Advertisement

Ayodhya: “ಅತ್ತ ಸಭೆ ನಡೀತಿತ್ತು, ಇತ್ತ ಕಟ್ಟಡ ಉರುಳಿತ್ತು!”

11:30 AM Jan 11, 2024 | Team Udayavani |

ನಾನು ಸೇರಿದಂತೆ ಅನೇಕರು ಅಯೋಧ್ಯೆಯ ವಿವಾದಿತ ಕಟ್ಟಡದ ಮೇಲಿದ್ದೆವು. ಕೆಳಗಿದ್ದ ಕರಸೇವಕರು ಕಟ್ಟಡವನ್ನು ಒಡೆಯುತ್ತಿದ್ದರು. ಕಟ್ಟಡವು ಧೊಪ್ಪೆಂದು ಕೆಳಗೆ ಬೀಳುತ್ತಿತ್ತು. ಅಂದು ನನ್ನ ಕಥೆ ಮುಗಿಯಿತು ಎಂದುಕೊಂಡಿದ್ದೆ. ಆದರೆ, ದೇವರ ದಯೆಯಿಂದ ಕಟ್ಟಡದ ಮೇಲಿದ್ದವರಿಗೆ ಹಾಗೂ ಒಳಗೆ ಮತ್ತು ಹೊರಗೆ ಇದ್ದವರಿಗೆ ಏನು ಆಗಲಿಲ್ಲ. ನಾನೂ ಏನು ಆಗದೆ ಹೊರಬಂದೆ.
1992ರ ಡಿಸೆಂಬರ್‌ ಆರರಂದು ನಡೆದ ಆ ಘಟನೆಯನ್ನು ನಾನೆಂದು ಮರೆಯಲಾರೆ. ನಾವು ಚಿಕ್ಕಮಗಳೂರಿನಿಂದ 20 ಮಂದಿ ಕರಸೇವಕರಲ್ಲದ ಹಾಗೆ ರೈಲಿನಲ್ಲಿ ಹೋಗಿದ್ದೆವು. ಕರಸೇವ ಕರು ಎಂದು ಗೊತ್ತಾದರೆ ಬಂ ಧಿಸುತ್ತಿದ್ದರು. ಹಾಗಾಗಿ ಬೇರೆ ಬೇರೆ ರೀತಿಯಲ್ಲಿ ಡಿಸೆಂಬರ್‌ ಮೂರರಂದೇ ಅಯೋಧ್ಯೆ ತಲುಪಬೇಕಾ ಯಿತು. ಕರ್ನಾಟಕದವರಿಗಾಗಿ ಅಲ್ಲಿ ಟೆಂಟ್‌ ವ್ಯವಸ್ಥೆಯನ್ನು ಮಾಡಲಾಗಿತ್ತು. ರಾಜ್ಯದಿಂದ 2000ಕ್ಕೂ ಹೆಚ್ಚು ಜನರು ಕರಸೇವೆ ಯಲ್ಲಿ ಪಾಲ್ಗೊಂಡಿದ್ದರು. ಆಂಧ್ರಪ್ರದೇಶ, ಕೇರಳ, ತಮಿಳುನಾಡು ಸೇರಿದಂತೆ ದೇಶದ್ಯಾಂತ ಸಾವಿರಾರು ಕರಸೇವಕರು ನೆರೆದಿದ್ದರು.

Advertisement

ಸರಯೂ ನದಿಯಿಂದ ಮರಳು ತಂದು ಹಾಕುವಂತೆ ನಮ್ಮ ತಂಡದ ಮುಖ್ಯಸ್ಥರಿಂದ ಸೂಚನೆ ಬಂತು. ಮರಳು ತಂದು ಹಾಕಿದೆವು. ಡಿ. 6ರಂದು ಸಾರ್ವಜನಿಕ ಸಭೆ ನಡೆಯುತ್ತಿತ್ತು. ಸಭೆ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ವಿವಾದಿತ ಕಟ್ಟಡ ಸಮೀಪ ಜೈಕಾರ, ಘೋಷಣೆಗಳು ಮೊಳಗಿದವು. ನೋಡಿದರೆ ನಮ್ಮವರು ಅಲ್ಲಿದ್ದ ಅಡೆತಡೆಗಳನ್ನು ಲೆಕ್ಕಿಸದೆ ನುಗ್ಗಿ ವಿವಾದಿತ ಕಟ್ಟಡವನ್ನು ಒಡೆದರು. ನಾವು ಯಾವುದನ್ನೂ ಲೆಕ್ಕಿಸದೆ ತಂಡದ ಮುಖ್ಯಸ್ಥರಾಗಿದ್ದ ವಕೀಲ ರಾಮಸ್ವಾಮಿಯವರ ಸೂಚನೆ ಲೆಕ್ಕಿಸದೆ ಕರಸೇವೆಗೆ ನುಗ್ಗಿದ್ದೆವು.

ಕಟ್ಟಡ ಧ್ವಂಸಗೊಳ್ಳುತ್ತಿದ್ದಂತೆ ರಾಮನ ಪ್ರತಿಷ್ಠಾಪನೆ ಆಗಿ ತಾತ್ಕಾಲಿಕ ರಾಮಮಂದಿರ ನಿರ್ಮಾಣ ಆಯಿತು. ಆ ಮಂದಿರ ನಿರ್ಮಾಣ ಕಾರ್ಯಕ್ಕೆ ಇಟ್ಟಿಗೆಯನ್ನು ನೀಡಿದ್ದೆವು. ಅಯೋಧ್ಯೆ ಯಲ್ಲಿ 1992ರ ಡಿ. 8ರ ವರೆಗೂ ಇದ್ದೆವು. ಅನಂತರ ರೈಲು ಹಿಡಿದು ಬಂದೆವು. ರೈಲಿನ ಮೇಲೆ ಕಲ್ಲು ತೂರಾಟ ನಡೆಯು ತ್ತಿತ್ತು. ಅದಕ್ಕೆ ಪ್ರತಿರೋಧದ ಸಂಘರ್ಷವೂ ನಡೆಯುತ್ತಿತ್ತು. ರೈಲುಗಳನ್ನು ಬದಲಾಯಿಸಿಕೊಂಡು ಹೇಗೋ ಮಾಡಿ ಡಿ.11ರಂದು ವಾಪಸ್‌ ಚಿಕ್ಕಮಗಳೂರಿಗೆ ಬಂದೆವು. ನನ್ನ ಜತೆ ಕಾರ್ಕಳದ ಈಗಿನ ಶಾಸಕ ಸುನಿಲ್‌ಕುಮಾರ್‌ ಸೇರಿದಂತೆ ಅನೇಕರು ಇದ್ದರು.
ಹಾಗೆ ನೋಡಿದರೆ, ಅಯೋಧ್ಯೆ ರಥಯಾತ್ರೆಗೆ ಮೊದಲು ನಾಲ್ಕು ರಥಯಾತ್ರೆಗಳು ಆರಂಭಗೊಂಡವು. ಶಿಲಾಪೂಜೆ, ಇಟ್ಟಿಗೆ ಪೂಜೆ, ರಾಮಜ್ಯೋತಿ ಯಾತ್ರೆ ಅದಾದ ಮೇಲೆ ಶ್ರೀರಾಮ ಪಾದುಕೆ ಯಾತ್ರೆ

ವಿಶ್ವ ಹಿಂದೂ ಪರಿಷತ್‌ ನೇತೃತ್ವದಲ್ಲಿ ನಡೆಯಿತು. ಬಿಜೆಪಿಯಿಂದ ಗುಜರಾತ್‌ನ ಸೋಮನಾಥದಿಂದ ಅಯೋಧ್ಯೆವರೆಗೆ ಆಡ್ವಾಣಿ ನೇತೃತ್ವದಲ್ಲಿ ರಥಯಾತ್ರೆ ಕೈಗೊಳ್ಳಲಾಗಿತ್ತು. ಆಡ್ವಾಣಿ ಅವರನ್ನು ಬಿಹಾರದ ಸಮಷ್ಟಿಪುರದಲ್ಲಿ ಬಂಧಿ ಸಲಾಯಿತು. ಅಂದು ನಾನು ಹೋರಾಟದ ಕಣಕ್ಕೆ ಧುಮುಕಿ ಜೈಲು ಸೇರಿದೆ. ಎರಡು ದಿನ ಜೈಲುವಾಸ ಅನುಭವಿಸಿದ್ದೆ. ಹಾಗಾಗಿ ಆಗ ಕರಸೇವೆಯಲ್ಲಿ ಭಾಗವಹಿಸಲು ಆಗಲಿಲ್ಲ. ಆದರೆ ಅನಂತರ 1992ರಲ್ಲಿ ಕರಸೇವೆಯಲ್ಲಿ ಭಾಗವಹಿಸಿದನೆಂಬ ಹೆಮ್ಮೆ ನನ್ನದು. ಶ್ರೀ ರಾಮನಿಗೆ ಆಂಜನೇಯ ಲಂಕಾದಹನಕ್ಕೆ ನೆರವು ನೀಡಿ ಸೇವೆ ಮಾಡಿದ್ದಾನೆ. ಅಂಥದ್ದೇ ಕಿಂಚಿತ್ತು ರಾಮನ ಸೇವೆ ಮಾಡಿದ್ದೇನೆಂಬ ಆತ್ಮಾಭಿಮಾನ, ನೆಮ್ಮದಿಯ ಭಾವ ನನಗಿದೆ.

ನಿರೂಪಣೆ: ಸಂದೀಪ ಜಿ.ಎನ್‌.ಶೇಡ್ಗಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next