Advertisement

ಬೀದರನಲ್ಲೇ ರಾಜ್ಯ ಕ್ರೀಡಾಕೂಟಕ್ಕೆ ಪ್ರಯತ್ನ

06:18 PM Feb 13, 2021 | Team Udayavani |

ಬೀದರ: ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ ಬೀದರನಲ್ಲೇ ಆಯೋಜಿಸಲು ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲ್ಕಾಪುರೆ ಭರವಸೆ ನೀಡಿದರು. ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿರುವ ರಾಜ್ಯ ಸರ್ಕಾರಿ ನೌಕರರ ಎರಡು ದಿನಗಳ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯಮಟ್ಟದ ಕ್ರೀಡಾಕೂಟ ಇಲ್ಲಿಯೇ ನಡೆಯಬೇಕು ಎನ್ನುವುದು ಜಿಲ್ಲೆಯ ಸರ್ಕಾರಿ ನೌಕರರ ಆಶಯವಾಗಿದೆ ಎಂದರು.

Advertisement

ರಾಜ್ಯ ಸರ್ಕಾರ ನೌಕರರ ಬೇಡಿಕೆಗಳಿಗೆ ಸ್ಪಂದಿಸುತ್ತ ಬಂದಿದೆ. ಕೋವಿಡ್‌ ಸಂಕಷ್ಟದಲ್ಲಿ ಅನೇಕ ರಾಜ್ಯಗಳು ನೌಕರರ ವೇತನ ಕಡಿತಗೊಳಿಸಿದ್ದವು. ಆದರೆ, ರಾಜ್ಯ ಸರ್ಕಾರ ಮಾತ್ರ ಯಾವುದೇ ಕಡಿತ ಮಾಡದೇ ನೌಕರರ ಹಿತ ರಕ್ಷಿಸಿತು ಎಂದು ತಿಳಿಸಿದರು.

ರಾಜೇಂದ್ರಕುಮಾರ ಗಂದಗೆ ಕ್ರಿಯಾಶೀಲರಾಗಿದ್ದಾರೆ. ನೌಕರರಿಗಾಗಿ ವಿವಿಧ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಚಟುವಟಿಕೆಗಳಿಗೆ ತಮ್ಮ ಸಹಾಯ, ಸಹಕಾರ ಸದಾ ಇರಲಿದೆ ಎಂದರು.

ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಮಾತನಾಡಿ, ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ವ್ಯವಸ್ಥಿತವಾಗಿ ಸಂಘಟಿಸಲಾಗಿದೆ. ಆನ್‌ಲೈನ್‌ ನೋಂದಣಿ ಮೂಲಕ ಕ್ರೀಡಾಪಟುಗಳ ಸಮಯ ಹಾಗೂ ಹಣ ವ್ಯರ್ಥವಾಗುವುದನ್ನು ತಪ್ಪಿಸಿರುವುದು ಪ್ರಶಂಸನೀಯ. ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ಬೀದರನಲ್ಲೇ ಏರ್ಪಡಿಸುವ ಸಂಬಂಧ ಸರ್ಕಾರ ಹಾಗೂ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಕ್ರೀಡಾಜ್ಯೋತಿ ಸ್ವೀಕರಿಸಿದ ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಕ್ರೀಡಾಕೂಟಗಳು ನೌಕರರಲ್ಲಿ ಹೊಸ ಉತ್ಸಾಹ, ಹುಮ್ಮಸ್ಸು ಮೂಡಿಸಲು ನೆರವಾಗಲಿವೆ ಎಂದರು. ಅಧ್ಯಕ್ಷತೆ ವಹಿಸಿದ್ದ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ನೌಕರರನ್ನು ಒತ್ತಡಮುಕ್ತಗೊಳಿಸಲು ಪ್ರತಿ ವರ್ಷ ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ಸರ್ಕಾರಿ ನೌಕರರಲ್ಲೂ ಬಹಳಷ್ಟು ಕ್ರೀಡಾಪಟುಗಳು ಇದ್ದಾರೆ.

Advertisement

ಕ್ರೀಡಾಕೂಟವು ಅವರಲ್ಲಿನ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಒದಗಿಸಲಿದೆ. ರಾಜ್ಯಮಟ್ಟದ ಕ್ರೀಡಾಕೂಟ ಬೀದರನಲ್ಲೇ ಆಯೋಜಿಸುವ ನಿಟ್ಟಿನಲ್ಲಿ ಸಂಘ ಪ್ರಯತ್ನ ನಡೆಸುತ್ತಿದೆ. ಅವಕಾಶ ದೊರೆತರೆ ರಾಜ್ಯದಲ್ಲೇ ಮಾದರಿಯಾಗಿ ಸಂಘಟಿಸಲಾಗುವುದು ಎಂದರು.

ಸಚಿವರ ಸಂದೇಶ: ಅನಿವಾರ್ಯ ಕಾರಣಕ್ಕಾಗಿ ದೆಹಲಿಗೆ ಬಂದಿರುವ ಕಾರಣ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ನೌಕರರು ಕ್ರೀಡಾಕೂಟದಲ್ಲಿ ಆಸಕ್ತಿಯಿಂದ ಭಾಗವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಕಳುಹಿಸಿದ ಸಂದೇಶವನ್ನು ಗಂದಗೆ ಓದಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಇದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆರ್‌.ಜಿ. ನಾಡಗೀರ ಸ್ವಾಗತಿಸಿದರು. ಶಿವಕುಮಾರ ಬಾವಗೆ ನಿರೂಪಿಸಿದರು. ರಾಜಕುಮಾರ ಹೊಸದೊಡ್ಡೆ ವಂದಿಸಿದರು. ಇದಕ್ಕೂ ಮೊದಲು ರೋಟರಿ ಕನ್ನಡಾಂಬೆ ವೃತ್ತದಿಂದ ನೆಹರು ಕ್ರೀಡಾಂಗಣವರೆಗೆ ಕ್ರೀಡಾಜ್ಯೋತಿ ಮೆರವಣಿಗೆ ನಡೆಯಿತು.

ಉತ್ಸಾಹದಿಂದ ಪಾಲ್ಗೊಂಡ ನೌಕರರು ನೆಹರು ಕ್ರೀಡಾಂಗಣ ಹಾಗೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸರ್ಕಾರಿ ನೌಕರರು ಉತ್ಸಾಹದಿಂದ ಪಾಲ್ಗೊಂಡರು. ಮೊದಲ ದಿನ 800 ಮೀ. ಓಟ, ವಾಲಿಬಾಲ್‌, ಕಬಡ್ಡಿ, ಕ್ರಿಕೆಟ್‌, ಡಿಸ್ಕಸ್‌ ಥ್ರೋ, ಶಾಟ್‌ಪುಟ್‌, ಉದ್ದ-ಎತ್ತರ ಜಿಗಿತ, ಚೆಸ್‌, ಕೇರಂ, ಷಟಲ್‌ ಬ್ಯಾಡ್ಮಿಂಟನ್‌, ಬಾಸ್ಕೆಟ್‌ಬಾಲ್‌, ಥ್ರೋಬಾಲ್‌ ಮೊದಲಾದ ಕ್ರೀಡೆಗಳು ನಡೆದವು. ನೌಕರರ ಸಂಘವು ಕ್ರೀಡಾಪಟುಗಳಿಗೆ ಟೀ ಶರ್ಟ್‌ ಹಾಗೂ ಟೊಪ್ಪಿಗೆ ವಿತರಿಸಿತು. ಕ್ರೀಡಾಕೂಟದಲ್ಲಿ ಪಾಲ್ಗೊಂಡವರಿಗೆ ಬೆಳಗ್ಗೆ ಚಹಾ, ಉಪಾಹಾರ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಕ್ರೀಡಾಕೂಟದಲ್ಲಿ ಜಿಲ್ಲೆಯ ಒಟ್ಟು 1,680 ಸರ್ಕಾರಿ ನೌಕರರು ಹೆಸರು ನೊಂದಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next