Advertisement

ಆಡಿಯೋ ಠುಸ್‌?: ಸಾಕ್ಷ್ಯರೂಪದಲ್ಲಿ ಪರಿಗಣನೆ ಮಾಡಲು ಸುಪ್ರೀಂ ನಕಾರ

10:02 AM Nov 07, 2019 | Team Udayavani |

ಬೆಂಗಳೂರು/ಹೊಸದಿಲ್ಲಿ: ಅನರ್ಹ ಶಾಸಕರ ಪ್ರಕರಣದಲ್ಲಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಆಡಿಯೋ ಭಾರೀ ಬಿರುಗಾಳಿಯನ್ನೇ ಎಬ್ಬಿಸಬಹುದು ಎಂಬ ನಿರೀಕ್ಷೆಗಳು ಸುಳ್ಳಾಗಿವೆ.

Advertisement

ಕಾಂಗ್ರೆಸ್‌ ಸಲ್ಲಿಸಿದ್ದ ಬಿಎಸ್‌ವೈ ಅವರ ಆಡಿಯೋ ಸಿ.ಡಿ.ಯನ್ನು ಪಡೆದುಕೊಂಡ ಸುಪ್ರೀಂ ಕೋರ್ಟ್‌, ಈ ಸಂಬಂಧ ವಿಚಾರಣೆ ನಡೆಸಲು ನಿರಾಕರಿಸಿದೆ. ಜತೆಗೆ ನೀವು ಅರ್ಜಿ ರೂಪದಲ್ಲಿ ನೀಡಿದ್ದೀರಿ, ನಾವು ಪಡೆದುಕೊಂಡಿದ್ದೇವೆ, ಅದನ್ನು ಪರಿಗಣಿಸುತ್ತೇವೆ. ಅದಿಷ್ಟು ಸಾಕು, ನಾವು ತೀರ್ಪು ನೀಡುತ್ತೇವೆ ಬಿಡಿ ಎಂದು ಕಾಂಗ್ರೆಸ್‌ ಪರ ವಕಾಲತ್ತು ವಹಿಸಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರಿಗೆ ಹೇಳಿದೆ. ಮಾತ್ರವಲ್ಲದೆ ಅರ್ಜಿಯನ್ನು ಸಾಕ್ಷ್ಯರೂಪದಲ್ಲಿ ಪರಿಗಣಿಸಲೂ ಪೀಠ ನಿರಾಕರಿಸಿದೆ.

ಸೋಮವಾರವಷ್ಟೇ ಕಪಿಲ್‌ ಸಿಬಲ್‌ ಅವರು ನ್ಯಾ| ಎನ್‌.ವಿ. ರಮಣ ಅವರ ಪೀಠದ ಮುಂದೆ ಬಿಎಸ್‌ವೈ ಆಡಿಯೋದ ಬಗ್ಗೆ ಹೇಳಿದ್ದರು. ಜತೆಗೆ ಈ ಸಂಬಂಧ ವಿಚಾರಣೆಯನ್ನೂ ನಡೆಸಬೇಕು ಎಂದಿದ್ದರು. ಆದರೆ ಸಿಜೆಐ ಜತೆಗೆ ಚರ್ಚಿಸಿ ವಿಚಾರಣೆಗೆ ಸ್ವೀಕರಿಸುವುದೋ ಬೇಡವೋ ಎಂಬ ಬಗ್ಗೆ ನಿರ್ಧರಿಸುತ್ತೇವೆ ಎಂದು ಹೇಳಿತ್ತು. ಅದರಂತೆ ಮಂಗಳವಾರ ಬೆಳಗ್ಗೆ ನ್ಯಾ| ಎನ್‌.ವಿ. ರಮಣ, ನ್ಯಾ| ಸಂಜೀವ್‌ ಖನ್ನಾ ಮತ್ತು ನ್ಯಾ| ಕೃಷ್ಣ ಮುರಾರಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಚುಟುಕಾಗಿ ವಿಚಾರಣೆ ನಡೆಸಿತು.

ತೀರ್ಪು ವಿಳಂಬದ ಎಚ್ಚರಿಕೆ
ಕಾಂಗ್ರೆಸ್‌ ಪರ ವಕೀಲ ಕಪಿಲ್‌ ಸಿಬಲ್‌ ಅವರು ಮಂಗಳವಾರ ಆಡಿಯೋ ಇರುವ ಸಿ.ಡಿ. ಮತ್ತು ಅದರ ಬರಹ ರೂಪದ ನಾಲ್ಕು ಪುಟಗಳ ಅರ್ಜಿ ಯನ್ನು ಪೀಠಕ್ಕೆ ಸಲ್ಲಿಸಿ ಈ ಬಗ್ಗೆ ವಿಚಾರಣೆಗೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಆದರೆ ಇದಕ್ಕೆ ಆಕ್ಷೇಪಿಸಿದ ಪೀಠ, ಈಗಾಗಲೇ ನೀವು ಹೇಳಿರುವ ಬಹಳಷ್ಟು ಸಂಗತಿಗಳು ವಿಚಾರಣೆ ವೇಳೆಯಲ್ಲೇ ಬಂದಿವೆ. ಅನರ್ಹ ಶಾಸಕರು ರಾಜೀ ನಾಮೆ ಕೊಟ್ಟ ಬಳಿಕ ಮುಂಬಯಿಗೆ ಹೋಗಿದ್ದು ಮತ್ತು ಅವರನ್ನು ಅನರ್ಹ ಮಾಡಿದ ವಿಷಯ ಗಳೆಲ್ಲವೂ ಪ್ರಸ್ತಾವವಾಗಿವೆ. ಹೀಗಾಗಿ ಮತ್ತೂಮ್ಮೆ ವಿಚಾರಣೆ ನಡೆಸುವುದರಲ್ಲಿ ಅರ್ಥವಿಲ್ಲ ಎಂದಿತು. ಆದರೆ ಕಪಿಲ್‌ ಸಿಬಲ್‌ ಅವರು, ಶಾಸಕರ ರಾಜೀನಾಮೆಗೆ ಬಿಜೆಪಿ ಕೇಂದ್ರ ನಾಯಕರೇ ಕಾರಣ ಎಂದು ಸಿಎಂ ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಈ ಬಗ್ಗೆಯಾದರೂ ವಿಚಾರಣೆಯಾಗಬೇಕು ಎಂದು ಹೇಳಿದರು. ಜತೆಗೆ ಸ್ವತಃ ಕೇಂದ್ರದ ಗೃಹ ಸಚಿವರ ಸುಪರ್ದಿಯಲ್ಲೇ ಶಾಸಕರು ಆತಿಥ್ಯ ಪಡೆದಿದ್ದಾರೆ ಎಂದೂ ಸಿಬಲ್‌ ಪೀಠದ ಗಮನಕ್ಕೆ ತಂದರು.

Advertisement

ಇದಕ್ಕೆ ಉತ್ತರಿಸಿದ ಪೀಠ, ಈ ವಿಚಾರಗಳನ್ನೂ ಹಿಂದೆಯೇ ಪ್ರಸ್ತಾವಿಸಲಾಗಿದೆ ಅಲ್ಲವೇ? ಹೆಚ್ಚುವರಿ ಸಾಕ್ಷ್ಯಗಳನ್ನು ನೀವು ನೀಡುತ್ತಾ ಹೋದರೆ, ನಾವು ನೋಟಿಸ್‌ ಜಾರಿ ಮಾಡಬೇಕಾಗುತ್ತದೆ. ಹೀಗಾಗಿ ಈಗ ನೀವು ಸಿ.ಡಿ. ನೀಡಿದ್ದೀರಿ. ಅದರ ಬಗ್ಗೆ ನೋಡಿ ಕೊಳ್ಳುವೆ. ನಮಗೆ ತೀರ್ಪು ನೀಡಲು ಅನುವು ಮಾಡಿ ಕೊಡಿ ಎಂದು ಹೇಳಿತು. ಜತೆಗೆ ನಿಮ್ಮ ಅರ್ಜಿಯನ್ನು ಸಾಕ್ಷ್ಯವಾಗಿ ಒಪ್ಪಿಕೊಂಡರೆ ಇಡೀ ಪ್ರಕರಣದ ದಿಕ್ಕೇ ಬದಲಾಗುತ್ತದೆ. ಒಂದೊಮ್ಮೆ ವಿಚಾರಣೆ ನಡೆಸಲೇಬೇಕಾದರೆ, ಬಿಎಸ್‌ವೈಗೆ ನೋಟಿಸ್‌ ನೀಡ ಬೇಕು. ಈ ಪ್ರಕ್ರಿಯೆಯಿಂದಾಗಿ ಸಾಕಷ್ಟು ತಡವಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿತು. ಅನರ್ಹ ಶಾಸಕರ ಪರ ವಾದ ಮಾಡಿದ ಸಿ.ಎ. ಸುಂದರಂ, ಕಾಂಗ್ರೆಸ್‌ನ ಅರ್ಜಿಗೆ ಆಕ್ಷೇಪಿಸಿದರು.

ಮುಂದೇನಾಗಬಹುದು?
ತೀರ್ಪು ಕಾದಿರಿಸಿದ್ದರಿಂದ ಮುಂದೇನಾಗಬಹುದು ಎಂಬ ಕುತೂಹಲ ಮೂರೂ ಪಕ್ಷಗಳ ನಾಯಕರಲ್ಲೂ ಇದೆ. ಆಡಿಯೋವನ್ನು ಸಾಕ್ಷ್ಯವಾಗಿ ತೆಗೆದುಕೊಳ್ಳದ ಕೋರ್ಟ್‌, ತೀರ್ಪು ನೀಡುವಾಗ ಪರಿಗಣಿಸಲಾಗುತ್ತದೆ ಎಂದು ಹೇಳಿರುವುದರಿಂದ ಆತಂಕವೂ ಹೆಚ್ಚಾಗಿದೆ. ಜತೆಗೆ ಮುಂದಿನ ಪರಿಣಾಮಗಳ ಬಗ್ಗೆ ಮೂರೂ ಪಕ್ಷಗಳ ನಾಯಕರು ಚಿಂತನೆ ನಡೆಸುತ್ತಿದ್ದಾರೆ.

ಸಿದ್ದರಾಮಯ್ಯ-ಎಚ್‌ಡಿಕೆ ನಡುವೆ ಟ್ವೀಟ್‌ ಜಟಾಪಟಿ
ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ಮತ್ತೆ ಟ್ವೀಟ್‌ ಸಮರ ಆರಂಭವಾಗಿದೆ. ಬಿಜೆಪಿ ಸರಕಾರ ಪತನವಾಗಲು ಬಿಡಲ್ಲ, ಉಳಿಸುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಜೆಡಿಎಸ್‌ನಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ. ನಾವು ಕೈ ಜೋಡಿಸಿದ್ದು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಾರದು ಎಂದು. ನಾವು 80 ಜನ ಇದ್ದರೂ ಅವರು 37 ಜನ ಇದ್ದರೂ ಸಿಎಂ ಸ್ಥಾನ ಕೊಟ್ಟದ್ದು ಆ ಕಾರಣಕ್ಕೆ ಎಂದು ಸಿದ್ದು ಹೇಳಿದ್ದಾರೆ. ಇದಕ್ಕೆ ಲಂಡನ್‌ನಿಂದಲೇ ಟ್ವೀಟ್‌ ಮಾಡಿರುವ ಕುಮಾರಸ್ವಾಮಿ, ಕೆಲವರು ಸಿಎಂ ಆಗಬೇಕು ಎಂಬ ಸ್ವಾರ್ಥದ ದುರಾಸೆಯಿಂದ ಜನರ ಹಣ ಪೋಲಾದರೂ ಪರವಾಗಿಲ್ಲ ಎಂದು ಸರಕಾರ ಬೀಳಿಸಲು ಕಾಯುತ್ತಿದ್ದಾರೆ. ಪಕ್ಷ ಬಿಟ್ಟು ಹೋದ ಶಾಸಕರಲ್ಲಿ ಬಹುತೇಕರು ನಿಮ್ಮ ಪಕ್ಷದವರೇ ಎಂಬುದನ್ನು ಮರೆಯಬಾರದು’ ಎಂದು ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next