Advertisement

ಮಾಲೇಗಾಂವ್‌ ಸ್ಫೋಟಕ ಪ್ರಕರಣ: ಉಲ್ಟಾ ಹೊಡೆದ ಸಾಕ್ಷಿ!

12:24 AM Dec 29, 2021 | Team Udayavani |

ಮುಂಬಯಿ: 2008ರ ಮಾಲೇಗಾಂವ್‌ ಸ್ಫೋಟಕ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಪ್ರಕರಣದಲ್ಲಿ ಉತ್ತರಪ್ರದೇಶದ ಹಾಲಿ ಸಿಎಂ ಯೋಗಿ ಆದಿತ್ಯನಾಥ್‌ ಹಾಗೂ ಆರೆಸ್ಸೆಸ್‌ನ ನಾಲ್ವರು ನಾಯಕರ ಹೆಸರುಗಳನ್ನು ಹೇಳುವಂತೆ ಮಹಾರಾಷ್ಟ್ರ ಉಗ್ರ ನಿಗ್ರಹ ಪಡೆ(ಎಟಿಎಸ್‌) ನನ್ನ ಮೇಲೆ ಒತ್ತಡ ಹೇರಿತ್ತು ಎಂದು ಸಾಕ್ಷಿಯೊಬ್ಬರು ಕೋರ್ಟ್‌ ಮುಂದೆ ಹೇಳಿಕೆ ನೀಡಿದ್ದಾರೆ.

Advertisement

ಮಂಗಳವಾರ ಮುಂಬಯಿನ ವಿಶೇಷ ಎನ್‌ಐಎ ಕೋರ್ಟ್‌ ಮುಂದೆ ಹಾಜರಾದ ಸಾಕ್ಷಿಯು, “ಆಗಿನ ಹಿರಿಯ ಎಟಿಎಸ್‌ ಅಧಿಕಾರಿಯಾಗಿದ್ದ ಪರಂಬೀರ್‌ ಸಿಂಗ್‌ ಮತ್ತು ಇನ್ನೊಬ್ಬ ಅಧಿಕಾರಿಯು ನನಗೆ ಚಿತ್ರಹಿಂಸೆ ನೀಡಿದ್ದರು. ಯೋಗಿ ಆದಿತ್ಯನಾಥ್‌, ಇಂದ್ರೇಶ್‌ ಕುಮಾರ್‌ ಸೇರಿದಂತೆ ನಾಲ್ವರು ಆರೆಸ್ಸೆಸ್‌ ನಾಯಕರ ಹೆಸರು ಹೇಳುವಂತೆ ಒತ್ತಡ ಹೇರಿದ್ದರು’ ಎಂದು ಹೇಳಿದ್ದಾರೆ. ಮಾಲೇಗಾಂವ್‌ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗೆ ವಹಿಸುವ ಮುನ್ನ ಅದರ ತನಿಖೆಯನ್ನು ಮಹಾರಾಷ್ಟ್ರ ಎಟಿಎಸ್‌ ನಡೆಸುತ್ತಿತ್ತು. ಆಗಲೇ ಸಾಕ್ಷಿಗಳ ಹೇಳಿಕೆಗಳನ್ನೂ ದಾಖಲು ಮಾಡಲಾಗಿತ್ತು. ಆರಂಭದಲ್ಲಿ ಮಾಲೇಗಾಂವ್‌ ಸ್ಫೋಟ

ಪ್ರಕರಣದ ತನಿಖೆ ನಡೆಸುತ್ತಿದ್ದ ಮಹಾರಾಷ್ಟ್ರ ಎಟಿಎಸ್‌ಗೆ ಮುಂಬಯಿನ ಮಾಜಿ ಪೊಲೀಸ್‌ ಆಯುಕ್ತ ಪರಂಬೀರ್‌ ಸಿಂಗ್‌ ಹೆಚ್ಚುವರಿ ಆಯುಕ್ತರಾಗಿದ್ದರು. ಈಗ ಸಿಂಗ್‌ ಅವರು ಹಲವು ವಸೂಲಿ ಆರೋಪಗಳನ್ನು ಎದುರಿಸುತ್ತಿದ್ದಾರೆ.

2008ರ ಸೆ.29ರಂದು ಮಾಲೇಗಾಂವ್‌ನ ಮಸೀದಿ ಮುಂದೆ ನಡೆದ ಸ್ಫೋಟದಲ್ಲಿ 6 ಮಂದಿ ಸಾವಿಗೀಡಾಗಿ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಇದನ್ನೂ ಓದಿ:ಚೀನಾ ಗಡಿಭಾಗದಲ್ಲಿ 27 ರಸ್ತೆ ನಿರ್ಮಾಣಕ್ಕೆ ಚಾಲನೆ : ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

Advertisement

ಸೋನಿಯಾ, ಸಿಂಗ್‌ ಕ್ಷಮೆ ಕೋರಲಿ: ಸಾಕ್ಷಿಯು ಕೋರ್ಟ್‌ನಲ್ಲಿ ನೀಡಿರುವ ಹೇಳಿಕೆ ವಿಚಾರ ಬಹಿರಂಗವಾಗುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಆರೆಸ್ಸೆಸ್‌ ನಾಯಕ ಇಂದ್ರೇಶ್‌ ಕುಮಾರ್‌, “ಯುಪಿಎ ಸರಕಾರದ ಅವಧಿಯಲ್ಲಿ ಕೇಸರಿ ಭಯೋತ್ಪಾದನೆ ಎಂಬ ಸುಳ್ಳು ಆರೋಪ ಹೊರಿಸಿ ನಮ್ಮನ್ನು ಸಿಲುಕಿಸುವಂತೆ ಕಾಂಗ್ರೆಸ್‌ ಸಂಚು ರೂಪಿಸಿತ್ತು. ಈ ಮೂಲಕ ಕೀಳುಮಟ್ಟದ ರಾಜಕೀಯ ಮಾಡಿತ್ತು. ಬಿಜೆಪಿ ಮತ್ತು ಆರೆಸ್ಸೆಸ್‌ ನಾಯಕರ ವರ್ಚಸ್ಸಿಗೆ ಧಕ್ಕೆ ತಂದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ, ಪ್ರಿಯಾಂಕಾ ವಾದ್ರಾ, ದಿಗ್ವಿಜಯ್‌ ಸಿಂಗ್‌, ಸಲ್ಮಾನ್‌ ಖುರ್ಷಿದ್‌ ಕೂಡಲೇ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next