Advertisement

ರಿಕ್ಷಾನಿಲ್ದಾಣದ ಬಳಿ ತರಕಾರಿ ಬೆಳೆದು ಮಾದರಿಯಾದ ಆಟೋ ಚಾಲಕರು

11:27 PM Feb 15, 2020 | Sriram |

ಶಿರ್ವ: ಆಟೋರಿಕ್ಷಾ ಪಾರ್ಕ್‌ ಮಾಡಿ ಬಾಡಿಗೆ ಇಲ್ಲದ ಸಮಯದಲ್ಲಿ ಕಾಲಹರಣ ಮಾಡುವ ಬದಲು ಆ ಸಮಯವನ್ನು ತರಕಾರಿ ಬೆಳೆಯುವ ಮೂಲಕ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು ಪಿಲಾರು ಪ್ರಿನ್ಸ್‌ ಪಾಯಿಂಟ್‌ ರಿಕ್ಷಾ ನಿಲ್ದಾಣದ ಆಟೋ ಚಾಲಕರು ಇತರರಿಗೆ ಮಾದರಿಯಾಗಿದ್ದಾರೆ.

Advertisement

ಕಟಪಾಡಿ-ಶಿರ್ವ-ಬೆಳ್ಮಣ್‌ ಮುಖ್ಯರಸ್ತೆಯ ಶಿರ್ವ ಸಮೀಪದ ಪಿಲಾರು ಪ್ರಿನ್ಸ್‌ ಪಾಯಿಂಟ್‌ ಬಸ್ಸು ನಿಲ್ದಾಣದ ಬಳಿ ರಿಕ್ಷಾ ತಂಗುದಾಣವಿದೆ. ಪೆರ್ನಾಲು, ಕುಂಜಿಗುಡ್ಡೆ,ಪಿಲಾರು,ಸೊರ್ಪು ಕಡೆ ತೆರಳುವ ಪ್ರಯಾಣಿಕರಿಗೆ ಪ್ರಿನ್ಸ್‌ ಪಾಯಿಂಟ್‌ ಪ್ರಮುಖ ಜಂಕ್ಷನ್‌ ಆಗಿದ್ದು,ಶಿರ್ವ- ಬೆಳ್ಮಣ್‌ ಭಾಗದಿಂದ ಬರುವ ಪ್ರಯಾಣಿಕರು ಇಲ್ಲಿಯ ರಿಕ್ಷಾಗಳನ್ನು ಅವಲಂಬಿಸಿದ್ದಾರೆ. ತಂಗುದಾಣದಲ್ಲಿ ಸುಮಾರು 14 ರಿಕ್ಷಾಗಳು ಬಾಡಿಗೆಗೆ ನಿಲ್ಲುತ್ತಿದ್ದು ಎಲ್ಲಾ ಚಾಲಕರು ಯುವಕರಾಗಿದ್ದು ಕೃಷಿ ಹಿನ್ನೆಲೆಯಿಂದಲೇ ಬಂದವರಾಗಿದ್ದಾರೆ. ನಿಲ್ದಾಣದ ಪಕ್ಕ ಅತ್ತಿತ್ತ ಕಣ್ಣು ಹಾಯಿಸಿದರೆ ಗೋಚರಕ್ಕೆ ಬರುವುದು ತರಕಾರಿ ಗಿಡ, ಬಳ್ಳಿಗಳು ಮಾತ್ರ. ಬಾಡಿಗೆಯಿಲ್ಲದ ಸಮಯದಲ್ಲಿ ಮೊಬೈಲ್‌ಲ್ಲಿ ಆಟವಾಡಿ ಕಾಲ ಕಳೆಯುವ ಬದಲಾಗಿ ರಸ್ತೆ ಬದಿ ತರಕಾರಿ ಬೆಳೆಯುತ್ತಿದ್ದಾರೆ.

ತರಕಾರಿ ಬೆಳೆದರು
ಫಲವತ್ತಾದ ಕೃಷಿ ಭೂಮಿಯಿದ್ದರೂ ಹಡಿಲು ಬಿಟ್ಟು ಯುವಜನತೆ ಕೃಷಿಯಿಂದ ವಿಮುಖರಾಗುತ್ತಿರುವ ಕಾಲಘಟ್ಟದಲ್ಲಿ ರಸ್ತೆ ಬದಿ ತರಕಾರಿ ಬೆಳೆಯುವ ಮೂಲಕ ಯುವಕರು ಇತರರಿಗೆ ಮಾದರಿಯಾಗಿದ್ದಾರೆ. ಬಿಡುವಿನ ವೇಳೆ ಸುಮ್ಮನೆ ಉಳಿತು ಕಾಲಹರಣ ಮಾಡುವ ಬದಲು ಅರಣ್ಯ ಇಲಾಖೆ ನೆಟ್ಟ ಗಿಡಗಳ ಬುಡದಲ್ಲಿ ಹಾಗೂ ರಸ್ತೆಯ ಸಮೀಪ ವಿವಿಧ ಬಗೆಯ ತರಕಾರಿ ಗಿಡ ಬಳ್ಳಿಗಳನ್ನು ಬೆಳೆದು ಉತ್ತಮ ಫಸಲು ತೆಗೆಯುತ್ತಿದ್ದಾರೆ. ನಿಲ್ದಾಣದ ಬಳಿ ತರಕಾರಿ ಕೈ ತೋಟದ ಆಲೋಚನೆ ಮಾಡಿದ ಪಿಲಾರು ಮಿತ್ತಬೆಟ್ಟು ಅಡಿಪುಮನೆ ಸತೀಶ್‌ ಎಂಬವರು ತನ್ನ ಬಿಡುವಿನ ವೇಳೆ ವ್ಯರ್ಥವಾಗಬಾರದು, ಸಮಯವನ್ನು ಸದುಪಯೋಗವಾಗಬೇಕೆಂದು ಹರಿವೆಯನ್ನು ಪ್ರಾಯೋಗಿಕವಾಗಿ ಬೆಳೆಸಿ ಯಶಸ್ವಿಯಾದರು. ಇದೀಗ ರಿಕ್ಷಾನಿಲ್ದಾಣದ ಸುತ್ತ ವಿವಿಧ ಬಗೆಯ ತರಕಾರಿ ಗಿಡಗಳು ಬೆಳೆದು ನಿಂತಿದ್ದು ಉತ್ತಮ ಫಸಲು ನೀಡುತ್ತಿವೆ.

ವಿವಿಧ ಬಗೆಯ ತರಕಾರಿ
ರಸ್ತೆಯ ಬದಿಯ ಅಲ್ಪ ಜಾಗದಲ್ಲಿ ಅಲಸಂಡೆ, ತೊಂಡೆಕಾಯಿ, ಹರಿವೆ, ಬಸಳೆ, ಬೆಂಡೆ ಗಿಡ, ಮೆಕ್ಕೆಜೋಳ, ಟೊಮೆಟೋ ಮತ್ತಿತರ ಗಿಡ ಬಳ್ಳಿಗಳನ್ನು ಬೆಳೆದಿದ್ದಾರೆ.

ರಿಕ್ಷಾ ಚಾಲಕ ಸತೀಶ್‌ ತನ್ನ ಮನೆಯಿಂದ ಗೊಬ್ಬರ, ಸುಡುಮಣ್ಣು ತಂದು ಹಾಕಿ ಬೆಳೆಯನ್ನು ಉತ್ತಮವಾಗಿ ಪೋಷಿಸುತ್ತಿದ್ದು, ಇತರ ರಿಕ್ಷಾ ಚಾಲಕರಾದ ದಿನೇಶ್‌, ಕಲಾವಿದ ಸತೀಶ್‌ ಪಿಲಾರ್‌, ನವೀನ್‌, ವಸಂತ, ಅಣ್ಣು ಅವರೊಂದಿಗೆ ಕೈಜೋಡಿಸುತ್ತಿದ್ದಾರೆ.

Advertisement

ತರಕಾರಿ ಗಿಡಗಳಿಗೆ ನೀರುಣಿಸಲು ಸಮೀಪದ ಬಾರೊಂದರ ಮಾಲೀಕರು ಪೈಪ್‌ನ ಮೂಲಕ ನಿತ್ಯ ನೀರು ನೀಡುತ್ತಿದ್ದು,ಉತ್ತಮವಾಗಿ ತರಕಾರಿ ಬೆಳೆಯಲು ಸಾಧ್ಯವಾಗಿದೆ ಎನ್ನುವುದು ರಿಕ್ಷಾ ಚಾಲಕರ ಮನ ದಾಳದ ಮಾತು.

ಶುಚಿಯಾದ ತಂಗುದಾಣ
ನಿತ್ಯ ತರಕಾರಿಗಳ ಗಿಡಗಳ ಪೋಷಣೆ ಯೊಂದಿಗೆ‌ ತಂಗುದಾಣವನ್ನು ದಿನನಿತ್ಯ ನೀರು ಹಾಕಿ ತೊಳೆದು ಸ್ವತ್ಛಗೊಳಿಸುತ್ತೇವೆ. ಜತೆಗೆ ಉದಯವಾಣಿ ದಿನಪತ್ರಿಕೆಯನ್ನು ಪ್ರಯಾಣಿಕರಿಗೆ ಉಚಿತವಾಗಿ ಓದಲು ಇರಿಸುತ್ತೇವೆ ಎನ್ನುತ್ತಾರೆ ರಿಕ್ಷಾಚಾಲಕ ಮಾಲಕರ ಸಂಘದ ಅಧ್ಯಕ್ಷ ರಾಜೇಂದ್ರ ಶೆಟ್ಟರು.

ಕಾರ್ಯ ಶ್ಲಾಘನೀಯ
ನಿಲ್ದಾಣದ ಸಮೀಪ ತರಕಾರಿ ಬೆಳೆದ ರಿಕ್ಷಾ ಚಾಲಕರ ಕಾರ್ಯ ಮೆಚ್ಚುವಂತದ್ದು. ಹಸಿರು ತರಕಾರಿ ಬೆಳೆಸುವ ಉತ್ತಮ ಮಾದರಿ ಕಾರ್ಯವಾಗಿದ್ದು, ಎಲ್ಲಾ ರಿûಾ ಚಾಲಕರಿಗೆ ಪ್ರೇರಣೆಯಾಗಲಿ ಎಂದು ಪೆರ್ನಾಲ್‌ ಶಿಕ್ಷಕರಾದ ಅಲ್ವಿನ್‌ ದಾಂತಿ ಅವರ ಅಭಿಪ್ರಾಯ.

ಉತ್ತಮ ಫ‌ಸಲು
ಬಾಡಿಗೆ ಇಲ್ಲದ ಬಿಡುವಿನ ವೇಳೆಯಲ್ಲಿ ಸಮಯ ವ್ಯರ್ಥವಾಗಬಾರದು ಎನ್ನುವ ನಿಟ್ಟಿನಲ್ಲಿ ಇರುವ ಅಲ್ಪ ಜಾಗದಲ್ಲಿ ತರಕಾರಿಯನ್ನು ಬೆಳೆದಿದ್ದೇವೆ. ನವಿಲು ಮಂಗಗಳ ಕಾಟವಿಲ್ಲದೆ ರಸ್ತೆ ಬದಿಯ ಧೂಳಿನ ಕಣ ಗಿಡಗಳಿಗೆ ಬೀಳುವುದರಿಂದ ಗಿಡಗಳಿಗೆ ರೋಗಬಾಧೆಯಿರದೆ ಉತ್ತಮ ಫಸಲು ಬರುತ್ತಿದೆ.
– ಸತೀಶ್‌, ತರಕಾರಿ ಬೆಳೆದ ಚಾಲಕ

Advertisement

Udayavani is now on Telegram. Click here to join our channel and stay updated with the latest news.

Next