Advertisement

ಪದವೀಧರ ಕೃಷಿಕನಿಗೆ ಭತ್ತದ ಬೇಸಾಯದಲ್ಲಿ ಪ್ರಶಸ್ತಿಗಳ ಮಹಾಪೂರ

09:46 AM Dec 24, 2019 | Team Udayavani |

ಹೆಸರು: ಚಂದ್ರಶೇಖರ ಶೆಟ್ಟಿ
ಏನೇನು ಕೃಷಿ: ಭತ್ತ, ತರಕಾರಿ
ವಯಸ್ಸು: 55
ಕೃಷಿ ಪ್ರದೇಶ: 4 ಎಕ್ರೆ

Advertisement

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಸುರತ್ಕಲ್‌: ಸಾಕಷ್ಟು ವಿಚಾರಗಳಲ್ಲಿ ಶಾಲೆ ಕಲಿಸುವ ಶಿಕ್ಷಣಕ್ಕಿಂತ ಬದುಕು, ಹಸಿವು ಕಲಿಸುವ ಶಿಕ್ಷಣವೇ ಹೆಚ್ಚಾಗಿರುತ್ತದೆ. ಇದಕ್ಕೆ ನೈಜ ಉದಾಹರಣೆ ಎನ್ನುವಂತಿದ್ದಾರೆ ಚೇಳಾರುವಿನ ಶ್ರೇಷ್ಠ ಸಾವಯವ ಕೃಷಿಕ ಚಂದ್ರಶೇಖರ ಶೆಟ್ಟಿ.

ಹೌದು, ಮೂಡುಬಿದಿರೆ ತಾಲೂಕಿಗೆ ಹೊಂದಿಕೊಂಡಂತೆ ಸುರತ್ಕಲ್‌ ಸಮೀಪದ ಖಂಡಿಗೆ ಪಾಡಿ ಚೇಳಾçರುವಿನ ಗ್ರಾಮದಲ್ಲಿ 35ವರ್ಷಕ್ಕಿಂತಲೂ ಹೆಚ್ಚು ವರ್ಷಗಳಿಂದ ಕೃಷಿಯನ್ನೇ ಜೀವನಾಧಾರವಾಗಿ ಆರಂಭಿಸಿರುವ ಸಮಗ್ರ ಕೃಷಿಯಲ್ಲಿ ಅಚಲವಾದ ಸಾಧನೆ ಮಾಡುತ್ತಿದ್ದಾರೆ. ಬಿ.ಎ. ಪದವಿ ಪಡೆದಿರುವ ಇವರು ಇತರ ಕೃಷಿಕರಿಗೂ ಕಾಯಕದ ಪಾಠ ಬೋಧಿ ಸುವ ಮೂಲಕ ಕೃಷಿಗೆ ಉತ್ತೇಜಿಸುವ ಕೆಲಸ ಮಾಡುತ್ತಿದ್ದಾರೆ. ನಾಲ್ಕು ಎಕ್ರೆ ಭೂಮಿಯಲ್ಲಿ ಮುಂಗಾರು ಬೆಳೆ ಮತ್ತು ಎರಡು ಎಕ್ರೆಯಲ್ಲಿ ಹಿಂಗಾರು ಭತ್ತದ ಬೆಳೆ ತೆಗೆಯುತ್ತಾರೆ. ಬಾಲ್ಯದಿಂದಲೇ ಕೃಷಿ ಸೆಳೆತ. ತಂದೆ ಸುಬ್ಬಯ್ಯ ಶೆಟ್ಟಿ, ತಾಯಿ ಸುಂದರಿ ಕೃಷಿಯಲ್ಲಿ ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿಯೇ ಇರುವ ಜಮೀನಿನಲ್ಲಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಇವರ ತಾಯಿ ಸುಂದರಿಗೂ 2003-04, 2006-07ರಲ್ಲಿ ಕೃಷಿ ಇಲಾಖೆ ಪ್ರಶಸ್ತಿ ನೀಡಿದ್ದು ಇವರ ಕೃಷಿ ಕಾಯಕಕ್ಕೆ ತಾಯಿಯೇ ಪ್ರೋತ್ಸಾಹಕರು. ಮಗನಿಗೆ ಸಮಗ್ರ ಕೃಷಿ ಹಾಗೂ ಮಿಶ್ರ ಕೃಷಿ ಬಗ್ಗೆ ಮಾಹಿತಿಯನ್ನು ಬಾಲ್ಯದಿಂದಲೇ ತಿಳಿಸುವಲ್ಲಿ ಹೆತ್ತವರು ಸಫಲರಾದರು. ಪದವಿ ಮುಗಿಯುತ್ತಿದ್ದಂತೆ ಚಂದ್ರಶೇಖರ ಅವರು ಕೃಷಿಗೆ ಪ್ರಾಮುಖ್ಯ ನೀಡಿ ಕೃಷಿಯಲ್ಲಿಯೇ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಸಾವಯವ ಪದ್ಧತಿ
ಪ್ರಸ್ತುತ ನಾಲ್ಕು ಎಕ್ರೆ ಜಮೀನಿನಲ್ಲಿ ಸಾವಯವ ಕೃಷಿ ಪದ್ಧತಿ ಅನುಸರಿಸುತ್ತಿದ್ದಾರೆ. ಭತ್ತ ಬೇಸಾಯಕ್ಕೆ ಹಟ್ಟಿ ಗೊಬ್ಬರ, ದನಕ್ಕೆ ಮೇವು ಎಲ್ಲವೂ ಜಮೀನಿನಲ್ಲಿಯೇ ಸಿಗುವಂತೆ ನೋಡಿಕೊಂಡಿದ್ದಾರೆ. ಆಧುನಿಕತೆಗೆ ತಕ್ಕಂತೆ ಸ್ವಂತ ಟಿಲ್ಲರ್‌ ಹೊಂದಿ ಉಳುಮೆ ಮಾಡುತ್ತಾರೆ. ಈ ಮೂಲಕ ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಂಡಿದ್ದಾರೆ. ತಮ್ಮ ಸಹೋದರ, ಸಹೋದರಿಯರ ಪ್ರೋತ್ಸಾಹದೊಂದಿಗೆ ಪ್ರಗತಿಪರ ಕೃಷಿಕನಾಗಿ ಬೆಳೆದು ನಿಂತು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

Advertisement

ಪೂರಕ ಉದ್ಯೋಗ
ಉದ್ಯೋಗ ಸಿಗುತ್ತಿಲ್ಲ ಎಂದು ಖಾಲಿ ಕುಳಿತುಕೊಳ್ಳುವ ಯುವಕರಿಗೆ ಚಂದ್ರಶೇಖರ ಅವರು ಮಾದರಿಯಾಗಿದೆ. ಕೃಷಿಯ ಜತೆಗೆ ಬಸಳೆ, ಮತ್ತಿತರ ತರಕಾರಿ ಸೊಪ್ಪು ಬೆಳೆಯುತ್ತಾರೆ. ಹೈನುಗಾರಿಕೆ, ಕೋಳಿ ಸಾಕಾಣಿಕೆಯನ್ನು ಇರುವ ಜಮೀನಿನಲ್ಲಿ ಅಭಿವೃದ್ಧಿಪಡಿಸಿ ಸಹ ಕಸುಬನ್ನಾಗಿಸಿದ್ದಾರೆ.ಇನ್ನು ತಾವು ಬೆಳೆದ ತರಕಾರಿ, ಸೊಪ್ಪು ಎಳೆನೀರನ್ನು ಸುರತ್ಕಲ್‌ನಲ್ಲಿರುವ ತಮ್ಮದೇ ಆದ ಪುಟ್ಟ ಅಂಗಡಿಯಲ್ಲಿ ಮಾರಾಟ ಮಾಡುತ್ತಾರೆ. ಸಾವಯವ ತರಕಾರಿ ಸೊಪ್ಪನ್ನು ಹುಡುಕಿಕೊಂಡು ಬರುವವರೇ ಇದ್ದಾರೆ. ಶ್ರದ್ಧೆ ಹಾಗೂ ತಾವಾಗಿಯೇ ಸ್ವತಃ ಗದ್ದೆಗೆ ಇಳಿದು ಕೆಲಸ ಮಾಡಿದಲ್ಲಿ ನಷ್ಟವಿಲ್ಲ. ನಾನು ತೆಳುವಾಗಿ ಬಿತ್ತನೆ ಮಾಡಿ ಚಾಪೆ ನೇಜಿ ನೆಚ್ಚಿಕೊಂಡಿದ್ದೇನೆ. ಅನಂತರ ಅದನ್ನು ಸರಿಪಡಿಸಿ ಬಿತ್ತನೆ ಮಾಡುತ್ತೇನೆ ಇದರಲ್ಲಿ ನಷ್ಟದ ಭಯವಿಲ್ಲ ಎನ್ನುತ್ತಾರೆ ಚಂದ್ರಶೇಖರ ಶೆಟ್ಟಿ ಅವರು.

ಉತ್ತಮ ಇಳುವರಿಗೆ ಪ್ರಶಸ್ತಿ
 2014-15ರಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ
 2015-16ರಲ್ಲಿ ಆತ್ಮ ಯೋಜನೆಯಡಿ ಶ್ರೇಷ್ಠ ಕೃಷಿಕ ಪ್ರಶಸ್ತಿ
 2018-19ರಲ್ಲಿ 90 ಕ್ವಿಂಟಾಲ್‌ ಇಳುವರಿಯೊಂದಿಗೆ ಪ್ರಶಸ್ತಿಗೆ ಇವರ ಹೆಸರು ಪ್ರಥಮ ಸ್ಥಾನದಲ್ಲಿದೆ. ಇವರು ಮೇರು ಕೃಷಿಕನಾಗಿ ಹೆಸರು ಮಾಡಿದ್ದಾರೆ. 2014-15ರಲ್ಲಿ 95.65 ಕ್ವಿಂಟಾಲ್‌ ಇಳುವರಿ ಪಡೆದಿದ್ದಕ್ಕೆ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಕೀರ್ತಿಗೆ ಭಾಜನರಾದರು. ಈಗ 2018-19ರಲ್ಲಿ 90 ಕ್ವಿಂಟಾಲ್‌ ಭತ್ತದ ಇಳುವರಿ ಪಡೆದು ತಾಲೂಕು ಮಟ್ಟದ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದು ಪ್ರಶಸ್ತಿಯನ್ನು ಮುಡಿಗೇರಿಸುವ ಸನಿಹದಲ್ಲಿದ್ದಾರೆ.
ಮೊಬೈಲ್‌ ಸಂಖ್ಯೆ: 8762129375

ಉತ್ತಮ ಇಳುವರಿ
ಪದವಿ ಬಳಿಕ ಸಾಧಾರಣ 35 ವರ್ಷಗಳಿಂದ ಕೃಷಿ ಅಳವಡಿಸಿಕೊಂಡಿದ್ದೇನೆ. ನಾನೇ ಸ್ವತಃ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ. ನಾನು ಬೆಳೆದ ತರಕಾರಿಯನ್ನು ಅಂಗಡಿಯಲ್ಲಿ ಮಾರಾಟ ಮಾಡುತ್ತೇನೆ. ಭತ್ತವನ್ನು ಅಕ್ಕಿಯನ್ನಾಗಿ ಮಾಡಿ ಮಾರುತ್ತೇನೆ. ಸಾವಯವಕ್ಕೆ ಒತ್ತು ನೀಡಿರುವುದರಿಂದ ಹೆಚ್ಚು ಹಣ ಪಡೆದು ಖರೀದಿಸಲು ಜನ ಮುಂದೆ ಬರುತ್ತಾರೆ. ನಾವೇ ನೇರವಾಗಿ ಗ್ರಾಹಕರಿಗೆ ಮಾರುವುದರಿಂದ ಹೆಚ್ಚು ಲಾಭವಿದೆ. ಮಾತ್ರವಲ್ಲ ಸೊದ್ಯೋಗದ ಜತೆಗೆ ಶ್ರಮಪಟ್ಟರೆ ನಷ್ಟವಿಲ್ಲ ಎಂಬುದು ನನ್ನ ಅಭಿಪ್ರಾಯ. ಸಣ್ಣ ಕೃಷಿಕರು ಬೆಳೆದ ಸೊಪ್ಪು, ತರಕಾರಿ ಮತ್ತಿತರ ವಸ್ತುಗಳನ್ನು ನೇರವಾಗಿ ಗ್ರಾಹಕರಿಗೆ ಮಾರಲು ಒಂದು ವೇದಿಕೆಬೇಕು. ಸಂತೆ ಸಣ್ಣ ಸಣ್ಣ ಮಾರುಕಟ್ಟೆಗಳಲ್ಲಿ ಅವಕಾಶ ಕಲ್ಪಿಸಬೇಕು. ನನ್ನ ಕೃಷಿ ವೃತ್ತಿಯಲ್ಲಿ ನನಗೆ ಸಂತೃಪ್ತಿಯಿದೆ.
– ಚಂದ್ರಶೇಖರ ಶೆಟ್ಟಿ, ಖಂಡಿಗೆ ಪಾಡಿ ಮೇಗಿನ ಮನೆ

ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next