Advertisement

ಕಸದ ತೊಟ್ಟಿಯಲ್ಲಿದ್ದ ಮಗು ರಕ್ಷಿಸಿದ ಆಟೋಚಾಲಕ

12:27 AM Apr 20, 2019 | Lakshmi GovindaRaju |

ಬೆಂಗಳೂರು: ಬಟ್ಟೆಯಲ್ಲಿ ಸುತ್ತಿ ಕಸದ ತೊಟ್ಟಿ ಸಮೀಪ ಇರಿಸಿದ್ದ ನವಜಾತ ಶಿಶುವನ್ನು ಆಟೋ ಚಾಲಕರೊಬ್ಬರು ರಕ್ಷಿಸಿದ ಘಟನೆ ಆರ್‌ಎಂಸಿ ಯಾರ್ಡ್‌ನಲ್ಲಿ ಶುಕ್ರವಾರ ನಡೆದಿದೆ.

Advertisement

ನಂದಿನಿ ಲೇಔಟ್‌ನ ಸುನೀಲ್‌ ಕುಮಾರ್‌ ಮಗುವನ್ನು ರಕ್ಷಿಸಿದ ಆಟೋ ಚಾಲಕ. ಸುನೀಲ್‌ ಕುಮಾರ್‌ ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಪೀಣ್ಯದ ಇಎಸ್‌ಐ ಆಸ್ಪತ್ರೆ ಬಳಿ ಆಟೋ ಚಾಲನೆ ಮಾಡಿಕೊಂಡು ಹೋಗುವಾಗ ಮೂತ್ರ ವಿಸರ್ಜಿಸಲೆಂದು ಆಟೋ ನಿಲ್ಲಿಸಿದ್ದಾರೆ.

ಈ ವೇಳೆ ಕಸದ ತೊಟ್ಟಿ ಬಳಿ ಮಗುವಿನ ಅಳು ಕೇಳಿಸಿದೆ. ಹತ್ತಿರ ಹೋಗಿ ನೋಡಿದಾಗ ಬಟ್ಟೆಯಲ್ಲಿ ನವಜಾತ ಗಂಡು ಮಗು ಕಂಡುಬಂದಿದೆ. ಕೂಡಲೇ ಮಗುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆರ್‌ಎಂಸಿ ಯಾರ್ಡ್‌ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಮಗುವಿನ ಪೋಷಕರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ ಎಂದು ಹಿರಿಯ ಅಧಿಕಾರಿ ತಿಳಿಸಿದರು. ಮಗು ಆರೋಗ್ಯವಾಗಿದೆ. ಮಗು ದತ್ತು ಪಡೆಯಲು ಹಲವರು ಆಸಕ್ತಿ ತೋರಿದ್ದಾರೆ.

ಆದರೆ, ಮಗವನ್ನು ಮಕ್ಕಳ ಆಯೋಗದ ಸುಪರ್ದಿಗೆ ಒಪ್ಪಿಸಬೇಕು ಹಾಗೂ ಕಾನೂನು ಪ್ರಕ್ರಿಯೆಗಳ ಪಾಲನೆ ಬಳಿಕ ಮಗು ದತ್ತು ಪ್ರಕ್ರಿಯೆಗೆ ಅವಕಾಶವಿದೆ ಎಂದು ಹೇಳಿದ್ದೇವೆ ಎಂದು ಅಧಿಕಾರಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next