್ರತಿಷ್ಠೆ ನಡೆದಿದೆ. ಅತೀ ಹೆಚ್ಚು ಸಂಖ್ಯೆಯ ಸಂತರು ಪಾಲ್ಗೊಂಡು ಲೋಕಕಲ್ಯಾಣದ ಸಂದೇಶವನ್ನು ವಿಶ್ವಕ್ಕೆ ನೀಡಿದ್ದಾರೆ. ಶ್ರೀರಾಮನ ಪ್ರತಿಷ್ಠೆಯು ಸನಾತನ ಪರಂಪರೆಯ 500 ವರ್ಷಗಳ ಹೋರಾಟಕ್ಕೆ ದೇವರಿಂದ ಅನುಗ್ರಹ ಸಿಕ್ಕಿದ ಅಪೂರ್ವ ಕ್ಷಣ.
– ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ,
ಮೂಡುಬಿದಿರೆ ಶ್ರೀ ದಿಗಂಬರ ಜೈನ ಮಠ

ಭಕ್ತಿ ಪರವಶತೆ ಮೂಡಿಸಿದೆ
ಆಯೋಧ್ಯೆಯ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆಯ ಐತಿಹಾಸಿಕ ಪುಣ್ಯ ಸಮಾರಂಭದಲ್ಲಿ ಭಾಗಿಯಾಗಿರು ವುದೇ ಖುಷಿಯ ಸಂಗತಿ. ದೇವಸ್ಥಾನದ ಶಿಲ್ಪಕಲಾ ಕುಸುರಿ ಕೆಲಸಗಳು ಅತ್ಯಂತ ನಾಜೂಕಾಗಿ ಚಿತ್ತಾಕರ್ಷಕವಾಗಿದ್ದು ಕಣ್ಮನ ತಣಿಸುತ್ತವೆ. ಬಾಲರಾಮನ ಮುಗ್ಧ ಮೂರ್ತಿಯು ನಯನ ಮನೋಹರವಾಗಿ ಭಕ್ತಿ ಪರವಶತೆಯನ್ನು ಮೂಡಿಸುತ್ತಿದೆ. ಸಾಧು ಸಂತರಿಗೆ ಸುವ್ಯವಸ್ಥೆ ಇತ್ತು. ಅಯೋಧ್ಯೆಯಂತೆ ಉಳಿದ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಪೂರ್ಣ ಪ್ರಮಾಣದ ಆರಾಧನೆಗಾಗಿ ಅತಿ ಶೀಘ್ರವಾಗಿ ಹಿಂದೂ ಸಮಾಜಕ್ಕೆ ದೊರೆಯುವಂತಾಗಲಿ.
-ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ,
ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶರು, ಕಟಪಾಡಿ ಪಡುಕುತ್ಯಾರು

ರಾಮ ಪ್ರತಿಷ್ಠೆಯ ವೇಳೆ ವಿಸ್ಮಯ
ಅಯೋಧ್ಯೆಯ ಪ್ರಭು ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆಯ ಪರಮ ಪಾವನ ಸಂದರ್ಭವನ್ನು ದೇಶವೇ ಕಂಡು ಸಂಭ್ರಮಿಸಿದೆ. ಆ ಪುಣ್ಯ ಘಳಿಗೆ ಕೆಲವು ವಿಸ್ಮಯಗಳಿಗೂ ಸಾಕ್ಷಿಯಾಗಿದೆ. ಶ್ರೀ ರಾಮನ ಪ್ರತಿಷ್ಠೆಯ ಸಂದರ್ಭದಲ್ಲೇ ಗರುಡ ಸಂಚಾರವಾಗಿದೆ. ಅಲ್ಲಿಯವರೆಗೆ ಕಾಣಿಸದ ಗರುಡ ಪ್ರಾಣ ಪ್ರತಿಷ್ಠೆಯ ಪುಣ್ಯ ಘಳಿಗೆಯ ವೇಳೆಯೇ ಕಾಣಿಸಿದ್ದು ವಿಸ್ಮಯ.ನಾಲ್ಕು ದಿನಗಳಿಂದ ಅಯೋಧ್ಯೆಯಲ್ಲಿ ನಾವಿದ್ದೇವೆ. ವಾನರರನ್ನು ಆಗ ಕಂಡಿದ್ದಿಲ್ಲ. ಆದರೆ ರಾಮನ ಪ್ರತಿಷ್ಠೆ ಆದ ಕೆಲವೇ ಹೊತ್ತಿನಲ್ಲಿ ಅಯೋಧ್ಯೆ ಪರಿಸರದಲ್ಲಿ ಕಪಿ ಪರಿವಾರವೇ ಕಾಣಸಿಗುತ್ತಿದೆ. ಇದು ಮತ್ತೂಂದು ವಿಸ್ಮಯ. ಅಂತೂ ಸುದೀರ್ಘ‌ ಕಾಲದ ಆಂದೋಲನ ಈಡೇರಿದೆ. ರಾಮನಿಗೆ ಅಯೋಧ್ಯೆಯ ಮಂದಿರ ಸಮರ್ಪಿತ ಆಗಿರುವುದು ಸರ್ವರಿಗೂ ಹೆಮೆಯ ಸಂಗತಿ.
-ಶ್ರೀ ರಾಜಶೇಖರಾನಂದ ಸ್ವಾಮೀಜಿ, ವಜ್ರದೇಹಿ ಶ್ರೀಮಠ

Advertisement

Udayavani is now on Telegram. Click here to join our channel and stay updated with the latest news.

Next