Advertisement

Ayodhya: ಗರ್ಭಗುಡಿಯಲ್ಲಿ ಹಳೆ ರಾಮಲಲ್ಲಾನಿಗೂ ಪೂಜೆ!ಬಾಲರಾಮನೇ ಏಕೆ?

04:13 PM Jan 22, 2024 | Team Udayavani |

1949 ಡಿಸೆಂಬರ್‌ 22 ರಾತ್ರಿ- ವಿವಾದಿತ ಕಟ್ಟಡದಲ್ಲಿ ಏಕಾಏಕಿ ರಾಮಲಲ್ಲಾ ವಿಗ್ರಹ ಕಾಣಿಸಿಕೊಳ್ಳುತ್ತದೆ. ಅಷ್ಟರವರೆಗೆ ಅದು ಕಣ್ಮರೆಯಾಗಿತ್ತು ಎಂದೇ ಭಾವಿಸಲಾಗಿತ್ತು. ಇದು ರಾಮನ ಪವಾಡ ಎಂದು ನಂಬಿದವರೇ ಹೆಚ್ಚು, ಇದನ್ನು ಕೆಲವರು ರಾತ್ರೋರಾತ್ರಿ ಇಟ್ಟಿದ್ದರು ಎಂಬ ಆರೋಪವೂ ಇದೆ. ಈ ವಿಗ್ರಹ ಸಿಕ್ಕಿದಂದಿ ನಿಂದ ರಾಮ ಮಂದಿರ ಅಭಿಯಾನಕ್ಕೆ ಹೊಸ ಸ್ವರೂಪವೇ ಸಿಕ್ಕಿತು. ಒಂದು ಹಂತದಲ್ಲಿ, ಕಾನೂನು ಹೋರಾಟದಲ್ಲಿ ಈ ವಿಗ್ರಹ “ರಾಮಲಲ್ಲಾ ವಿರಾಜ್‌ಮಾನ್‌’ ಎಂಬ ಹೆಸರಿನಲ್ಲಿ ಪ್ರಧಾನ ದಾವೆದಾರನಾಗಿ ಕಾಣಿಸಿ ಕೊಳ್ಳುತ್ತದೆ! ಈಗ ಒಂಬತ್ತು ಇಂಚಿನ ಅದೇ ವಿಗ್ರಹ ಗರ್ಭಗುಡಿಯಲ್ಲಿ ರಾಮಲಲ್ಲಾನ ನೂತನ ವಿಗ್ರಹ ಜತೆ ಪ್ರತಿಷ್ಠಾಪಿತಗೊಳ್ಳಲಿದೆ. ಅದೇ ವೇಳೆ ಹಳೆಯ ರಾಮಲಲ್ಲಾ ವಿಗ್ರಹವೂ ಮಂದಿರದಲ್ಲೇ ಇರಲಿದೆ. ಅದಕ್ಕೂ ಪೂಜೆ ಸಲ್ಲಲಿದೆ.

Advertisement

ಮಂದಿರದಲ್ಲಿರುತ್ತಾರೆ ತ್ರಿವಳಿ ಬಾಲರಾಮರು

*ಮೈಸೂರಿನ ಅರುಣ್‌ರಿಂದ ರೂಪುಗೊಂಡ ಬಾಲರಾಮನಿಗೆ ಭರತಖಂಡದ ಪೂಜೆ

*ಬಾಲರಾಮನ ಮೂರು ಮೂರ್ತಿಗಳನ್ನು ಕೆತ್ತಿದ ಮೂವರು ಪ್ರತ್ಯೇಕ ಶಿಲ್ಪಿಗಳು

*ಹೊನ್ನಾವರದ ಗಣೇಶ್‌ ಭಟ್‌, ರಾಜಸ್ಥಾನದ ಸತ್ಯನಾರಾಯಣರಿಂದಲೂ ಕೆತ್ತನೆ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲು ಅರುಣ್‌ ಶಿಲ್ಪ ಆಯ್ಕೆ

Advertisement

*ಉಳಿದೆರಡು ಬಾಲರಾಮ ಶಿಲ್ಪ ಗಳಿಗೂ ಸ್ಥಾನ, ನಿತ್ಯಪೂಜೆ

ಬಾಲರಾಮನೇ ಏಕೆ?
ಅಯೋಧ್ಯೆ ಶ್ರೀ ರಾಮನ ಜನ್ಮಭೂಮಿ. ಅವನು ಆಡಿ ಬೆಳೆದ ಊರು. ಹೀಗಾಗಿ ಇಲ್ಲಿ ಕಟ್ಟುವ ಮಂದಿರಲ್ಲಿ ಬಾಲ ರಾಮನೇ ಇರಲಿ ಎಂದು ತೀರ್ಮಾನಕ್ಕೆ ಬರಲಾಯಿತು. ಅದರಲ್ಲೂ ಐದು ವರ್ಷದೊಳಗಿನ ಮಕ್ಕಳ ಭಾವ ಅತ್ಯಂತ ಮುಗ್ಧವಾಗಿರುವುದರಿಂದ ಐದು ವರ್ಷದೊಳಗಿನ ಮೂರ್ತಿಯನ್ನೇ ನಿಲ್ಲಿಸಲು ನಿರ್ಧರಿಸಲಾಯಿತು

ರಾಮ ಶಿಲ್ಪ ಕೆತ್ತನೆಗೆ ಇದ್ದವು; ಹತ್ತಾರು ನಿಯಮಗಳು
500 ವರ್ಷಗಳ ನಿರಂತರ ಹೋರಾಟದ ಬಳಿಕ ನಿರ್ಮಾಣಗೊಂಡಿರುವ ಶ್ರೀರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ವಿಗ್ರಹ ಸಿದ್ಧಪಡಿಸುವುದೆಂದರೆ ಸುಲಭದ ಸಂಗತಿಯೇ? ಈ ವಿಗ್ರಹ ಕೆತ್ತನೆಯೇ ಒಂದು ರೋಚಕ, ಅಸಾಮಾನ್ಯ ಸಾಹಸಗಾಥೆ. ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ವಿಗ್ರಹ ನಿರ್ಮಾಣಕ್ಕೆ ಸಹಜವಾಗಿ ಹಲವು ನಿಬಂಧನೆಗಳನ್ನು ವಿಧಿಸಿತ್ತು. ಅದಕ್ಕೆ ತಕ್ಕಂತೆ ಪರಿಪೂರ್ಣತೆ ಬರಲು ಮೂವರು ಶಿಲ್ಪಿಗಳು ಅತ್ಯಂತ ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿದ್ದಾರೆ.

ನಿಬಂಧನೆಗಳೇನು?
* 51 ಇಂಚು ಅಥವಾ 4.25 ಅಡಿ ಎತ್ತರದ ಬಾಲರಾಮನ ವಿಗ್ರಹವನ್ನೇ ಕೆತ್ತಬೇಕು.
*ವಿಗ್ರಹ ಕಮಲಪೀಠದ ಮೇಲೆ ನಿಂತಿರುವ ಭಂಗಿಯಲ್ಲಿರಬೇಕು. ಐದು ವರ್ಷದ ಬಾಲರಾಮನ ಭಾವವನ್ನೇ ಪ್ರಕಟಿಸಬೇಕು.
*ರಾಮಾಯಣದಲ್ಲಿ ವರ್ಣಿಸಿ ರುವ ಶ್ರೀರಾಮನ ಲಕ್ಷಣಗಳು ಇದರಲ್ಲಿ ಬರಬೇಕು. ಅರ್ಥಾತ್‌ ಸಾಮುದ್ರಿಕ ಶಾಸ್ತ್ರದಲ್ಲಿ ವರ್ಣಿಸಿರುವಂತೆ ರಾಮನ ಶರೀರ ಲಕ್ಷಣಗಳಿರ ಬೇಕು. ಆ ಪ್ರಕಾರ ರಾಮ ಅಜಾನು ಬಾಹು. ಆದ್ದರಿಂದ ಅವನ ತೋಳುಗಳು ಮಂಡಿಗೆ ತಾಕಿಕೊಂಡಿರಬೇಕು.
*ಕಣ್ಣು ಮತ್ತು ಕಿವಿಗಳೂ ಶಾಸ್ತ್ರದಲ್ಲಿ ಹೇಳಿರುವ ಅಳತೆಗೆ ತಕ್ಕಂತಿರಬೇಕು, ಆಕರ್ಷಕವಾಗಿರಬೇಕು.
*ಕೆನ್ನೆಗಳು, ಗಲ್ಲ ಅತ್ಯಂತ ಮೃದುವಾಗಿರಬೇಕು ಅರ್ಥಾತ್‌ ನಯವಾಗಿ ಇರಬೇಕು.

ಚೈತ್ರ ಮಾಸ,ಶುಕ್ಲಪಕ್ಷ ನವಮಿಗೆ ರಾಮನ ಹಣೆಗೆ ಸೂರ್ಯಕಿರಣ
ಶ್ರೀರಾಮವಿಗ್ರಹವನ್ನು ಎಷ್ಟು ಎತ್ತರದಲ್ಲಿ ಪ್ರತಿಷ್ಠಾಪಿಸಬೇಕು, ಅದರ ಲೆಕ್ಕಾಚಾರಗಳು ಹೇಗಿರಬೇಕು ಎಂಬುದಕ್ಕೆ ಪುಣೆಯ
ಬಾಹ್ಯಾಕಾಶ ವಿಜ್ಞಾನಿಗಳ ಸಲಹೆ ಪಡೆಯಲಾಗಿದೆ. ಪ್ರತೀವರ್ಷ ಚೈತ್ರಮಾಸ,  ಶುಕ್ಲಪಕ್ಷ, ನವಮಿ (9ನೇ ದಿನ)ಯಂದು ಶ್ರೀರಾಮನ ವಿಗ್ರಹದ ಮೇಲೆ ನೇರವಾಗಿ ಸೂರ್ಯಕಿರಣಗಳು ಬೀಳಲಿವೆ. ಆ ದಿನ ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಬಾಲರಾಮನ ಹಣೆಯ ಮೇಲೆ ಸೂರ್ಯಕಿರಣಗಳ ಸ್ಪರ್ಶವಾಗಲಿದೆ. ಪ್ರತಿಷ್ಠಾಪನೆಯ ಸ್ಥಳ, ಎತ್ತರವನ್ನು ಅಷ್ಟು ನಿಖರವಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.

ಯೋಗಿಯಂತೆಯೇ ಇದ್ದರು ಶಿಲ್ಪಿ ಅರುಣ್‌ ಯೋಗಿರಾಜ್‌
ಶಿಲ್ಪಿ ಅರುಣ್‌ ಯೋಗಿಯವರು ವಿಗ್ರಹವನ್ನು ಕೆತ್ತುವು ದನ್ನು ತಪಸ್ಸಿನ ಮಾದರಿಯಲ್ಲೇ ಕೈಗೆತ್ತಿಕೊಂಡಿದ್ದರು. ಅವರ ಅಪರಿಮಿತವಾದ ಶ್ರದ್ಧೆಗೆ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಸಹ ತಲೆದೂಗಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಟ್ರಸ್ಟ್‌ ಕಾರ್ಯದರ್ಶಿ ಚಂಪತ್‌ ರಾಯ್‌, “ಅರುಣ್‌ ಯೋಗಿ ಅವರ ಶ್ರದ್ಧೆಗೆ ಅವರೇ ಸಾಟಿ. ಮೂರ್ತಿ ಕಡೆಯುವ ಸಂದರ್ಭದಲ್ಲಿ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಅವರು ತಿಂಗಳಾನುಗಟ್ಟಲೆ ಮನೆಯವರ ಜತೆಯೂ ಮಾತಾಡಿಲ್ಲ. ಅಷ್ಟೂ ಸಮಯ ಮಕ್ಕಳ ಮುಖವನ್ನೂ ನೋಡಿಲ್ಲ. ತಿಂಗಳಾನುಗಟ್ಟಲೆ ಫೋನ್‌ ಅನ್ನು ಮುಟ್ಟಲೇ ಇಲ್ಲ’ ಎಂದು ಕೊಂಡಾಡಿದ್ದಾರೆ

ಹೊನ್ನಾವರದ ಗಣೇಶ್‌ ಭಟ್‌ ವಿಗ್ರಹದಲ್ಲಿ ಶಿಲ್ಪಶಾಸ್ತ್ರ ಮತ್ತು ದಿವ್ಯತೆಯ ಸಮ್ಮಿಶ್ರಣ
ಹೊನ್ನಾವರದ ಗಣೇಶ್‌ ಎಲ್‌. ಭಟ್‌ ದೇಶ ವಿದೇಶದಲ್ಲಿ ಖ್ಯಾತಿಯ ಶಿಲ್ಪಿ. ಉ.ಪ್ರ. ಮೂಲದ ವಿಪಿನ್‌ ಭದೌರಿಯ ಸಹಯೋಗದಲ್ಲಿ ದೊಡ್ಡ ಬಳಗವೇ ನಿರ್ಮಾಣಕ್ಕೆ ಕೆಲಸ ಮಾಡಿದೆ. ಒಂದುಕಡೆ ದಿವ್ಯತೆಯೂ ಕಾಣಬೇಕು, ಮತ್ತೊಂದು ಕಡೆ ಬಾಲತ್ವವೂ ಇರಬೇಕು ಎಂಬುದೇ ಭದೌರಿಯ ತಂಡದ ಗುರಿಯಾಗಿತ್ತು.

ಅಳತೆಗಳೇನು?: ವಿಗ್ರಹದ ಒಟ್ಟು ಎತ್ತರ 7.5 ಅಡಿ. ಮೂಲಮೂರ್ತಿ ಎತ್ತರ 51 ಇಂಚುಗಳಾದರೂ, ಕಮಲಪೀಠದ ಎತ್ತರ, ಪ್ರಭಾವಳಿ ಸೇರಿದರೆ 7.5 ಅಡಿಗಳಾಗುತ್ತವೆ. ದಪ್ಪ 24 ಇಂಚು, ಅಗಲ 41 ಇಂಚುಗಳು. ಇದನ್ನೂ ಎಚ್‌.ಡಿ. ಕೋಟೆ ಶಿಲೆಯಲ್ಲೇ ನಿರ್ಮಿಸಲಾಗಿದೆ. ಒಟ್ಟು ತೂಕ 2ರಿಂದ 3 ಟನ್‌!

ರಾಜಸ್ಥಾನದ ಮಕರಾನಾ ಶಿಲೆಯಲ್ಲಿ ಮೂಡಿದ ರಾಮಲಲ್ಲಾ
ಸತ್ಯನಾರಾಯಣ ಪಾಂಡೆ ಜೈಪುರದವರು. ಅವರ ಕುಟುಂಬಸ್ಥರೂ ಶಿಲ್ಪಗಳ ಕೆತ್ತನೆ ಮಾಡುತ್ತಿದ್ದರು. ಅವರ ಪುತ್ರ ಪುನೀತ್‌ ಪಾಂಡೆಯೂ ಅದನ್ನು ಮುಂದುವರಿಸಿದ್ದಾರೆ. ಇಸ್ಕಾನ್‌, ಸ್ವಾಮಿ ನಾರಾಯಣ ದೇಗುಲ, ರಿಲಯನ್ಸ್‌, ಬಿರ್ಲಾ ಮಂದಿರಗಳಲ್ಲಿ ಇವರು ನಿರ್ಮಿಸಿದ ಮೂರ್ತಿ ಪ್ರತಿಷ್ಠಾಪನೆ ಗೊಂಡಿದೆ. 51 ಇಂಚು ಎತ್ತರದ ವಿಗ್ರಹವನ್ನೇ ಪಾಂಡೆ ಕೆತ್ತಿದ್ದಾರೆ. ಅದಕ್ಕಾಗಿ ರಾಜ ಸ್ಥಾನದ ಮಕರಾನಾ ಬಿಳೀ ಅಮೃತಶಿಲೆ ಬಳಸಲಾಗಿದೆ. ಅಮೃತ ಶಿಲಾಮೂರ್ತಿಯ ಕೆತ್ತನೆಗೆ ಪಾಂಡೆ ಅವರು ಹೆಸರಾಗಿದ್ದಾರೆ.

ವಿಶೇಷಗಳೇನು?: ವಿಗ್ರಹ ಕೆತ್ತನೆಗೆ ಮಂದಿರ ನೀಡಿದ ನಿಬಂಧನೆಗಳು ಎಲ್ಲರಿಗೂ ಸಮಾನ ವಾಗಿದ್ದವು. ಪಾಂಡೆ ಅದೇ
ನಿಬಂಧನಗಳಿಗೊಳಪಟ್ಟು ತಾವೇ ಸ್ವತಃ ಶಿಲ್ಪವನ್ನು ಕೆತ್ತಿದ್ದಾರೆ. ಅವರು ಬಳಸಿದ್ದು 90 ವರ್ಷದ ಹಳೆಯ ಕಲ್ಲನ್ನು. ಆ ಕಲ್ಲು ಇವರ ಬಳಿ ಬಂದು 40 ವರ್ಷಗಳಾಗಿವೆ. ಸದ್ಯ ಈ ಜಾತಿಯ ಕಲ್ಲಿನ ಗಣಿಗಾರಿಕೆಯೇ ನಿಂತುಹೋಗಿರುವುದರಿಂದ ಅದು ಸಿಗುವುದೂ ಅಸಾಧ್ಯ ಎಂಬ ಪರಿಸ್ಥಿತಿಯಿದೆ.

Advertisement

Udayavani is now on Telegram. Click here to join our channel and stay updated with the latest news.

Next