Advertisement

ಎಸಿ ಮೇಲೆ ಹಲ್ಲೆ ಯತ್ನ: ಇಬ್ಬರ ಬಂಧನ

08:25 AM Apr 11, 2018 | Team Udayavani |

ಕುಂದಾಪುರ: ಕೋಟೇಶ್ವರದ ಅಂಕದಕಟ್ಟೆಯ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನಲ್ಲಿ ಕುಂದಾಪುರ ವಿಭಾಗ ಸಹಾಯಕ ಆಯುಕ್ತ ಹಾಗೂ ಅವರ ಗನ್‌ಮ್ಯಾನ್‌ ಮೇಲೆ ಸೋಮವಾರ ರಾತ್ರಿ ನಡೆದ ಹಲ್ಲೆ ಯತ್ನ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಈ ಹೊಟೇಲ್‌ನಲ್ಲಿ ಅಬಕಾರಿ ಇಲಾಖೆಯ ನಿಯಮಗಳನ್ನು ಮೀರಿ ಮದ್ಯ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿಯನ್ವಯ ರಾತ್ರಿ 10.30ರ ಸುಮಾರಿಗೆ ಸಹಾಯಕ ಆಯುಕ್ತ  ಭೂಬಾಲನ್‌ ದಾಳಿ ನಡೆಸಲು ತೆರಳಿದ್ದರು. ಅವರ ಜತೆಗೆ ಇಲಾಖಾ ವಾಹನ ಚಾಲಕ ರಾಘವೇಂದ್ರ, ಗನ್‌ಮ್ಯಾನ್‌ ದಶಾಂತ್‌ ಕುಮಾರ್‌, ಇನ್ನೊಂದು ವಾಹನದಲ್ಲಿ ಜಿಲ್ಲಾ ಮಾದರಿ ನೀತಿ ಸಂಹಿತೆ ನೋಡಲ್‌ ಅಧಿಕಾರಿ ಪ್ರೊಬೆಷನರಿ ಐಎಎಸ್‌ ಅಧಿಕಾರಿ ಪೂವಿತಾ ಹಾಗೂ ಅವರ ವಾಹನ ಚಾಲಕ ವಿಜಯ ಅವರಿದ್ದರು.

ನಿಯಮ ಉಲ್ಲಂಘನೆ ಖಚಿತಪಡಿಸಿಕೊಂಡು ದೃಶ್ಯವನ್ನು ಚಿತ್ರೀಕರಿಸುತ್ತಿದ್ದಾಗ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಮಹೇಶ ಆಚಾರ್ಯ, ಪ್ರಭಾಕರ ಆಚಾರ್ಯ ಹಾಗೂ ಮತ್ತೂಬ್ಬ ಅಪರಿಚಿತ ವ್ಯಕ್ತಿ ಅಡ್ಡಿಪಡಿಸಿ ಭೂಬಾಲನ್‌, ಅವರ ಸಿಬಂದಿ ಹಾಗೂ ಗನ್‌ಮ್ಯಾನ್‌ ಅವರನ್ನು ಸುತ್ತುವರಿದು ವಾಹನ ಚಾಲಕನ ಮೇಲೆ ಹಲ್ಲೆ ನಡೆಸಿ ಭೂಬಾಲನ್‌ ಅವರನ್ನು ದೂಡಿದರು. ವಿಷಯ ತಿಳಿದ ಬಾರ್‌ನ ಮಾಲಕಿಯ ಪತಿ ಸುರೇಂದ್ರ ಸ್ಥಳಕ್ಕೆ ಬಂದು ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎಂದು ಎಸಿಯವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಾಹಿತಿ ತಿಳಿಯುತ್ತಿದ್ದಂತೆ ಹೊಟೇಲ್‌ ಸುತ್ತಮುತ್ತ ಜನ ಸೇರಿದರು. ಪೊಲೀಸರು ಚದುರಿಸಿದ ಮೇಲೆ ಠಾಣೆ ಮುಂದೆ ಜಮಾವಣೆಯಾದರು. ಅಲ್ಲಿ ಮಾತಿನ ಚಕಮಕಿ ನಡೆಯಿತು.

ದರ್ಪ ಪ್ರದರ್ಶನ
ದೂರು ದಾಖಲಿಸಿ ರಾತ್ರಿ 12.40ರ ಅಂದಾಜಿಗೆ ನಗರ ಪೊಲೀಸ್‌ ಠಾಣೆಯಲ್ಲಿ ಘಟನೆ ಕುರಿತು ಮಾಧ್ಯಮದ ಜತೆ ಮಾತನಾಡಿದ ಎಸಿಯವರು, 1 ವಾರದಿಂದ ಅಬಕಾರಿ ಕಾಯ್ದೆ ಮೀರುತ್ತಿರುವ ವಿವಿಧೆಡೆ ದಾಳಿ ನಡೆಸಲಾಗುತ್ತಿದೆ. ಅದರಂತೆ ಇಲ್ಲಿಯೂ ದಾಳಿ ನಡೆಸಲಾಗಿದೆ. ನಿಯಮ ಮೀರಿ ಮದ್ಯ ಮಾರಾಟ ಮಾಡುತ್ತಿದ್ದುದನ್ನು ವೀಡಿಯೋ
ಮಾಡುವಾಗ ವ್ಯಕ್ತಿಯ ಮುಖ ಬಾರದಂತೆ, ಖಾಸಗಿ ಹಕ್ಕಿಗೆ ಚ್ಯುತಿಯಾಗದಂತೆ, ಆ ವಸತಿಗೃಹದಲ್ಲಿ ತಂಗಿದ್ದಾರೆಯೇ ಎಂದಷ್ಟೇ ಕೇಳುತ್ತಿದ್ದೆ. ಆ ವಸತಿಗೃಹದಲ್ಲಿ ಉಳಕೊಂಡವರಿಗಷ್ಟೇ ಮದ್ಯ ಮಾರಾಟಕ್ಕೆ ಪರವಾನಿಗೆ ಇದೆ. ಆದರೆ ಅಷ್ಟರಲ್ಲಿ ಅಲ್ಲಿದ್ದವರು ಹಲ್ಲೆಗೆ ಮುಂದಾದರು ಎಂದು ಹೇಳಿದರು.

ಇದೇ ಮೊದಲಲ್ಲ ಕಳೆದ ವರ್ಷ ಕಂಡೂÉರಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಪ್ರದೇಶದಲ್ಲಿ ತಡರಾತ್ರಿ ಉಡುಪಿ ಡಿಸಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಹಾಗೂ ಕುಂದಾಪುರ ಎಸಿ ಶಿಲ್ಪಾ ನಾಗ್‌ ಮೇಲೆ ಮರಳು ಕಾರ್ಮಿಕರು ಹಾಗೂ ಸ್ಥಳೀಯರು ಹಲ್ಲೆ ನಡೆಸಿದ್ದರು. ವರ್ಷದ ಅಂತರದಲ್ಲಿ ಕುಂದಾಪುರ ಎಸಿ ಮೇಲೆ ಹಲ್ಲೆ ಯತ್ನವಾಗಿದೆ.

Advertisement

ಈಗಿನ ಎಸಿ ಭೂಬಾಲನ್‌ ಅವರು ಕಳೆದ ವರ್ಷ ನವಂಬರ್‌ನಲ್ಲಿ ಹರಪನಹಳ್ಳಿ ಎಸಿಯಾಗಿದ್ದಾಗ ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ದಾಳಿ ನಡೆಸಿದ್ದಾಗ ಕೂಡ ಹಲ್ಲೆಗೊಳಗಾಗಿದ್ದರು. 

ದಾಳಿ ನಿಲ್ಲದು : ಎಸಿ 
ಶಾಂತ, ಸುವ್ಯವಸ್ಥಿತ ಮತದಾನಕ್ಕೆ ನಾವು ಕ್ರಮಕೈಗೊಳ್ಳುತ್ತಿರುವಾಗ ಇಂತಹ ಘಟನೆಗಳು ನಡೆಯಬಾರದು. ನಮ್ಮ ಮೇಲಿನ ದಾಳಿಗಳಿಗೆ ಹೆದರಿ ನಮ್ಮ ಕಾರ್ಯಾಚರಣೆ ನಿಲ್ಲಿಸುವುದಿಲ್ಲ. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ನ್ಯಾಯಾಂಗದ ಅಧಿಕಾರ ಹೊಂದಿದ ಅಧಿಕಾರಿ ಮೇಲೆ ಇಂತಹ ದಾಳಿ ನಾಗರಿಕ ಸಮಾಜಕ್ಕೆ ಶೋಭೆಯಲ್ಲ ಎಂದು ಭೂಬಾಲನ್‌  “ಉದಯವಾಣಿ’ ಜತೆ ಹೇಳಿದರು.

ಹಲ್ಲೆಯ ಚಾರ್ಜ್‌ಶೀಟ್‌ ಇನ್ನೂ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿಲ್ಲ, ಸರಕಾರಿ ವಕೀಲರ ಹಂತದಲ್ಲಿ ಪರಿಶೀಲನೆಯಾಗುತ್ತಿದೆ. ಈ ಘಟನೆ ಕುರಿತು ಸೂಕ್ತ ತನಿಖೆ ನಡೆಯುವ ವಿಶ್ವಾಸವಿದೆಯೇ ಎಂದು ಕೇಳಿದಾಗ, ಪೊಲೀಸರು ಹಾಗೂ ನ್ಯಾಯಾಂಗದ ಮೇಲೆ ವಿಶ್ವಾಸವಿಟ್ಟಿದ್ದೇನೆ. ಆ ನಂಬಿಕೆಯನ್ನು ಉಳಿಸಿಕೊಳ್ಳುವಂತೆ ವಿನಂತಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next