Advertisement

ಅರ್ಜಿ ಸಲ್ಲಿಸಲು ಆಟೋ-ಟ್ಯಾಕ್ಸಿ ಚಾಲಕರ ಪರದಾಟ

10:44 AM May 26, 2020 | mahesh |

ಬೀರೂರು: ಕೋವಿಡ್ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸತತ ಎರಡು ತಿಂಗಳಿನಿಂದ ದುಡಿಮೆ ಇಲ್ಲದೆ ಕಂಗೆಟ್ಟು ಕುಳಿತಿದ್ದ ವೃತ್ತಿ ಆಧಾರಿತ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ನೆರವು ನೀಡಲೆಂದು ಸರ್ಕಾರ ಮುಂದಾಗಿದ್ದನ್ನು ತಿಳಿದು ಆಟೋ, ಟ್ಯಾಕ್ಸಿ ಚಾಲಕರ ಮುಖದಲ್ಲಿ ಮಂದಾಹಾಸ ಮೂಡಿತ್ತು. ಆದರೆ, ಸೇವಾಸಿಂಧು ಆ್ಯಪ್‌ನಲ್ಲಿ ಅಗತ್ಯ ದಾಖಲೆಗಳನ್ನು ದಾಖಲಿಸಿ ಅರ್ಜಿ ಸಲ್ಲಿಸಬೇಕು ಎಂಬ ನಿಯಮ ನಗೆ ಬಾಡಿಸಿದೆ.

Advertisement

ರಾಜ್ಯ ಸರ್ಕಾರ ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ತಲಾ 5 ಸಾವಿರ ರೂ.ನೀಡಲು ಹಣ ಮೀಸಲಿಟ್ಟಿದ್ದು, ವೃತ್ತಿಪರ ಚಾಲಕರ ಕುಟುಂಬಗಳು ಕಷ್ಟ ಕಾಲದಲ್ಲಿ ನೆರವು ದೊರೆತಂತೆ ಸಂಭ್ರಮಿಸಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು 10-12 ದಿನಗಳು ಕಳೆದರೂ ಅರ್ಜಿ ಸಲ್ಲಿಸಲು ಅಪ್ಲಿಕೇಷನ್‌ ಲಿಂಕ್‌ ತೆರೆದಿರಲಿಲ್ಲ. ಶುಕ್ರವಾರ ಸಂಜೆಯಿಂದ ಸರ್ವರ್‌ ಕಾರ್ಯಾರಂಭ ಮಾಡಿದ್ದರೂ ಅರ್ಜಿ ಸಲ್ಲಿಸುವವಲ್ಲಿ ತೀರ ವಿಳಂಬವಾಗುತ್ತಿದೆ ಅಥವಾ ಅರ್ಜಿಗಳು ಪೂರ್ಣವಾಗುತ್ತಿಲ್ಲ ಎನ್ನುವುದು ಆಟೋ ಮತ್ತು ಟ್ಯಾಕ್ಸಿ ಚಾಲಕರ ದೂರು.

ಸರ್ಕಾರ ಪರಿಹಾರ ನೀಡುವುದಾಗಿ ಘೋಷಿಸಿ ಸುಮಾರು 15-20 ದಿನಗಳು ಕಳೆದ ಬಳಿಕ ಸೇವಾಸಿಂಧು ವೆಬ್‌ಸೈಟ್‌ ಮೂಲಕ ಲಿಂಕ್‌ ಗೆ ಸೂಚಿಸಿದೆ. ಈ ಲಿಂಕ್‌ ಮೂಲಕ ದಿನವೆಲ್ಲ ಪ್ರಯತ್ನಿಸಿದರೂ ಒಬ್ಬರ ಅರ್ಜಿಯನ್ನೂ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಚಾಲಕನ ಹೆಸರು, ವಿಳಾಸ, ಆಧಾರ್‌ ಸಂಖ್ಯೆ ಭರ್ತಿ ಆದ ಬಳಿಕ ಆಧಾರ್‌ ನೋಂದಾಯಿತ ಮೊಬೈಲ್‌ ಗೆ ಒಟಿಪಿ ಬರುತ್ತಿದೆ. ಅದನ್ನು ಭರ್ತಿ ಮಾಡಿದ ಬಳಿಕ ಚಾಲಕನ ಪರವಾನಗಿ ವಿವರ ಭರ್ತಿ ಮಾಡಿದಾಗ ಅನುಜ್ಞಾ ಪತ್ರದ ವಿವರಗಳು ಸ್ವಯಂ ದಾಖಲಾಗುತ್ತವೆ. ಬಳಿಕ ವಾಹನದ ಮಾಹಿತಿ ಹಾಗೂ ಅದರ ನೋಂದಾಯಿತ ಪತ್ರದ ಮಾಹಿತಿ ಭರ್ತಿ ಮಾಡಬೇಕು. ಆದರೆ ಈ ಪ್ರಕ್ರಿಯೆ ಬಳಿಕ ಅರ್ಜಿ ಪೂರ್ಣಗೊಳಿಸುವಿಕೆ ಸ್ಥಗಿತವಾಗುತ್ತಿದೆ. ಹಾಗಾಗಿ, ಮುಂದಿನ ವಿವರಗಳನ್ನು ಭರ್ತಿ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದು ವೃತ್ತಿಪರ ಚಾಲಕರ ದೂರಾಗಿದೆ.

ನಾವು ಸಾಮಾನ್ಯ ಸೇವಾ ಕೇಂದ್ರಕ್ಕೆ ತೆರಳಿ ಅರ್ಜಿ ಸಲ್ಲಿಸಲು ಮುಂದಾದರೆ ಸರ್ವರ್‌ ಸಮಸ್ಯೆ ಕಂಡು ಬರುತ್ತಿದೆ. ಸರ್ಕಾರ ಪರಿಹಾರ ಎನ್ನುವ ತುಪ್ಪವನ್ನು ನಮ್ಮಂತಹವರ ಮೂಗಿಗೆ ಸವರಿ ಬರಿ ವಾಸನೆಯಲ್ಲಿಯೇ ತೃಪ್ತಿ ಪಡುವಂತೆ ಮಾಡುತ್ತಿದೆ. ಚಾಲನಾ ವೃತ್ತಿ ಅವಲಂಬಿಸಿರುವ ಹಲವರ ಬಳಿ ಸ್ವಂತ ವಾಹನವಿಲ್ಲ. ಇನ್ನೂ ಕೆಲವರು ಪರವಾನಗಿ ಬ್ಯಾಡ್ಜ್ ಮಾಡಿಸಿಲ್ಲ. ಸಂಕಷ್ಟದಲ್ಲಿರುವ ಚಾಲಕ ಮತ್ತು ಆತನ ಕುಟುಂಬ ಕೈ ಜಾರಿದ ಬುತ್ತಿ ಎಂದು ಭಾವಿಸುವಂತಾಗಿದೆ. ಸಾರಿಗೆ ಸಚಿವರು ಆಧಾರ್‌ ಸಂಖ್ಯೆ, ಬ್ಯಾಂಕ್‌ ಮಾಹಿತಿ ಮತ್ತು ಚಾಲನಾ ಪರವಾನಗಿ ಮುಖಾಂತರ ಪರಿಹಾರ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರೂ ಸೇವಾಸಿಂಧು ಅಪ್ಲಿಕೇಷನ್‌ ವಾಹನದ ಮಾಲೀಕತ್ವ, ಆರ್‌ಸಿ ಸಂಖ್ಯೆ, ಬ್ಯಾಡ್ಜ್ ಮತ್ತಿತರ ವಿವರಗಳನ್ನು ಕೇಳುತ್ತಿದೆ. ಸಂಕಟಮಯ ಸನ್ನಿವೇಶದಲ್ಲಿ ಸರಳವಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಸಿ ಶೀಘ್ರ ಪರಿಹಾರ ದೊರಕಿಸಿಕೊಡಲಿ ಎನ್ನುವುದು ಆಟೊ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮಾಲತೇಶ್‌
ಅವರ ಒತ್ತಾಯ.

ಒಟ್ಟಿನಲ್ಲಿ ಚಾಲಕ ವೃತ್ತಿ ಅವಲಂಬಿಸಿರುವವರಿಗೆ ಎಂದೇ ಘೋಷಿಸಲಾದ ಯೋಜನೆಯಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸುಲಭವಾಗಿಸಿ ಗೊಂದಲಗಳಿಗೆ ಆಸ್ಪದ ನೀಡದೆ ಅರ್ಹರಿಗೆ ಪರಿಹಾರ ದೊರಕುವಂತಾಗಲಿ ಎನ್ನುವುದು ಚಾಲಕರ ಆಶಯ.

Advertisement

ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಸರ್ಕಾರ ಸೂಚಿಸಿದೆ. ಇದು ರಾಜ್ಯಾದ್ಯಂತ ನಡೆದಿರುವ ಪ್ರಕ್ರಿಯೆ. ಸರ್ವರ್‌ ಸಮಸ್ಯೆ ಕೂಡಾ ಸಾಮಾನ್ಯವೇ ಆಗಿದೆ. ಚಾಲಕ
ವರ್ಗದವರು ಆತಂಕ ಪಡದೆ ತಾಳ್ಮೆಯಿಂದ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಂಡಿರಬೇಕು ಮತ್ತು ಸಮಸ್ಯೆ ಬಗೆಹರಿದ ತಕ್ಷಣ ವೇಗವಾಗಿ ಅರ್ಜಿ ಸ್ವೀಕೃತಿ ನಡೆಯಲಿದೆ.
ಮುರುಗೇಂದ್ರ ಶಿರೋಳ್ಕರ್‌, ಸಾರಿಗೆ ಅಧಿಕಾರಿ, ಚಿಕ್ಕಮಗಳೂರು

ಗಿರೀಶ್‌

Advertisement

Udayavani is now on Telegram. Click here to join our channel and stay updated with the latest news.

Next