Advertisement

ಹಳ್ಳಿಗಳಲ್ಲಿ ಕೋವಿಡ್ 19 ತಡೆಗೆ ಸುತ್ತಾಟ

05:56 PM Mar 22, 2020 | Suhan S |

ಗದಗ: ಮಹಾಮಾರಿ ಕೋವಿಡ್ 19 ವೈರಾಣುಗಳ ತಡೆಗೆ ಇಡೀ ವಿಶ್ವವೇ ಸಮರ ಸಾರಿದೆ. ಅದರ ಅಂಗವಾಗಿ ಸರಕಾರ ಹಾಗೂ ಸಂಘ ಸಂಸ್ಥೆಗಳು ನಗರ ಪ್ರದೇಶದಲ್ಲಿ ಸಾಕಷ್ಟು ಜಾಗೃತಿ ಮೂಡಿಸುತ್ತಿವೆ.

Advertisement

ಆದರೆ, ಜಿಲ್ಲೆಯ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ಸದ್ದಿಲ್ಲದೇ ಜಾಗೃತಿ ಕಾರ್ಯಕ್ಕೆ ಧುಮುಕಿದೆ. ಅತ್ಯಾಧುನಿಕ ಸೆನ್ಸಾರ್‌ ಥರ್ಮಾಮೀಟರ್‌ ಹಿಡಿದು ಹಳ್ಳಿ ಹಳ್ಳಿ ಸುತ್ತುವ ಮೂಲಕ ಗ್ರಾಮೀಣ ಜನರ ಗಮನ ಸೆಳೆಯುತ್ತಿದೆ.

ಕಳೆದ ಮೂರು ವರ್ಷಗಳಿಂದ ಗದುಗಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ಶೈಕ್ಷಣಿಕ ಕಾರ್ಯಗಳೊಂದಿಗೆ ಸಮಾಜಮುಖೀ ಚಟುವಟಿಕೆಗಳಿಂದಾಗಿ ಗ್ರಾಮೀಣ ಭಾಗದಲ್ಲಿಮನೆ ಮಾತಾಗಿದೆ. ಅದರಂತೆ ಇದೀಗ ವಿಶ್ವವನ್ನೇ ಹೆಮ್ಮಾರಿಯಾಗಿ ಕಾಡುತ್ತಿರುವ ಕೋವಿಡ್ 19  ವೈರಾಣುಗಳ ಹರಡುವಿಕೆಗೆ ಕಾರಣ ಮತ್ತು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಸಂದೇಶಗಳನ್ನು ಹಳ್ಳಿ ಹಳ್ಳಿಗೆ ತಲುಪಿಸುವ ಕೆಲಸ ಮಾಡುತ್ತಿದೆ.

ಎಲ್ಲೆಲ್ಲಿ ಜಾಗ್ರತಿ ಕಾರ್ಯಕ್ರಮ: ಕಳೆದ ಒಂದು ವಾರದಿಂದ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಸಮಾಜ ಕಾರ್ಯ, ಸಾರ್ವಜನಿಕ ಆರೋಗ್ಯ ವಿಭಾಗ ಹಾಗೂ ಯೂತ್‌ ರೆಡ್‌ಕ್ರಾಸ್‌ ಸಹಯೋಗದಲ್ಲಿ ಜಾಗೃತಿ ಕಾರ್ಯ ನಡೆಸುತ್ತಿದೆ. ವಿವಿಧ ದತ್ತು ಪಡೆದಿರುವ ಕಳಸಾಪುರ, ನಾಗಾವಿ, ಬಿಂಕದಕಟ್ಟಿ, ಹುಲಕೋಟಿ ಹಾಗೂ ಕುರ್ತಕೋಟಿ ಗ್ರಾಮಗಳಲ್ಲಿ ಒಂದು ಸುತ್ತಿನ ಜಾಗೃತಿ ಕಾರ್ಯಕ್ರಮ ನಡೆಸಿದೆ. ಜೊತೆಗೆ ಸಮೀಪದ ನರಸಾಪುರ ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ, ಕೊರೊನಾ ವೈರಾಣುಗಳ ಬಗ್ಗೆ ಜನರನ್ನು ಎಚ್ಚರಿಸಿದೆ.

ಜೊತೆಗೆ ಸಾರ್ವಜನಿಕ ಆರೋಗ್ಯ ವಿಭಾಗದ ಸಹ ಸಂಯೋಜಕಿ ಡಾ| ನಾಗವೇಣಿ ಹಾಗೂ ಡಾ| ಗೂಳಪ್ಪ ಎಂ.ಡಿ. ನೇತೃತ್ವದಲ್ಲಿ ಸಾರ್ವಜನಿಕರ ವಿವಿಯಲ್ಲಿರುವ ಅತ್ಯಾಧುನಿಕವಾದ ಇನ್ಫ್ರಾರೆಡ್‌ ಥರ್ಮಾಮೀಟರ್‌(ದೇಹದ ಉಷ್ಣಾಂಶ ಅಳೆಯುವ ಮಾಪನ) ವನ್ನು ಬಳಸಿ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.

Advertisement

ಈ ವೇಳೆ 98 ಡಿಗ್ರಿಗಿಂತ ಹೆಚ್ಚಿನ ಜ್ವರ ಕಂಡು ಬಂದಲ್ಲಿ ಈ ಮಾಪನದಲ್ಲಿ ಒಂದು ಎಚ್ಚರಿಕೆಯ ಶಬ್ಧ ಮೊಳಗುತ್ತದೆ. ಜೊತೆಗೆ ಕೆಮ್ಮು, ನೆಗಡಿ ಹಾಗೂ ಕಫಾದಿಂದ ಬಳಲುತ್ತಿರುವವರನ್ನು ಗುರುತಿಸಿ, ಆಸ್ಪತ್ರೆಗೆ ತೆರಳುವಂತೆ ಸೂಚಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಆದರೆ, ಈ ವರೆಗೆ ವಿವಿಧ ಗ್ರಾಮಗಳಲ್ಲಿ ನಡೆಸಿದ ಅಭಿಯಾನದಲ್ಲಿ ಯಾವುದೇ ವ್ಯಕ್ತಿಯಲ್ಲಿ ಜ್ವರ ಸೇರಿದಂತೆ ಕೋವಿಡ್ 19  ವೈರಾಣು ಲಕ್ಷಣಗಳ ಪಟ್ಟಿಯಲ್ಲಿರುವ ಲಕ್ಷಣಗಳು ಕಂಡುಬಂದಿಲ್ಲ ಎಂಬ ಸಂಗತಿ ಹೊರಬಿದ್ದಿರುವುದು ಸಮಾಧಾನಕರ ಸಂಗತಿ. ಅಲ್ಲದೇ, ವಿವಿ ಮೂಲಗಳ ಪ್ರಕಾರ ಮಾರ್ಚ್‌ 31ರ ವರೆಗೆ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಈ ಅಭಿಯಾನ ಮುಂದುವರಿಸಲಿದೆ ಎನ್ನಲಾಗಿದೆ. ಒಟ್ಟಾರೆ, ಗ್ರಾವಿವಿ ನಡೆಸುತ್ತಿರುವ ಪ್ರಯತ್ನಕ್ಕೆ ಸಾರ್ವಜನಿಕರಿಂದಲೂ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

 

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next