Advertisement

ಕಬ್ಬಿಣದ ರಾಡ್‌ ತುಂಬಿದ್ದ ಟ್ರಕ್ಕಿಗೆ ಆಟೋ ಢಿಕ್ಕಿ; ಚಾಲಕ ಸಾವು

12:01 PM Sep 14, 2017 | udayavani editorial |

ಹೊಸದಿಲ್ಲಿ : ಕಬ್ಬಿಣದ ರಾಡುಗಳನ್ನು ಹೇರಿಕೊಂಡು ಸಾಗುತ್ತಿದ್ದ ಟ್ರಕ್‌ ಒಂದಕ್ಕೆ ಆಟೋ ರಿಕ್ಷಾ ಒಂದು ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮವಾಗಿ ಆಟೋ ಚಾಲಕನ ದೇಹವನ್ನು ರಾಡುಗಳು ಹೊಕ್ಕು ಆತನ ದಾರುಣ ಸಾವಿಗೆ ಕಾರಣವಾದ  ಘಟನೆ ವರದಿಯಾಗಿದೆ. 

Advertisement

ದಿಲ್ಲಿಯ ನಿಜಾಮುದ್ದೀನ್‌ ಸೇತುವೆಯ ಮೇಲೆ ನಸುಕಿನ 4.30ರ ಹೊತ್ತಿಗೆ ಈ ದುರ್ಘ‌ಟನೆ ನಡೆಯಿತು. ಕಬ್ಬಿಣದ ರಾಡುಗಳನ್ನು ಹೇರಿಕೊಂಡಿದ್ದ ಹದಿನಾರು ಚಕ್ರಗಳ ಟ್ರಕ್‌ ಮುಂದುಗಡೆ ಸಾಗುತ್ತಿತ್ತು. ರಾಡುಗಳ ಇರುವಿಕೆ ಮತ್ತು ಉದ್ದವನ್ನು ಅಂದಾಜಿಸಲು  ಅನುಕೂಲಿಸುವ ಕೆಂಬಾವುಟಗಳನ್ನು ಅಥವಾ ಕೆಂಪು ದೀಪವನ್ನು ಟ್ರಕ್ಕಿಗೆ ಹಾಕಿರಲಿಲ್ಲ. 

ಟ್ರಕ್ಕಿನ ಹಿಂಬದಿಯಿಂದ ಬರುತ್ತಿದ್ದ ಆಟೋ ಚಾಲಕನಿಗೆ ಕಬ್ಬಿಣದ ರಾಡುಗಳು ಉದ್ದವನ್ನು ತಿಳಿಯಲಾಗಲಿಲ್ಲ. ಹಾಗಾಗಿ ಟ್ರಕ್ಕಿನಿಂದ ಹೊರಚಾಚಿಕೊಂಡಿದ್ದ ಕಬ್ಬಿಣದ ರಾಡುಗಳಿಗೆ ಆಟೋ ರಿಕ್ಷಾ ಢಿಕ್ಕಿ ಹೊಡೆದಾಗ ಚಾಲಕನ ದೇಹವನ್ನು ರಾಡುಗಳು ಹೊಕ್ಕು ಆತನ ದಾರುಣ ಸಾವಿಗೆ ಕಾರಣವಾದವು. 

ಸ್ಥಳದಲ್ಲೇ ಸಾವಪ್ಪಿರುವ ಆಟೋ ಚಾಲಕನನ್ನು 40ರ ಹರೆಯದ ನರೇಶ್‌ ಕುಮಾರ್‌ ಎಂದು ಗುರುತಿಸಲಾಗಿದೆ. ನೋಯ್ಡಾ ಕಡೆಗೆ ಹೋಗುತ್ತಿದ್ದ ಆತನ ಆಟೋದಲ್ಲಿ ಇಬ್ಬರು ಪ್ರಯಾಣಿಕರೂ ಇದ್ದು ಅವರಿಗೂ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next