Advertisement

ಆರಕ್ಷಕರ ಉತ್ತಮ ಆಡಳಿತಕ್ಕೆ ಪ್ರಶಸ್ತಿ-ಸನ್ಮಾನ

02:54 PM Jul 21, 2022 | Team Udayavani |

ಕೊಪ್ಪಳ: ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ ಅವರು ಜಿಲ್ಲೆಯಲ್ಲಿನ ಪೊಲೀಸ್‌ ಇಲಾಖೆಯಲ್ಲಿ ಆಡಳಿತದಲ್ಲಿನ ವೇಗ ಹೆಚ್ಚಿಸಲು ಹಾಗೂ ಪ್ರತಿ ಅಧಿಕಾರಿಗಳ ಕಾರ್ಯಕ್ಷಮತೆ ಚುರುಕುಗೊಳಿಸಲು ಪ್ರತಿ ತಿಂಗಳು, ಪ್ರತಿ ಠಾಣೆಯಿಂದ ಒಬ್ಬ ಉತ್ತಮ ಆಡಳಿತಗಾರ (ಬೆಸ್ಟ್‌ ಪರ್ಫಾರ್ಮೆನ್ಸ್‌) ನನ್ನು ಆಯ್ಕೆ ಮಾಡಿ ಅವರಿಗೆ ಎಸ್‌ಪಿ ಅವರೇ ಪ್ರಶಸ್ತಿ, ಪ್ರಮಾಣಪತ್ರ ನೀಡಿ ಸನ್ಮಾನಿಸುವ ವಿಶಿಷ್ಟ ಯೋಜನೆ ಆರಂಭಿಸಿದ್ದಾರೆ.

Advertisement

ಜಿಲ್ಲೆಯ ಪೊಲೀಸ್‌ ಇಲಾಖೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸುವ ಅಧಿಕಾರಿಗಳು ತೆರೆಮರೆಯಲ್ಲಿ ಇರುತ್ತಾರೆ. ಅಂತಹವರನ್ನು ಗುರುತಿಸಿ, ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸನ್ಮಾನಿಸಿ, ಪ್ರಶಸ್ತಿ ನೀಡಿ ಬೆನ್ನು ತಟ್ಟಿದರೆ ಅವರ ಕಾರ್ಯಕ್ಷಮತೆ ಇನ್ನಷ್ಟು ಹೆಚ್ಚುತ್ತದೆ ಎನ್ನುವ ಕಾರಣಕ್ಕೆ ಎಸ್ಪಿ ಇಂತಹ ವಿಶಿಷ್ಟ ಯೋಜನೆ ಆರಂಭಿಸಿದ್ದಾರೆ.

ಪೊಲೀಸ್‌ ಇಲಾಖೆ ಪ್ರತಿದಿನ, ಪ್ರತಿ ಕ್ಷಣವೂ ಒತ್ತಡದಲ್ಲೇ ಕೆಲಸ ನಿರ್ವಹಿಸುತ್ತದೆ. ಬಂದ್‌, ಕರ್ಫ್ಯೂ, ಜಾತ್ರೆ, ಯಾವುದೇ ಅಪರಾಧ ಪ್ರಕರಣವೇ ಇರಲಿ ಹಗಲು-ರಾತ್ರಿ ಎನ್ನದೇ ಎಚ್ಚರವಾಗಿದ್ದು ಕಾರ್ಯೋನ್ಮುಖವಾಗಿರುತ್ತದೆ. ಅಂತಹ ಒತ್ತಡದ ಬದುಕಿನಲ್ಲಿ ಕೆಲಸ ಮಾಡಿ ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿರುವ ಅಧಿಕಾರಿಗಳಿಗೆ ಪ್ರೋತ್ಸಾಹಿಸುವು ಕೆಲಸ ಇದಾಗಿದೆ ಎನ್ನುತ್ತಿದೆ ಪೊಲೀಸ್‌ ಇಲಾಖೆ.

ಕಳೆದ ಜೂನ್‌ ತಿಂಗಳಿಂದ ಎಸ್ಪಿ ಅರುಣಾಂಗ್ಷು ಗಿರಿ ಅವರು ಈ ಉತ್ತಮ ಆಡಳಿತಗಾರ ಎನ್ನುವ ಯೋಜನೆ ಆರಂಭಿಸಿದ್ದು, ಪ್ರತಿ ಪೊಲೀಸ್‌ ಠಾಣೆಯಿಂದ ಪೇದೆ, ಮುಖ್ಯ ಪೇದೆ ಹಾಗೂ ಎಎಸ್‌ಐ ಅವರ ಹಂತದ ಅಧಿಕಾರಿಗಳ ಕಾರ್ಯ ಕ್ಷಮತೆ ಗುರುತು ಮಾಡಲಾಗುತ್ತದೆ. ಇರುವವರಲ್ಲಿಯೇ ಉತ್ತಮ ಕೆಲಸ ಮಾಡಿದ ವ್ಯಕ್ತಿಗಳನ್ನು ಆಯಾ ಠಾಣೆಯ ಪಿಎಸ್‌ಐ ಅವರು ಎಸ್ಪಿಗೆ ನೇರವಾಗಿ ಹೆಸರನ್ನು ಶಿಫಾರಸು ಮಾಡುತ್ತಾರೆ. ಆ ಬಳಿಕ ಎಸ್ಪಿ ಅವರು ಆ ಪೇದೆಗಳ ಕರ್ತವ್ಯ ನಿರ್ವಹಣೆಯ ಇತಿಹಾಸ ಅವಲೋಕಿಸಿ ಕರ್ತವ್ಯದಲ್ಲಿ ಅವರ ಸಾಧನೆ ಅವಲೋಕಿಸಿ ಪ್ರತಿ ತಿಂಗಳು ಈ ಬೆಸ್ಟ್‌ ಪರ್ಫಾರ್ಮೆನ್ಸ್‌ ಎನ್ನುವ ಪ್ರಶಸ್ತಿಗೆ ಆಯ್ಕೆ ಮಾಡಿ ಸನ್ಮಾನಿಸುತ್ತಿದ್ದಾರೆ.

Advertisement

ಯಾರನ್ನು ಆಯ್ಕೆ ಮಾಡ್ತಾರೆ? ಜಿಲ್ಲೆಯಲ್ಲಿನ 18 ಪೊಲೀಸ್‌ ಠಾಣೆಯಲ್ಲಿ ಹೆಚ್ಚು ಗ್ಯಾಂಬ್ಲಿಗ್‌ ಕೇಸ್‌ ದಾಖಲು ಮಾಡಿರುವ, ಜೂಜಾಟ, ಮಟ್ಕಾ ಕೇಸ್‌ ಮಾಡಿರುವ ಪೇದೆಗಳು ಹಾಗೂ 20 ದಿನಗಳಿಗೂ ಹೆಚ್ಚು ಕಾಲ ತಮ್ಮ ಕುಟುಂಬವನ್ನು ಬಿಟ್ಟು ದೂರದ ಪ್ರದೇಶಗಳಲ್ಲಿ ವಿವಿಧ ಬಂದೋಬಸ್ ನಲ್ಲಿ ಕರ್ತವ್ಯ ನಿರ್ವಹಿಸಿದ ಹಾಗೂ ದಾಖಲಾತಿ ಉತ್ತಮವಾಗಿ ನಿರ್ವಹಿಸುವ ಪೇದೆ, ಮುಖ್ಯ ಪೇದೆ ಹಾಗೂ ಎಎಸ್‌ಐ ಅವರನ್ನು ಗುರುತು ಮಾಡಿ ಅವರ ಹಿನ್ನೆಲೆಯನ್ನು ಗಮನಿಸಿ ನೇರವಾಗಿ ಎಸ್ಪಿ ಅವರೇ ಅಂತಹವರನ್ನು ಆಯ್ಕೆ ಮಾಡ್ತಾರೆ. ಬೆಸ್ಟ್‌ ಪ್ರಶಸ್ತಿಗೆ ಆಯ್ಕೆಯಾದ ಆರಕ್ಷಕರ ಫೋಟೋ ಹಾಗೂ ಅವರ ಸಾಧನೆಯನ್ನು ಠಾಣೆಗಳ ನೋಟಿಸ್‌ ಬೋರ್ಡ್‌ನಲ್ಲಿ ಪ್ರಕಟ ಮಾಡಲಾಗುತ್ತದೆ.

ಎಸ್ಪಿ ಅವರಿಂದ ಸನ್ಮಾನ: ಉತ್ತಮ ಆಡಳಿತಗಾರ ಎನ್ನುವ ಪ್ರತಿಯೊಬ್ಬ ಆರಕ್ಷಕನನ್ನು ಪ್ರತಿ ಠಾಣೆಯಿಂದ ಆಯ್ಕೆ ಮಾಡಿ ಅವರನ್ನು ಪ್ರತಿ ತಿಂಗಳು ಪರೇಡ್‌ ಗೆ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ ವೇಳೆ ಎಲ್ಲ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸನ್ಮಾನಿಸಿ ಬೆಸ್ಟ್‌ ಆಡಳಿತಗಾರ ಎನ್ನುವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಕಳೆದ 2 ತಿಂಗಳಲ್ಲಿ 10 ಆರಕ್ಷಕರನ್ನು ಆಯ್ಕೆ ಮಾಡಿ ಅವರಿಗೆ ಎಸ್ಪಿ ಅವರೇ ನೇರವಾಗಿ ಸನ್ಮಾನಿಸಿ ಬೆನ್ನು ತಟ್ಟಿ ಕೆಲಸ ಮಾಡುವಂತೆ ಪ್ರೋತ್ಸಾಹ ನೀಡಿದ್ದಾರೆ.

ಒಟ್ಟಿನಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಯಲ್ಲಿ ಎಸ್ಪಿ ಅರುಣಾಂಗ್ಷು ಗಿರಿ ಅವರು ಆಡಳಿತಕ್ಕೆ ವೇಗ ಹೆಚ್ಚಿಸಲು ಅವರಲ್ಲಿನ ಕಾರ್ಯಕ್ಷಮತೆ ಗುರುತಿಸಿ, ಪ್ರೋತ್ಸಾಹಿಸಲು ಬೆಸ್ಟ್‌ ಪರ್ಫಾರ್ಮೆನ್ಸ್‌ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದು, ಆರಕ್ಷಕರಲ್ಲಿ ಖುಷಿ ತರಿಸಿದೆ. ಎಸ್ಪಿಯಿಂದ ಸನ್ಮಾನಗೊಳ್ಳುತ್ತಿರುವುದಕ್ಕೆ ಉಳಿದೆಲ್ಲ ಆರಕ್ಷಕರು ಕರ್ತವ್ಯದ ಮೇಲೆ ಹೆಚ್ಚು ನಿಗಾವಹಿಸಿದ್ದಾರೆ.

ಇಲಾಖೆಯಲ್ಲಿ ಪ್ರತಿ ತಿಂಗಳು ಪ್ರತಿ ಪೊಲೀಸ್‌ ಠಾಣೆಗಳಿಂದ ಬೆಸ್ಟ್‌ ಪರ್ಫಾರ್ಮೆನ್ಸ್‌ ತೋರುವ ಒಬ್ಬ ಪಿಸಿ, ಎಚ್‌ಸಿ ಹಾಗೂ ಎಎಸ್‌ಐ ಅವರನ್ನು ಆಯ್ಕೆ ಮಾಡಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದೇವೆ. ಆಡಳಿತದಲ್ಲಿ ವೇಗ ಹೆಚ್ಚಿಸಲು ಹಾಗೂ ಅವರು ಕೆಲಸದಲ್ಲಿ ಇನ್ನಷ್ಟು ತೊಡಗಲು ಇಂತಹ ಯೋಜನೆ ಆರಂಭಿಸಿದ್ದು, ಹೆಚ್ಚು ಜೂಜಾಟ, ಗ್ಯಾಂಬ್ಲಿಂಗ್‌, ಮಟ್ಕಾ ಕೇಸ್‌ ಮಾಡಿದವರನ್ನು ಹಾಗೂ ಬಹು ದಿನಗಳ ಕಾಲ ಬಂದೋಬಸ್ತ್ ನಲ್ಲಿ ತೊಡಗಿದವರನ್ನು ಆಯ್ಕೆ ಮಾಡುತ್ತಿದ್ದೇವೆ.  –ಅರುಣಾಂಗ್ಷು ಗಿರಿ,ಕೊಪ್ಪಳ ಎಸ್ಪಿ

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next