Advertisement

ಸ್ಟಾರ್ ಕನಸಿಗೆ ಆಟೋ ಚಾಲಕರು ಸಾಥ್

11:35 PM Aug 01, 2019 | Team Udayavani |

ಮೂವರು ಆಟೋ ಡ್ರೈವರ್, ಒಬ್ಬ ಕ್ಯಾಬ್‌ ಡ್ರೈವರ್‌ … ಸ್ನೇಹಿತನ ಕನಸಿಗೆ ಸಾಥ್‌ ಕೊಡುವ ಸಲುವಾಗಿ ಚಿತ್ರರಂಗಕ್ಕೆ ಬಂದಿದ್ದಾರೆ. ಅದು ನಿರ್ಮಾಪಕರಾಗಿ. ಈ ನಾಲ್ವರು ಸೇರಿ ಅಂದಾಜು ಒಂದು ಕೋಟಿ ರೂಪಾಯಿ ಬಂಡವಾಳದಲ್ಲಿ ಸಿನಿಮಾವೊಂದನ್ನು ನಿರ್ಮಿಸಿದ್ದಾರೆ. ಅದು “ಸ್ಟಾರ್‌ ಕನ್ನಡಿಗ’. ಹೌದು, ಸಂಪೂರ್ಣ ಹೊಸಬರೇ ಸೇರಿಕೊಂಡು “ಸ್ಟಾರ್‌ ಕನ್ನಡಿಗ’ ಎಂಬ ಸಿನಿಮಾವೊಂದನ್ನು ಮಾಡಿದ್ದಾರೆ. ಮಂಜುನಾಥ್‌ ವಿ.ಆರ್‌ ಎನ್ನುವವರು ಈ ಚಿತ್ರದ ನಿರ್ದೇಶಕರು. ನಿರ್ದೇಶನದ ಜೊತೆಗೆ ನಾಯಕರಾಗಿಯೂ ನಟಿಸಿದ್ದಾರೆ. ತುಂಬಾ ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದ ಮಂಜುನಾಥ್‌ ಅವರಿಗೆ ಜೀವನದಲ್ಲಿ ರಿಸ್ಕ್ ತಗೊಂಡಿಲ್ಲ ಎಂದರೆ ಮುಂದೆ ಬರಲು ಸಾಧ್ಯವಿಲ್ಲ ಎನಿಸಿ, ತಾವೇ ಕಥೆ ಬರೆದು, ನಿರ್ದೇಶನದ ಜೊತೆಗೆ ನಾಯಕರಾಗಿಯೂ ನಟಿಸಿದರಂತೆ. ಇವರ ಕನಸಿಗೆ ಸ್ನೇಹಿತರಾದ ಚನ್ವೀರ, ಬೈರಾ, ಹರೀಶ್‌ ಹಾಗೂ ಅರುಣ್‌ ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ.

Advertisement

ಇತ್ತೀಚೆಗೆ ಚಿತ್ರದ ಟೈಟಲ್‌ ಹಾಗೂ ಫ‌ಸ್ಟ್‌ ಲುಕ್‌ ಬಿಡುಗಡೆಯಾಗಿದ್ದು, ಚಿತ್ರತಂಡ ತಮ್ಮ ತಾಯಂದಿರಿಂದ ಪೋಸ್ಟರ್‌ ಅನಾವರಣಗೊಳಿಸಲಾಯಿತು. ಚಿತ್ರದ ಬಗ್ಗೆ ಮಾತನಾಡುವ ಮಂಜುನಾಥ್‌, “ಕನ್ನಡಿಗ ಯಾವತ್ತೂ ಸ್ಟಾರ್‌. ಆತ ಮನಸ್ಸು ಮಾಡಿದರೆ ಯಾರನ್ನೂ ಬೇಕಾದರೂ ಸ್ಟಾರ್‌ ಮಾಡಬಹುದು. ಅದೇ ಕಾರಣದಿಂದ ಚಿತ್ರಕ್ಕೆ ಈ ಟೈಟಲ್‌ ಇಡಲಾಗಿದೆ. ಚಿತ್ರದಲ್ಲಿ ನಾಲ್ವರು ಹುಡುಗರ ಕಥೆಯನ್ನು ಹೇಳಲಾಗಿದೆ. ಸಿನಿಮಾ ರಂಗಕ್ಕೆ ಕನಸು ಕಟ್ಟಿಕೊಂಡು ಬರುವ ಹುಡುಗರ ಜೀವನದಲ್ಲಿ ಎದುರಾಗುವ ತಿರುವುಗಳು, ಲವ್‌ ಸೇರಿದಂತೆ ಹಲವು ವಿಚಾರಗಳ ಸುತ್ತ ಸಿನಿಮಾ ಸಾಗಲಿದೆ. ಈ ಚಿತ್ರ ನಿರ್ಮಾಣದಲ್ಲಿ ನನ್ನ ಗೆಳೆಯರು ಸಂಪೂರ್ಣ ಸಹಕಾರ ಕೊಟ್ಟರು’ ಎನ್ನಲು ಮರೆಯುವುದಿಲ್ಲ. ಚಿತ್ರದಲ್ಲಿ ಸೂಪರ್‌ಸ್ಟಾರ್‌ವೊಬ್ಬರು ಗೆಸ್ಟ್‌ ಅಪಿಯರೆನ್ಸ್‌ ಮಾಡಲಿದ್ದು, ಯಾರೆಂಬುದನ್ನು ತೆರೆಮೇಲೆಯೇ ನೋಡಬೇಕು ಎನ್ನುವುದು ಮಂಜುನಾಥ್‌ ಮಾತು.

ಚಿತ್ರದಲ್ಲಿ ಶಾಲಿನಿ ಭಟ್‌ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಅವರು ಆಟೋ ಡ್ರೈವರ್‌ ಆಗಿ ಕಾಣಿಸಿಕೊಂಡಿದ್ದು, ಹೊಸಬರ ಹೇಳಿದ ಕಥೆ ಇಷ್ಟವಾಗಿ ಈ ಸಿನಿಮಾ ಒಪ್ಪಿಕೊಂಡಿದ್ದಾಗಿ ಹೇಳಿದರು. ಉಳಿದಂತೆ ಚಿತ್ರದಲ್ಲಿ ರಾಕ್‌ಲೈನ್‌ ಸುಧಾಕರ್‌ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ರೋಹಿತ್‌, ಕೆವಿನ್‌, ಹರೀಶ್‌, ಮೋಹನ್‌, ಕೋಬ್ರಾ ನಾಗರಾಜ್‌ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಪವನ್‌ ಪಾರ್ಥ ಸಂಗೀತ, ಮಹದೇವ್‌ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next